ಆರು ವರ್ಷದ ನಂತರ ಮನೆ ಸೇರಿದ ಪುಟ್ಟ ಬಾಲಕ
ನವದೆಹಲಿ, ಜುಲೈ, 01: ಅದು ಅಂತಿಂಥ ಮಿಲನವಲ್ಲ. ತಂದೆ-ತಾಯಿಗೆ ಕಳೆದು ಹೋದ ಮಗ ಆರು ವರ್ಷದ ನಂತರ ಸಿಕ್ಕ ತೃಪ್ತಿ. ವಿದೇಶಾಂಗ ಇಲಾಖೆಗೆ ಕುಟುಂಬವನ್ನು ಒಂದು ಮಾಡಿದ ತೃಪ್ತಿ.
ಮಗ ಮನೆಯಿಂದ ಅಪಹರಣವಾಗಿ ಆರು ವರ್ಷಗಳೇ ಕಳೆದು ಹೋಗಿತ್ತು. ತಂದೆ ತಾಯಿ ಮಗನ ಆಸೆ ಕೈಬಿಟ್ಟು ನೋವಿನಲ್ಲೇ ದಿನ ಕಳೆಯುತ್ತಿದ್ದರು. ಪೊಲೀಸರು ತಮ್ಮ ಕೈಯಲ್ಲಿ ಸಾಧ್ಯವಿಲ್ಲ ಎಂದು ಕುಳಿತುಕೊಂಡಿದ್ದರು. ಆದರೆ ಕೇಂದ್ರ ವಿದೇಶಾಂಗ ಇಲಾಖೆಯ ಮಧ್ಯ ಪ್ರವೇಶ ಕುಟುಂಬವನ್ನು ಒಂದು ಮಾಡಿದೆ.[13 ವರ್ಷದ ಪಾಕಿಸ್ತಾನದಿಂದ ನಂತರ ದೇಶಕ್ಕೆ ಮರಳಿದ ಗೀತಾ]
ಪೂರ್ವ ದೆಹಲಿಯ ಸೋನು (12) ಎಂಬ ಬಾಲಕ ಆರು ವರ್ಷಗಳ ಹಿಂದೆ ಮನೆಯ ಪಕ್ಕದಿಂದಲೇ ಅಪಹರಣಗೊಂಡಿದ್ದ. ಆ ಬಗ್ಗೆ ದೂರೂ ದಾಖಲಾಗಿತ್ತು. ಕೆಲವು ವರ್ಷಗಳ ಕಾಲ ಹುಡುಕಾಟ ನಡೆಸಿದ ಪೊಲೀಸರು ಬಾಲಕ ಸಿಗದೆ ಪ್ರಕರಣ ಕೈಚೆಲ್ಲಿದರು.
ಅಪಹರಣಕಾರರು ಬಾಲಕನನ್ನು ಬಾಂಗ್ಲಾದೇಶಕ್ಕೆ ಕರೆದೊಯ್ದಿದ್ದರು. ಬಾಲಕ ಸೋನು ಹೇಗೋ ಬಾಂಗ್ಲಾದೇಶದ ಜೆಸ್ಸೋರೆಯ ಮಕ್ಕಳ ಪುನರ್ವಸತಿ ಕೇಂದ್ರ ತಲುಪಿದ್ದ. ಈತ ಭಾರತದ ಬಾಲಕ ಎಂದು ತಿಳಿದ ಬಳಿಕ ಮೂರು ದಿನಗಳ ಹಿಂದೆ ಅಲ್ಲಿನ ಅಧಿಕಾರಿಗಳು ಸೋನುವನ್ನು ಭಾರತೀಯ ರಾಯಭಾರಿ ಕಚೇರಿಗೆ ಹಸ್ತಾಂತರಿರ ಮಾಡಿದ್ದರು.[ಭಜರಂಗಿ ಭಾಯ್ ಜಾನ್ ಕತೆ ಕೇಳಿ]
ಜೆಸ್ಸೋರೆಯ ವ್ಯಕ್ತಿಯೊಬ್ಬರು ಸೋನು ಪೋಷಕರನ್ನು ಸಂಪರ್ಕಿಸಿದಾಗ ಸೋನು ಬಾಂಗ್ಲಾದೇಶದಲ್ಲಿರುವುದು ಗೊತ್ತಾಗಿದೆ. ಎಚ್ಚೆತ್ತುಕೊಂಡ ಪಾಲಕರು ವಿದೇಶಾಂಗ ವ್ಯವಹಾರಗಳ ಇಲಾಖೆ ನೆರವು ಯಾಚಿಸಿದ್ದಾರೆ. ಸೋನು ಮತ್ತೆ ತನ್ನ ಪಾಲಕರನ್ನು ಸೇರಲು ಅಗತ್ಯ ಕ್ರಮ ಕೈಗೊಳ್ಳುವಂತೆ ಸಚಿವೆ ಸುಷ್ಮಾ ಸ್ವರಾಜ್ ಅಧಿಕಾರಿಗಳಿಗೆ ತಿಳಿಸಿದ್ದಾರೆ.
ಇಲಾಖೆಯ ಪ್ರಯತ್ನದಿಂದಾಗಿ ಬಾಲಕ ಆರು ವರ್ಷಗಳ ಬಳಿಕ ಮರಳಿ ಜೂನ್ 30 ರಂದು ಕುಟುಂಬ ಸೇರಿದ್ದಾನೆ. ನವದೆಹಲಿಗೆ ಬಂದ ಕೂಡಲೇ ಸೋನು ತನ್ನ ತಂದೆ ತಾಯಿ ಜತೆ ವಿದೇಶಾಂಗ ವ್ಯವಹಾರಗಳ ಸಚಿವೆ ಸುಷ್ಮಾ ಸ್ವರಾಜ್ ಅವರನ್ನು ಭೇಟಿ ಮಾಡಿ ತನ್ನನ್ನು ಮರಳಿ ಮನೆಗೆ ಕರೆತರಲು ಸಹಕರಿಸಿದ್ದಕ್ಕೆ ಧನ್ಯವಾದ ಹೇಳಿದ್ದಾನೆ.[ವಿವಾದದಲ್ಲಿ ಸಿಲುಕಿಕೊಂಡಿದ್ದ ಸುಷ್ಮಾ ಸ್ವರಾಜ್]
ಸೋನು ಮತ್ತು ಆತನ ತಾಯಿಯ ಡಿಎನ್ಎ ಪರೀಕ್ಷೆ ನಡೆಸಿ ಹೊಂದಿಕೆಯಾದ ನಂತರವೇ ಬಾಲಕನನ್ನು ಪೋಷಕರಿಗೆ ನೀಡಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಭಾರತ ಬಿಟ್ಟು ಪಾಕಿಸ್ತಾನಕ್ಕೆ ತೆರಳಿದ್ದ ಗೀತಾ ಳನ್ನು ಕಳೆದ ವರ್ಷದ ಅಕ್ಟೋಬರ್ ನಲ್ಲಿ ಕೇಂದ್ರ ವಿದೇಶಾಂಗ ಇಲಾಖೆ ತವರಿಗೆ ಕರೆತಂದಿತ್ತು. ಆದರೆ ಗೀತಾಳ ಪಾಲಕನ್ನು ಗುರುತಿಸಲು ಸಾಧ್ಯವಾಗದ ಕಾರಣ ಆಕೆಯನ್ನು ಸ್ವಯಂ ಸೇವಾ ಸಂಸ್ಥೆಯೊಂದಕ್ಕೆ ವಹಿಸಲಾಗಿತ್ತು.