ಸುಪ್ರೀಂನಿಂದ ಚಾಟಿ, ಶರಣಾಗಲೇಬೇಕು ಕೇರಳದ ಕಾಮುಕ ಪಾದ್ರಿಗಳು
ನವದೆಹಲಿ, ಆಗಸ್ಟ್ 06 : ಕೇರಳದಲ್ಲಿ ಮಾತ್ರವಲ್ಲ ಇಡೀ ದೇಶದಾದ್ಯಂತ ಬಿರುಗಾಳಿ ಎಬ್ಬಿಸಿರುವ 'ಪಾದ್ರಿಗಳಿಂದ ಮಹಿಳೆಯ ಅತ್ಯಾಚಾರ' ಪ್ರಕರಣದಲ್ಲಿ, ಪ್ರಮುಖ ಆರೋಪಿಗಳಾಗಿರುವ ಇಬ್ಬರು ಪಾದ್ರಿಗಳು ಪೊಲೀಸರಿಗೆ ಶರಣಾಗಲೇಬೇಕಾದಂಥ ಪರಿಸ್ಥಿತಿ ಎದುರಾಗಿದೆ.
ಹತ್ತು ವರ್ಷಗಳಿಂದ ಮಹಿಳೆಯನ್ನು ತನ್ನ ಲೈಂಗಿಕ ಜಾಲದಲ್ಲಿ ಬೀಳಿಸಿದ್ದ ಫಾದರ್ ಸೋನಿ ವರ್ಗೀಸ್ ಮತ್ತು ಫಾದರ್ ಜೈಸ್ ಕೆ ಜಾರ್ಜ್ ಪೊಲೀಸರಿಗೆ ಶರಣಾಗಬೇಕಿರುವ ಇಬ್ಬರು ಪಾದ್ರಿಗಳು. ಬಂಧನದಿಂದ ರಕ್ಷಣೆಯ ಪಡೆಯುವ ಬಾಗಿಲನ್ನು ಸುಪ್ರೀಂ ಕೋರ್ಟ್ ಮುಚ್ಚಿದೆ.
ಕೇರಳ ಪಾದ್ರಿಗಳ ಲೈಂಗಿಕ ಪುರಾಣ : ಕಾಮುಕ ಪಾದ್ರಿ ಜಾಬ್ ಮ್ಯಾಥ್ಯೂ ಬಂಧನ
ಅವರನ್ನು ಬಂಧಿಸುವುದರಿಂದ ತಾತ್ಕಾಲಿಕ ರಕ್ಷಣೆ ನೀಡಿದ್ದ ಸೌಲಭ್ಯವನ್ನು ಸೋಮವಾರ ಸರ್ವೋಚ್ಚ ನ್ಯಾಯಾಲಯ ಹಿಂತೆಗೆದುಕೊಂಡಿದೆ. ಆಗಸ್ಟ್ 13ರೊಳಗೆ ಇಬ್ಬರೂ ಅತ್ಯಾಚಾರಿ ಪಾದ್ರಿಗಳು ಪೊಲೀಸರಿಗೆ ಶರಣಾಗಲೇಬೇಕು ಎಂದು ಆದೇಶಿದೆ.
ಈ ಪ್ರಕರಣದಲ್ಲಿ ಒಟ್ಟು ನಾಲ್ವರು ಕೇರಳದ ಪಾದ್ರಿಗಳು ಭಾಗಿಯಾಗಿದ್ದಾರೆ. 34 ವರ್ಷದ ಸಂತ್ರಸ್ತ ಮಹಿಳೆಯ ಗಂಡ ನೀಡಿರುವ ದೂರಿನಲ್ಲಿ ಮತ್ತು ಮಹಿಳೆ ನೀಡಿರುವ ಹೇಳಿಕೆಯಲ್ಲಿ ನಾಲ್ವರು ಪಾದ್ರಿಗಳನ್ನು ಹೆಸರಿಸಲಾಗಿದೆ. ಫಾದರ್ ಸೋನಿ ವರ್ಗೀಸ್, ಫಾದರ್ ಜೈಸ್ ಕೆ ಜಾರ್ಜ್, ಫಾದರ್ ಅಬ್ರಹಾಂ ವರ್ಗೀಸ್ ಮತ್ತು ಫಾದರ್ ಜಾಬ್ ಮ್ಯಾಥ್ಯೂ. ಇವರಲ್ಲಿ ಜಾಬ್ ಮ್ಯಾಥ್ಯೂ ಸೇರಿದಂತೆ ಇಬ್ಬರು ಪಾದ್ರಿಗಳನ್ನು ಬಂಧಿಸಲಾಗಿದೆ.
ಪಾದ್ರಿಗಳಿಂದ ಅತ್ಯಾಚಾರಕ್ಕೊಳಗಾದ ಮಹಿಳೆಯ ಕರುಣಾಜನಕ ಕಥೆ
ಪೊಲೀಸರಿಗೆ ಶರಣಾದ ನಂತರ ಇಬ್ಬರೂ ಪಾದ್ರಿಗಳು ರೆಗ್ಯುಲರ್ ಜಾಮೀನಿಗೆ ಅರ್ಜಿ ಸಲ್ಲಿಸಬಹುದು ಎಂದು ನ್ಯಾಯಮೂರ್ತಿ ಎಕೆ ಸಿಕ್ರಿ ಮತ್ತು ನ್ಯಾಯಮೂರ್ತಿ ಅಶೋಕ್ ಭೂಷಣ್ ಇದ್ದ ವಿಭಾಗೀಯ ಪೀಠ ಆದೇಶ ನೀಡಿದೆ.
ಆ ಮಹಿಳೆಯರ ಮೇಲೆ ನಿರಂತರವಾಗಿ ಲೈಂಗಿಕ ದೌರ್ಜನ್ಯ ಎಸಗಿರುವುದು ಮಾತ್ರವಲ್ಲ, ಆ ಹೀನಾಯ ಕೃತ್ಯವನ್ನು ಕೆಲ ಪಾದ್ರಿಗಳು ವಿಡಿಯೋ ರೆಕಾರ್ಡ್ ಕೂಡ ಮಾಡಿದ್ದು, ಅವನ್ನೇ ಬಳಸಿಕೊಂಡು ಮಹಿಳೆಯನ್ನು ಬ್ಲಾಕ್ ಮೇಲ್ ಮಾಡುತ್ತಿದ್ದಾರೆ ಎಂದು ಸಂತ್ರಸ್ತ ಮಹಿಳೆಯ ಪರ ವಕೀಲರು ವಾದಿಸಿದ್ದಾರೆ.
ನಿರೀಕ್ಷಣಾ ಜಾಮೀನು ಕೋರಿ ಪಾದ್ರಿಗಳ ಅರ್ಜಿ
ಇದಕ್ಕೂ ಮೊದಲು ಕೇರಳದ ಮಲಂಕಾರ ಸಿರಿಯನ್ ಆರ್ಥೋಡಾಕ್ಸ್ ಚರ್ಚ್ ಗೆ ಸೇರಿದ ನಾಲ್ವರು ಪಾದ್ರಿಗಳು ಎಸಗಿದ್ದಾರೆನ್ನಲಾದ ಲೈಂಗಿಕ ದೌರ್ಜನ್ಯ ಕುರಿತ ವರದಿಯನ್ನು ಸುಪ್ರೀಂ ಕೋರ್ಟಿಗೆ ಸಲ್ಲಿಸುವಂತೆ ನ್ಯಾಯಮೂರ್ತಿಗಳು ಆದೇಶಿಸಿದ್ದರು. ಅಷ್ಟರಲ್ಲಿ ಫಾದರ್ ಸೋನಿ ವರ್ಗೀಸ್ ಮತ್ತು ಫಾದರ್ ಜೈಸ್ ಕೆ ಜಾರ್ಜ್ ಸರ್ವೋಚ್ಚ ನ್ಯಾಯಾಲಯಕ್ಕೆ ನಿರೀಕ್ಷಣಾ ಜಾಮೀನು ಕೋರಿ ಜುಲೈ 19ರಂದು ಅರ್ಜಿ ಸಲ್ಲಿಸಿದ್ದರು. ತೀರ್ಪು ಪ್ರಕಟವಾಗುವವರೆಗೆ ತಮಗೆ ರಕ್ಷಣೆ ಒದಗಿಸಬೇಕು ಎಂದು ಅರ್ಜಿಯಲ್ಲಿ ಅವರಿಬ್ಬರು ಕೋರಿದ್ದರು. ಈ ಮೊದಲು ಕೇರಳ ಹೈಕೋರ್ಟ್ ಅವರ ನಿರೀಕ್ಷಣಾ ಜಾಮೀನನ್ನು ಜುಲೈ 11ರಂದು ತಿರಸ್ಕರಿಸಿತ್ತು. ಜುಲೈ 2ರಂದು ಪ್ರಮುಖ ಆರೋಪಿ ಫಾದರ್ ಸೋನಿ ವರ್ಗೀಸ್ ಮತ್ತು ಇತರರ ವಿರುದ್ಧ ಪ್ರಕರಣದ ದಾಖಲಿಸಲಾಗಿದೆ.
ಪಾದ್ರಿಗಳ ಕಾಮುಕ ಪುರಾಣದ ಹಿನ್ನೆಲೆ
ಆಗಿದ್ದೇನೆಂದರೆ, ಸಂತ್ರಸ್ತ ಮಹಿಳೆ ಇನ್ನೂ ಅಪ್ರಾಪ್ತೆಯಾಗಿದ್ದಾಗ (ಹದಿನಾರರ ಹರೆಯ) ಸಿರಿಯನ್ ಚರ್ಚಿನಲ್ಲಿ ಓದುತ್ತಿದ್ದ ಸೋನಿ ವರ್ಗೀಸ್ (ಆಗ ಆತನಿನ್ನೂ ವಿದ್ಯಾರ್ಥಿ) ಯುವತಿಯ ಪರಿಚಯ ಮಾಡಿಕೊಂಡು, ನಂತರ ಆಕೆಯನ್ನು ಲೈಂಗಿಕವಾಗಿ ದುರ್ಬಳಿಸಿಕೊಂಡಿದ್ದ. ಇದು, ಮಹಿಳೆ ಮದುವೆಯಾದ ನಂತರ ಮತ್ತು ತಾನು ಕೂಡ ಮದುವೆಯಾದ ನಂತರವೂ ಮುಂದುವರಿಸಿದ್ದ. ಎಷ್ಟು ಬೇಡವೆಂದು ಬೇಡಿಕೊಂಡರು ಸತತ ಹತ್ತು ವರ್ಷಗಳ ಕಾಲ ತನ್ನ ಕಾಮದ ವಾಂಛೆಯನ್ನು ಸೋನಿ ವರ್ಗೀಸ್ ತೀರಿಸಿಕೊಂಡಿದ್ದ. ಯಾರಿಗಾದರೂ ಹೇಳಿದರೆ ಎಲ್ಲವನ್ನೂ ಬಹಿರಂಗಪಡಿಸುವುದಾಗಿ ಸೋನಿ ವರ್ಗೀಸ್ ಬೆದರಿಕೆ ಹಾಕುತ್ತಿದ್ದ. ಮರ್ಯಾದೆಗೆ ಅಂಜಿ ಮಹಿಳೆ ಲೈಂಗಿಕ ದೌರ್ಜನ್ಯವನ್ನು ಹತ್ತು ವರ್ಷಗಳ ಕಾಲ ಸಹಿಸಿಕೊಂಡಿದ್ದಳು. ಸೋನಿ ವರ್ಗೀಸ್ ನ ಕಾಟ ಮಿತಿಮೀರಿದಾಗ ಆ ಮಹಿಳೆಯ ಚರ್ಚಿನಲ್ಲಿ ತಾನು ಮಾಡಿದ ತಪ್ಪನ್ನು ತಪ್ಪೊಪ್ಪಿಗೆ ಬಾಕ್ಸ್ ನಲ್ಲಿ ಹೇಳಿಕೊಂಡಿದ್ದಾಳೆ. ಅಲ್ಲಿಂದಲೇ ಆರಂಭವಾಗಿದ್ದು, ಲೈಂಗಿಕ ಕಿರುಕುಳದ ಎರಡನೇ ಅಧ್ಯಾಯ.
ಕನ್ಫೆಷನ್ ಬಾಕ್ಸ್ ನಲ್ಲಿ ಮಹಿಳೆ ತಪ್ಪೊಪ್ಪಿಗೆ
ತನ್ನ ಮಗುವಿನ ದೀಕ್ಷಾಸ್ನಾದ ಸಂದರ್ಭದಲ್ಲಿ ಕನ್ಫೆಷನ್ ಬಾಕ್ಸ್ ನಲ್ಲಿ ಮಹಿಳೆ ತಾನು ಫಾದರ್ ಸೋನಿ ವರ್ಗೀಸ್ ಜೊತೆಗೆ 1999ರಿಂದಲೇ ಇಟ್ಟುಕೊಂಡಿದ್ದ ಲೈಂಗಿಕ ಸಂಬಂಧದ ಬಗ್ಗೆ ತಪ್ಪೊಪ್ಪಿಕೊಂಡಿದ್ದಾರೆ. ಆಗ ಅಲ್ಲಿ ಇದ್ದದ್ದು ಫಾದರ್ ಜಾಬ್ ಮ್ಯಾಥ್ಯೂ. ಆತ ಮಹಿಳೆಗೆ ಸಾಂತ್ವನ ಹೇಳುವ ಬದಲು, ಸೋನಿ ವರ್ಗೀಸ್ ಜೊತೆ ಆಕೆಗಿರುವ ಸಂಬಂಧವನ್ನು ಬಯಲು ಮಾಡುವುದಾಗಿ ಬೆದರಿಸಿ, ಪಕ್ಕದಲ್ಲಿಯೇ ಇರುವ ಚರ್ಚಿಗೆ ಮಹಿಳೆಯನ್ನು ಕರೆಯಿಸಿಕೊಂಡು ತಾನೂ ಆಕೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಇದನ್ನೂ ಕೆಲಕಾಲ ಮಹಿಳೆ ಸಹಿಸಿಕೊಂಡಿದ್ದಾರೆ.
ಪಾದ್ರಿಗಳಿಂದ ಅತ್ಯಾಚಾರಕ್ಕೊಳಗಾದ ಮಹಿಳೆಯ ಕರುಣಾಜನಕ ಕಥೆ
ಕೌನ್ಸೆಲಿಂಗ್ ಗೆ ಬಂದಾಗ ಪಾದ್ರಿ ಮಾಡಿದ್ದೇನು?
ಇಷ್ಟು ಸಾಲದೆಂಬಂತೆ, ತೀವ್ರ ಆಘಾತಕ್ಕೊಳಗಾಗಿದ್ದ ಮಹಿಳೆಯನ್ನು ಕೌನ್ಸೆಲಿಂಗ್ ಗೆಂದು ಮತ್ತೊಬ್ಬ ಪಾದ್ರಿಯ ಬಳಿ ಕಳುಹಿಸಲಾಗಿದೆ. ಆತನಾದರೂ ಎಂಥವನು? ಬೆದರಿದ್ದ ಜಿಂಕೆ ನೇರವಾಗಿ ಹುಲಿಯ ಗುಹೆಯೊಳಗೆ ಬಂದಂತಾಗಿತ್ತು. ಆತ ಆಕೆಯ ಕಥೆಯೆಲ್ಲವನ್ನೂ ಕೇಳಿ, ಪರಿಹಾರ ದೊರಕಿಸಿಕೊಡುತ್ತೇನೆಂದು ವಾಗ್ದಾನ ನೀಡಿ ಆಕೆಯನ್ನು ಲೈಂಗಿಕವಾಗಿ ದುರ್ಬಳಿಸಿಕೊಂಡಿದ್ದಾನೆ. ಇಷ್ಟು ಮಾತ್ರವಲ್ಲದೆ, ಆಕೆಯನ್ನು ಫೈವ್ ಸ್ಟಾರ್ ಹೋಟೆಲಿಗೆ ಕರೆಯಿಸಿಕೊಂಡು ಅಲ್ಲಿಯೂ ದೌರ್ಜನ್ಯ ಎಸಗಿದ್ದಾನೆ. ಅಲ್ಲದೆ, ಆ ಎಲ್ಲ ಹೋಟೆಲುಗಳ ಖರ್ಚನ್ನು ಮಹಿಳೆಯಿಂದ ಕಿತ್ತಿಸಿದ್ದಾನೆ. ಮಹಿಳೆಯಾದರೂ ಎಷ್ಟಂತ ಸಹಿಸಿಕೊಂಡಾಳು? ಕಡೆಗೊಂದು ದಿನ ತನ್ನ ಗಂಡನೆದಿರು ಎಲ್ಲ ಕಥೆಯನ್ನು ಬಿಚ್ಚಿಟ್ಟಿದ್ದಾಳೆ. ಇದರ ಪರಿಣಾಮವಾಗಿ ಇಬ್ಬರು ಪಾದ್ರಿಗಳು ಬಂಧಿತರಾಗಿದ್ದಾರೆ, ಇನ್ನಿಬ್ಬರು ಜೈಲಿಗೆ ಹೋಗಲು ರೆಡಿಯಾಗಿದ್ದಾರೆ. ಇಡೀ ಕೇರಳ ಈ ನಾಲ್ವರು ಪಾದ್ರಿಗಳಿಗೆ ಛೀಮಾರಿ ಹಾಕುತ್ತಿದೆ.
ತರಾಟೆ ತೆಗೆದುಕೊಂಡಿದ್ದ ಕೇರಳ ಹೈಕೋರ್ಟ್
ಆರಂಭದಿಂದಲೂ ಲೈಂಗಿಕ ಕ್ರಿಯೆಗೆ ಯಾವುದೇ ಪಾದ್ರಿಯೊಂದಿಗೆ ತನ್ನ ಸಹಮತ ಇರಲಿಲ್ಲ. ಎಲ್ಲ ನಾಲ್ವರು ಪಾದ್ರಿಗಳು ಬಲವಂತವಾಗಿ ತನ್ನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ಸಂತ್ರಸ್ತ ಮಹಿಳೆ ಹೈಕೋರ್ಟಿಗೆ ಹೇಳಿಕೆ ನೀಡಿದ್ದರು. ಅಲ್ಲದೆ, ಸಮಾಜದ ಮೇಲೆ ಪ್ರಭುತ್ವ ಇರುವ ಈ ನಾಲ್ವರು ಪಾದ್ರಿಗಳು ಅಧಿಕಾರವನ್ನು ದುರ್ಬಳಸಿಕೊಂಡು ಅಮಾಯಕ ಮಹಿಳೆಯನ್ನು ಲೈಂಗಿಕವಾಗಿ ಬಳಸಿಕೊಂಡಿದ್ದಾರೆ, ಎಲ್ಲರೂ ಈ ಅಪರಾಧದಲ್ಲಿ ಸಮಾನರು. ಅಲ್ಲದೆ ಜನರು ತಮ್ಮ ಮೇಲಿಟ್ಟಿರುವ ಧಾರ್ಮಿಕ ನಂಬಿಕೆಯನ್ನು ಪಾದ್ರಿಗಳೆಲ್ಲ ಧೂಳಿಪಟ ಮಾಡಿದ್ದಾರೆ ಎಂದೂ ಕೇರಳ ಹೈಕೋರ್ಟ್ ಕೋರ್ಟ್ ಆಕ್ರೋಶ ವ್ಯಕ್ತಪಡಿಸಿತ್ತು. ಎಲ್ಲ ನಾಲ್ವರು ಪಾದ್ರಿಗಳ ಕಾಮತೃಷೆಗೆ ಮಹಿಳೆ ಬಲಿಪಶುವಾಗಿದ್ದಾಳೆ ಎಂದು ಕೋರ್ಟ್ ಹೇಳಿದೆ. ಸರ್ವೋಚ್ಚ ನ್ಯಾಯಾಲಯ ಕೂಡ ಇದೇ ಅಭಿಪ್ರಾಯವನ್ನು ಹೊಂದಿದೆ.