ಭೀಮ ಕೊರೆಗಾಂವ್ ಗಲಭೆಗೆ ಆರ್.ಎಸ್.ಎಸ್ ಕಾರಣ: ಮಲ್ಲಿಕಾರ್ಜುನ್ ಖರ್ಗೆ
ನವದೆಹಲಿ, ಜನವರಿ 3: ಪುಣೆಯ ಭೀಮ ಕೊರೆಗಾಂವ್ ಗಲಭೆಗೆ ಆರ್.ಎಸ್.ಎಸ್ ಕಾರಣ ಎಂದು ಕಾಂಗ್ರೆಸ್ ಹಿರಿಯ ನಾಯಕ ಮಲ್ಲಿಕಾರ್ಜುನ್ ಖರ್ಗೆ ದೂರಿದ್ದಾರೆ. ಮಾತ್ರವಲ್ಲ ಈ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಹೇಳಿಕೆ ನೀಡಬೇಕು ಎಂದು ಅವರು ಆಗ್ರಹಿಸಿದ್ದಾರೆ.
ಜಾತಿ ಕಲಹ: ವಾಣಿಜ್ಯ ನಗರಿ ಅಲ್ಲೋಲಕಲ್ಲೋಲ
ಯುವಕನೊಬ್ಬ ಸಾವನ್ನಪ್ಪಿರುವ ಭೀಮ ಕೊರೆಗಾಂವ್ ಗಲಭೆ ಇಂದು ಲೋಕಸಭೆಯಲ್ಲಿ ಪ್ರತಿಧ್ವನಿಸಿದ್ದು, ಈ ಸಂದರ್ಭ ಮಾತನಾಡಿದ ಖರ್ಗೆ, "ಆರ್.ಎಸ್.ಎಸ್ ಗೆ ಸೇರಿದ ಮೂಲಭೂತವಾದಿ ಹಿಂದೂಗಳು ಭೀಮಾ-ಕೊರೆಗಾಂವ್ ಹಿಂಸಾಚಾರದ ಹಿಂದೆ ಇದ್ದಾರೆ. ಸಮಾಜದಲ್ಲಿ ಬಿರುಕು ಮೂಡಿಸಲು ಈ ಗಲಭೆ ನಡೆಸಲಾಗಿದೆ," ಎಂದು ದೂರಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಈ ವಿಚಾರದಲ್ಲಿ ತಮ್ಮ ಹೇಳಿಕೆ ನೀಡಬೇಕು ಎಂದು ಆಗ್ರಹಿಸಿರುವ ಅವರು, ಪ್ರಧಾನಿ ಮೌನವಾಗಿರುವುದು ಸರಿಯಲ್ಲ ಎಂದಿದ್ದಾರೆ.
"ಭೀಮ ಕೊರೆಗಾಂವ್ ಗಲಭೆಯ ತನಿಖೆಗೆ ಸುಪ್ರಿಂ ಕೋರ್ಟ್ ನ್ಯಾಯಾಧೀಶರನ್ನು ನೇಮಿಸಬೇಕು. ಪ್ರಧಾನಿ ಮೌನವಾಗಿದ್ದರೆ ಆಗುವುದಿಲ್ಲ, ಅವರು ಹೇಳಿಕೆ ನೀಡಬೇಕು. ಈ ರೀತಿಯ ಘಟನೆಗಳಾದಾಗ ಅವರು 'ಮೌನಿ ಬಾಬಾ' ಆಗುತ್ತಾರೆ," ಎಂದು ಖರ್ಗೆ ಟೀಕಿಸಿದ್ದಾರೆ.
ಲೋಕಸಭೆಯಲ್ಲಿ ಭೀಮ ಕೊರೆಗಾಂವ್ ಗಲಭೆ ಚರ್ಚೆ, ಗದ್ದಲ
ಈಗಾಗಲೇ ಪುಣೆ ಗಲಭೆಯ ಬಗ್ಗೆ ಸಿಐಡಿ ತನಿಖೆಗೆ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಆದೇಶ ನೀಡಿದ್ದಾರೆ. ಜತೆಗೆ ಮೃತಪಟ್ಟ ಯುವಕನ ಕುಟುಂಬಕ್ಕೆ 10 ಲಕ್ಷ ರೂಪಾಯಿ ಪರಿಹಾರವನ್ನೂ ಅವರು ಘೋಷಿಸಿದ್ದಾರೆ.