ಕುಂಭಮೇಳ 2021: ಹರಿದ್ವಾರದ ಗಂಗಾ ನದಿಯಲ್ಲಿ 7 ಲಕ್ಷಕ್ಕೂ ಹೆಚ್ಚು ಭಕ್ತರು ಪವಿತ್ರ ಸ್ನಾನ ಮಾಡಿದರು
ಉತ್ತರಾಖಂಡ, ಜನವರಿ 15: ಗುರುವಾರದಂದು ಶುಭ ಕುಂಭಮೇಳದ ಆರಂಭವನ್ನು ಗುರುತಿಸಿ 7 ಲಕ್ಷಕ್ಕೂ ಹೆಚ್ಚು ಭಕ್ತರು ಹರಿದ್ವಾರದ ಗಂಗಾ ನದಿಯಲ್ಲಿ ಪವಿತ್ರ ಸ್ನಾನ ಮಾಡಿದ್ದಾರೆ ಎಂದು ಉತ್ತರಾಖಂಡ ಸರ್ಕಾರದ ಮಾಹಿತಿ ಇಲಾಖೆ ತಿಳಿಸಿದೆ.
ಗಂಗಾರತಿ ಸಮಯದಲ್ಲಿ 7,11,000 ಭಕ್ತರು ಹರ್ ಕಿ ಪೈರಿಯಲ್ಲಿ ಆಚರಣೆಗಳನ್ನು ಮಾಡಿದ್ದಾರೆ. ಎಲ್ಲಾ ಕೋವಿಡ್-19 ಆರೋಗ್ಯ ಮಾರ್ಗಸೂಚಿಗಳನ್ನು ಕುಂಭಮೇಳದ ಮೊದಲ ದಿನ ಅನುಸರಿಸಲಾಗಿದೆ. ಕೋವಿಡ್ ಮಾರ್ಗಸೂಚಿಗಳನ್ನು ಉಲ್ಲಂಘಿಸಿದ್ದಕ್ಕಾಗಿ 974 ಜನರಿಗೆ ದಂಡ ವಿಧಿಸಲಾಗಿದೆ ಎಂದು ಉತ್ತರಾಖಂಡ ಸರ್ಕಾರ ಹೇಳಿದೆ.
ಕೊರೊನಾ ಲೆಕ್ಕಿಸದೇ ಕುಂಭಮೇಳಕ್ಕೆ ಹರಿದುಬಂದ ಜನಸಾಗರ
"ಕುಂಭಮೇಳ 2021ರ ವೇಳೆ ಭಕ್ತರ ಸುರಕ್ಷತೆಗಾಗಿ ಉತ್ತರಾಖಂಡದ ಭಯೋತ್ಪಾದನಾ ನಿಗ್ರಹ ದಳ (ಎಟಿಎಸ್), ಪ್ರದೇಶ ಸಶಸ್ತ್ರ ಕಾನ್ಸ್ಟಾಬ್ಯುಲರಿ (ಪಿಎಸಿ) ಮತ್ತು ಕೇಂದ್ರ ಅರೆಸೈನಿಕ ಪಡೆ (ಸಿಪಿಎಫ್) ಮತ್ತು ಬಾಂಬ್ ನಿಗ್ರಹ ದಳದ ಐದು ತಂಡಗಳನ್ನು ಹರಿದ್ವಾರದಲ್ಲಿ ನಿಯೋಜಿಸಲಾಗಿದೆ' ರಾಜ್ಯ ಸರ್ಕಾರ ತಿಳಿಸಿದೆ.
ರೇಡಿಯೊ ಸಂವಹನ ವ್ಯವಸ್ಥೆಯ ಜೊತೆಗೆ, ಸಂಬಂಧಪಟ್ಟ ಅಧಿಕಾರಿಗಳು 1,000ಕ್ಕೂ ಹೆಚ್ಚು ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಿ ಇಡೀ ಮೇಳದ ಬಗ್ಗೆ ಕಟ್ಟುನಿಟ್ಟಿನ ಭದ್ರತೆ ಕೈಗೊಳ್ಳಲಾಗಿದೆ.
ಕೊರೊನಾ ಸಾಂಕ್ರಾಮಿಕ ರೋಗದಿಂದಾಗಿ, ಈ ವರ್ಷ ಕುಂಭಮೇಳವು ಮೂರೂವರೆ ತಿಂಗಳ ಬದಲು ಹರಿದ್ವಾರದಲ್ಲಿ 48 ದಿನಗಳ ಕಾಲ ನಡೆಯಲಿದೆ. ಮಹಾ ಕುಂಭವನ್ನು ನಾಲ್ಕು ನದಿತೀರದ ಯಾತ್ರಾ ಸ್ಥಳಗಳಲ್ಲಿ 12 ವರ್ಷಗಳ ಚಕ್ರದಲ್ಲಿ ಆಚರಿಸಲಾಗುತ್ತದೆ. ಮೇಳ ಏಪ್ರಿಲ್ 27 ರಂದು ಮುಕ್ತಾಯಗೊಳ್ಳಲಿದೆ.