ಕೇರಳ: ಕ್ರೈಸ್ತ ಸನ್ಯಾಸಿನಿ ಮೇಲೆ ಅತ್ಯಾಚಾರ: ಬಿಶಪ್ಗೆ ಪೊಲೀಸ್ ಸಮನ್ಸ್
ಕೊಚ್ಚಿ, ಸೆಪ್ಟೆಂಬರ್ 12: ಕೇರಳದಲ್ಲಿ ಕ್ರೈಸ್ತ ಸನ್ಯಾಸಿನಿ ಮೇಲೆ ಸತತವಾಗಿ ಅತ್ಯಾಚಾರ ಎಸಗಿದ್ದಾನೆ ಎಂದು ಆರೋಪಕ್ಕೆ ಗುರಿಯಾಗಿರುವ ಚರ್ಚ್ ಬಿಶಪ್ ಫ್ರಾಂಕೊ ಮುಲಕ್ಕಲ್ಗೆ ಸಮನ್ಸ್ ಜಾರಿ ಮಾಡಲಾಗಿದೆ.
ಕ್ರೈಸ್ತ ಸನ್ಯಾಸಿನಿಯು ಪೊಲೀಸ್ ದೂರು ನೀಡಿದ್ದರೂ ಸಹ ಬಿಶಪ್ನನ್ನು ಪೊಲೀಸರು ಬಂಧಿಸಿರಲಿಲ್ಲ. ಇದನ್ನು ವಿರೋಧಿಸಿ ಕೊಚ್ಚಿ ಸೇರಿ ಕೇರಳದ ಹಲವೆಡೆ ಕ್ರೈಸ್ತ ಸನ್ಯಾಸಿನಿಯರು, ನಾಗರಿಕರು, ಮಹಿಳಾ ಸಂಘಟನೆಗಳು ಪ್ರತಿಭಟನೆ ನಡೆಸುತ್ತಿದ್ದಾವೆ. ಕೆಲವು ಕ್ರೈಸ್ತ ಸನ್ಯಾಸಿನಿಯರು ಉಪವಾಸ ಸತ್ಯಾಗ್ರಹ ಸಹ ಕೂತಿದ್ದಾರೆ.
ಅತ್ಯಾಚಾರ ಸಂತ್ರಸ್ಥ ಕ್ರೈಸ್ತ ಸನ್ಯಾಸಿನಿಯಿಂದ ಕ್ಯಾಥೊಲಿಕ್ ಚರ್ಚ್ಗೆ ಭಾವುಕ ಪತ್ರ
ಆದರೆ ಇದೀಗ ಸಮನ್ಸ್ ಜಾರಿ ಮಾಡಲಾಗಿದ್ದು, ಸೆಪ್ಟೆಂಬರ್ 19 ರಂದು ಕ್ರೈಸ್ತ ಸನ್ಯಾಸಿನಿಯ ಅತ್ಯಾಚಾರ ಕುರಿತಂತೆ ವಿಚಾರಣೆಗೆ ಹಾಜರಾಗುವಂತೆ ಸೂಚಿಸಲಾಗಿದೆ.
ಆಗಸ್ಟ್ ತಿಂಗಳಿನಲ್ಲಿಯೇ ಪೊಲೀಸರು ಬಿಶಪ್ನನ್ನು ವಿಚಾರಣೆ ನಡೆಸಿದ್ದರು. ಆಗಸ್ಟ್ 10ರಂದು ಕೇರಳ ಹೈಕೋರ್ಟ್ಗೆ ಪೊಲೀಸರು ಸಲ್ಲಿಸಿದ್ದ ಅಫಿಡವಿಟ್ನಲ್ಲಿ ಬಿಶಪ್, ಸತತವಾಗಿ ಎರಡು ವರ್ಷಗಳ ಕಾಲ ಕ್ರೈಸ್ತ ಸನ್ಯಾಸಿನಿ ಮೇಲೆ ಅತ್ಯಾಚಾರ ಎಸಗಿದ್ದಾನೆ ಎಂದು ಹೇಳಲಾಗಿತ್ತು. ಆದರೆ ಆ ನಂತರ ಪೊಲೀಸರು ಈ ಪ್ರಕರಣದ ಮುಂದಿನ ತನಿಖೆ ಬಗ್ಗೆ ನಿರ್ಲಕ್ಷ್ಯವಹಿಸಿದ್ದರು.
ಈ ಬಗ್ಗೆ ತೀವ್ರ ಆಕ್ಷೇಪ ವ್ಯಕ್ತವಾಗಿದ್ದು, ಬಿಶಪ್ನನ್ನು ಬಂಧಿಸಬೇಕು ಎಂದು ಕ್ರೈಸ್ತ ಸನ್ಯಾಸಿನಿಯರು ಹಾಗೂ ಮಹಿಳಾ ಸಂಘಟನೆಗಳು ಪ್ರತಿಭಟನೆ ನಡೆಸುತ್ತಿವೆ. ಮತ್ತೊಂದು ಕಡೆ ಬಿಶಪ್ಗೆ ಬೆಂಬಲ ಸೂಚಿಸಿ ಸಹ ಪ್ರತಿಭಟನೆಗಳು ನಡೆಯುತ್ತಿವೆ. ಕ್ಯಾಥೊಲಿಕ್ ಚರ್ಚ್ಗೆ ಮಸಿ ಬಳಿಯುವ ಹುನ್ನಾರ ಎಂದು ಈ ಪ್ರಕರಣವನ್ನು ಕರೆಯಲಾಗಿದೆ.
ಕೇರಳದ ಕಾನ್ವೆಂಟ್ ನ ಬಾವಿಯಲ್ಲಿ 'ಶಿಕ್ಷಕಿ' ಶವ ಪತ್ತೆ
ಪೊಲೀಸರ ತನಿಖೆ ಬಗ್ಗೆ ಕೇರಳ ಹೈಕೋರ್ಟ್ ಅಸಮಾಧಾನ ವ್ಯಕ್ತಪಡಿಸಿದ್ದು, ತನಿಖೆಯಲ್ಲಿ ಆಗಿರುವ ಪ್ರಗತಿಯ ಬಗ್ಗೆ ಮಾಹಿತಿ ನೀಡುವಂತೆ ಕೇಳಿದೆ. ಹೀಗಾಗಿ ಏಕಾ-ಏಕಿ ಇಂದು ಆರು ಗಂಟೆಗಳ ಸುಧೀರ್ಘ ಸಭೆ ನಡೆಸಿದ ಪೊಲೀಸ್ ಉನ್ನತ ಅಧಿಕಾರಿಗಳು ಬಿಶಪ್ ವಿರುದ್ಧ ಸಮನ್ಸ್ ಜಾರಿ ಮಾಡುವ ನಿರ್ಧಾರ ತೆಗೆದುಕೊಂಡರು.
ಕೇರಳ ಸರ್ಕಾರವೇ ಬಿಶಪ್ನ ಬೆನ್ನಿಗೆ ನಿಂತಿದೆ ಎಂದು ಆರೋಪಿಸಲಾಗಿದೆ. ಅಲ್ಲದೆ ಈ ಪ್ರಕರಣದಲ್ಲಿ ಹಣದ ಲಾಭಿಯೂ ನಡೆದಿದೆ ಎನ್ನಲಾಗಿದೆ. ಬಿಶಪ್ ಪರ ಹಲವು ಕ್ಯಾಥೋಲಿಕ್ ಚರ್ಚ್ಗಳು, ಮತ್ತು ಒಕ್ಕೂಟ ನಿಂತಿದೆ. ಅತ್ಯಾಚಾರ ಸಂತ್ರಸ್ಥೆ ಮೂಲ ಕ್ಯಾಥೋಲಿಕ್ ಚರ್ಚ್ಗೆ ನ್ಯಾಯಕ್ಕಾಗಿ ಮನವಿ ಸಲ್ಲಿಸಿದ್ದಾರೆ.