ವಸ್ತ್ರಾಪಹರಣ ಆಗಿದ್ದು ದ್ರೌಪದಿಯದ್ದೋ, ಸೀತಾ ಮಾತೆಯದ್ದೋ? ಸುರ್ಜೇವಾಲ ಪ್ರಮಾದ
ಚಂಡೀಗಢ, ಜೂನ್ 9: ಮಹಾಭಾರತದಲ್ಲಿ ನಡೆದ ಘಟನೆಯನ್ನು ರಾಮಾಯಣಕ್ಕೆ ಹೋಲಿಸಿದರೆ? ಅದು ದ್ವಾಪರ ಯುಗ, ಇನ್ನೊಂದು ತ್ರೇತಾ ಯುಗ. ಏನೋ ಉದಾಹರಣೆಯನ್ನು ಕೊಡಲು ಹೋಗಿ, ಇನ್ನೊಂದು ಹೆಸರನ್ನು ಹೇಳಿ ಕೆಪಿಸಿಸಿ ಉಸ್ತುವಾರಿ ರಣದೀಪ್ ಸುರ್ಜೇವಾಲ ನಗೆಪಾಟಲಿಗೆ ಗುರಿಯಾಗಿದ್ದಾರೆ.
ಬಿಜೆಪಿ ವಿರುದ್ದ ಆಕ್ರೋಶ ಹೊರಹಾಕುತ್ತಿದ್ದ ಸುರ್ಜೇವಾಲ, ರಾಜ್ಯಸಭಾ ಚುನಾವಣೆಯಲ್ಲಿ ಬಿಜೆಪಿ ಕುದುರೆ ವ್ಯಾಪಾರದಲ್ಲಿ ನಿರತವಾಗಿದೆ ಎಂದು ವಾಗ್ದಾಳಿ ನಡೆಸುತ್ತಾ, ಎಲ್ಲಾ ಕಡೆ ತಮ್ಮ ಅಭ್ಯರ್ಥಿ ಗೆಲ್ಲುವುದು ಖಚಿತ ಎನ್ನುವ ವಿಶ್ವಾಸದ ಮಾತನ್ನಾಡಿದ್ದಾರೆ.
ಕಾಂಗ್ರೆಸ್ ಅಭ್ಯರ್ಥಿ ಗೆಲ್ಲಿಸಬೇಕಾದ ಉಸ್ತುವಾರಿಯೇ ಸೋಲಿನ ಸುಳಿಯಲ್ಲಿ!
"ಇಡಿ, ಸಿಬಿಐ ಸೇರಿದಂತೆ ಕೇಂದ್ರೀಯ ತನಿಖಾ ದಳವನ್ನು ಬಳಸಿಕೊಳ್ಳುತ್ತಿರುವುದು ಬಿಜೆಪಿಗೆ ಹೊಸದೇನಲ್ಲ.ಕಳೆದ ರಾಜ್ಯಸಭಾ ಚುನಾವಣೆಯ ವೇಳೆಯೂ ಬಿಜೆಪಿಗೆ ಮುಖಭಂಗವಾಗಿತ್ತು. ಈ ಬಾರಿಯೂ ಅದೇ ಫಲಿತಾಂಶ ಹೊರಬೀಳಲಿದೆ"ಎಂದು ರಣದೀಪ್ ಸುರ್ಜೇವಾಲ ಹೇಳಿದ್ದಾರೆ.
"ನಮ್ಮೆಲ್ಲಾ ಅಭ್ಯರ್ಥಿಗಳು ಜಯಶೀಲರಾಗಲಿದ್ದಾರೆ, ಪ್ರಜಾತಂತ್ರ ವ್ಯವಸ್ಥೆ, ಸಂವಿಧಾನ, ಕಾನೂನು, ನೈತಿಕತೆ ಗೆಲ್ಲಲಿದೆ. ಸುಳ್ಳಿನ ಸಾಮ್ರಾಜ್ಯವನ್ನು ಬಿಜೆಪಿಯವರು ಕಟ್ಟುತ್ತಿದ್ದಾರೆ, ಹಿಂದೆ ಸೀತಾಮಾತೆಯ ವಸ್ತ್ರಾಪರಣವಾಗಿತ್ತು. ಅದೇ ರೀತಿಯಲ್ಲಿ ಪ್ರಜಾತಂತ್ರ ವ್ಯವಸ್ಥೆಯನ್ನು ಶೀಲಹರಣ ಮಾಡಲು ಬಿಜೆಪಿಯವರು ಹೊರಟಿದ್ದಾರೆ"ಎಂದು ಸುರ್ಜೇವಾಲ ಹೇಳುವ ಮೂಲಕ, ಬಾಯಿತಪ್ಪಿನಿಂದ ಸೀತಾಮಾತೆಯ ಹೆಸರನ್ನು ಎಳೆದು ತಂದಿದ್ದಾರೆ.
ದೆಹಲಿ ಬಿಜೆಪಿ ಸಾಮಾಜಿಕ ಜಾಲತಾಣ ಘಟಕದ ಮುಖ್ಯಸ್ಥರಾಗಿರುವ ಶೆಹಜಾದ್ ಈ ವಿಡಿಯೋ ತುಣುಕವನ್ನು ಟ್ವೀಟ್ ಮಾಡಿ, "ಶೀಲ ಹರಣವಾಗಿದ್ದು ದ್ರೌಪದಿಯದ್ದು ಎನ್ನುವುದು ಮುಸ್ಲಿಂ ಆಗಿ ನನಗೂ ತಿಳಿದಿದೆ. ಶ್ರೀರಾಮನ ಅಸ್ತಿತ್ವವೇ ಇಲ್ಲ ಎಂದು ಕಾಂಗ್ರೆಸ್ಸಿಗರು ಹೇಳುತ್ತಿದ್ದಾರೆ"ಎಂದು ಇವರು ಕಾಂಗ್ರೆಸ್ ಪಕ್ಷವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
Randeep Surjewala : “सीता मैया” का हुआ था चीरहरण”
— Shehzad Jai Hind (@Shehzad_Ind) June 9, 2022
Even as a Muslim I know that Cheer Haran was not of Maa Sita but Draupadi! But then Congress denied existence of Shri Ram!
You can wear Janeu on the coat but what is inside you will always come out! #MannMeinRomeNotRam pic.twitter.com/pwBbwTAi7f
ಜೂನ್ ಹತ್ತರಂದು ನಡೆಯಲಿರುವ ರಾಜ್ಯಸಭಾ ಚುನಾವಣೆಯಲ್ಲಿ ಎಐಸಿಸಿ ಪ್ರಧಾನ ಕಾರ್ಯದರ್ಶಿ ಮತ್ತು ಕೆಪಿಸಿಸಿಯ ಉಸ್ತುವಾರಿಯೂ ಆಗಿರುವ ರಣದೀಪ್ ಸುರ್ಜೇವಾಲ ಕೂಡಾ ಕಣದಲ್ಲಿದ್ದಾರೆ. ಆದರೆ, ಅಲ್ಲಿ ಕಾಂಗ್ರೆಸ್ ಮೂವರು ಅಭ್ಯರ್ಥಿಯನ್ನು ಕಣಕ್ಕಿಳಿಸಿದೆ. ಪಕ್ಷೇತರರಾಗಿ ಸುಭಾಷ್ ಚಂದ್ರ ಕಣದಲ್ಲಿ ಇರುವುದರಿಂದ ಕರ್ನಾಟಕದಂತೆ ಅಲ್ಲಿನ ಚುನಾವಣೆಯೂ ಕುತೂಹಲಕ್ಕೆ ಕಾರಣವಾಗಿದೆ.