ನೂರು ಬಗೆ ಖಾದ್ಯ, 20 ಸಾವಿರ ಅತಿಥಿಗಳು: ಕೇರಳದಲ್ಲಿ ಮದುವೆ ವೈಭೋಗ
ತಿರುವನಂತಪುರಂ, ಡಿಸೆಂಬರ್ 5: ಇಂಥವನ್ನು ಬರೀ ಅದ್ಧೂರಿ ಮದುವೆ ಅಂದು ಸುಮ್ಮನಾಗುವುದಕ್ಕೆ ಸಾಧ್ಯವೇ ಇಲ್ಲ. ಬಾರ್-ಹೋಟೆಲ್ ಗಳನ್ನು ನಡೆಸುವ ಕೇರಳದ ಬಿಜು ರಮೇಶ್ ತಮ್ಮ ಮಗಳ ಮದುವೆ ಮಾಡಿರುವುದು ವೈಭವೋಪೇತವಾಗಿ. ಅದ್ಯಾವ ಪರಿ ಅಂದರೆ ಅಕ್ಷರಧಾಮವನ್ನು ಹೋಲುವಂಥ ಸೆಟ್ ಅನ್ನೇ ಹಾಕಿಸಿದ್ದಾರೆ.
500, 1000 ರುಪಾಯಿಗೂ ಜನ ಕಣ್ಣು-ಬಾಯಿ ಬಿಡುತ್ತಿರುವ ಸನ್ನಿವೇಶದಲ್ಲಿ ಇಂಥ ಆರತಕ್ಷತೆಗಾಗಿ ಅವರು ಮಾಡಿರುವ ಖರ್ಚು-ವೆಚ್ಚದ ಬಗ್ಗೆಯೇ ಈಗ ಎಲ್ಲೆಡೆ ಚರ್ಚೆಯಾಗುತ್ತದೆ. ಮದುವೆಯೇನೋ ಸ್ಥಳೀಯ ದೇವಸ್ಥಾನದಲ್ಲಿ ಬೆಳಗ್ಗೆ ಆಗಿದ್ದರೆ, ಸಂಜೆಯ ಆರತಕ್ಷತೆ ವೆಂಪಲ್ಲವಟ್ಟಮ್ ಎಂಬಲ್ಲಿ ಎಂಟು ಎಕರೆ ಪ್ರದೇಶದಲ್ಲಿ ಮಾಡಿದ್ದಾರೆ.
ಇನ್ನು ಈ ಅರತಕ್ಷತೆಗೆ ರಾಜಕೀಯ ನಾಯಕರಿಂದ ಹಿಡಿದು ಆಧ್ಯಾತ್ಮಿಕ ಗುರುಗಳವರೆಗೆ ಎಲ್ಲರೂ ಭಾಗಿಯಾಗಿದ್ದಾರೆ. ರಮೇಶ್ ಅವರ ಮಗಳು ಮೇಘಾ ಹಾಗೂ ಮಾಜಿ ಕಂದಾಯ ಸಚಿವ, ಹಿರಿಯ ಕಾಂಗ್ರೆಸ್ ನಾಯಕ ಅಡೂರ್ ಪ್ರಕಾಶ್ ಅವರ ಮಗ ಅಜಯ್ ಕೃಷ್ಣನ್ ಮದುವೆ ಮಾತ್ರ ದೇವಸ್ಥಾನದಲ್ಲಿ ಆಗಿದೆ.[ಬ್ರಹ್ಮಣಿ ಧರಿಸಿದ್ದ ಕಣ್ಣು ಕೋರೈಸುವ ವಜ್ರಾಭರಣದ ಬೆಲೆ?]
ಈ ಆರತಕ್ಷತೆಗೂ ಕರ್ನಾಟಕಕ್ಕೂ ನಂಟು ಕೂಡ ಇದೆ. ಎರಡು ಕಾರಣಗಳಿಗೆ. ಮೊದಲನೆಯದು ಪ್ರವೇಶ ದ್ವಾರವನ್ನು ಮೈಸೂರು ಅರಮನೆಯ ರೀತಿ ಸೃಷ್ಟಿಸಲಾಗಿತ್ತು. ಮತ್ತೊಂದು ಬೆಂಗಳೂರು ಅರಮನೆ ಮೈದಾನದಲ್ಲಿ ಮಾಜಿ ಸಚಿವ ಜನಾರ್ದನ ರೆಡ್ಡಿ ತಮ್ಮ ಮಗಳ ಮದುವೆಯನ್ನು ಮಾಡಿದ ವೈಭವವನ್ನು ನೆನಪಿಸುವಂತಿತ್ತು.
20 ಸಾವಿರಕ್ಕೂ ಹೆಚ್ಚು ಮಂದಿ ಆರತಕ್ಷತೆಯಲ್ಲಿ ಪಾಲ್ಗೊಂಡಿದ್ದರು. ಸಂಗೀತ, ನೃತ್ಯ ಕಾರ್ಯಕ್ರಮಗಳನ್ನು ಆಯೋಜಿಸಿ, ನೂರು ಬಗೆಯ ಭಕ್ಷ್ಯ-ಭೋಜ್ಯಗಳ ವ್ಯವಸ್ಥೆ ಮಾಡಲಾಗಿತ್ತು. ಏಕಕಾಲಕ್ಕೆ ಆರು ಸಾವಿರ ಮಂದಿಗೆ ಉಣಬಡಿಸುವಂಥ ವ್ಯವಸ್ಥೆ ಇತ್ತು. ರಮೇಶ್ ಅವರಿಗೆ ಹೋಟೆಲ್ ಗಳ ಸಮೂಹದ ಒಡೆತನವಿದೆ. ಎಂಜಿನಿಯರಿಂದ್ -ಹೋಟೆಲ್ ಮ್ಯಾನೇಜ್ ಮೆಂಟ್ ಕಾಲೇಜುಗಳಿವೆ, ಕಟ್ಟಡ ನಿರ್ಮಾಣ ವ್ಯವಹಾರದಲ್ಲೂ ತೊಡಗಿದ್ದಾರೆ.[ಹೊಗಳಿಕೆ ಟೀಕೆ ಅಪಹಾಸ್ಯಕ್ಕೀಡಾದ ರೆಡ್ಡಿ ಮಗಳ ಮದುವೆ!]
ಈ ಹಿಂದೆ ಉಮನ್ ಚಾಂಡಿ ಮುಖ್ಯಮಂತ್ರಿಯಾಗಿದ್ದಾಗ ರಮೇಶ್ ಮಾಡಿದ ಭ್ರಷ್ಟಾಚಾರ ಆರೋಪಕ್ಕೆ ಇಬ್ಬರು ಮಂತ್ರಿಗಳ ತಲೆದಂಡವಾಗಿತ್ತು. ಇನ್ನು ರಮೇಶ್, ಅಪನಗದೀಕರಣದಿಂದ ನನಗೂ ತೊಂದರೆಯಾಗಿದೆ ಎಂದು ಹೇಳಿದ್ದರು.