ಖುಷಿನಗರ ದುರಂತ: ಪ್ರಧಾನಿ, ರಾಷ್ಟ್ರಪತಿಗಳಿಂದ ಸಂತಾಪ
ನವದೆಹಲಿ, ಏಪ್ರಿಲ್ 26: ಉತ್ತರ ಪ್ರದೇಶದ ಖುಷಿನಗರದಲ್ಲಿ 11 ಮಕ್ಕಳನ್ನು ಬಲಿಪಡೆದ ಅಪಘಾತಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಪ್ರಧಾನಿ ನರೇಂದ್ರ ಮೋದಿ, "ಈ ಸುದ್ದಿ ಕೇಳಿ ನಿಜಕ್ಕೂ ಬಹಳ ಬೇಸರವಾಗಿದೆ" ಎಂದಿದ್ದಾರೆ.
"ಉತ್ತರ ಪ್ರದೇಶದ ಖುಷಿನಗರದಲ್ಲಿ 11 ಮಕ್ಕಳನ್ನು ಬಲಿತೆಗೆದುಕೊಂಡ ಶಾಲಾ ಬಸ್ ಮತ್ತು ರೈಲು ಡಿಕ್ಕಿ ಘಟನೆ ನನಗೆ ತೀರಾ ನೋವನ್ನುಂಟುಮಾಡಿದೆ. ಉತ್ತರ ಪ್ರದೇಶ ಸರ್ಕಾರ ಮತ್ತು ರೈಲ್ವೇ ಇಲಾಖೆ ಈ ಕುರಿತು ಸೂಕ್ತ ಕ್ರಮ ಕೈಗೊಳ್ಳುತ್ತದೆ" ಎಂದು ಮೋದಿ ಹೇಳಿದ್ದಾರೆ.
ರೈಲಿಗೆ ಡಿಕ್ಕಿ ಹೊಡೆದ ಸ್ಕೂಲ್ ಬಸ್: ಉತ್ತರ ಪ್ರದೇಶದಲ್ಲಿ 11 ಮಕ್ಕಳು ಸಾವು
"ಮಕ್ಕಳನ್ನು ಹೊತ್ತಿದ್ದ ಬಸ್ಸು ಅಪಘಾತಕ್ಕೀಡಾಗಿದ್ದನ್ನು ಕೇಳಿ ಬಹಳ ನೋವಾಯಿತು. ಮೃತ ಮಕ್ಕಳ ಕುಟುಂಬದ ಪರವಾಗಿ ಮತ್ತು ಗಾಯಗೊಂಡರವರ ಪರವಾಗಿ ನಮ್ಮ ಪ್ರಾರ್ಥನೆ ಇರಲಿ" ಎಂದಿದ್ದಾರೆ ರಾಷ್ಟ್ರಪತಿ ರಾಮನಾಥ್ ಕೋವಿಂದ್.
ಈ ಕುರಿತು ಪ್ರತಿಕ್ರಿಯೆ ನೀಡಿದ ರೈಲ್ವೇ ಸಚಿವ ಪಿಯೂಶ್ ಗೋಯಲ್, "ಘಟನೆ ಕುರಿತು ನಾನು ತೀವ್ರ ಸಂತಾಪ ವ್ಯಕ್ತಪಡಿಸುತ್ತೇನೆ. ಅಪಘಾತದ ಕುರಿತಂತೆ ತನಿಖೆ ನಡೆಸಲು ನಾನು ಹಿರಿಯ ರೈಲ್ವೇ ಅಧಿಕಾರಿಗಳ ಜೊತೆ ಮಾತುಕತೆ ನಡೆಸಿದ್ದೇನೆ. ಮೃತ ಮಕ್ಕಳ ಕುಟುಂಬಕ್ಕೆ ನಾವು 2 ಲಕ್ಷ ರೂ. ಪರಿಹಾರ ಘೋಷಿಸಿದ್ದೇವೆ " ಎಂದಿದ್ದಾರೆ.
ಶಾಲೆಗೆ ಹೊರಟಿದ್ದ ಸುಮಾರು 20-30 ಮಕ್ಕಳನ್ನು ಹೊತ್ತಿದ್ದ ಬಸ್ಸೊಂದು ರೈಲ್ವೇ ಕ್ರಾಸಿಂಗ್ ಬಳಿ ರೈಲಿಗೆ ಡಿಕ್ಕಿ ಹೊಡೆದ ಪರಿಣಾಮ ಇಂದು(ಏ.26) ಬೆಳಿಗ್ಗೆ 11 ಮಕ್ಕಳು ಮೃತರಾಗಿದ್ದರೆ, 8 ಜನ ಗಾಯಗೊಂಡಿದ್ದರು.