ಸಾವಿಗೇನು ಕಾರಣ: ಕೊರೊನಾ ಸೋಂಕಿತರ ಸಾವಿನ ಹಿಂದಿನ ರಹಸ್ಯ ಬಟಾಬಯಲು!
ಅಹ್ಮದಾಬಾದ್, ಏಪ್ರಿಲ್.28: ಕೊರೊನಾ ವೈರಸ್ ಸೋಂಕಿತರಲ್ಲಿ ಮೃತಪಟ್ಟವರಿಗಿಂತಲೂ ಗುಣಮುಖರಾದವರ ಸಂಖ್ಯೆಯೇ ಹೆಚ್ಚು. ಮಾರಕ ಸೋಂಕು ಅಂಟಿಕೊಂಡವರ ಸಾವಿನ ಹಿಂದಿನ ಅಸಲಿ ಸತ್ಯವನ್ನು ಗುಜರಾತ್ ವಿಜ್ಞಾನಿಗಳು ಪತ್ತೆ ಹಚ್ಚಿದ್ದಾರೆ.
Recommended Video
ಗುಜರಾತ್ ನಲ್ಲಿ ಮಂಗಳವಾರದ ಅಂಕಿ-ಅಂಶಗಳ ಪ್ರಕಾರ 3,548 ಜನರಿಗೆ ಕೊರೊನಾ ವೈರಸ್ ಕನ್ಫರ್ಮ್ ಆಗಿದ್ದು, ಈವರೆಗೂ ರಾಜ್ಯದಲ್ಲಿ 162ಕ್ಕೂ ಅಧಿಕ ಮಂದಿ ಪ್ರಾಣ ಬಿಟ್ಟಿದ್ದಾರೆ. 394 ಪ್ರಕರಣಗಳಲ್ಲಿ ಮಂದಿ ಗುಣಮುಖರಾಗಿದ್ದು, ಉಳಿದ 2992 ಸೋಂಕಿತರಿಗೆ ಚಿಕಿತ್ಸೆ ನೀಡಲಾಗುತ್ತಿದೆ.
ಕೊರೊನಾ ವೈರಸ್ ಬಗ್ಗೆ ಯಾರಿಗೂ ಗೊತ್ತಿಲ್ಲದ ಅಸಲಿ ಸತ್ಯ!
ನೊವೆಲ್ ಕೊರೊನಾ ವೈರಸ್ ನಲ್ಲಿರುವ ಎಲ್- ವಿಧಾನದ ತಳಿಯು ಅತ್ಯಂತ ಅಪಾಯಕಾರಿ ಹಾಗೂ ಆಕ್ರಮಣಕಾರಿ ಗುಣವನ್ನು ಹೊಂದಿದೆ. ಎಲ್ ತಳಿಯ ಸೋಂಕು ಹರಡಿರುವ ಪ್ರದೇಶಗಳಲ್ಲಿ ಅತಿಹೆಚ್ಚು ಜನರು ಮಾರಕ ಸೋಂಕಿನಿಂದ ಪ್ರಾಣ ಬಿಟ್ಟಿದ್ದಾರೆ ಎಂದು ಗುಜರಾತ್ ಬಯೋಟೆಕ್ನಾಲಜಿ ರಿಸರ್ಚ್ ಸೆಂಟರ್(GBRC) ವಿಜ್ಞಾನಿಗಳು ತಿಳಿಸಿದ್ದಾರೆ.
ಕೊವಿಡ್-19ನಲ್ಲಿ ಎರಡು ತಳಿಗಳಿವೆ ಎಂದಿದ್ದ ಚೀನಾ
ಚೀನಾದ ವುಹಾನ್ ನಗರದಲ್ಲಿ ಮೊದಲು ಕಾಣಿಸಿಕೊಂಡ ನೊವೆಲ್ ಕೊರೊನಾ ವೈರಸ್ ನಲ್ಲಿ ಎಲ್(L) ಹಾಗೂ ಎಸ್(S) ಬಗೆಯ ಎರಡು ತಳಿಗಳಿವೆ ಎಂದು ಮಾರ್ಚ್ ಮೊದಲ ವಾರದಲ್ಲಿಯೇ ಶಾಂಘೈನಲ್ಲಿ ಇರುವ ಪೇಕಿಂಗ್ ಯೂನಿವರ್ಸಿಟಿ ಆಂಡ್ ಇನ್ಸ್ ಟ್ಯೂಟ್ ಪ್ಯಾಸ್ಟಿಯರ್ ನ ವಿಜ್ಞಾನಿಗಳ ತಂಡವು ಪತ್ತೆ ಹಚ್ಚಿತ್ತು.
ಕೊರೊನಾ ಸೋಂಕಿತರ ಸಾವಿನ ಹಿಂದಿನ ರಹಸ್ಯ
ನೊವೆಲ್ ಕೊರೊನಾ ವೈರಸ್ ಸೋಂಕು ಮೊದಲು ಚೀನಾದ ವುಹಾನ್ ನಲ್ಲಿ ಕಾಣಿಸಿಕೊಂಡಾಗ ವುಹಾನ್ ನಗರದಲ್ಲಿ ಅತಿಹೆಚ್ಚು ಸೋಂಕಿತರು ಮಹಾಮಾರಿಗೆ ಬಲಿಯಾದರು. ವುಹಾನ್ ನಗರ ವೊಂದರಲ್ಲೇ ಸಾವಿರಾರು ಜನರು ಕೊವಿಡ್-19ನಿಂದ ಪ್ರಾಣ ಬಿಡುವುದಕ್ಕೆ ಕಾರಣವಾಗಿದ್ದೇ ಎಲ್- ತಳಿಯ ಸೋಂಕು ಎಂದು ವಿಜ್ಞಾನಿಗಳು ಶಂಕಿಸಿದ್ದಾರೆ. ಎಲ್-ತಳಿಯ ಸೋಂಕು ಅಂಟಿಕೊಂಡವರೇ ಅತಿಹೆಚ್ಚು ಪ್ರಾಣ ಬಿಟ್ಟಿರುವುದು ಅಂಕಿ-ಅಂಶಗಳ ಸಮೇತ ಸಾಬೀತಾಗಿದೆ ಎಂದು ವಿಜ್ಞಾನಿಗಳು ಅಭಿಪ್ರಾಯಪಟ್ಟಿದ್ದಾರೆ.
L - ತಳಿಯು S - ತಳಿಗಿಂತಲೂ ಹೆಚ್ಚು ಅಪಾಯಕಾರಿ
ಕೊರೊನಾ ವೈರಸ್ ಸೋಂಕಿತರಲ್ಲಿ ಎಲ್ ಮತ್ತು ಎಸ್ ಎಂಬ ಎರಡು ತಳಿಗಳನ್ನು ಪತ್ತೆ ಹಚ್ಚಲಾಗಿದ್ದು, ಈ ಪೈಕಿ L ತಳಿಯು S ತಳಿಗಿಂತಲೂ ಅಪಾಯಕಾರಿಯಾಗಿದೆ. ನೊವೆಲ್ ಕೊರೊನಾ ವೈರಸ್ ಸೋಂಕಿತರ ಮಾದರಿ ಪರೀಕ್ಷಿಸಿದಾಗ L ತಳಿಯಲ್ಲಿ ಸೂಕ್ಷ್ಮಾಣುಗಳ ಸಂಖ್ಯೆ ಹೆಚ್ಚಾಗಿದೆ. ವುಹಾನ್ ನಗರದಲ್ಲಿ ಅತಿಹೆಚ್ಚು ಮಂದಿ ಬಲಿಯಾಗುವುದಕ್ಕೆ ಈ L ತಳಿಯ ಕಾರಣ ಎಂದು GBRC ವಿಜ್ಞಾನಿ ಸಿ.ಜಿ. ಜೋಶಿ ತಿಳಿಸಿದ್ದಾರೆ.
ಕೊರೊನಾ ಸೋಂಕಿತರ ಸಾವಿನ ಹಿಂದಿರುವ ರಹಸ್ಯ ಬಯಲು
ಗುಜರಾತ್ ನಲ್ಲಿ 162ಕ್ಕೂ ಅಧಿಕ ಮಂದಿ ಕೊರೊನಾ ವೈರಸ್ ಸೋಂಕಿನಿಂದ ಪ್ರಾಣ ಬಿಟ್ಟಿದ್ದಾರೆ. ಈ ಪೈಕಿ ಮೃತ ಕೊರೊನಾ ವೈರಸ್ ಸೋಂಕಿತರಲ್ಲಿ L - ತಳಿಯು ಕಾಣಿಸಿಕೊಂಡಿದೆ ಎಂದು ವಿಜ್ಞಾನಿ ಅತುಲ್ ಪಟೇಲ್ ತಿಳಿಸಿದ್ದಾರೆ. L - ತಳಿಯ ಸೋಂಕು ಹೆಚ್ಚಾಗಿ ಹರಡಿರುವುದರಿಂದ ರಾಜ್ಯದಲ್ಲಿ ಸಾವಿನ ಪ್ರಮಾಣದಲ್ಲಿ ಏರಿಕೆಯಾಗುತ್ತಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
60 ವರ್ಷಕ್ಕಿಂತ ಮೇಲ್ಪಟ್ಟ ಸೋಂಕಿತರಿಗೆ ಹೆಚ್ಚಿನ ಅಪಾಯ
ಇನ್ನು, ನೊವೆಲ್ ಕೊರೊನಾ ವೈರಸ್ ಸೋಂಕಿನಿಂದ ಪ್ರಾಣ ಬಿಟ್ಟವರಲ್ಲಿ ಸೋಂಕು ತಗಲುವ ಮುನ್ನ ಶ್ವಾಸಕೋಶ ಸಮಸ್ಯೆ, ಹೃದಯ ಸಂಬಂಧಿ ಕಾಯಿಲೆ, ರಕ್ತದೊತ್ತಡ ಹಾಗೂ ಸಕ್ಕರೆ ಕಾಯಿಲೆಗಳಿದ್ದವು ಎಂದು ತಿಳಿದು ಬಂದಿದೆ. ಇಂಥ ಗಂಭೀರ ಆರೋಗ್ಯ ಸಮಸ್ಯೆಗಳನ್ನು ಹೊಂದಿರುವವರಿಗೆ ಕೊರೊನಾ ವೈರಸ್ ಅಂಟಿಕೊಂಡಲ್ಲಿ ಅಂಥವರ ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದಿರುವ ಉದಾಹರಣೆಗಳು ತೀರಾ ವಿರಳವಾಗಿವೆ. ಇದರ ಜೊತೆಗೆ ಇದುವರೆಗೂ ಮೃತಪಟ್ಟವರ ಸಂಖ್ಯೆಯಲ್ಲಿ 60 ವರ್ಷಕ್ಕಿಂತ ಮೇಲ್ಪಟ್ಟವರು ಹಾಗೂ ಗರ್ಭಿಣಿಯರ ಸಂಖ್ಯೆಯೇ ಶೇ.90ರಷ್ಟಿದೆ ಎಂದು ಆರೋಗ್ಯ ಇಲಾಖೆಯ ಪ್ರಿನ್ಸಿಪಲ್ ಸೆಕ್ರಟರಿ ಜಯಂತ್ ರವಿ ಮಾಹಿತಿ ನೀಡಿದ್ದಾರೆ.