ಮೇಲ್ಮನೆಯಲ್ಲಿ ಬಹುಮತ, ಪ್ರಧಾನಿ ಮೋದಿ ಚಿಂತೆ ಮಾಡ್ತಿಲ್ಲವೇಕೆ?
ಲೋಕಸಭಾ ಚುನಾವಣೆ 2019ರಲ್ಲಿ ಭರ್ಜರಿ ಫಲಿತಾಂಶ ನೀಡಿ ಅಧಿಕಾರ ಸ್ಥಾಪಿಸಿದ ಪ್ರಧಾನಿ ಮೋದಿ ಅವರಿಗೆ ರಾಜ್ಯಸಭೆಯಲ್ಲಿ ಬಹುಮತ ಇಲ್ಲ ಎಂಬ ಕೊರಗು ಇತ್ತೀಚಿನ ದಿನಗಳವರೆಗೂ ಇತ್ತು. ಈ ಬಗ್ಗೆ ಬಹಿರಂಗವಾಗಿ ಹೇಳಿಕೊಂಡಿದ್ದರು. ಆದರೆ, ಈಗ ಬಿಜೆಪಿ ನೇತೃತ್ವದ ಎನ್ಡಿಎ, ಮೇಲ್ಮನೆಯಲ್ಲೂ ಬಹುಮತ ಗಳಿಸುವ ಉತ್ಸಾಹದಲ್ಲಿದೆ.
ತ್ರಿವಳಿ ತಲಾಕ್, ನಾಗರಿಕ ಕಾಯ್ದೆ 1955ಕ್ಕೆ ತಿದ್ದುಪಡಿ ಸೇರಿದಂತೆ ಅನೇಕ ಮಸೂದೆಗಳು ಮುಂಗಾರು ಅಧಿವೇಶನದಲ್ಲಿ ಮಂಡನೆಯಾಗಲಿದ್ದು, ವಿಧೇಯಕಗಳ ಅಂಗೀಕಾರ, ಬಹುಮತ ಗಳಿಸಲು ಮೇಲ್ಮನೆಯಲ್ಲಿ ಮೋದಿ ಸರ್ಕಾರಕ್ಕೆ ಇತರೆ ಪಕ್ಷಗಳ ನೆರವು ಅತ್ಯಗತ್ಯ.
ಟಿಡಿಪಿ ಎಂಪಿಗಳು ಬಿಜೆಪಿಗೆ, ರಾಜ್ಯಸಭೆಯಲ್ಲಿ ಸಂಖ್ಯಾಬಲ ಹೆಚ್ಚಳ
ಕಳೆದ ಐದು ವರ್ಷಗಳಲ್ಲಿ ಕೆಳಮನೆಯಲ್ಲಿ ಪಾಸ್ ಆದ ಅನೇಕ ಮಸೂದೆಗಳನ್ನು ರಾಜ್ಯಸಭೆಯಲ್ಲಿ ತಡೆಯೊಡ್ಡುವಲ್ಲಿ ವಿಪಕ್ಷಗಳು ಯಶಸ್ವಿಯಾಗಿದ್ದವು.
ಟಿಡಿಪಿ ರಾಜ್ಯಸಭಾ ಸದಸ್ಯರಾದ ಟಿಜಿ ವೆಂಕಟೇಶ್, ವೈಎಸ್ ಚೌದರಿ, ಜಿಎಂ ರಾವ್ ಮತ್ತು ಸಿಎಂ ರಮೇಶ್ ಅವರು ಬಿಜೆಪಿ ಸೇರ್ಪಡೆಗೊಂಡ ಬಳಿಕ ರಾಜ್ಯಸಭೆಯಲ್ಲಿ ಸಂಖ್ಯಾಬಲದಲ್ಲಿ ವ್ಯತ್ಯಾಸವಾಗಿದೆ.
ಒಟ್ಟು 9 ಸ್ಥಾನಗಳು ಇನ್ನು ಖಾಲಿಯಿವೆ
245 ಸದಸ್ಯ ಬಲದ ರಾಜ್ಯಸಭೆಯಲ್ಲಿ ಬಿಜೆಪಿ ನೇತೃತ್ವದ ಎನ್ಡಿಎ ಸದ್ಯಕ್ಕೆ 106 ಸದಸ್ಯ ಬಲ ಹೊಂದಿದೆ(ಟಿಡಿಪಿ ಸಂಸದರನ್ನು ಸೇರಿಸಿ) ಆದರೂ ಬಹಮತಕ್ಕೆ ಇನ್ನೂ 18 ಸದಸ್ಯರು ಬೇಕು. 4 ಟಿಡಿಪಿ, 1 ನ್ಯಾಷನಲ್ ಲೋಕದಳ ಸದಸ್ಯರನ್ನು ಸೇರಿಸಿದರೆ ಬಿಜೆಪಿ 76 ಸಂಖ್ಯಾಬಲ ಹೊಂದಿದೆ.
ಕಾಂಗ್ರೆಸ್ ನೇತೃತ್ವದ ಯುಪಿಎ ಒಟ್ಟು 66 ಸದಸ್ಯ ಬಲ ಹೊಂದಿದೆ. ಎನ್ಡಿಎ ಹಾಗೂ ಯುಪಿಎ ಎರಡಕ್ಕೂ ಸೇರದ ಸದಸ್ಯರ ಸಂಖ್ಯೆ ಕೂಡಾ 66 ರಷ್ಟಿದೆ. ಒಟ್ಟು 9 ಸ್ಥಾನಗಳು ಇನ್ನು ಖಾಲಿಯಿವೆ.
ಬಿಜೆಪಿ ತನ್ನ ಸಂಖ್ಯಾಬಲ 78ಕ್ಕೇರಲಿದೆ
ಜುಲೈ 05ರಂದು ಒಡಿಶಾದ 3, ಗುಜರಾತಿನ 2 ಹಾಗೂ ಬಿಹಾರದ 1 ಸ್ಥಾನಕ್ಕೆ ಚುನಾವಣೆ ನಿಗದಿಯಾಗಿದೆ. ಈ ಪೈಕಿ ಒಡಿಶಾ ಹಾಗೂ ಬಿಹಾರದ ನಾಲ್ವರು ಸದಸ್ಯರು ಅವಿರೋಧ ಆಯ್ಕೆಯಾಗಿದ್ದಾರೆ.
ಹೀಗಾಗಿ, ಬಿಜೆಪಿ ತನ್ನ ಸಂಖ್ಯಾಬಲವನ್ನು 78ಕ್ಕೆ ಹಾಗೂ ಎನ್ಡಿಎ 115ಕ್ಕೇರಿಸಿಕೊಳ್ಳಲಿದೆ. ಎಐಎಡಿಎಂಕೆ, ಜನತಾ ದಳ, ಶಿರೋಮಣಿ ಅಕಾಲಿ ದಳ, ಶಿವಸೇನಾ, ಆರ್ ಪಿಐ(ಅಥಾವಲೆ), ನಾಗಾ ಪೀಪಲ್ ಫ್ರಂಟ್, ಬೋಡೋಲ್ಯಾಂಡ್ ಪೀಪಲ್ಸ್ ಫ್ರಂಟ್, ಅಸ್ಸೋಂ ಗಣ ಪರಿಷತ್, ಸಿಕ್ಕಿಂ ಡೆಮೊಕ್ರಾಟಿಕ್ ಫ್ರಂಟ್, ಮೂವರು ಪಕ್ಷೇತರರು, ಮೂವರು ನಾಮಾಂಕಿತ ಸದಸ್ಯರು ಇದರಲ್ಲಿ ಸೇರಿದ್ದಾರೆ.
ಜುಲೈ 05ರ ಚುನಾವಣೆ ಬಳಿಕ ಸಂಖ್ಯಾಬಲ
ಜುಲೈ 05ರ ಚುನಾವಣೆ ಬಳಿಕ ಸಂಖ್ಯಾಬಲ: ರಾಜ್ಯಸಭೆ ಸಂಖ್ಯಾಬಲ 241 ಆಗಲಿದೆ. ಬಹುಮತಕ್ಕೆ 6 ಸ್ಥಾನ ಕಡಿಮೆ ಬೀಳಲಿದ್ದು, 121 ಸಂಖ್ಯೆ ಮುಟ್ಟಲು, ಬಿಜೆಡಿ (5 ಸ್ಥಾನ), ವೈಎಸ್ಸಾರ್ ಕಾಂಗ್ರೆಸ್ (2 ಸ್ಥಾನ) ನೆರವಾಗುವ ಸಾಧ್ಯತೆಯಿದೆ. ಹೀಗಾಗಿ ಮೋದಿ ಚಿಂತೆ ಮಾಡುತ್ತಿಲ್ಲ.
ಅಲ್ಲಿಗೂ ಬಹುಮತ ಸಿಗದಿದ್ದರೆ, ಮುಂದಿನ ವರ್ಷ ಉತ್ತರ ಪ್ರದೇಶದಲ್ಲಿ 10 ಸ್ಥಾನಗಳು ಖಾಲಿಯಾಗಲಿವೆ. 403 ಸದಸ್ಯ ಬಲದಲ್ಲಿ 300ಕ್ಕೂ ಅಧಿಕ ಸದಸ್ಯ ಬಲ ಹೊಂದಿರುವ ಬಿಜೆಪಿಗೆ ಕನಿಷ್ಠ 9 ಸ್ಥಾನವಾದರೂ ಖಚಿತವಾಗಿ ಸಿಗಲಿದೆ. ಹೀಗಾಗಿ, 124 ಸ್ಥಾನವನ್ನು ಹೊಂದುವುದು ಎನ್ಡಿಎ ಈಗ ಕನಸಲ್ಲ, ನನಸಾಗಲಿದೆ.
2020ರಲ್ಲಿ ರಾಜ್ಯಸಭೆಯಲ್ಲಿ ತನ್ನ ಬಲ ಪ್ರದರ್ಶನಕ್ಕೆ ಬಿಜೆಪಿ ಸಜ್ಜಾಗಿದೆ
ಮಹಾರಾಷ್ಟ್ರ, ಜಾರ್ಖಂಡ್, ಹರ್ಯಾಣದಲ್ಲಿ ಈ ವರ್ಷಾಂತ್ಯದಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದೆ. 2020ರಲ್ಲಿ ರಾಜ್ಯಸಭೆಯಲ್ಲಿ ತನ್ನ ಬಲ ಪ್ರದರ್ಶನಕ್ಕೆ ಬಿಜೆಪಿ ಸಜ್ಜಾಗಿದೆ. ಬಿಹಾರದಲ್ಲಿ ಜೆಡಿಯು, ತಮಿಳುನಾಡಿನಲ್ಲಿ ಎಐಎಡಿಎಂಕೆ ಹಾಗೂ ಮಹಾರಾಷ್ಟ್ರದಲ್ಲಿ ಶಿವಸೇನೆ ಉತ್ತಮ ಫಲಿತಾಂಶ ನೀಡಿದರೆ, 2021ರ ವೇಳೆಗೆ ಬಿಜೆಪಿ 124 ಸದಸ್ಯ ಬಲ ಹೊಂದಿ ಬಹುಮತ ಸಾಧಿಸುವ ನಿರೀಕ್ಷೆ ಹೊಂದಿದೆ.ಎನ್ಡಿಎಯೇತರ ಪಕ್ಷಗಳಾದ ಬಿಜೆಡಿ, ಟಿಆರ್ ಎಸ್ ಹಾಗೂ ವೈಎಸ್ಸಾರ್ ಪಕ್ಷಗಳು ಆಡಳಿತಾರೂಢ ಪಕ್ಷಕ್ಕೆ ವಿಷಯಾಧಾರಿತ ಬೆಂಬಲ ನೀಡುವ ಸಾಧ್ಯತೆಗಳಿವೆ