ಜಮ್ಮು ಕಾಶ್ಮೀರ ಕುರಿತ ಮೋದಿ ಸಭೆ; ಇಲ್ಲಿವೆ ಪ್ರಮುಖ ಅಂಶಗಳು
ಶ್ರೀನಗರ, ಜೂನ್ 24: ಜಮ್ಮು ಕಾಶ್ಮೀರಕ್ಕೆ ರಾಜ್ಯದ ಸ್ಥಾನಮಾನವನ್ನು ಮರಳಿ ನೀಡುವುದು ಸೇರಿದಂತೆ ಹಲವು ವಿಷಯಗಳ ಬಗ್ಗೆ ಚರ್ಚಿಸಲು ಪ್ರಧಾನಿ ಮೋದಿ ನೇತೃತ್ವದಲ್ಲಿ ಗುರುವಾರ ಸರ್ವಪಕ್ಷ ಸಭೆ ನಡೆದಿದ್ದು, ಹಲವು ತೀರ್ಮಾನಗಳನ್ನು ಕೈಗೊಳ್ಳಲಾಗಿದೆ.
ಜಮ್ಮು ಕಾಶ್ಮೀರದಲ್ಲಿ ಸಾಕಷ್ಟು ಸಕಾರಾತ್ಮಕ ಬದಲಾವಣೆಗಳಾಗುವ ಭರವಸೆ ವ್ಯಕ್ತವಾಗಿದೆ. ಚರ್ಚೆ ನಂತರ ಸಭೆಯಲ್ಲಿ ಏನೇನು ತೀರ್ಮಾನ ಕೈಗೊಳ್ಳಲಾಗಿದೆ? ಇಲ್ಲಿದೆ ಕೆಲವು ಅಂಶಗಳು...
* ಜಮ್ಮು ಹಾಗೂ ಕಾಶ್ಮೀರದಲ್ಲಿ ಸಕಲ ಅಭಿವೃದ್ಧಿಗೆ ಕೇಂದ್ರ ಬದ್ಧವಾಗಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ತಿಳಿಸಿದ್ದಾರೆ. ಈ ಕುರಿತು ಟ್ವೀಟ್ ಮಾಡಿರುವ ಅವರು, ಜಮ್ಮು ಹಾಗೂ ಕಾಶ್ಮೀರದ ಭವಿಷ್ಯದ ಬಗ್ಗೆ ಚರ್ಚಿಸಲಾಗಿದೆ. ಸಂಸತ್ತಿನಲ್ಲಿ ಭರವಸೆ ನೀಡಿದಂತೆ ಮರುವಿಂಗಡಣೆ ನಂತರ ಚುನಾವಣೆಗಳು ನಡೆಯಲಿದ್ದು, ಶಾಂತಿಯುತ ಚುನಾವಣೆಗಳು ರಾಜ್ಯದ ಸ್ಥಾನಮಾನವನ್ನು ಪುರನ್ ಸ್ಥಾಪಿಸಲು ಮೈಲುಗಲ್ಲುಗಳಾಗಿವೆ ಎಂದು ಹೇಳಿದ್ದಾರೆ.
* ಡಿಡಿಸಿ ಚುನಾವಣೆಗಳಂತೆ ವಿಧಾನಸಭೆ ಚುನಾವಣೆಗಳನ್ನು ಯಶಸ್ವಿಯಾಗಿ ನಡೆಸುವುದು ಆದ್ಯತೆಯಾಗಿದೆ ಎಂದು ಮೋದಿ ಹೇಳಿದ್ದಾರೆ. ಮರುವಿಂಗಡಣೆ ನಂತರ ಚುನಾವಣೆಗಳನ್ನು ಶೀಘ್ರ ನಡೆಸುವ ಕುರಿತು ಚರ್ಚಿಸಲಾಗಿದೆ ಎಂದು ಹೇಳಿದ್ದಾರೆ.
PM Modi Meeting With J-K Leaders Live : ಜಮ್ಮು-ಕಾಶ್ಮೀರದಲ್ಲಿ ಗರಿಗೆದರಿದ ರಾಜಕೀಯ
* ಜಮ್ಮು ಕಾಶ್ಮೀರದ ಇತಿಹಾಸದಲ್ಲಿ ಮೊದಲ ಬಾರಿಗೆ ಬ್ಲಾಕ್ ಮಟ್ಟದ ಚುನಾವಣೆಗಳು ಹಾಗೂ ಅಭಿವೃದ್ಧಿ ಮಂಡಳಿಗಳ ಮೂಲಕ ತಳಮಟ್ಟದ ಪ್ರಜಾಪ್ರಭುತ್ವ ರಚಿಸಲಾಗಿದೆ ಎಂದು ಕೇಂದ್ರ ತಿಳಿಸಿದೆ.
* ಪಂಚಾಯತ್ ಹಾಗೂ ಲೋಕಸಭಾ ಚುನಾವಣೆಗಳಿಗಿಂತ ಡಿಡಿಸಿ ಚುನಾವಣೆಯ ಮತದಾನ 51% ಹೆಚ್ಚಾಗಿದೆ ಮತ್ತು 4483 ಸರ್ಪಂಚ್ಗಳಲ್ಲಿ 3,650 ಜನರನ್ನು ಆಯ್ಕೆ ಮಾಡಲಾಗಿದೆ. ಈ ಪ್ರದೇಶಗಳಲ್ಲಿ ತಳಮಟ್ಟದಿಂದ ಕೆಲಸ ನಡೆಸಲು ಕೇಂದ್ರವು 3 ಸಾವಿರ ಕೋಟಿ ಆರ್ಥಿಕ ಸಹಾಯವನ್ನು ಪಂಚಾಯತ್ಗಳಿಗೆ ನೀಡಿದೆ ಎಂದು ತಿಳಿಸಿದೆ.
* ಯುವಜನತೆಗೆ ಉದ್ಯೋಗದ ಅವಶ್ಯಕತೆಯಿದೆ. ಸ್ಕಿಲ್ ಇಂಡಿಯಾ ಅಡಿಯಲ್ಲಿ ಚಟುವಟಿಕೆ ನಡೆಸಲು ಸೂಚಿಸಲಾಗಿದೆ.
* ಜಮ್ಮು ಕಾಶ್ಮೀರದಲ್ಲಿ ಲಸಿಕಾ ಕಾರ್ಯಕ್ರಮ ಸರಾಗವಾಗಿ ನಡೆಯುತ್ತಿರುವುದಾಗಿ ತಿಳಿಸಲಾಗಿದೆ.
* ಪ್ರಜಾಪ್ರಭುತ್ವವನ್ನು ಸುಗಮವಾಗಿ ಪುನರ್ ಸ್ಥಾಪಿಸುವ ಕುರಿತು ಕೇಂದ್ರದ ಗಮನ ಕೇಂದ್ರೀಕರಿಸಿದೆ. ಕಣಿವೆ ರಾಜ್ಯದ ಅಭಿವೃದ್ಧಿ ಇದರಲ್ಲಿ ಅಡಗಿದೆ ಎಂದು ಕೇಂದ್ರ ಸಭೆಯಲ್ಲಿ ಹೇಳಿದೆ.
* ಜಮ್ಮು ಕಾಶ್ಮೀರದ ಮಾಜಿ ಉಪ ಮುಖ್ಯಮಂತ್ರಿ ನಿರ್ಮಲ್ ಸಿಂಗ್ ಅವರು ಆರ್ಟಿಕಲ್ 370ರ ವಿಷಯದಲ್ಲಿ ಪಕ್ಷಗಳು ಸಾಂವಿಧಾನಿಕ ಚೌಕಟ್ಟಿನೊಳಗೆ ಕೆಲಸ ಮಾಡಬೇಕೆಂದು ಪ್ರಧಾನಿ ತಿಳಿಸಿರುವುದಾಗಿ ಹೇಳಿದ್ದಾರೆ.
* ಗುಪ್ಕರ್ ಅಲೈಯನ್ಸ್ ಪಕ್ಷಗಳ ಪ್ರಸ್ತಾಪದಂತೆ, ರಾಜಕೀಯ ಕೈದಿಗಳ ಬಿಡುಗಡೆ ಸಂಬಂಧ ಸಮಿತಿ ರಚಿಸಲು ಮೋದಿ ಭರವಸೆ ನೀಡಿರುವುದಾಗಿ ಸಿಂಗ್ ತಿಳಿಸಿದ್ದಾರೆ.
ಸಭೆಯಲ್ಲಿ, ಕೇಂದ್ರ ಗೃಹ ಮಂತ್ರಿ ಅಮಿತ್ ಶಾ, ಜಮ್ಮ ಮತ್ತು ಕಾಶ್ಮೀರ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹ, ಕಾಂಗ್ರೆಸ್ ಹಿರಿಯ ನಾಯಕ ಗುಲಾಬ್ ನಬಿ ಆಜಾದ್, ಫಾರುಕ್ ಅಬ್ದುಲ್ಲಾ ಒಮರ್ ಅಬ್ದುಲ್ಲಾ, ಮುಫ್ತಿ ಮೊಹಮ್ಮದ್, ಜಮ್ಮು ಕಾಶ್ಮೀರದ ಬಿಜೆಪಿ ನಾಯಕರು ಸೇರಿದಂತೆ ಜಮ್ಮು ಮತ್ತು ಕಾಶ್ಮೀರದ 14 ರಾಜಕೀಯ ಪಕ್ಷಗಳ ಮುಖಂಡರು ಭಾಗವಹಿಸಿದ್ದರು.