ಕಿಸಾನ್ ಏಕ್ತಾ ಮೋರ್ಚಾ ಫೇಸ್ಬುಕ್ ಪೇಜ್ ಬ್ಲಾಕ್ ವಿಚಾರ: ಸ್ಪಷ್ಟನೆ ನೀಡಿದ ಫೇಸ್ಬುಕ್
ನವದೆಹಲಿ, ಡಿಸೆಂಬರ್ 21: ರೈತರ ಪ್ರಮುಖ ಫೇಸ್ಬುಕ್ ಪೇಜ್ ಕಿಸಾನ್ ಏಕ್ತಾ ಮೋರ್ಚಾ ಪೇಜ್ನಲ್ಲಿ ಭಾನುವಾರ ಪ್ರತಿಭಟನೆಯ ಲೈವ್ ಪ್ರಸಾರ ಇದ್ದಕ್ಕಿದ್ದಂತೆ ಬ್ಲಾಕ್ ಆಗಿದ್ದರ ಕುರಿತು ಸಾಮಾಜಿಕ ಜಾಲತಾಣದ ದೈತ್ಯ ಫೇಸ್ಬುಕ್ ಸ್ಪಷ್ಟನೆ ನೀಡಿದೆ.
ಲಕ್ಷಾಂತರ ಜನ ಫಾಲೋವರ್ಸ್ ಹೊಂದಿರುವ ಈ ಲೈವ್ ಪೇಜ್ ಅನ್ನು ಫೇಸ್ಬುಕ್ ಇದಕ್ಕಿದ್ದಂತೆ ಬ್ಲಾಕ್ ಮಾಡುವ ಮೂಲಕ ರೈತರಿಗೆ ಶಾಕ್ ನೀಡಿತು. ಈ ಕುರಿತಾಗಿ ಟ್ವಿಟ್ಟರ್ ಸೇರಿದಂತೆ ಇತರೆ ಸಾಮಾಜಿಕ ಜಾಲತಾಣಗಳಲ್ಲಿ ರಾಜಕೀಯ ಮುಖಂಡರು ಸೇರಿದಂತೆ, ಅನೇಕರು ವಿರೋಧ ವ್ಯಕ್ತಪಡಿಸಿದರು. ಫೇಸ್ಬುಕ್ ರೈತರ ಧ್ವನಿ ಅಡಗಿಸುವ ಪ್ರಯತ್ನ ಮಾಡುತ್ತಿದೆ ಎಂದು ಟೀಕೆಗಳು ವ್ಯಕ್ತವಾಗಿತ್ತು. ಆದರೆ ಈ ಕುರಿತು ಇದೀಗ ಫೇಸ್ಬುಕ್ ಸ್ಪಷ್ಟನೆ ನೀಡಿದೆ.
ರೈತರಿಗೆ ಶಾಕ್ ನೀಡಿದ ಫೇಸ್ಬುಕ್: ಲೈವ್ ಪೇಜ್ ಸ್ಥಗಿತ, ನಂತರ ಪುನರಾರಂಭ
''ನಮ್ಮ ವಿಮರ್ಶೆಯ ಪ್ರಕಾರ, ನಮ್ಮ ಸ್ವಯಂಚಾಲಿತ ವ್ಯವಸ್ಥೆಗಳು 'ಕಿಸಾನ್ ಏಕ್ತಾ ಮೋರ್ಚಾ' ಎಂಬ ಫೇಸ್ಬುಕ್ ಪೇಜ್ನಲ್ಲಿ ಹೆಚ್ಚಿದ ಚಟುವಟಿಕೆಯನ್ನು ಕಂಡುಕೊಂಡವು ಮತ್ತು ಅದು ನಮ್ಮ ಸಮುದಾಯ ಮಾನದಂಡಗಳನ್ನು(ಕಮ್ಯುನಿಟಿ ಸ್ಟ್ಯಾಂಡರ್ಡ್) ಉಲ್ಲಂಘಿಸುವ ಸ್ಪ್ಯಾಮ್ ಎಂದು ಫ್ಲ್ಯಾಗ್ ಮಾಡಿದೆ. ಈ ವಿಚಾರವಾಗಿ ನಮಗೆ ಅರಿವಾದಾಗ ನಾವು 3 ಗಂಟೆಗಳಿಗಿಂತ ಕಡಿಮೆ ಅವಧಿಯಲ್ಲಿ ಪೇಜ್ ಅನ್ನು ಪುನಃ ಸಕ್ರಿಯಗೊಳಿಸಿದ್ದೇವೆ'' ಎಂದು ಫೇಸ್ಬುಕ್ ವಕ್ತಾರರು ಹೇಳಿದ್ದಾರೆ.
As per our review, our automated systems found an increased activity on Facebook page 'Kisan Ekta Morcha' and flagged it as spam, which violates our Community Standards. We restored the page in less than 3 hours when we became aware of the context: Facebook spokesperson pic.twitter.com/I3r0pp8cjK
— ANI (@ANI) December 21, 2020
''ಫೇಸ್ಬುಕ್ ತನ್ನ ನಿಯಮಗಳಂತೆ ಬಹುಪಾಲು ಅನುಮಾನಸ್ಪದ ನಡವಳಿಕೆಯನ್ನು ಗುರುತಿಸಬಹುದಾದ ಮಾದರಿಗಳನ್ನು ಬಳಸಿಕೊಂಡು ಸ್ವಯಂಚಾಲಿತವಾಗಿ ಸ್ಪ್ಯಾಪ್ ಎಂದು ಗುರುತಿಸುತ್ತದೆ. ಉದಾಹರಣೆಗೆ, ಒಂದು ಖಾತೆಯು ತ್ವರಿತವಾಗಿ ಅನುಕ್ರಮವಾಗಿ ಪೋಸ್ಟ್ ಮಾಡುತ್ತಿದ್ದರೆ ಅದರಲ್ಲಿ ಏನೋ ತಪ್ಪಾಗಿದೆ ಎಂದು ಬಲವಾಗಿ ಬಿಂಬಿಸುತ್ತದೆ'' ಎಂದು ಫೇಸ್ಬುಕ್ ತಿಳಿಸಿದೆ.
ಭಾನುವಾರ ದೆಹಲಿಯ ಸಿಂಘು ಗಡಿಯಲ್ಲಿ ನಡೆಯುತ್ತಿರುವ ರೈತರ ಪ್ರತಿಭಟನೆ ಕುರಿತಾದ ಲೈವ್ ವೀಡಿಯೋಗಳನ್ನು ಫೇಸ್ಬುಕ್ ಪೇಜ್ನಲ್ಲಿ ಪ್ರಸಾರಗೊಳಿಸಲಾಗಿತ್ತು. ಆದರೆ ಪೇಜ್ ಇದ್ದಕ್ಕಿದ್ದಂತೆ ಬ್ಲಾಕ್ ಆದ ಪರಿಣಾಮ ಕಿಸಾನ್ ಏಕ್ತಾ ಮೋರ್ಚಾ ಫೇಸ್ಬುಕ್ ಪೇಜ್ ಅನ್ನು ಉದ್ದೇಶಪೂರ್ವಕವಾಗಿ ಫೇಸ್ಬುಕ್ ಬ್ಲಾಕ್ ಮಾಡಲಾಗಿದೆ ಎಂದು ಟ್ವಿಟರ್ನಲ್ಲಿ ಆಕ್ರೋಶ ವ್ಯಕ್ತವಾಯಿತು. ಭಾರೀ ಸಂಖ್ಯೆಯಲ್ಲಿ ಜನರು ಫೇಸ್ಬುಕ್ ಟ್ಯಾಗ್ ಮಾಡಿ ಟೀಕೆಗಳನ್ನು ಮಾಡಿದರು. ಜನರ ಮತ್ತು ರೈತರ ಪ್ರತಿಭಟನೆ ದೃಷ್ಟಿಯಿಂದ ಫೇಸ್ಬುಕ್ ಪೇಜ್ ಅನ್ನು ಶೀಘ್ರ ಸಕ್ರಿಯಗೊಳಿಸಿದೆ.