ನವದೆಹಲಿಯಲ್ಲಿ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಭೇಟಿ ಮಾಡಿದ ನಟ ಸುದೀಪ್
ಸರಣಿ ಸಿನಿಮಾಗಳಲ್ಲಿ ಬ್ಯುಸಿಯಾಗಿರುವ ಕನ್ನಡದ ಖ್ಯಾತ ನಟ ಕಿಚ್ಚ ಸುದೀಪ್ ಸದ್ಯ ಕೇಂದ್ರ ಸಚಿವ ಪ್ರಲ್ಹಾದ್ ಜೋಷಿ ಅವರ ನಿವಾಸಕ್ಕೆ ಭೇಟಿ ನೀಡಿರುವುದು ಭಾರಿ ಕುತೂಹಲಕ್ಕೆ ಎಡೆ ಮಾಡಿದೆ. ದೆಹಲಿಯಲ್ಲಿರುವ ಪ್ರಲ್ಹಾದ್ ಜೋಷಿ ಅವರ ನಿವಾಸಕ್ಕೆ ಸುದೀಪ್ ಭೇಟಿ ನೀಡಿರುವುದಾಗಿ ಸ್ವತಃ ಪ್ರಹ್ಲಾದ್ ಜೋಷಿ ಅವರೇ ಟ್ವೀಟ್ ಮೂಲಕ ಹಂಚಿಕೊಂಡಿದ್ದಾರೆ. ಸದ್ಯ ಈ ಬೆಳವಣಿಗೆ ಸ್ಯಾಂಡಲ್ವುಡ್ ಮಾತ್ರವಲ್ಲದೇ ರಾಜಕೀಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.
ಪ್ರಹ್ಲಾದ್ ಜೋಷಿ ಅವರ ನಿವಾಸಕ್ಕೆ ಭೇಟಿ ನೀಡಿದ ಸುದೀಪ್ ಉಪಾಹಾರ ಸೇವಿಸಿ ಮಾತುಕತೆ ನಡೆಸಿದ್ದಾರೆ. ಕಿಚ್ಚ ಸುದೀಪ್ ರಾಜಕೀಯಕ್ಕೆ ಪ್ರವೇಶ ಮಾಡಲಿದ್ದಾರೆ ಎಂಬ ಮಾತು ಆಗಾಗ ಕೇಳಿ ಬರುತ್ತಿತ್ತು. ಈ ನಡುವೆ ಕೇಂದ್ರ ಸಚಿವ ಪ್ರಲ್ಹಾದ್ ಜೋಷಿ ಮನೆಗೆ ಭೇಟಿ ನೀಡಿರುವುದು ಕುತೂಹಲವನ್ನು ಮೂಡಿಸಿದೆ.
ಹಿಂದಿ ಕಡ್ಡಾಯದ ಸುತ್ತೋಲೆ ರದ್ದುಮಾಡಿದ ಸರಕಾರ; ಕಸಾಪ ಅಧ್ಯಕ್ಷ ಮಹೇಶ್ ಜೋಷಿ ಸ್ವಾಗತ
ಪ್ರಲ್ಹಾದ್ ಜೋಷಿ ಅವರು ಸುದೀಪ್ ಭೇಟಿ ವಿಚಾರ ಹಂಚಿಕೊಂಡಿದ್ದಾರೆ.'' ಇಂದು ದೆಹಲಿಯ ನನ್ನ ನಿವಾಸಕ್ಕೆ ಕನ್ನಡದ ಖ್ಯಾತ ಚಿತ್ರನಟ ಕಿಚ್ಚ ಸುದೀಪ್ ಅವರು ಭೇಟಿ ನೀಡಿ ವಿವಿಧ ವಿಚಾರಗಳ ಬಗ್ಗೆ ಮಾತುಕತೆ ನಡೆಸಿದರು. 13 ವರ್ಷಗಳ ಬಳಿಕ ದೆಹಲಿಗೆ ಭೇಟಿ ನೀಡುತ್ತಿರುವ ಕಿಚ್ಚ ಸುದೀಪ್ ಅವರು ಕಲೆ ಸಂಸ್ಕೃತಿ ಮತ್ತು ಸಾಮಾಜಿಕ ಚಟುವಟಿಕೆಗಳ ಬಗ್ಗೆ ಚರ್ಚಿಸಿದರು'' ಎಂದು ಬರೆಯುವ ಮೂಲಕ ಅವರೊಂದಿಗಿನ ಫೋಟೋಗಳನ್ನು ಹಂಚಿಕೊಂಡಿದ್ದಾರೆ.
ಜೊತೆಗೆ ಬಹುಭಾಷಾ ನಟನಾಗಿರುವ ಸುದೀಪ್ ಅವರಿಗೆ ಸಚಿವರು ಸಿನಿಮಾ ರಂಗದಲ್ಲಿ ಮತ್ತಷ್ಟು ಬೆಳೆಯಲಿ ಎಂದು ಹಾರೈಸಿದ್ದಾರೆ. ಸಚಿವರ ಭೇಟಿ ಬಳಿಕ ಸುದೀಪ್ ಇಂಡಿಯಾ ಗೇಟ್ ಬಳಿ ಪ್ರಚಾರ ಆರಂಭಿಸಿದ್ದಾರೆ.