ವಿಶ್ವಸಂಸ್ಥೆಯಲ್ಲಿ ಪಾಕ್ಗೆ ಬೆವರಿಳಿಸಿದ ಈ ಮಹಿಳಾ ಅಧಿಕಾರಿ ಬಗ್ಗೆ ಗೊತ್ತೇ?
Recommended Video
ನವದೆಹಲಿ, ಸೆಪ್ಟೆಂಬರ್ 29: 'ಕಾಶ್ಮೀರಕ್ಕೆ ಸಂಬಂಧಿಸಿದಂತೆ ಭಾರತದ ಜತೆಗೆ ಉಂಟಾಗಿರುವ ಬಿಕ್ಕಟ್ಟು ಅಣ್ವಸ್ತ್ರ ಯುದ್ಧಕ್ಕೆ ದಾರಿಮಾಡಿಕೊಡಲಿದೆ. ಇದರ ಪರಿಣಾಮವನ್ನು ಇಡೀ ಜಗತ್ತು ಎದುರಿಸಬೇಕಾಗುತ್ತದೆ. ಭಾರತದಲ್ಲಿ ಮಾನವಹಕ್ಕುಗಳ ಉಲ್ಲಂಘನೆಯಾಗುತ್ತಿದೆ. ಬಂದೂಕನ್ನು ಕೈಗೆತ್ತಿಕೊಳ್ಳಲು ಜನರನ್ನು ನೀವೇ ಪ್ರಚೋದಿಸುತ್ತಿದ್ದಿರಿ. ಭಾರತದ ಎದುರು ಶರಣಾಗುವುದಕ್ಕಿಂತ ಸಾಯುವವರೆಗೂ ಹೋರಾಡುವುದನ್ನು ನಾನು ಆಯ್ಕೆ ಮಾಡಿಕೊಳ್ಳುತ್ತೇನೆ' ಎಂದು ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಭಾಷಣದ ವೇಳೆ ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಹೇಳಿದ್ದರು.
ಇಮ್ರಾನ್ ಖಾನ್ ಅವರ ಕೆರಳಿಸುವ ಮಾತುಗಳಿಗೆ ಭಾರತ ತೀಕ್ಷ್ಣ ಪ್ರತಿಕ್ರಿಯೆ ನೀಡಿತ್ತು. ಕಾಶ್ಮೀರ ವಿಚಾರ ಸಂಪೂರ್ಣವಾಗಿ ಭಾರತದ ಆಂತರಿಕ ವ್ಯವಹಾರವಾಗಿದೆ. ಉಗ್ರರ ಕಾರ್ಖಾನೆಗಳನ್ನೇ ನಿರ್ಮಿಸಿರುವ ದೇಶವು ಇಲ್ಲಿ ವಕಾಲತ್ತು ವಹಿಸುವ ಅಗತ್ಯವಿಲ್ಲ ಎನ್ನುವ ಮೂಲಕ ಇಮ್ರಾನ್ ಖಾನ್ ಅವರಿಗೆ ತಿರುಗೇಟು ನೀಡಿತ್ತು.
ಇಮ್ರಾನ್ ಖಾನ್ ಮಾತಿನಲ್ಲಿ ನರಮೇಧ, ರಕ್ತದೋಕುಳಿ, ಬಂದೂಕನ್ನು ಕೈಗೆತ್ತಿಕೊಳ್ಳುವುದು, ಜನಾಂಗೀಯ ಮೇಲರಿಮೆ, ಸಾಯುವವರೆಗೂ ಹೋರಾಡುತ್ತೇನೆ ಎಂಬ ಮಾತುಗಳು ಮಧ್ಯಯುಗದ ಮನಸ್ಥಿತಿಯನ್ನು ಬಿಂಬಿಸುತ್ತದೆಯೇ ಹೊರತು 21ನೇ ಶತಮಾನದ ಧ್ಯೇಯಗಳನ್ನು ಅಲ್ಲ ಎಂದು ಪಾಕಿಸ್ತಾನದ ಆಕ್ರಮಣಕಾರಿ ಮನೋಭಾವಕ್ಕೆ ಕಟುವಾದ ಪ್ರತಿಕ್ರಿಯೆ ನೀಡಿತ್ತು. ಇಮ್ರಾನ್ ಖಾನ್ ಅವರ ಐವತ್ತು ನಿಮಿಷದ ಪ್ರಚೋದನಾಕಾರಿ ಭಾಷಣಕ್ಕೆ ನೀಡಿದ ಐದೇ ನಿಮಿಷದ ಖಡಕ್ ಉತ್ತರ ಪಾಕಿಸ್ತಾನವನ್ನು ಬೆವರಿಳಿಸುವಂತೆ ಮಾಡಿದೆ.
ವೈರಲ್ ಆದ ವಿದಿಶಾ ಮಾತುಗಳು
ಭಾರತದ ಪ್ರತಿಕ್ರಿಯೆ ವಿಶ್ವಸಂಸ್ಥೆಯಲ್ಲಿ ಇತರೆ ದೇಶಗಳ ಪ್ರತಿನಿಧಿಗಳ ಮೆಚ್ಚುಗೆಗೆ ಕಾರಣವಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ವೈರಲ್ ಆಗಿದೆ. ತಮ್ಮ ಪ್ರಖರ ಮಾತುಗಳ ಮೂಲಕ ಜಗತ್ತಿನ ಗಮನ ಸೆಳೆದವರು ವಿಶ್ವಸಂಸ್ಥೆಯಲ್ಲಿ ಭಾರತದ ಕಾಯಂ ಯೋಜನೆಯ ಮೊದಲ ಕಾರ್ಯದರ್ಶಿ ವಿದಿಶಾ ಮೈತ್ರಾ. ಅಣ್ವಸ್ತ್ರ ಬಳಕೆ ಕುರಿತು ಇಮ್ರಾನ್ ಖಾನ್ ಹೇಳಿಕೆಯು ಯುದ್ಧೋನ್ಮಾದತನದ ಉದಾಹರಣೆಯೇ ಹೊರತು ಮುತ್ಸದ್ಧಿತನದ್ದಲ್ಲ ಎಂದು ವ್ಯಾಖ್ಯಾನಿಸಿದ್ದ ವಿದಿಶಾ ಬಗ್ಗೆ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ.
ಇಮ್ರಾನ್ ಖಾನ್ 'ರಕ್ತಪಾತ' ಭಾಷಣಕ್ಕೆ ಭಾರತದ ತಿರುಗೇಟು
ಯಾರು ಈ ವಿದಿಶಾ ಮೈತ್ರಾ?
ವಿದೇಶಾಂಗ ಸಚಿವಾಲಯದ ಪ್ರಥಮ ಕಾರ್ಯದರ್ಶಿಯಾಗಿರುವ ವಿದಿಶಾ ಮೈತ್ರಾ, ನೀತಿ ನಿರೂಪಣೆ ಮತ್ತು ಸಂಶೋಧನೆ (ಪಿಪಿ&ಆರ್) ವಿಭಾಗದಲ್ಲಿ ಉಪ ಕಾರ್ಯದರ್ಶಿಯ ಅಧಿಕೃತ ಹುದ್ದೆ ಹೊಂದಿದ್ದಾರೆ. 2008ರ ಬ್ಯಾಚ್ನ ಭಾರತೀಯ ವಿದೇಶಾಂಗ ಸೇವೆಗಳ (ಐಎಫ್ಎಸ್) ಅಧಿಕಾರಿಯಾಗಿರುವ ಅವರು, 39ನೇ ರಾಂಕ್ ಪಡೆದಿದ್ದರು. 2009ರಲ್ಲಿ ಇಎಎಂನ ಅಂಬಾಸಡರ್ ಬಿಮಲ್ ಸನ್ಯಾಲ್ ಸ್ಮಾರಕ ಬಹುಮಾನ ಚಿನ್ನದ ಪದಕದ ಅತ್ಯುತ್ತಮ ಟ್ರೇನೀಯಾಗಿ ಹೊರಹೊಮ್ಮಿದ್ದರು. ಶಾಂಘೈ ಸಹಕಾರ ಸಂಘದಲ್ಲಿಯೂ ಅವರು ಅಧಿಕಾರಿಯಾಗಿದ್ದಾರೆ.
ಇಮ್ರಾನ್ ಖಾನ್ ಒಪ್ಪಿಕೊಳ್ಳುತ್ತಾರಾ?
ಪಾಕಿಸ್ತಾನವು ಭಯೋತ್ಪಾದನೆಗೆ ಕುಮ್ಮಕ್ಕು ನೀಡುತ್ತಿದೆ ಎಂಬ ಕಠಿಣ ವಾಗ್ದಾಳಿ ನಡೆಸಿದ್ದ ವಿದಿಶಾ ಅವರು, ಇಮ್ರಾನ್ ಖಾನ್ಗೆ ಹಲವು ಪ್ರಶ್ನೆಗಳನ್ನು ಕೇಳಿದ್ದರು. 'ವಿಶ್ವಸಂಸ್ಥೆಯು ಜಾಗತಿಕ ಉಗ್ರರ ಎಂದು ಹೆಸರಿಸಿರುವ 130 ಉಗ್ರರು ಮತ್ತು 23 ಭಯೋತ್ಪಾದನಾ ಸಂಘಟನೆಗಳು ತನ್ನ ನೆಲದಲ್ಲಿವೆ ಎಂಬುದನ್ನು ಪಾಕಿಸ್ತಾನದ ಪ್ರಧಾನಿ ಒಪ್ಪಿಕೊಳ್ಳುತ್ತಾರೆಯೇ? 27 ಪ್ರಮುಖ ಮಾನದಂಡಗಳಲ್ಲಿ 20ಕ್ಕೂ ಹೆಚ್ಚು ಬಾರಿ ಹಣಕಾಸು ಕಾರ್ಯ ಯೋಜನೆ ಪಡೆಯ ನಿಯಮಗಳನ್ನು ಉಲ್ಲಂಘನೆ ಮಾಡಲಾಗಿದೆ ಎಂಬುದನ್ನು ಪಾಕಿಸ್ತಾನ ನಿರಾಕರಿಸುತ್ತದೆಯೇ? ಒಸಾಮ ಬಿನ್ ಲ್ಯಾಡೆನ್ನ ಬಹಿರಂಗ ಸಮರ್ಥಕನಾಗಿದ್ದೆ ಎಂಬುದನ್ನು ನ್ಯೂಯಾರ್ಕ್ ನಗರದ ಜನರ ಮುಂದೆ ಇಮ್ರಾನ್ ಖಾನ್ ಒಪ್ಪಿಕೊಳ್ಳುತ್ತಾರೆಯೇ?' ಎಂದು ವಿದಿಶಾ ಕೇಳಿದ್ದರು.
ಭಾರತದ ವಿದೇಶಾಂಗ ಸಚಿವರ ಸಭೆಗೆ ಪಾಕ್ ಬಾಯ್ಕಾಟ್: ಭಾರತದ ಟಿಟ್ ಫಾರ್ ಟ್ಯಾಟ್
ಸೋತ ಸೇನಾಧಿಕಾರಿಯ ಕುಲದವರು
ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಅವರನ್ನು ವಿದಿಶಾ ಅವರು ಇಮ್ರಾನ್ ಖಾನ್ ನಿಯಾಜಿ ಎಂದು ಹೆಸರಿಸಿದ್ದರು. 1971ರ ಯುದ್ಧದಲ್ಲಿ ಪಾಕಿಸ್ತಾನ ಸೇನೆಯ ಲೆಫ್ಟಿನೆಂಟ್ ಜನರಲ್ ಎಎಕೆ ನಿಯಾಜಿ ಅವರು ಭಾರತದ ಪಡೆಗಳ ಮುಂದೆ ಶರಣಾಗಿದ್ದರು. ವಿಶೇಷವೆಂದರೆ ಇಮ್ರಾನ್ ಖಾನ್ ಕೂಡ ನಿಯಾಜಿ ಅವರ ಮಿಯಾನ್ವಾಲಿ ಪ್ರದೇಶದ ಮತ್ತು ಅವರದೇ ಕುಲಕ್ಕೆ ಸೇರಿದವರಾಗಿದ್ದಾರೆ.
ಭಾರತದ ವಿರುದ್ಧ ಇಮ್ರಾನ್ ಖಾನ್ ಮಾತನಾಡಲು ಸಿಂಗ್, ಸೋನಿಯಾ ಕಾರಣ: ಬಿಜೆಪಿ ಆರೋಪ
ಇಮ್ರಾನ್ ದ್ವೇಷಪೂರಿತ ಭಾಷಣ
ಈ ಮಹತ್ವದ ಅಧಿವೇಶನದ ವೇದಿಕೆಯಲ್ಲಿ ಆಡುವ ಪ್ರತಿ ಪದ ಕೂಡ ಇತಿಹಾಸವಾಗುತ್ತದೆ. ಆ ಪದಗಳಿಗೆ ಅಷ್ಟೇ ಮಹತ್ವ ಇರುತ್ತವೆ. ಆದರೆ ಇಮ್ರಾನ್ ಖಾನ್ ಅವರ ಮಾತುಗಳು ಜಗತ್ತನ್ನು ವಿಭಜಿಸುವಾಗ ಹುಟ್ಟುವ ಚಿತ್ರವನ್ನು ಕಟ್ಟಿಕೊಡುತ್ತದೆ. ನಾವು-ಅವರು, ಶ್ರೀಮಂತ-ಬಡವ, ಉತ್ತರ-ದಕ್ಷಿಣ, ಅಭಿವೃದ್ಧಿ ಹೊಂದಿದ-ಅಭಿವೃದ್ಧಿಶೀಲ, ಮುಸ್ಲಿಮರು-ಇತರರು ಎಂದು ವಿಭಜನೆಯ ಮಾತುಗಳನ್ನು ಅವರು ವಿಶ್ವಸಂಸ್ಥೆಯ ಈ ಪ್ರಮುಖ ವೇದಿಕೆಯಲ್ಲಿಯೇ ಆಡಿದ್ದಾರೆ. ಇದು ಭಿನ್ನಾಭಿಪ್ರಾಯಗಳನ್ನು ವೃದ್ಧಿಸುವ ಮತ್ತು ದ್ವೇಷಕ್ಕೆ ಕುಮ್ಮಕ್ಕು ನೀಡುವ ಪ್ರಯತ್ನ. ಇದೆಲ್ಲವನ್ನೂ ಗಮನಿಸಿದಾಗ ಇಮ್ರಾನ್ ಖಾನ್ ಅವರದು ದ್ವೇಷಪೂರಿತ ಭಾಷಣ ಎನ್ನುವುದು ಮನದಟ್ಟಾಗುತ್ತದೆ ಎಂದು ವಿದಿಶಾ ಹೇಳಿದ್ದರು.