ಸಂಧಾನ ಸಭೆ ವಿಫಲ: ಭಾರತದ ಎದುರು ಮತ್ತೆ ಉಲ್ಟಾ ಹೊಡೆದ ಚೀನಾ!
ನವದೆಹಲಿ, ಅಕ್ಟೋಬರ್ 11: ಪೂರ್ವ ಲಡಾಖ್ ಗಡಿ ಬಿಕ್ಕಟ್ಟು ಬಗೆಹರಿಸುವಲ್ಲಿ ಚೀನಾ ಮತ್ತೊಮ್ಮೆ ಉಲ್ಟಾ ಹೊಡೆದಿದೆ. ವಿವಾದಿತ ಘರ್ಷಣೀಯ ಕೇಂದ್ರಗಳಲ್ಲಿ ಸೇನಾ ಚಟುವಟಿಕೆ ನಿಷ್ಕ್ರಿಯಗೊಳಿಸುವ ಭಾರತದ ಪ್ರಸ್ತಾಪವನ್ನು ಚೀನಾ ತಳ್ಳಿಹಾಕಿದೆ.
ಪಾಂಗೊಂಗ್ ತ್ಸೊ, ಗಾಲ್ವಾನ್ ಮತ್ತು ಗೋಗ್ರಾಗಳಲ್ಲಿ ಇರುವಂತೆ ಬಫರ್ ವಲಯಗಳನ್ನು ರಚಿಸಿ ಆಗಿದೆ. ಅದೊಂದು ಅಂತಿಮ ಪರಿಹಾರವಾಗುವುದಿಲ್ಲ ಎಂದು ಭಾರತ ಹೇಳಿದೆ. ಆದರೆ ಹಾಟ್ ಸ್ಪ್ರಿಂಗ್ ಪ್ರದೇಶಗಳಲ್ಲಿ ಅದೇ ರೀತಿ ಬಫರ್ ಝೋನ್ ರಚಿಸಲು ಚೀನಾ ಒತ್ತಾಯಿಸಿದೆ. ಈ ಪ್ರದೇಶಗಳಲ್ಲಿ 3 ರಿಂದ 10 ಕಿಮೀ ಬಫರ್ ವಲಯ ಎಂದರೆ ಭಾರತವು ಸಾಂಪ್ರದಾಯಿಕವಾಗಿ ಮಾಡಿಕೊಂಡಿರುವ ಪ್ರದೇಶಗಳಲ್ಲಿ ಗಸ್ತು ತಿರುಗಲು ಸಾಧ್ಯವಾಗುವುದಿಲ್ಲ.
ಭಾರತ-ಚೀನಾ ನಡುವೆ 13ನೇ ಸುತ್ತಿನ ಸೇನಾ ಕಮಾಂಡರ್ ಸಭೆ
ಮೇಲಾಗಿ, ಮೇ 2020 ರಲ್ಲಿ ಆರಂಭವಾದ ಸ್ಟ್ಯಾಂಡ್-ಆಫ್ನ ಭಾಗವಾಗಿ ಪರಿಗಣಿಸದ ಡೆಪ್ಸಾಂಗ್ ಮತ್ತು ಡೆಮ್ಚೋಕ್ನಂತಹ ಬಾಕಿ ಇರುವ ಸಮಸ್ಯೆಗಳನ್ನು ಪರಿಹರಿಸಬೇಕಾಗಿದೆ, ಆದರೆ ಇವುಗಳನ್ನು ಚರ್ಚಿಸುವಲ್ಲಿ ಚೀನಾ ಹಿಂದೇಟು ಹಾಕಿದೆ.
ಸಂಧಾನ ಸಭೆಯಲ್ಲಿ ಉಲ್ಟಾ ಹೊಡೆದ ಚೀನಾ
"ಭಾನುವಾರ ನಡೆದ ಭಾರತ ಚೀನಾ ನಡುವಿನ 13ನೇ ಕಾರ್ಪ್ ಕಮಾಂಡರ್ ಸಭೆಯಲ್ಲಿ ಭಾರತವು ಗಡಿ ಪ್ರದೇಶಗಳಲ್ಲಿನ ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ರಚನಾತ್ಮಕ ಸಲಹೆಗಳನ್ನು ನೀಡಿತು. ಆದರೆ ಚೀನಾ ಕಡೆಯವರು ಅದಕ್ಕೆ ಒಪ್ಪಿಕೊಳ್ಳಲಿಲ್ಲ, ಅಲ್ಲದೇ ಅದನ್ನು ಮುಂದುವರಿಸುವ ಬಗ್ಗೆ ಯಾವುದೇ ಪ್ರಸ್ತಾಪಗಳನ್ನೂ ಇಡಲಿಲ್ಲ. ಉಳಿದ ಪ್ರದೇಶಗಳಲ್ಲಿನ ಸಮಸ್ಯೆಗಳನ್ನು ಬಗೆಹರಿಸುವ ನಿಟ್ಟಿನಲ್ಲಿ ಯಾವುದೇ ರೀತಿ ಚರ್ಚೆಗಳೂ ನಡೆಯಲಿಲ್ಲ," ಎಂದು ಭಾರತೀಯ ಸೇನೆಯ ಹೇಳಿಕೆ ತಿಳಿಸಿದೆ.
ಚೀನಾದ ಏಕಪಕ್ಷೀಯ ಪ್ರಯತ್ನಗಳ ಬಗ್ಗೆ ಉಲ್ಲೇಖ
ಉತ್ತರಾಖಂಡದ ಬರಹೋತಿ ವಲಯದಲ್ಲಿ ಮತ್ತು ಅರುಣಾಚಲ ಪ್ರದೇಶದ ತವಾಂಗ್ ಸೆಕ್ಟರ್ನಲ್ಲಿ ಚೀನಾ ಸೇನೆಯು ಅತಿಕ್ರಮಣದ ಪ್ರಯತ್ನಕ್ಕೆ ಮುಂದಾಗಿತ್ತು. ಈ ಹಿನ್ನೆಲೆಯಲ್ಲಿ ಭಾರತ ಮತ್ತು ಚೀನಾ ನಡುವಿನ ಸಂಧಾನ ಮಾತುಕತೆಗೆ ನಿಯೋಗ ಮುಂದಾಗಿತ್ತು. ಎಲ್ಎಸಿಯಲ್ಲಿನ ಪರಿಸ್ಥಿತಿಯ ಯಥಾಸ್ಥಿತಿ ಬದಲಿಸಲು ಮತ್ತು ದ್ವಿಪಕ್ಷೀಯ ಒಪ್ಪಂದಗಳನ್ನು ಉಲ್ಲಂಘಿಸುವ ಚೀನಾದ ಏಕಪಕ್ಷೀಯ ಪ್ರಯತ್ನಗಳ ಬಗ್ಗೆ ಭಾರತದ ನಿಯೋಗವು ಲಡಾಖ್ ಕುರಿತು 13ನೇ ಕಾರ್ಪ್ಸ್ ಕಮಾಂಡರ್ ಮಟ್ಟದ ಮಾತುಕತೆಯಲ್ಲಿ ಪುನರುಚ್ಛರಿಸಿತು. ಇನ್ನೊಂದೆಡೆ "ಭಾರತವು ಸಮಂಜಸವಲ್ಲದ ಮತ್ತು ಅವಾಸ್ತವಿಕ ಬೇಡಿಕೆಗಳನ್ನು ಒತ್ತಾಯಿಸುತ್ತದೆ, ಆ ಮೂಲಕ ಮಾತುಕತೆಗೆ ತೊಂದರೆ ಉಂಟು ಮಾಡುತ್ತದೆ" ಎಂದು ಚೀನಾ ಹೇಳಿಕೊಂಡಿದೆ.
ಭಾರತದ ಬಗ್ಗೆ ಚೀನಾದ ಪೀಪಲ್ಸ್ ಲಿಬರೇಷನ್ ಆರ್ಮಿ ಹೇಳಿಕೆ
ಚೀನಾ ತನ್ನ ರಾಷ್ಟ್ರೀಯ ಸಾರ್ವಭೌಮತ್ವವನ್ನು ಸುರಕ್ಷಿತವಾಗಿ ಕಾಪಾಡಿಕೊಳ್ಳುವ ನಿರ್ಧಾರವನ್ನು ತೆಗೆದುಕೊಂಡಿದೆ ಎಂದು ಪೀಪಲ್ಸ್ ಲಿಬರೇಷನ್ ಆರ್ಮಿ ವಕ್ತಾರರು ತಿಳಿಸಿದ್ದಾರೆ. ಭಾರತವು ಪರಿಸ್ಥಿತಿ ಬಗ್ಗೆ ತಪ್ಪು ನಿರ್ಣಯ ತೆಗೆದುಕೊಳ್ಳುವುದನ್ನು ತಪ್ಪಿಸಬೇಕು. ಚೀನಾ-ಭಾರತ ಗಡಿ ಪ್ರದೇಶಗಳಲ್ಲಿ ಕಷ್ಟಪಟ್ಟು ಗೆದ್ದ ಪರಿಸ್ಥಿತಿಯನ್ನು ಪಾಲಿಸಬೇಕು ಎಂದಿದ್ದಾರೆ. "ಭಾರತವು ಎರಡು ದೇಶ ಮತ್ತು ಎರಡು ಸೇನಾಪಡೆಗಳ ನಡುವಿನ ಒಪ್ಪಂದಗಳನ್ನು ಒಮ್ಮತದಿಂದ ಅನುಸರಿಸಬೇಕು, ಪ್ರಾಮಾಣಿಕತೆಯನ್ನು ತೋರಿಸಬೇಕು ಮತ್ತು ಚೀನಾದೊಂದಿಗೆ ಗಡಿ ಪ್ರದೇಶಗಳಲ್ಲಿ ಶಾಂತಿ ಮತ್ತು ಸ್ಥಿರತೆಯನ್ನು ಜಂಟಿಯಾಗಿ ಕಾಪಾಡಲು ಕ್ರಮಗಳನ್ನು ತೆಗೆದುಕೊಳ್ಳಬೇಕು" ಎಂದು ಪೀಪಲ್ಸ್ ಲಿಬರೇಷನ್ ಆರ್ಮಿ ವಕ್ತಾರರು ಹೇಳಿದ್ದಾರೆ.
ಸೇನಾ ನಿಷ್ಕ್ರಿಯತೆ ಬಗ್ಗೆ ನಡೆಸಿದ ಶಾಂತಿ ಮಾತುಕತೆ ವಿಫಲ
ಮುಂದಿರುವ ಘರ್ಷಣೀಯ ಪ್ರದೇಶಗಳಿಂದ ಸೇನೆ ಹಿಂತೆಗೆದುಕೊಳ್ಳುವಿಕೆ ಅಥವಾ ನಿಷ್ಕ್ರಿಯತೆ ಬಗ್ಗೆ ಯಾವುದೇ ಉಲ್ಲೇಖವಿಲ್ಲ. ಉಭಯ ಸೇನೆಗಳು ಹತ್ತಿರದಲ್ಲಿದ್ದ ಪ್ರದೇಶಗಳಿಂದ ಹಿಂತೆಗೆದುಕೊಳ್ಳುವುದನ್ನು ದೃಢಪಡಿಸಲಾಗಿದೆ. ಪೂರ್ವ ಲಡಾಖ್ನ ಎಲ್ಎಸಿಯಲ್ಲಿ ಉಳಿದಿರುವ ಸಮಸ್ಯೆಗಳ ಪರಿಹಾರದ ಮೇಲೆ ಸಭೆಯ ಚರ್ಚೆಗಳು ಕೇಂದ್ರೀಕೃತವಾಗಿದ್ದವು. "ಆದ್ದರಿಂದ ಪಶ್ಚಿಮ ವಲಯದಲ್ಲಿ LACಯ ಉದ್ದಕ್ಕೂ ಶಾಂತಿ ಪುನಃಸ್ಥಾಪಿಸಲು ಚೀನಾದ ಉಳಿದ ಪ್ರದೇಶಗಳಲ್ಲಿ ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳುವುದು ಅಗತ್ಯವಾಗಿತ್ತು" ಎಂದು ಭಾರತೀಯ ಸೇನೆ ಹೇಳಿಕೆ ತಿಳಿಸಿದೆ.
ಇತ್ತೀಚೆಗೆ ದುಶಾನ್ಬೆಯಲ್ಲಿ ನಡೆದ ಸಭೆಯಲ್ಲಿ ಉಭಯ ರಾಷ್ಟ್ರಗಳ ವಿದೇಶಾಂಗ ಸಚಿವರು ನೀಡಿದ ಮಾರ್ಗದರ್ಶನಕ್ಕೆ ಅನುಗುಣವಾಗಿರಲಿದೆ ಎಂದು ಭಾರತ ಹೇಳಿಕೆಯಲ್ಲಿ ಉಲ್ಲೇಖಿಸಿದೆ. ಉಭಯ ರಾಷ್ಟ್ರಗಳ ಸಚಿವರು ಉಳಿದ ಸಮಸ್ಯೆಗಳನ್ನು ಶೀಘ್ರದಲ್ಲೇ ಪರಿಹರಿಸಿಕೊಳ್ಳಬೇಕು. ಉಳಿದ ಭಾಗಗಳಿಗೆ ಸಂಬಂಧಿಸಿದಂತೆ ಇಂತಹ ನಿರ್ಣಯವು ದ್ವಿಪಕ್ಷೀಯ ಸಂಬಂಧಗಳಲ್ಲಿ ಪ್ರಗತಿಗೆ ಅನುಕೂಲವಾಗಲಿದೆ ಎಂದು ಭಾರತ ಒತ್ತಿ ಹೇಳಿದೆ.
ಗಡಿಯಲ್ಲಿ ಸ್ಥಿರತೆ ಕಾಯ್ದುಕೊಳ್ಳಲು ಉಭಯ ರಾಷ್ಟ್ರಗಳ ಒಪ್ಪಿಗೆ
ಲಡಾಖ್ ಪೂರ್ವ ಗಡಿಯಲ್ಲಿ ಸೇನಾ ನಿಷ್ಕ್ರಿಯತೆಗೆ ನಿರಾಕರಿಸಿದ ಚೀನಾ ಗಡಿಯಲ್ಲಿ ಸ್ಥಿರತೆ ಕಾಪಾಡಿಕೊಳ್ಳುವುದಕ್ಕೆ ಒಪ್ಪಿಗೆ ನೀಡಿದೆ. ಪರಿಸ್ಥಿತಿಯನ್ನು ಯಥಾವತ್ತಾಗಿ ಕಾಯ್ದುಕೊಂಡು ಹೋಗುವುದಕ್ಕೆ ಉಭಯ ರಾಷ್ಟ್ರಗಳು ಸಮ್ಮತಿಸಿವೆ. "ಚೀನಾದ ದ್ವಿಪಕ್ಷೀಯ ಸಂಬಂಧಗಳ ಒಟ್ಟಾರೆ ದೃಷ್ಟಿಕೋನವನ್ನು ಗಣನೆಗೆ ತೆಗೆದುಕೊಳ್ಳುತ್ತಾರೆ. ದ್ವಿಪಕ್ಷೀಯ ಒಪ್ಪಂದಗಳು ಮತ್ತು ಶಿಷ್ಟಾಚಾರಗಳನ್ನು ಸಂಪೂರ್ಣವಾಗಿ ಅನುಸರಿಸುವ ಮೂಲಕ ಉಳಿದ ಸಮಸ್ಯೆಗಳ ಪರಿಹಾರಕ್ಕಾಗಿ ಸ್ಪಂದಿಸುತ್ತಾರೆ ಎಂಬುದು ನಮ್ಮ ನಿರೀಕ್ಷೆ" ಎಂದು ಹೇಳಿಕೆಯಲ್ಲಿ ಉಲ್ಲೇಖಿಸಲಾಗಿದೆ.
ಭಾರತ-ಚೀನಾ ನಡುವಿನ 13ನೇ ಕಾರ್ಪ್ ಕಮಾಂಡರ್ ಸಭೆ
ಪೂರ್ವ ಲಡಾಖ್ನ ಚುಶುಲ್-ಮೊಲ್ಡೊ ಗಡಿ ಕೇಂದ್ರದ ಚೀನಾದ ಭಾಗದಲ್ಲಿ ಬೆಳಿಗ್ಗೆ 10:30ಕ್ಕೆ ಆರಂಭವಾಗಿ ಸಭೆಯು ಸಂಜೆ 7 ಗಂಟೆವರೆಗೂ ನಡೆಯಿತು. ಭಾರತೀಯ ನಿಯೋಗವನ್ನು ಲೆಹ್ ಮೂಲದ 14 ಕಾರ್ಪ್ಸ್ ನ ಕಮಾಂಡರ್ ಲೆಫ್ಟಿನೆಂಟ್ ಜನರಲ್ ಪಿಜಿಕೆ ಮೆನನ್ ನೇತೃತ್ವದಲ್ಲಿ 13ನೇ ಕಾರ್ಪ್ ಕಮಾಂಡರ್ ಸಭೆ ನಡೆಸಲಾಯಿತು.
Recommended Video