ನಟ ದಿಲೀಪ್ ಕಾಲಿಟ್ಟ ಕೂಡಲೆ ತಿರುಗಿ ಬಿದ್ದ ನಟಿಮಣಿಯರು
ಕೊಚ್ಚಿ, ಜೂನ್ 28: ಜನಪ್ರಿಯ ನಟಿ ಮೇಲಿನ ದೌರ್ಜನ್ಯ ಹಾಗೂ ಅಪಹರಣ ಪ್ರಕರಣದ ಸಂಚು ರೂಪಿಸಿದ ಆರೋಪದ ಮೇಲೆ ಬಂಧನಕ್ಕೊಳಗಾಗಿದ್ದ ದಿಲೀಪ್ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ. ಕೇರಳದ ನಟ, ನಟಿಯರ ಸಂಘದಿಂದ ನಿಷೇಧಕ್ಕೊಳಗಾಗಿದ್ದ ದಿಲೀಪ್ ರನ್ನು ಮತ್ತೊಮ್ಮೆ ಸಂಘಕ್ಕೆ ಕರೆ ತರುವ ಬಗ್ಗೆ ಮಾತುಕತೆ ಆರಂಭವಾಗುತ್ತಿದ್ದಂತೆ ಸಂಘದ ಮಹಿಳಾ ಸದಸ್ಯರು ಕೆರಳಿದ್ದಾರೆ.
ದಿಲೀಪ್ ಸೇರ್ಪಡೆ ಬಗ್ಗೆ ತಿಳಿಯುತ್ತಿದ್ದಂತೆ, ನಾಲ್ವರು ನಟಿಯರು ಕೇರಳದ ಸಿನೆಮಾ ಕಲಾವಿದರ ಸಂಘಟನೆAssociation of Malayalam Movie Artistes 'ಅಮ್ಮಾ'ಕ್ಕೆ ರಾಜೀನಾಮೆ ನೀಡಿದ್ದಾರೆ
ರಮ್ಯಾ ನಂಬೀಸನ್, ರಿಮಾ ಕಲ್ಲಿಂಗಲ್, ಗೀತು ಮೋಹನ್ದಾಸ್ ರಾಜೀನಾಮೆ ನೀಡಿದ ನಟಿಯರಾಗಿದ್ದಾರೆ. ನಟಿಗೆ ಕಿರುಕುಳ ಪ್ರಕರಣದಲ್ಲಿ ಆರೋಪಿಯಾಗಿರುವ ನಟ ದಿಲೀಪ್ರನ್ನು 'ಅಮ್ಮಾ'ಗೆ ಮರಳಿ ಸೇರಿಸುವ ನಿರ್ಧಾರವನ್ನು ವಿರೋಧಿಸಿದ್ದಾರೆ.
ಆದರೆ, ನಟಿಯನ್ನು ಬೆಂಬಲಿಸುತ್ತಿರುವ ನಟಿ ಮಂಜು ವಾರಿಯರ್ ಹಾಗು ಪಾರ್ವತಿ 'ಅಮ್ಮಾ' ಸಂಘಟನೆಗೆ ಈವರೆಗೂ ರಾಜೀನಾಮೆ ನೀಡಿಲ್ಲ
'ಆರೋಪಿ ನನಗೆ ನಟನೆಯ ಅವಕಾಶವಿಲ್ಲದಂತೆ ಮಾಡಿದ್ದಾನೆ. ಅಂದು ಈ ಕುರಿತು ದೂರು ನೀಡಿದಾಗ ಸಂಘಟನೆ ಆತನ ವಿರುದ್ಧ ಸರಿಯಾದ ಕ್ರಮ ಜರಗಿಸಲು ವಿಫಲವಾಗಿತ್ತು ಎಂದು ನಟಿ ಹೇಳಿಕೊಂಡಿದ್ದಾರೆ.
ಇಷ್ಟು ಕೆಟ್ಟ ಅನುಭವ ನನ್ನ ಜೀವನದಲ್ಲಿ ನಡೆದಿರುವಾಗ, ತಾನೂ ಇರುವ ಸಂಘಟನೆ ಆರೋಪಿ ವ್ಯಕ್ತಿಯನ್ನು ಸಂರಕ್ಷಿಸಲು ಬಹಳಷ್ಟು ಶ್ರಮಿಸಿದೆ. ಇನ್ನು ಕೂಡಾ ಈ ಸಂಘಟನೆಯಲ್ಲಿ ಮುಂದುವರಿಯುವುದರಲ್ಲಿ ಅರ್ಥವಿಲ್ಲ ಎಂದು ಮನಗಂಡು ರಾಜೀನಾಮೆ ನೀಡುತ್ತಿರುವುದಾಗಿ" ನಟಿ ಹೇಳಿದ್ದಾರೆ.
ಕಿರುಕುಳಕ್ಕೊಳಗಾಗಿರುವ ನಟಿಗೆ ಬೆಂಬಲ ಸೂಚಿಸಿ ನಟಿಯರಾದ ರಮ್ಯಾ ನಂಬೀಸನ್, ರಿಮಾ ಕಲ್ಲಿಂಗಲ್, ಗೀತು ಮೋಹನ್ದಾಸ್ ರಾಜೀನಾಮೆ ನೀಡಿದ್ದಾರೆ.
ಇದರ ಬೆನ್ನಲ್ಲೇ ಜುಲೈ 13 ಅಥವಾ 14ರಂದು ತುರ್ತು ಸಭೆ ಕರೆದು ಈ ಬಗ್ಗೆ ನಿರ್ಧರಿಸುವಂತೆ ರೇವತಿ ಆಶಾ ಕೆಲುನ್ನಿ, ಪದ್ಮಪ್ರಿಯ ಜಾನಕಿರಾಮನ್ ಹಾಗೂ ಎ ಪಾರ್ವತಿ ಅವರು ಅಮ್ಮಾಗೆ ಪತ್ರ ಬರೆದಿದ್ದಾರೆ. ಆದರೆ, ಅಮ್ಮಾದ ಪ್ರಧಾನ ಕಾರ್ಯದರ್ಶಿ ಎಡವೆಲಾ ಬಾಬು ಈ ಬಗ್ಗೆ ತಮ್ಮ ಪ್ರತಿಕ್ರಿಯೆ ನೀಡಿಲ್ಲ.
ನಟಿ ಕಿರುಕುಳ ಘಟನೆ ಬಳಿಕ ದಿಲೀಪ್ ರನ್ನು ಸಂಘದಿಂದ ಹೊರ ಹಾಕುವಂತೆ ಸೂಚಿಸಿದ್ದ ಸೂಪರ್ ಸ್ಟಾರ್ ಮಮ್ಮೂಟಿ ಅವರು ಈಗ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.