ಪ್ರವಾಹಕ್ಕೆ ತಮಿಳುನಾಡು ಕಾರಣ ಎಂದು ಆರೋಪಿಸಿದ ಕೇರಳ
Recommended Video
ನವದೆಹಲಿ, ಆಗಸ್ಟ್ 23:ಮುಲ್ಲಪೆರಿಯಾರ್ ಅಣೆಕಟ್ಟೆಯಿಂದ ಏಕಾಏಕಿ ಹೆಚ್ಚುವರಿ ನೀರು ಹೊರಗೆ ಬಿಟ್ಟಿದ್ದು ಪ್ರವಾಹ ದುರಂತ ಸಂಭವಿಸಲು ಕಾರಣಗಳಲ್ಲಿ ಒಂದು ಎಂದು ಕೇರಳ ಸುಪ್ರೀಂಕೋರ್ಟ್ಗೆ ತಿಳಿಸಿದೆ.
ಮುಲ್ಲಪೆರಿಯಾರ್ ಡ್ಯಾಂನಿಂದ ನೀರು ಬಿಡುಗಡೆ ಮಾಡಿದ್ದರಿಂದಾಗಿ ಇಡುಕ್ಕಿ ಜಲಾಶಯದ ಭರ್ತಿಯಾಗಿ ಅದರ ನೀರನ್ನು ಹೊರಕ್ಕೆ ಬಿಡುವಂತಾಯಿತು ಎಂದು ಕೇರಳ ಅಫಿಡವಿಟ್ ಸಲ್ಲಿಸಿದೆ.
ಅಣೆಕಟ್ಟೆಯಲ್ಲಿ 136 ಅಡಿ ನೀರು ತುಂಬಿಕೊಂಡಾಗಲೇ ಕ್ರಮೇಣ ನೀರು ಹರಿಸುವಂತೆ ತಮಿಳುನಾಡು ಸರ್ಕಾರಕ್ಕೆ ಮನವಿ ಮಾಡಲಾಗಿತ್ತು. ಆದರೆ, ತಮಿಳುನಾಡು ಅದಕ್ಕೆ ಒಪ್ಪಲಿಲ್ಲ ಎಂದು ಕೇರಳ ವಿವರಿಸಿದೆ.
ಆದರೆ, ಕೇರಳದಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗಿ ಒಂದು ವಾರದ ಬಳಿಕ ಅಂದರೆ, ಆಗಸ್ಟ್ 16ರಂದು ನೀರು ಬಿಡುಗಡೆ ಮಾಡಿದ್ದಾಗಿ ತಮಿಳುನಾಡು ವಾದಿಸಿದೆ.
ಶುಕ್ರವಾರ ಪ್ರತಿ ಅಫಿಡವಿಟ್ ಸಲ್ಲಿಸಲಿರುವ ತಮಿಳುನಾಡು, ಅಣೆಕಟ್ಟೆಯಲ್ಲಿ 142 ಅಡಿವರೆಗೂ ನೀರು ಸಂಗ್ರಹಿಸಲು ಸುಪ್ರೀಂಕೋರ್ಟ್ ಅನುಮತಿ ನೀಡಿದೆ ಎಂದು ಸಮರ್ಥಿಸಿಕೊಂಡಿದೆ.
ಕೇರಳ ಗುರುವಾರ ಸಲ್ಲಿಸಿರುವ ಅಫಿಡವಿಟ್ನಲ್ಲಿ 1,564 ಹಳ್ಳಿಗಳು ಮತ್ತು ತನ್ನ 14 ಜಿಲ್ಲೆಗಳ ಪೈಕಿ 13 ಜಿಲ್ಲೆಗಳು ಪ್ರವಾಹಪೀಡಿತವಾಗಿದೆ ಎಂದು ತಿಳಿಸಿದೆ.
ಮುಲ್ಲಪೆರಿಯಾರ್ ಜಲಾಶಯದಿಂದ ಅಪಾಯವಿಲ್ಲ: ಪಳನಿಸ್ವಾಮಿ
54 ಲಕ್ಷಕ್ಕೂ ಅಧಿಕ ಮಂದಿ ಇದರಿಂದ ಸಂಕಷ್ಟಕ್ಕೆ ಸಿಲುಕಿದ್ದಾರೆ. ಇದು ರಾಜ್ಯದ ಜನಸಂಖ್ಯೆಯ ಆರನೇ ಒಂದು ಭಾಗದಷ್ಟಿದೆ. ಸುಮಾರು 13 ಲಕ್ಷ ಮಂದಿ ತಮ್ಮ ಮನೆ ಬಿಟ್ಟು ಪರಿಹಾರ ಕೇಂದ್ರಗಳಿಗೆ ತೆರಳುವಂತಾಗಿದೆ ಎಂದು ಹೇಳಿದೆ.
ಮುಲ್ಲಪೆರಿಯಾರ್ ಜಲಾಶಯದಿಂದ ಯಾವುದೇ ಅಪಾಯವಿಲ್ಲ ಎಂದು ತಮಿಳುನಾಡು ಮುಖ್ಯಮಂತ್ರಿ ಕೆ. ಪಳನಿಸ್ವಾಮಿ ಸ್ಪಷ್ಟಪಡಿಸಿದ್ದರು.
ಮುಲ್ಲಪೆರಿಯಾರ್ ಜಲಾಶಯದಲ್ಲಿ ನಿಗದಿಯಂತೆ 142 ಅಡಿಗಳಷ್ಟು ಮಾತ್ರ ನೀರು ಸಂಗ್ರಹಿಸಿದ್ದು, ಸುಪ್ರೀಂಕೋರ್ಟ್ ಆದೇಶದ ಅನುಸಾರ ನಿಯಮಗಳನ್ನು ಪಾಲಿಸಲಾಗಿದೆ. ಹೀಗಾಗಿ ಯಾವುದೇ ಆತಂಕಪಡುವ ಅವಶ್ಯಕತೆಯಿಲ್ಲ ಎಂದು ಅವರು ಪಿಣರಾಯಿ ವಿಜಯನ್ ಅವರಿಗೆ ಬರೆದ ಪತ್ರದಲ್ಲಿ ಸ್ಪಷ್ಟಪಡಿಸಿದ್ದರು.
ಸುಪ್ರೀಂಕೋರ್ಟ್ ನೇಮಕ ಮಾಡಿರುವ ಮೇಲುಸ್ತುವಾರಿ ಸಮಿತಿ ಆಗಸ್ಟ್ 4ರಂದು ಭೇಟಿ ನೀಡಿ ಜಲಾಶಯದ ಪರಿಶೀಲನೆ ನಡೆಸಿದ್ದು, ಯಾವುದೇ ರೀತಿಯ ಆತಂಕಪಡುವ ಅಗತ್ಯವಿಲ್ಲ ಎಂದು ಹೇಳಿದೆ. ಹೀಗಾಗಿ ಸುಪ್ರೀಂಕೋರ್ಟ್ ಅನುಸಾರ ನೇಮಕಗೊಂಡಿರುವ ಮೇಲುಸ್ತುವಾರಿ ಸಮಿತಿಯ ಹೇಳಿಕೆಯಿಂದಾಗಿ ತಮಿಳುನಾಡು ಸರ್ಕಾರ ಕೂಡ ನಿರಾತಂಕವಾಗಿದೆ. ಕೇರಳ ಸರ್ಕಾರ ಈ ಬಗ್ಗೆ ಯಾವುದೇ ಆತಂಕಪಡುವ ಅಗತ್ಯವಿಲ್ಲ ಎಂದು ಪತ್ರದಲ್ಲಿ ತಿಳಿಸಿದ್ದರು.