ಕೇರಳ ಚರ್ಚ್ ಅತ್ಯಾಚಾರ: ಕೋರ್ಟ್ನಲ್ಲಿ ಉಲ್ಟಾ ಹೇಳಿಕೆ ನೀಡಿದ ಸಂತ್ರಸ್ತೆ, ತಾಯಿ
ತಿರುವನಂತಪುರಂ, ಆಗಸ್ಟ್ 3: ಕೇರಳದ ಚರ್ಚ್ನಲ್ಲಿ ನಡೆದಿದೆ ಎನ್ನಲಾದ ಅತ್ಯಾಚಾರ ಆರೋಪ ಪ್ರಕರಣವೊಂದು ಸಿನಿಮೀಯ ತಿರುವು ಪಡೆದುಕೊಂಡಿದೆ.
ಅತ್ಯಾಚಾರ ನಡೆದಿದೆ ಎಂದು ಆರೋಪಿಸಿದ್ದ ಸಂತ್ರಸ್ತೆಯೇ, ಅದು ಸಹಮತದ ಲೈಂಗಿಕ ಕ್ರಿಯೆ ಎಂದು ಕೋರ್ಟ್ನಲ್ಲಿ ಹೇಳಿಕೆ ನೀಡುವ ಮೂಲಕ ಅಚ್ಚರಿ ಮೂಡಿಸಿದ್ದಾರೆ.
ಪಾದ್ರಿಗಳಿಂದ ಅತ್ಯಾಚಾರಕ್ಕೊಳಗಾದ ಮಹಿಳೆಯ ಕರುಣಾಜನಕ ಕಥೆ
ಕೇರಳ ಕ್ಯಾಥಲಿಕ್ ಚರ್ಚ್ನ ಪಾದ್ರಿ ರಾಬಿನ್ ವಡಕ್ಕುಂಚೆರಿಲ್ ವಿರುದ್ಧದ ಅತ್ಯಾಚಾರ ಆರೋಪ ಮಾಡಿದ್ದ ಸಂತ್ರಸ್ತೆ ಹಾಗೂ ಆಕೆಯ ತಾಯಿ ಹೇಳಿಕೆ ಬದಲಿಸಿದ್ದಾರೆ.
ಅಲ್ಲದೆ, ಸಂತ್ರಸ್ತೆಯು ಪಾದ್ರಿ ರಾಬಿನ್ ಅವರನ್ನು ಮದುವೆಯಾಗಲು ಬಯಸಿರುವುದಾಗಿ ತಿಳಿಸಿದ್ದಾರೆ.
ಥಲಸ್ಸೆರಿಯ ಪೋಕ್ಸೊ ನ್ಯಾಯಾಲಯದಲ್ಲಿ ಬುಧವಾರ ಆರಂಭವಾದ ವಿಚಾರಣೆ ವೇಳೆ ಸಂತ್ರಸ್ತೆ, ತಾನು ಪಾದ್ರಿಯೊಂದಿಗೆ ಸಹಮತದ ಲೈಂಗಿಕ ಕ್ರಿಯೆ ಹೊಂದುವಾಗ ಅಪ್ರಾಪ್ತ ವಯಸ್ಕಳಾಗಿರಲಿಲ್ಲ ಎಂದು ಹೇಳಿದ್ದಾರೆ.
'ಆಕೆ ಪಾದ್ರಿಯೊಂದಿಗೆ ಲೈಂಗಿಕ ಕ್ರಿಯೆ ನಡೆಸಿರುವುದನ್ನು ಒಪ್ಪಿಕೊಂಡಿದ್ದಾರೆ. ಆದರೆ, ಅದು ಬೆದರಿಕೆಯಿಂದ ಅಲ್ಲ. ಘಟನೆ ನಡೆದಾಗ ತಾನು ಅದಕ್ಕೆ ಸಮ್ಮತಿ ಸೂಚಿಸುವ ವಯಸ್ಸು ದಾಟಿದ್ದಾಗಿ ಹೇಳಿಕೊಂಡಿದ್ದಾರೆ. ಆರೋಪಿ ಪಾದ್ರಿಯನ್ನು ಬಯಸಿರುವುದಾಗಿ ಹಾಗೂ ಮಗುವನ್ನು ತನ್ನ ಸುಪರ್ದಿಗೆ ಪಡೆದುಕೊಳ್ಳಲು ಇಚ್ಛಿಸಿರುವುದಾಗಿ ಆಕೆ ತಿಳಿಸಿದ್ದಾರೆ' ಎಂದು ವಿಶೇಷ ಪ್ರಾಸಿಕ್ಯೂಟರ್ ಬೀನಾ ಕಳಿಯಾತ್ ಹೇಳಿದ್ದಾರೆ.
ಕೇರಳದಲ್ಲಿ ಪಾದ್ರಿಯಿಂದ ಮತ್ತೊಂದು ಅತ್ಯಾಚಾರ ಪ್ರಕರಣ
ಪಾದ್ರಿ ರಾಬಿನ್ ವಡಕ್ಕುಂಚೆರಿಲ್ ಮತ್ತು ಒಂಬತ್ತು ಮಂದಿ ವಿರುದ್ಧ ಕಳೆದ ವರ್ಷ ಪ್ರಾಸಿಕ್ಯೂಷನ್ ದೋಷಾರೋಪ ಹೊರಿಸಿತ್ತು.
ಸಂತ್ರಸ್ತೆಯ ತಾಯಿ ಕೂಡ ಗುರುವಾರದ ವಿಚಾರಣೆ ವೇಳೆ ಹೇಳಿಕೆ ಬದಲಿಸಿದ್ದಾರೆ. ಎರಡನೆಯ ಆರೋಪಿ ತಂಕಮ್ಮ ನೆಲ್ಲಿಯಾಣಿ ಮತ್ತು ಆರನೇ ಆರೋಪಿಯಾಗಿರುವ ಆಕೆಯ ಮಗಳು, ಸನ್ಯಾಸಿನಿ ಲಿಜ್ ಮಾರಿಯಾ ಅವರ ಪಾತ್ರ ಇರುವುದನ್ನು ಸಂತ್ರಸ್ತೆಯ ತಾಯಿ ನಿರಾಕರಿಸಿದ್ದಾರೆ.
ಸಂತ್ರಸ್ತೆಯು ಮಗುವಿಗೆ ಜನ್ಮ ನೀಡಿದ ಬಳಿಕ ಘಟನೆಯು ಬಹಿರಂಗವಾಗದಂತೆ ತಡೆಯಲು ತಂಕಮ್ಮ ಮತ್ತು ಮಾರಿಯಾ ಅವರು ಮಗುವನ್ನು ಆಸ್ಪತ್ರೆಯಿಂದ ಹೊತ್ತೊಯ್ದಿದ್ದರು ಎಂದು ಪ್ರಾಸಿಕ್ಯೂಷನ್ ಆರೋಪಿಸಿತ್ತು.
ಘಟನೆ ನಡೆದಾಗ ತನ್ನ ಮಗಳು ಅಪ್ರಾಪ್ತ ವಯಸ್ಕಳಾಗಿರಲಿಲ್ಲ ಎಂದಿರುವ ತಾಯಿ, ಪಾದ್ರಿ ವಿರುದ್ಧ ತಾವು ಯಾವುದೇ ದೂರು ಹೊಂದಿಲ್ಲ ಎಂದಿದ್ದಾರೆ.
ದಾಖಲೆಗಳ ಪ್ರಕಾರ ಘಟನೆ ನಡೆದಾಗ ಸಂತ್ರಸ್ತೆಯು ಅಪ್ರಾಪ್ತ ವಯಸ್ಕರಾಗಿದ್ದರು. ಆಕೆಯ ಹೇಳಿಕೆಯು ವಿಚಾರಣೆಗೆ ಯಾವುದೇ ತೊಡಕುಂಟು ಮಾಡುವುದಿಲ್ಲ.
ಮೂರನೇ ಸಾಕ್ಷಿಯಾದ ಸಂತ್ರಸ್ತೆಯ ತಂದೆಯನ್ನು ವಿಚಾರಣೆಗೆ ಒಳಪಡಿಸಲು ನಾವು ನಿರ್ಧರಿಸಿಲ್ಲ. ಮತ್ತೊಬ್ಬ ಸಾಕ್ಷಿದಾರ ಕೂಡ ನಿಲುವು ಬದಲಿಸುವುದನ್ನು ನೋಡಲು ಪ್ರಾಸಿಕ್ಯೂಷನ್ ಬಯಸುವುದಿಲ್ಲ ಎಂದು ಬೀನಾ ತಿಳಿಸಿದ್ದಾರೆ.
ತನ್ನ ಅಪ್ರಾಪ್ತ ವಯಸ್ಸಿನ ಮಗಳ ಮೇಲೆ ಪಾದ್ರಿ ಅತ್ಯಾಚಾರ ಎಸಗಿದ್ದಾರೆ ಎಂದು ಸಂತ್ರಸ್ತೆಯ ತಾಯಿ ದೂರು ನೀಡಿದ್ದರು. ಅದರ ಆಧಾರದಲ್ಲಿ 2017ರ ಫೆಬ್ರುವರಿ 28ರಂದು ಪಾದ್ರಿಯನ್ನು ಬಂಧಿಸಲಾಗಿತ್ತು. ಬಳಿಕ ವಿವಿಧ ರೀತಿಯಲ್ಲಿ ಪಾದ್ರಿಗೆ ನೆರವು ನೀಡಿದ ಆರೋಪದಡಿ ಐವರು ಕ್ರೈಸ್ತ ಸನ್ಯಾಸಿನಿಯರು ಸೇರಿದಂತೆ ಒಂಬತ್ತು ಮಂದಿ ವಿರುದ್ಧ ಪ್ರಕರಣ ದಾಖಲಿಸಲಾಗಿತ್ತು.