ವಿದೇಶಿ ನೆರವು ವಿವಾದ: ಕೇಂದ್ರದ ವಿರುದ್ಧ ತೊಡೆ ತಟ್ಟಲಿದೆ ಕೇರಳ
ತಿರುವನಂತಪುರ, ಆಗಸ್ಟ್ 30: ಯುಎಇಯು ಕೇರಳಕ್ಕೆ ಕೊಡಲಿಚ್ಛಿಸಿದ್ದ 750 ಕೋಟಿ ನೆರವನ್ನು ಸ್ವೀಕರಿಸಲು ಕೇಂದ್ರ ಸರ್ಕಾರ ನಿರಾಕರಿಸಿದ ಬೆನ್ನಲ್ಲೆ ವಿದೇಶಿ ನೆರವು ಪಡೆಯಲು ಕೋರ್ಟ್ ಮೆಟ್ಟಲೇರುವ ಬಗ್ಗೆ ಕೇರಳ ಮುಖ್ಯಮಂತ್ರಿ ಸುಳಿವು ನೀಡಿದ್ದಾರೆ.
ಕೇರಳದ ಪ್ರವಾಹದ ಕುರಿತು ಚರ್ಚಿಸಲು ಇಂದು ಕರೆಯಲಾಗಿದ್ದ ವಿಶೇಷ ಅಧಿವೇಶನದಲ್ಲಿ ಈ ಬಗ್ಗೆ ಮಾತನಾಡಿದ ಕೇರಳ ಸಿಎಂ ಪಿಣರಾಯಿ ವಿಜಯನ್ ಅವರು, ವಿದೇಶಿ ನೆರವು ದಕ್ಕುವಂತೆ ಮಾಡಲು ಅಗತ್ಯ ಕಾನೂನು ಕ್ರಮಗಳನ್ನು ಕೈಗೊಳ್ಳಲು ಸರ್ಕಾರ ಯತ್ನಿಸುತ್ತಿದೆ ಎಂದರು.
ಕೇರಳಕ್ಕೆ ಮೋದಿ ಕೊಟ್ಟ ನೆರವಿಗಿಂತ ಜನರು ಕೊಟ್ಟ ನೆರವೇ ಹೆಚ್ಚು
ಯುಎಇ ಮಾತ್ರವಲ್ಲದೆ ಬೇರೆ ದೇಶಗಳಿಂದಲೂ ಕೇರಳಕ್ಕೆ ನೆರವಿನ ಭರವಸೆ ದೊರೆತಿದೆ ಆದರೆ ಕೇಂದ್ರದ ವಿದೇಶಿ ನೀತಿಯಿಂದಾಗಿ ನೆರವು ಕೇರಳಕ್ಕೆ ಧಕ್ಕುತ್ತಿಲ್ಲ ಹಾಗಾಗಿ ಕೇರಳ ಸರ್ಕಾರವು ನೆರವು ದಕ್ಕಿಸಿಕೊಳ್ಳಲು ಕಾನೂನು ಕ್ರಮಕ್ಕೆ ಮುಂದಾಗಿದೆ.
463 ಜನ ಸಾವು
ಅಧಿವೇಶನದಲ್ಲಿ ಪ್ರವಾಹದ ಸಾವು-ನೋವು, ಹಾನಿಗಳ ಬಗ್ಗೆ ಮಾಹಿತಿ ನೀಡಿದ ಪಿಣರಾಯಿ ವಿಜಯನ್ ಅವರು, ಪ್ರವಾಹದಿಂದಾಗಿ ಈ ವರೆಗೆ 463 ಜನ ಅಸುನೀಗಿದ್ದಾರೆ. 14 ಜನ ನಾಪತ್ತೆಯಾಗಿದ್ದಾರೆ ಎಂದಿದ್ದಾರೆ.
37,247 ಕೋಟಿ ಹಾನಿ
ಕೇರಳದ ವಾರ್ಷಿಕ ಬಜೆಟ್ಗಿಂತಲೂ ಹೆಚ್ಚಿನ ನಷ್ಟ ಪ್ರವಾಹದಿಂದಾಗಿದೆ ಎಂದು ಹೇಳಿದ ಸಿಎಂ. ಸುಮಾರು 37,247 ಕೋಟಿ ಹಾನಿಯಾಗಿದೆ. ಕೇರಳಕ್ಕೆ ಆರ್ಥಿಕ ನೆರವಿನ ಅಗತ್ಯತೆ ಹೆಚ್ಚಿನದಾಗಿದೆ ಎಂದು ಅವರು ಹೇಳಿದ್ದಾರೆ. ಜನರು ನೀಡಿದ ಸಹಾಯ ಧನ 730 ಕೋಟಿ ಇದೆ.
ವಿದೇಶಿ ಸಾಲಕ್ಕೆ ಯತ್ನ
ವಿದೇಶಿ ಸಾಲದ ಬಗ್ಗೆಯೂ ಸರ್ಕಾರ ಯತ್ನಗಳನ್ನು ನಡೆಸುತ್ತಿದ್ದು. ಈಗಾಗಲೇ ವಿಶ್ವಬ್ಯಾಂಕ್ ಅಧಿಕಾರಿಗಳ ಜೊತೆ ಮಾತನಾಡುತ್ತಿದ್ದೇವೆ. ರಾಜ್ಯದ ಹಿತಾಸಕ್ತಿಗೆ ಅನುಗುಣವಾಗಿ ನೆರವು ಎಲ್ಲಿಂದ ಬಂದರೂ ನಾವದನ್ನು ಸ್ವೀಕರಿಸುತ್ತೇವೆ ಎಂದು ವಿಜಯನ್ ಸ್ಪಷ್ಟಪಡಿಸಿದ್ದಾರೆ.
14.50 ಲಕ್ಷ ಜನ ನಿರಾಶ್ರಿತರ ಶಿಬಿರದಲ್ಲಿದ್ದರು
57000 ಹೆಕ್ಟೆರ್ ಕೃಷಿ ಭೂಮಿ ಹಾನಿಯಾಗಿದೆ. ಒಟ್ಟು 14.50 ಲಕ್ಷ ಜನ ನಿರಾಶ್ರಿತರ ಶಿಬಿರಗಳಲ್ಲಿ ಆಶ್ರಯ ಪಡೆದಿದ್ದರು. ಈಗಲೂ ಸುಮಾರು 59000 ಕ್ಕೂ ಅಧಿಕ ಜನ 390 ನಿರಾಶ್ರಿತರ ಶಿಬಿರಗಳಲ್ಲಿ ಆಶ್ರಯ ಪಡೆದಿದ್ದಾರೆ ಎಂದು ಅವರು ಸದನಕ್ಕೆ ಮಾಹಿತಿ ನೀಡಿದರು.