ಎಂಥ ದುರಂತ! ಪ್ರವಾಹದ ವರದಿಗೆ ತೆರಳಿ ಶವವಾಗಿ ಹಿಂದಿರುಗಿದ ಪತ್ರಕರ್ತ
ಕೊಟ್ಟಾಯಂ, ಜುಲೈ 25: ಕೇರಳದಲ್ಲಿ ಅತಿಯಾದ ಮಳೆಗೆ ಎದ್ದಿರುವ ಪ್ರವಾಹ ಸ್ಥಿತಿಯಲ್ಲಿ ವರದಿಗೆಂದು ತೆರಳಿದ್ದ ಪತ್ರಕರ್ತ ಮತ್ತು ಆತನ ಕಾರಿನ ಚಾಲಕ ಇಬ್ಬರೂ ಪ್ರವಾಹದಲ್ಲಿ ಕೊಚ್ಚಿಹೋದ ದಾರುಣ ಘಟನೆ ಕೊಟ್ಟಾಯಂನಲ್ಲಿ ನಡೆದಿದೆ.
ಇಲ್ಲಿನ 'ಮಾತೃಭೂಮಿ' ಚಾನೆಲ್ ನ ಸ್ಟ್ರಿಂಜರ್ ಆಗಿದ್ದ ಸಾಜಿ ಮತ್ತು ಆತನ ಕಾರಿನ ಚಾಲಕ ಇಬ್ಬರೂ ಇಲ್ಲಿನ ವೈಕೋಮ್ ಬಳಿ ದೋಣಿಯಲ್ಲಿ ಪ್ರವಾಹದ ವರದಿಗೆಂದು ತೆರಳಿದ್ದರು. ಈ ಸಂದರ್ಭದಲ್ಲಿ ಅವರಿದ್ದ ದೋಣಿ ಮುಳುಗಿದ ಪರಿಣಾಮ ಇಬ್ಬರೂ ಕೊಚ್ಚಿಕೊಂಡು ಹೋಗಿದ್ದು, ಅವರ ಮೃತದೇಹ ಪತ್ತೆಯಾಗಿದೆ.
ಬಾಗಲಕೋಟೆ: ಮಳೆ ಬಂದರೆ ಈ ಹತ್ತು ಹಳ್ಳಿ ಜನರ ಸಂಚಾರಕ್ಕೆ ದೋಣಿಯೇ ಗತಿ
ಶವಪರೀಕ್ಷೆಯ ನಂತರ ಇಬ್ಬರ ಪಾರ್ಥಿವ ಶರೀರವನ್ನೂ ಕುಟುಂಬಸ್ಥರಿಗೆ ಒಪ್ಪಿಸಲಾಗಿದೆ. ಈ ಸಂದರ್ಭದಲ್ಲಿ ದೋಣಿಯಲ್ಲಿದ್ದ 'ಮಾತೃಭೂಮಿ'ಯ ಕೊಟ್ಟಾಯಂ ಸ್ಟಾಫ್ ರಿಪೋರ್ಟರ್ ಕೆ ಬಿ ಶ್ರೀಧರನ್ ಮತ್ತು ಕ್ಯಾಮರಾಮನ್ ಅಭಿಲಾಶ್ ಸಹ ನೀರಿನಲ್ಲಿ ಮುಳುಗಿದ್ದರು. ಆದರೆ ಇವರನ್ನು ಸ್ಥಳೀಯರು ಕಾಪಾಡಿದ್ದು, ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ದೋಣಿ ನಡೆಸುವವನೂ ಪ್ರಾಣಾಪಾಯದಿಂದ ಪಾರಾಗಿದ್ದಾನೆ.
ನೌಕಾ ವಿಪತ್ತು ಪರಿಹಾರ ದಳ ಸಕಾಲಿಕವಾಗಿ ನಡೆಸಿದ ರಕ್ಷಣಾ ಕಾರ್ಯದಿಂದಾಗಿ ಹಲವರ ಪ್ರಾಣ ಉಳಿದಿದೆ. ಶ್ರೀಧರನ್ ಮತ್ತು ಅಭಿಲಾಶ್ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ.
ವರದಿ ತಯಾರಿಸಿ, ವಾಪಸ್ಸಾಗುತ್ತಿದ್ದಾಗ ಸಂಭವಿಸಿತು ದುರಂತ!
ಮಾತೃಭೂಮಿ ಟಿವಿ ಚಾನೆಲ್ ನಿಂದ ಸಂತ್ರಸ್ಥ ಶಿಬಿರದ ಪರಿಸ್ಥಿತಿಯ ಕುರಿತು ವರದಿ ಮಾಡಲು ಪತ್ರಕರ್ತರು ತೆರಳಿದ್ದರು. ಎರಡು ಸಣ್ಣ ಮೋಟಾರ್ ಬೋಟ್ ಗಳಲ್ಲಿ ತೆರಳಿದ್ದ ಪತ್ರಕರ್ತರು ಸಂತ್ರಸ್ಥ ಶಿಬಿರಗಳಿಗೆ ತೆರಳಿ ಸಂಪೂರ್ಣ ವರದಿ ತಯಾರಿಸಿದ್ದರು. ಆದರೆ ಅಲ್ಲಿಂದ ವಾಪಸಾಗುತ್ತಿದ್ದ ವೇಳೆ ಈ ದುರ್ಘಟನೆ ಸಂಭವಿಸಿದೆ.
ಪತ್ರಕರ್ತನನ್ನು ಕೊಚ್ಚಿಕೊಂಡು ಹೋದ ದೈತ್ಯ ಅಲೆ
ಕಾರಿಯಾರ್ ನದಿಯಲ್ಲಿ ಬಿಪಿನ್ ಮತ್ತು ಶಾಜಿ ಎಂಬ ಇಬ್ಬರು ಮುಳುಗಿದ್ದು, ಅವರನ್ನು ರಕ್ಷಿಸಲು ರಕ್ಷಣಾ ತಂಡ ಯತ್ನಿಸಿತಾದರೂ ಅಷ್ಟರಲ್ಲೇ ಭೀಕರ ಅಲೆಗಳಿಂದಾಗಿ ಅವರು ಕೊಚ್ಚಿಕೊಂಡು ಹೋಗಿದ್ದಾರೆ. ದೋಣಿಯಿಂದ ನೀರಿಗೆ ಬಿದ್ದ ಕೆಲವು ಸಮಯದವರೆಗೂ ಬಿಪಿನ್ ಮತ್ತು ಶಾಜಿ ಇಬ್ಬರೂ ದೋಣಿಯನ್ನು ಗಟ್ಟಿಯಾಗಿ ಹಿಡಿದಿದ್ದರು. ಅಲ್ಲಿಯವರೆಗೂ ಅವರ ಜೀವಕ್ಕೆ ಅಪಾಯವಿರಲಿಲ್ಲ. ಆದರೆ ಅಲೆಗಳ ಆರ್ಭಟ ಹೆಚ್ಚಾದ ಕಾರಣ ಅವರು ದೋಣಿ ಬಿಟ್ಟು ಪ್ರವಾಹದಲ್ಲಿ ತೇಲಿಹೋಗಿದ್ದರು.
ಪ್ರಾಣಾಪಾಯದಿಂದ ಪಾರದ ಅದೃಷ್ಟವಂತರು
ಈ ಸಂದರ್ಭದಲ್ಲಿ ದೋಣಿಯಲ್ಲಿದ್ದ 'ಮಾತೃಭೂಮಿ'ಯ ಕೊಟ್ಟಾಯಂ ಸ್ಟಾಫ್ ರಿಪೋರ್ಟರ್ ಕೆ ಬಿ ಶ್ರೀಧರನ್ ಮತ್ತು ಕ್ಯಾಮರಾಮನ್ ಅಭಿಲಾಶ್ ಸಹ ನೀರಿನಲ್ಲಿ ಮುಳುಗಿದ್ದರು. ಆದರೆ ಇವರಿಬ್ಬರೂ ಈಜಿಕೊಂಡು, ಮಗುಚಿದ ದೋಣಿಯ ಮೇಲೆ ಬಂದು ಕೂತಿದ್ದರಿಂದ ಸ್ಥಳೀಯರು ಇವರ ನೆರವಿಗೆ ಬಂದಿದ್ದಾರೆ. ನಂತರ ನೌಕಾ ವಿಪತ್ತು ನಿರ್ವಹಣಾ ದಳದ ಸಿಬ್ಬಂದಿಗಳೂ ಬಂದು ಇವರನ್ನು ರಕ್ಷಿಸಿದ್ದಾರೆ. ದೋಣಿ ನಡೆಸುವವನೂ ಪ್ರಾಣಾಪಾಯದಿಂದ ಪಾರಾಗಿದ್ದಾನೆ.
ಪ್ರವಾಹದಲ್ಲೂ ವೃತ್ತಿಧರ್ಮ ಪಾಲಿಸಬೇಕಾದ ಅನಿವಾರ್ಯತೆ
ಕೇರಳದಲ್ಲಿ ಕಳೆದ ಹಲವು ದಿನಗಳಿಂದ ಮಳೆ ಸುರಿಯುತ್ತಲೇ ಇದ್ದು, ಇದುವರೆಗೂ 49 ಕ್ಕೂ ಹೆಚ್ಚು ಜನ ಮಳೆಯ ಕಾರಣದಿಂದ ಅಸುನೀಗಿದ್ದಾರೆ. ಸುಮಾರು 314.54 ಕೋಟಿ ರೂ. ಮೌಲ್ಯದ ಆಸ್ತಿಪಾಸ್ತಿ ಹಾನಿಯಾಗಿದೆ ಎಂದು ಅಂದಾಜಿಸಲಾಗಿದೆ. ಕೇರಳದ ಮಳೆಯ ಅವಾಂತರವನ್ನು ಜನರಿಗೆ ತಿಳಿಸಲು ಮತ್ತು ಮುನ್ನೆಚ್ಚರಿಕೆ ವಹಿಸುವಂತೆ ಕೋರುವ ಸಲುವಾಗಿ ಅಲ್ಲಿನ ಸನ್ನಿವೇಶವನ್ನು ವರದಿ ಮಾಡಲು ಹೊರಟ ಪತ್ರಕರ್ತರೇ ದುರ್ಮರಣಕ್ಕೀಡಾಗಿದ್ದು ದುರಂತವೇ ಸರಿ. ಎಂಥ ಸಂದರ್ಭದಲ್ಲೂ ವೃತ್ತಿ ಧರ್ಮ ಮೆರೆಯಬೇಕಾದ ಪತ್ರಕರ್ತರ ಬವಣೆಯ ಬದುಕಿಗೆ ಇದೊಂದು ತಾಜಾ ಉದಾಹರಣೆ.