ಕುಂಭಮೇಳ 2021; ಕೇಂದ್ರದಿಂದ ಭಕ್ತರಿಗೆ ಕಟ್ಟುನಿಟ್ಟಿನ ಆದೇಶ
ಉತ್ತರಖಾಂಡ, ಜನವರಿ 25: ಇದೇ ಫೆಬ್ರುವರಿಯಲ್ಲಿ ಕುಂಭ ಮೇಳ ಆರಂಭವಾಗುತ್ತಿದ್ದು, ಮೇಳದಲ್ಲಿ ಭಾಗವಹಿಸಲು ಇಚ್ಚಿಸುವ ಭಕ್ತರು ಆರ್ ಟಿ-ಪಿಸಿಆರ್ ಕೊರೊನಾ ಪರೀಕ್ಷೆಯ ನೆಗೆಟಿವ್ ವರದಿ ತರುವುದು ಕಡ್ಡಾಯ ಎಂದು ಕೇಂದ್ರ ಸರ್ಕಾರ ನಿರ್ದೇಶನ ನೀಡಿದೆ.
ಕುಂಭ ಮೇಳಕ್ಕೆ ಬರುವ 72 ಗಂಟೆಗಳ ಮುನ್ನ ಕೊರೊನಾ ಪರೀಕ್ಷೆ ನಡೆಸಬೇಕಿದ್ದು, ನೆಗೆಟಿವ್ ಇದ್ದರೆ ಮಾತ್ರ ಪ್ರವೇಶ ಕಲ್ಪಿಸಲಾಗುವುದು ಎಂದು ಕೇಂದ್ರ ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಇಲಾಖೆ ಸಚಿವಾಲಯ ನಿಯಮ ಹೇರಿದೆ.
ಕುಂಭಮೇಳ 2021: ಹರಿದ್ವಾರದ ಗಂಗಾ ನದಿಯಲ್ಲಿ 7 ಲಕ್ಷಕ್ಕೂ ಹೆಚ್ಚು ಭಕ್ತರು ಪವಿತ್ರ ಸ್ನಾನ ಮಾಡಿದರು
ಕುಂಭಮೇಳದಲ್ಲಿ ವೈದ್ಯಕೀಯ ಹಾಗೂ ಸಾರ್ವಜನಿಕ ಆರೋಗ್ಯ ತಪಾಸಣಾ ಕಾರ್ಯದಲ್ಲಿ ತೊಡಗಿಕೊಳ್ಳುವ ಆರೋಗ್ಯ ಕಾರ್ಯಕರ್ತರು ಹಾಗೂ ಇನ್ನಿತರ ಕಾರ್ಯಕರ್ತರು ಕೊರೊನಾ ಲಸಿಕೆ ಪಡೆದಿದ್ದಾರೆಯೇ ಎಂಬುದರ ಪರಿಶೀಲನೆ ನಡೆಸಬೇಕು ಎಂದು ಉತ್ತರಾಖಂಡ ಸರ್ಕಾರಕ್ಕೆ ಕೇಂದ್ರ ಸರ್ಕಾರ ನಿರ್ದೇಶನ ನೀಡಿದೆ. ಲಸಿಕೆ ಪಡೆದ ಆರೋಗ್ಯ ಕಾರ್ಯಕರ್ತರನ್ನು ಮಾತ್ರ ಕುಂಭಮೇಳ ಕರ್ತವ್ಯಕ್ಕೆ ನಿಯೋಜಿಸುವಂತೆ ತಿಳಿಸಿದೆ.
ಭಕ್ತರು ಆರು ಅಡಿ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು, ಮಾಸ್ಕ್ ಧರಿಸುವುದು ಕಡ್ಡಾಯ ಎಂದು ಮಾರ್ಗಸೂಚಿ ತಿಳಿಸಿದೆ. ಮಾಸ್ಕ್ ಕಿಯೋಸ್ಕ್ ಅನ್ನು ಅಲ್ಲಲ್ಲಿ ಅಳವಡಿಸಲಾಗುತ್ತಿದ್ದು, ಉಚಿತ ಮಾಸ್ಕ್ ವಿತರಣೆ ಕೂಡ ನಡೆಯುತ್ತದೆ. 65 ವರ್ಷ ಮೇಲ್ಪಟ್ಟವರಿಗೆ, ಗರ್ಭಿಣಿಯರಿಗೆ, ಹತ್ತು ವರ್ಷದ ಒಳಗಿನ ಮಕ್ಕಳಿಗೆ, ಇನ್ನಿತರ ಆರೋಗ್ಯ ಸಮಸ್ಯೆಗಳಿದ್ದವರು ಕುಂಭ ಮೇಳಕ್ಕೆ ಬರದಂತೆ ಸೂಚಿಸಲಾಗಿದೆ.
ಇದೇ ಫೆಬ್ರುವರಿ 27ರಿಂದ ಏಪ್ರಿಲ್ 30ರವರೆಗೂ ಹರಿದ್ವಾರದಲ್ಲಿ ಕುಂಭಮೇಳ ನಡೆಯಲಿದ್ದು, ಸುಮಾರು 10 ಲಕ್ಷ ಮಂದಿ ಭೇಟಿ ನೀಡಲಿರುವ ನಿರೀಕ್ಷೆಯಿದೆ. ಮುಖ್ಯ ಧಾರ್ಮಿಕ ಕಾರ್ಯಕ್ರಮ ನಡೆಯುವ ದಿನಗಳಲ್ಲಿ ಸುಮಾರು 50 ಲಕ್ಷ ಮಂದಿ ಭೇಟಿ ನೀಡುವ ನಿರೀಕ್ಷೆಯಿದೆ.