ಲೆಫ್ಟನೆಂಟ್ ಗವರ್ನರ್ ಹುದ್ದೆ ತೊರೆಯುವೆ: ಕಿರಣ್ ಬೇಡಿ
ನವದೆಹಲಿ, ಜ. 8: ಕಳೆದ ವರ್ಷವಷ್ಟೇ ಕೇಂದ್ರಾಡಳಿತ ಪ್ರದೇಶವಾದ ಪುದುಚೇರಿಯ ಲೆಫ್ಟನೆಂಟ್ ಗವರ್ನರ್ ಆಗಿ ನೇಮಕಗೊಂಡಿದ್ದ ಮಾಜಿ ಪೊಲೀಸ್ ಅಧಿಕಾರಿ ಹಾಗೂ ಬಿಜೆಪಿ ನಾಯಕಿ ಕಿರಣ್ ಬೇಡಿ, ಮುಂದಿನ ವರ್ಷ ಆ ಹುದ್ದೆ ತೊರೆಯುವುದಾಗಿ ಹೇಳಿದ್ದಾರೆ.
ಪುದುಚೇರಿಯಲ್ಲಿ ಆಡಳಿತಾರೂಢ ಕಾಂಗ್ರೆಸ್ ಪಕ್ಷದೊಂದಿಗೆ ಏರ್ಪಟ್ಟಿರುವ ಆಡಳಿತಾತ್ಮಕವಾದ ಭಿನ್ನಾಭಿಪ್ರಾಯಗಳು ತಾರಕಕ್ಕೆ ಏರಿರುವುದರಿಂದಾಗಿ ಲೆಫ್ಟನೆಂಟ್ ಗವರ್ನರ್ ಹುದ್ದೆಯನ್ನು ತೊರೆಯಲು ನಿರ್ಧರಿಸಿರುವುದಾಗಿ ಅವರು ತಿಳಿಸಿದ್ದಾರೆ.
ಕಳೆದ ವರ್ಷ ಮೇ 29ರಂದು ಕಿರಣ್ ಬೇಡಿಯವರು, ಲೆಫ್ಟನೆಂಟ್ ಗವರ್ನರ್ ಆಗಿ ಅಧಿಕಾರ ಸ್ವೀಕರಿಸಿದ್ದರು. ಮುಂದಿನ ವರ್ಷ ಆ ಹುದ್ದೆಯಲ್ಲಿ ಎರಡು ವರ್ಷ ಪೂರೈಸಿದ ಸಾಧನೆ ಮಾಡಲಿದ್ದಾರೆ. ಹಾಗಾಗಿ, 2018ರ ಮೇ 29ರಂದು ತಮ್ಮ ಹುದ್ದೆಗೆ ರಾಜಿನಾಮೆ ಸಲ್ಲಿಸುವುದಾಗಿ ಅವರು ತಿಳಿಸಿದ್ದಾರೆ.
ಇತ್ತೀಚೆಗಷ್ಟೇ, ಅಧಿಕೃತ ಸಂಹವನ ಉದ್ದೇಶಕ್ಕಾಗಿ ಸರ್ಕಾರಿ ಅಧಿಕಾರಿಗಳು ಸಾಮಾಜಿಕ ಜಾಲತಾಣಗಳಾದ ಫೇಸ್ ಬುಕ್ ಹಾಗೂ ವಾಟ್ಸಾಪ್ ಗಳನ್ನು ಬಳಸಕೂಡದೆಂದು ಮುಖ್ಯಮಂತ್ರಿ ವಿ. ನಾರಾಯಣ ಸ್ವಾಮಿ ಸುತ್ತೋಲೆ ಹೊರಡಿಸಿದ್ದರು.
ಆದರೆ, ಗುರುವಾರ ಈ ಸುತ್ತೋಲೆಯನ್ನು ಕಿರಣ್ ಬೇಡಿ ರದ್ದುಗೊಳಿಸಿ ಆದೇಶ ಹೊರಡಿಸಿದ್ದರು. ಅಲ್ಲದೆ, ಈ ಬಗ್ಗೆ ಟ್ವೀಟ್ ಮಾಡಿ, ಪುದುಚೇರಿ ಕೇಂದ್ರಾಡಳಿತ ಪ್ರದೇಶವು ಪ್ರಗತಿ ಸಾಧಿಸಬೇಕಾದರೆ ಸಂಹವನ ವಿಚಾರದಲ್ಲಿ ಆಧುನಿಕತೆಯನ್ನು ಅಳಡಿಸಿಕೊಳ್ಳುವ ವಿಚಾರದಿಂದ ವಿಮುಖವಾಗಬಾರದು ಎಂದಿದ್ದರು.
ಬೇಡಿಯವರ ಈ ನಡೆ, ಅಲ್ಲಿನ ಕಾಂಗ್ರೆಸ್ ನಾಯಕರ ಆಕ್ರೋಶಕ್ಕೆ ಕಾರಣವಾಗಿದೆ. ಈ ಹಿನ್ನೆಲೆಯಲ್ಲಿ, ಬೇಡಿ ವಿರುದ್ಧ ಸಿಡಿದೆದ್ದಿರುವ ಅಲ್ಲಿನ ಕಾಂಗ್ರೆಸ್ ಶಾಸಕರು, ಕೇಂದ್ರ ಸರ್ಕಾರವು ಮಧ್ಯ ಪ್ರವೇಶಿಸಿ ಅಲ್ಲಿ ನಡೆಯುತ್ತಿರುವ ರಾಜಕೀಯ ಮೇಲಾಟ ಕೊನೆಗಾಣಿಸಬೇಕೆಂದು ಆಗ್ರಹಿಸಿದ್ದರು.
ಇದರ ಬೆನ್ನಲ್ಲೇ ಇದೀಗ ಬೇಡಿಯವರಿಂದ ತಮ್ಮ ಹುದ್ದೆಗೆ ರಾಜಿನಾಮೆ ನೀಡುವ ವಿಚಾರ ಹೊರಬಿದ್ದಿದೆ.