ಉಸಿರಾಟ ಸಮಸ್ಯೆಯವರಿಗೆ ಕೋಲ್ಕತ್ತಾದಲ್ಲಿ "ಪಾಕೆಟ್ ವೆಂಟಿಲೇಟರ್" ಆವಿಷ್ಕಾರ
ಕೋಲ್ಕತ್ತಾ, ಜೂನ್ 15: ಕೊರೊನಾ ಸೋಂಕಿನ ಎರಡನೇ ಅಲೆಯಲ್ಲಿ ವೈದ್ಯಕೀಯ ಆಮ್ಲಜನಕದ ಕೊರತೆ ದೇಶದಲ್ಲಿ ಅತೀವವಾಗಿತ್ತು. ಆಮ್ಲಜನಕ ಕೊರತೆಯ ತೀವ್ರತೆಯನ್ನು ಕಂಡ ಹಾಗೂ ಸ್ವತಃ ಅನುಭವಿಸಿದ ಕೋಲ್ಕತ್ತಾ ಮೂಲದ ವಿಜ್ಞಾನಿ ಡಾ. ರಮೇಂದ್ರ ಲಾಲ್ ಮುಖರ್ಜಿ ಇದೀಗ "ಪಾಕೆಟ್ ವೆಂಟಿಲೇಟರ್" ಅಭಿವೃದ್ಧಿಪಡಿಸಿದ್ದಾರೆ.
ವೃತ್ತಿಯಲ್ಲಿ ಇಂಜಿನಿಯರ್ ಆಗಿರುವ ರಮೇಂದ್ರ ಲಾಲ್, ಬ್ಯಾಟರಿ ಬೆಂಬಲಿತ ವೆಂಟಿಲೇಟರ್ ಅಭಿವೃದ್ಧಿಗೊಳಿಸಿದ್ದು, ಉಸಿರಾಟ ಸಮಸ್ಯೆ ಇರುವವರಿಗೆ ಇದು ನೆರವಾಗಲಿದೆ.
ಅಮೆರಿಕದ ವೈದ್ಯರಿಂದ ಭಾರತ ಆಸ್ಪತ್ರೆಗಳ ಹಾಸಿಗೆ ಲಭ್ಯತೆ ಮಾಹಿತಿ ನೀಡುವ ಮ್ಯಾಪ್ ಅಭಿವೃದ್ಧಿ
"ಯಾವುದೇ ವಯಸ್ಸಿನವರೂ ಇದನ್ನು ಬಳಸಬಹುದಾಗಿದೆ. ಒಮ್ಮೆ ಚಾರ್ಜ್ ಮಾಡಿದರೆ ಎಂಟು ಗಂಟೆಗಳವರೆಗೂ ಬಳಸಬಹುದು. ಈ ಸಾಧನಕ್ಕೆ ಪವರ್ ಯುನಿಟ್ ಹಾಗೂ ವೆಂಟಿಲೇಟರ್ ಯುನಿಟ್ ಎಂಬ ಎರಡು ಭಾಗಗಳಿವೆ. ಒಮ್ಮೆ ಬಟನ್ ಆನ್ ಮಾಡಿದರೆ, ವೆಂಟಿಲೇಟರ್, ಹೊರಗಿನ ಗಾಳಿಯನ್ನು ಒಳಗೆ ತೆಗೆದುಕೊಳ್ಳುತ್ತದೆ. ಅದರಲ್ಲಿನ ಯುವಿ ಚೇಂಬರ್ನಿಂದ ಗಾಳಿ ಶುದ್ಧಗೊಳಿಸಿ, ನಂತರ ಬಾಯಿಗೆ ಗಾಳಿ ನೀಡುತ್ತದೆ," ಎಂದು ವಿವರಿಸುತ್ತಾರೆ ಡಾ. ಮುಖರ್ಜಿ.
ಕೊರೊನಾ ಸೋಂಕು ತಗುಲಿದ್ದರೂ ಈ ಯುವಿ ಚೇಂಬರ್ ಗಾಳಿಯನ್ನು ಫಿಲ್ಟರ್ ಮಾಡಿ ಅದನ್ನು ಸೋಂಕು ಮುಕ್ತಗೊಳಿಸುತ್ತದೆ. ಇದರಲ್ಲಿನ ಕಂಟ್ರೋಲ್ ನಾಬ್, ಆಮ್ಲಜನಕದ ಅಗತ್ಯದ ಮೇಲೆ ಕಾರ್ಯನಿರ್ವಹಿಸಲು ಸಹಾಯ ಮಾಡುತ್ತದೆ. ಈ ಪುಟ್ಟ ವೆಂಟಿಲೇಟರ್ 250 ಗ್ರಾಂ ಇದ್ದು, ಮೊಬೈಲ್ ಚಾರ್ಜರ್ ಮೂಲಕವೂ ಚಾರ್ಜ್ ಮಾಡಬಹುದು.
"ತಮಗೂ ಈ ಮುನ್ನ ಕೊರೊನಾ ಸೋಂಕು ತಗುಲಿದ್ದು, ಉಸಿರಾಟದ ತೊಂದರೆ ಕಾಣಿಸಿಕೊಂಡಿತ್ತು. ಈ ಸಂಗತಿಯೇ ನನಗೆ ಈ ಸಾಧನ ಹೊರತರಲು ಪ್ರೇರಣೆಯಾಯಿತು," ಎಂದು ಮುಖರ್ಜಿ ಹೇಳಿಕೊಂಡಿದ್ದಾರೆ.
ಕೊರೊನಾ ಸೋಂಕಿತರಿಗಷ್ಟೇ ಅಲ್ಲ, ಆಸ್ತಮಾ ಹಾಗೂ ಉಸಿರಾಟ ತೊಂದರೆಯಿರುವವರೆಲ್ಲರಿಗೂ ಇದು ಉಪಯೋಗಕ್ಕೆ ಬರುತ್ತದೆ. ಅಮೆರಿಕ ಮೂಲದ ಕಂಪನಿ ಈ ಸಾಧನದ ಅಭಿವೃದ್ಧಿಗೆ ಪ್ರಸ್ತಾಪವಿಟ್ಟಿದೆ. ಸದ್ಯ 30 ಪೇಟೆಂಟ್ಗಳಿದ್ದು, ಹಲವು ಜೀವಗಳನ್ನು ಈ ಸಾಧನ ರಕ್ಷಿಸಬಲ್ಲದಾಗಿದೆ ಎಂದು ಹೇಳಿಕೊಂಡಿದ್ದಾರೆ.