ಮುಗಿಲು ಕತ್ತರಿಸಿದಂಥ ಮಳೆಗೆ ತತ್ತರಿಸಿತು ದೇವರ ನಾಡು!
Recommended Video
ತಿರುವನಂತಪುರಂ, ಆಗಸ್ಟ್ 10: 'ದೇವರ ಸ್ವಂತ ನಾಡು' ಎಂದೇ ಖ್ಯಾತಿ ಪಡೆದ ನಿಸರ್ಗ ವೈಭವದ ಕೇರಳದಲ್ಲೀಗ ಪ್ರವಾಹದ ಭೀತಿ. ಮುಗಿಲೇ ಕತ್ತರಿಸಿಕೊಂಡಂತೆ ಬೀಳುತ್ತಿರುವ ಧಾರಾಕಾರ ಮಳೆಗೆ ಕೇರಳ ತತ್ತರಿಸಿದೆ. ಇದುವರೆಗೆ ಸುಮಾರು 26 ಜನರು ಪ್ರವಾಹದಿಂದಾಗಿ ಪ್ರಾಣ ಕಳೆದುಕೊಂಡಿದ್ದಾರೆಂಬ ಮಾಹಿತಿ ಲಭ್ಯವಾಗಿದೆ.
ಎಲ್ಲಿ ನೋಡಿದರಲ್ಲಿ ನೀರು, ಜನಜೀವನ ಅಸ್ತವ್ಯಸ್ಥ, ಶಾಲಾ-ಕಾಲೇಜುಗಳಿಗೆ ರಜೆ, ಪ್ರವಾಹ ಭೀತಿ, ದೈನಂದಿನ ಬದುಕಿಗೂ ತಾಪತ್ರಯ... ಇದು ಕೇರಳದ ಈಗಿನ ಪರಿಸ್ಥಿತಿ. ಕೇರಳದ ಮಳೆ ಎಂದರೆ ಹಾಗೇ. ಎಷ್ಟೋ ಪ್ರವಾಸಿಗರು ಕೇರಳದ ಮಳೆ ನೋಡುವ ಸಲುವಾಗಿಯೇ ಈ ಸಮಯದಲ್ಲೇ ಇಲ್ಲಿಗೆ ಬರುವವರಿದ್ದಾರೆ. ಆದರೆ ಈ ಬಾರಿ ಅತಿ ಎನ್ನಿಸಿರುವ ಮಳೆಯಿಂದಿ ಪ್ರವಾಸೋದ್ಯಮದ ಮೇಲೂ ವ್ಯತಿರಿಕ್ತ ಪರಿಣಾಮವ ಆಗುತ್ತಿದೆ.
ಇಡುಕ್ಕಿ ಜಲಾಶಯ ಗೇಟ್ ಓಪನ್, ರೆಡ್ ಅಲರ್ಟ್ ಘೋಷಣೆ
ವರುಣನ ರೌದ್ರಾವತಾರದಿಂದ ತತ್ತರಿಸಿರುವ ಕೇರಳಕ್ಕೆ ನೆರವಿನ ಭರವಸೆಯನ್ನು ಕೇಂದ್ರ ನೀಡಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರೊಂದಿಗೆ ಮಾತುಕತೆ ನಡೆಸಿ, ನೆರವು ನೀಡುವ ಭರವಸೆ ನೀಡಿ, ಟ್ವೀಟ್ ಮಾಡಿದ್ದಾರೆ.
ತುಂಬಿ ತುಳುಕುತ್ತಿರುವ ಜಲಾಶಯಗಳು!
ಇಡುಕ್ಕಿ ಮತ್ತು ಮಲಾಪ್ಪುರಂ ನಲ್ಲಿ ಸಂಭವಿಸಿದ ಭೂಕುಸಿತದಿಂದಲೇ 17 ಜನ ಮೃತರಾಗಿದ್ದಾರೆಂದು ಮೂಲಗಳು ತಿಳಿಸಿವೆ. ಇಲ್ಲಿನ ಪ್ರಸಿದ್ಧ ಇಡುಕ್ಕಿ ಜಲಾಶಯದ ನೀರು ಗರಿಷ್ಠ ಮಟ್ಟ ತಲುಪಿದ್ದು(2398.80 ಅಡಿ) ತಲುಪಿದ್ದು, ಗುರುವಾರ ಜಲಾಶಯದ ಗೇಟ್ ಓಪನ್ ಮಾಡಲಾಗಿದೆ. ತನ್ನಿಮಿತ್ತ ಈ ಭಾಗದಲ್ಲಿ ರೆಡ್ ಅಲರ್ಟ್ ಘೋಷಿಸಲಾಗಿದೆ. ರಾಜ್ಯದ 24 ಜಲಾಶಯಗಳ ಗೇಟ್ ಗಳನ್ನು ತೆರೆಯಲಾಗಿದ್ದು, ಮಳೆಯ ತೀವ್ರತೆಗೆ ಇದು ಕನ್ನಡಿ ಹಿಡಿದಿದೆ. ಈ ಭಾಗದ ಜನರಿಗೆ ಸುರಕ್ಷಿತ ಭಾಗಕ್ಕೆ ತೆರಳಲು ಸೂಚಿಸಲಾಗಿದೆ.
ಮುನ್ನೆಚ್ಚರಿಕೆ ಕ್ರಮ
ಈಗಾಗಲೇ ಅಗತ್ಯ ಮುನ್ನೆಚ್ಚರಿಕೆ ಕ್ರಮ ಕೈಗೊಂಡಿರುವ ಕೇರಳ ಸರ್ಕಾರ 10,000 ಕ್ಕೂ ಹೆಚ್ಚು ಜನರನ್ನು 157 ಸಂತ್ರಸ್ಥ ಶಿಬಿರಗಳಿಗೆ ಸ್ಥಳಾಂತರಿಸಿದೆ. ರಾಷ್ಟ್ರೀಯ ವಿಪತ್ತು ನಿರ್ವಹಣಾ ದಳದ ಆರು ಪ್ರವಾಹ ರಕ್ಷಣಾ ತಂಡವನ್ನು ಎರ್ನಾಕುಲಂ, ಅಲ್ಲಪ್ಪಿ, ವೈನಾಡ್, ಕೊಳಿಕೊಡೆ ಮತ್ತು ಪಾಲಕ್ಕಾಡ್ ಗಳಲ್ಲಿ ನೇಮಿಸಲಾಗಿದೆ. 27x7 ಎನ್ ಡಿಆರ್ ಎಫ್ ಕಂಟ್ರೋಲ್ ರೂಮ್ ಗಳನ್ನು ಸ್ಥಾಪಿಸಲಾಗಿದೆ. ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಸೇನೆಯ ತಲಾ 75 ಸಿಬ್ಬಂದಿಗಳನ್ನು ನಿಯೋಜಿಸಲಾಗಿದೆ.
ಕೇರಳ ಮಳೆ ಸಂಕಟಕ್ಕೆ ಮಿಡಿದ ಕರ್ನಾಟಕ, 10 ಕೋಟಿ ನೆರವು
ಶಾಲಾ ಕಾಲೇಜುಗಳಿಗೆ ರಜೆ
ಪ್ರವಾಹ ಪೀಡಿತ ಪ್ರದೇಶಗಳ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ಜನರನ್ನು ಮನೆಯಲ್ಲಿಯೇ ಇರುವಂತೆ ಮನವಿ ಮಾಡಲಾಗಿದೆ. ಕೊತಮಂಗಳಂ, ಕುನ್ನತುನಾಡ್, ಅಳುವಾ, ಪರವುರ್ ತಾಲೂಕ್ ಮತ್ತು ಕಡಮಕ್ಕುಡಿಯ ಎಲ್ಲಾ ಶಿಕ್ಷಣ ಸಂಸ್ಥೆಗಳಿಗೂ ಶುಕ್ರವಾರ ರಜೆ ಘೋಷಿಸಲಾಗಿದೆ.
ರೈಲು ಮತ್ತು ವಿಮಾನ ಸೇವೆಗಳ ಮೇಲೂ ಪರಿಣಾಮ
ಎರ್ನಾಕುಲಂ ಜಿಲ್ಲೆಯಲ್ಲಿ ಉಂಟಾದ ಪ್ರವಾಹದಿಂದಾಗಿ ರೈಲು ಮತ್ತು ವಿಮಾನ ಸೇವೆಗಳ ಮೇಲೆಯೂ ಪರಿಣಾಮ ಬೀರಿದೆ. ಕೊಚ್ಚಿನ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಗುರುವಾರ ಬಂದ್ ಮಾಡಲಾಗಿತ್ತು. ಪ್ರಯಾಣಿಕರ ಹಿತ ದೃಷ್ಟಿಯಿಂದ ಈ ಕ್ರಮ ಕೈಗೊಳ್ಳಲಾಗಿತ್ತು.