ಭಾರತ ಬಂದ್ ಯಶಸ್ವಿಯಾಗಿಸಲು ಸಂಯುಕ್ತ ಕಿಸಾನ್ ಮೋರ್ಚಾ ದೇಶದ ನಾಗರಿಕರಲ್ಲಿ ಮನವಿ
ನವದೆಹಲಿ, ಮಾರ್ಚ್ 25: ಸಂಯುಕ್ತ ಕಿಸಾನ್ ಮೋರ್ಚಾ(ಎಸ್ಕೆಎಂ) ಮಾರ್ಚ್ 26 ರಂದು ಕರೆ ನೀಡಿರುವ ಭಾರತ ಬಂದ್ ಯಶಸ್ಸಿಗಾಗಿ ದೇಶದ ಜನತೆಯಲ್ಲಿ ಮನವಿ ಮಾಡಿದ್ದಾರೆ.
ಕಳೆದ ನಾಲ್ಕು ತಿಂಗಳಿನಿಂದ ದೆಹಲಿ ಗಡಿಯಲ್ಲಿ ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ. ಸರ್ಕಾರವು ಅವರ ಬೇಡಿಕೆಗಳನ್ನು ಪೂರ್ಣಗೊಳಿಸುವ ಬದಲು ಅವರನ್ನು ನಿರ್ಲಕ್ಷಿಸುತ್ತಿದೆ.
ರೈತರ ಹೋರಾಟಕ್ಕೆ 4 ತಿಂಗಳು: ಮಾ.26ರಂದು ಭಾರತ್ ಬಂದ್
ಮಾರ್ಚ್ 26 ಶುಕ್ರವಾರದಂದು ಕಿಸಾನ್ ಮೋರ್ಚಾವು ಭಾರತ ಬಂದ್ಗೆ ಕರೆ ನೀಡಿದ್ದು, ಬೆಳಗ್ಗೆ 6 ರಿಂದ ಸಂಜೆ 6ರವರೆಗೆ ಎಲ್ಲಾ ರಸ್ತೆಗಳು, ರೈಲು, ಮಾರುಕಟ್ಟೆಗಳು ಬಂದ್ ಆಗಿರಲಿವೆ ಎಂದು ಹೇಳಿದ್ದಾರೆ.
ಅನ್ನದಾತರ ಈ ಪ್ರತಿಭಟನೆಗೆ ಸಹಕಾರ ನೀಡಿ, ಭಾರತ ಬಂದ್ ಯಶಸ್ವಿಯಾಗಲು ಸಹಕರಿಸಿ ಎಂದು ರೈತ ಮುಖಂಡ ದರ್ಶನ್ ಪಾಲ್ ದೇಶದ ಜನರಲ್ಲಿ ಮನವಿ ಮಾಡಿದ್ದಾರೆ. ಭಟ್ಗಾಂವ್, ಸೋನಿಪತ್, ಅಶೋಕ್ ನಗರ, ಮಧ್ಯಪ್ರದೇಶ ಸೇರಿದಂತೆ ಹಲವೆಡೆ ಪ್ರತಿಭಟನಾ ಮೆರವಣಿಗೆಗಳು ನಡೆಯಲಿವೆ. ಹಾಗೆಯೇ ರಕ್ತದಾನ ಶಿಬಿರವನ್ನು ಕೂಡ ಆಯೋಜಿಸಲಾಗಿದೆ ಎಂದು ತಿಳಿಸಿದರು.
ವಿವಾದಿತ ರೈತರ ಉತ್ಪಾದನೆ ವ್ಯಾಪಾರ ಮತ್ತು ವಾಣಿಜ್ಯ (ಪ್ರಚಾರ ಮತ್ತು ಸೌಲಭ್ಯ) ಕಾಯ್ದೆ, ಬೆಲೆ ಭರವಸೆ ಮತ್ತು ಕೃಷಿ ಸೇವೆಗಳ ಕಾಯ್ದೆ (ಸಬಲೀಕರಣ ಮತ್ತು ಸಂರಕ್ಷಣೆ) ಒಪ್ಪಂದ ಹಾಗೂ ಅಗತ್ಯ ಸರಕುಗಳ (ತಿದ್ದುಪಡಿ) ಕಾಯ್ದೆಗಳ ವಿರುದ್ಧ ರೈತರ ಪ್ರತಿಭಟನೆಗೆ ಮಾರ್ಚ್.26ರಂದು ನಾಲ್ಕು ತಿಂಗಳು ಪೂರ್ಣಗೊಳ್ಳಲಿದೆ. ಈ ಹಿನ್ನೆಲೆ ಭಾರತ್ ಬಂದ್ ನಡೆಸುವುದಕ್ಕೆ ರೈತ ಸಂಘಟನೆಗಳು ಮುಂದಾಗಿವೆ.
ಮಾರ್ಚ್.27ರಂದು ಘಾಜಿಪುರ್ ನಲ್ಲಿ ನಡೆಯಲಿರುವ ಹೋರಾಟಕ್ಕೆ ಉತ್ತರ ಪ್ರದೇಶ ಮತ್ತು ಉತ್ತರಾಖಂಡ್ ರಾಜ್ಯದ ಎಲ್ಲ ಜಿಲ್ಲೆಗಳಿಂದಲೂ ರೈತರು ಟ್ರ್ಯಾಕ್ಟರ್ ಜಾಥಾದ ಮೂಲಕ ಭಾಗವಹಿಸಲಿದ್ದಾರೆ ಎಂದು ಎಚ್ಚರಿಕೆ ನೀಡಿದ್ದಾರೆ.