ಅಣ್ಣಾ ಹಜಾರೆ ಪ್ರಾಣತ್ಯಾಗ ಬಯಸಿದ್ದರೇ ಕೇಜ್ರಿವಾಲ್!
ಔರಂಗಾಬಾದ್, ನ 26: ದೆಹಲಿ ವಿಧಾನಸಭಾ ಚುನಾವಣೆ ಸಮೀಪಿಸುತ್ತಿದ್ದಂತೆ ಅರವಿಂದ್ ಕೇಜ್ರಿವಾಲ್ ಮತ್ತು ಅಣ್ಣಾ ಹಜಾರೆ ಬಣದ ಆರೋಪ, ಪ್ರತ್ಯಾರೋಪಗಳು ತಾರಕಕ್ಕೇರಿವೆ. ಈ ಹಿಂದೆ ಅಣ್ಣಾ ಹಜಾರೆ ಅವರ ಪ್ರಾಣ ತ್ಯಾಗವನ್ನು ಕೇಜ್ರಿವಾಲ್ ಬಯಸಿದ್ದರು ಎಂದು ಅಣ್ಣಾ ಬಣದ ಸದಸ್ಯರೊಬ್ಬರು ಗಂಭೀರ ಆರೋಪ ಮಾಡಿದ್ದಾರೆ.
2011ರಲ್ಲಿ ಭ್ರಷ್ಟಾಚಾರ ತಡೆಗಾಗಿ ಲೋಕಪಾಲ್ ಮಸೂದೆ ಜಾರಿಗೊಳಿಸುವಂತೆ ಸಾಮಾಜಿಕ ಕಾರ್ಯಕರ್ತ ಅಣ್ಣಾ ಹಜಾರೆ ಆಮರಣಾಂತ ಉಪವಾಸ ಹೋರಾಟ ಮಾಡುತ್ತಿದ್ದಾಗ ಅವರ ಪ್ರಾಣ ತ್ಯಾಗವನ್ನು ಆಮ್ ಆದ್ಮಿ ಪಕ್ಷದ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ಬಯಸಿದ್ದರೆಂದು ಅಣ್ಣಾ ಬಣದ ಸ್ವಾಮಿ ಅಗ್ನಿವೇಷ್ ಗುರುತರ ಆರೋಪ ಮಾಡಿದ್ದಾರೆ.
ದೆಹಲಿಯ ಜಂತರ್ ಮಂತರ್ ನಲ್ಲಿ ಅಣ್ಣಾ ಹಜಾರೆ ಮಸೂದೆ ಜಾರಿಗೆ ಒತ್ತಾಯಿಸಿ ಪ್ರತಿಭಟನೆ ನಡೆಸುತ್ತಿದ್ದರು. ದೇಶಾದ್ಯಂತ ಹಜಾರೆ ಪ್ರತಿಭಟನೆಗೆ ಭಾರೀ ಜನಬೆಂಬಲ ಕೂಡಾ ವ್ಯಕ್ತವಾಗಿತ್ತು.
ಜಂತರ್ ಮಂತರ್ ನಲ್ಲಿ ನಡೆಯುತ್ತಿದ್ದ ಪ್ರತಿಭಟನೆಯ ವೇಳೆ ಅಣ್ಣಾ ಹಜಾರೆಗೆ ಅರವಿಂದ್ ಕೇಜ್ರಿವಾಲ್ ಕೂಡಾ ಸಾಥ್ ನೀಡಿದ್ದರು.
ಆ ಸಮಯದಲ್ಲಿ ಅಣ್ಣಾ ಹಜಾರೆ ಪ್ರಾಣ ತ್ಯಾಗ ನಡೆಸಿದರೆ ಈ ಹೋರಾಟದ ಮುಂದಿನ ಜನ ನಾಯಕನಾಗಿ ತಾನು ಹೊರಹೊಮ್ಮ ಬಹುದು ಎನ್ನುವ ದುರಾಲೋಚನೆಯ ಕನಸನ್ನು ಕೇಜ್ರಿವಾಲ್ ಹೊಂದಿದ್ದರು ಎಂದು ಸ್ವಾಮಿ ಅಗ್ನಿವೇಷ್ ಆರೋಪಿಸಿದ್ದಾರೆ.
ಅಣ್ಣಾ ಹಜಾರೆಗೆ ಅಗ್ನಿವೇಷ್ ದುರಾಲೋಚನೆಯ ಅರಿವಿತ್ತು. ಆದರೆ ಅವರು ಅಂದು ಮೌನ ವಹಿಸಿದ್ದರು. ಅಣ್ಣಾ ಜೊತೆ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ಕೇಜ್ರಿವಾಲ್ ಕೇಂದ್ರದಲ್ಲಿ ಸಚಿವರಾಗಿದ್ದ ವಿಲಾಸ್ ರಾವ್ ದೇಶಮುಖ್ ಮೂಲಕ ಅಣ್ಣಾ ಪ್ರತಿಭಟನೆ ಹನ್ನೆರಡು ದಿನದ ನಂತರ ಮುಕ್ತಾಯ ಗೊಳ್ಳುವಂತೆ ನೋಡಿಕೊಂಡರು ಎಂದು ಅಗ್ನಿವೇಷ್ ಆರೋಪಿಸಿದ್ದಾರೆ.