ಹರಿಯಾಣದಲ್ಲಿ ಮೈತ್ರಿಗೆ ರಾಹುಲ್ಗೆ ಆಹ್ವಾನ ನೀಡಿದ ಕೇಜ್ರಿವಾಲ್
ನವದೆಹಲಿ, ಮಾರ್ಚ್ 13: ದೆಹಲಿಯಲ್ಲಿ ಎಎಪಿಯ ಮೈತ್ರಿ ಬೇಡವೆಂದಿರುವ ಕಾಂಗ್ರೆಸ್ಗೆ ಅರವಿಂದ ಕೇಜ್ರಿವಾಲ್ ಅವರು ಮತ್ತೊಂದು ಅವಕಾಶ ಕೊಟ್ಟಿದ್ದಾರೆ.
ಹರಿಯಾಣದಲ್ಲಿ ಎಎಪಿ-ಜೆಪಿಪಿ ಒಟ್ಟಿಗೆ ಸೇರಿ ಕಾಂಗ್ರೆಸ್ ಕಡೆಗೆ ಮೈತ್ರಿಯ ಹಸ್ತವನ್ನು ಕೇಜ್ರಿವಾಲ್ ಚಾಚಿದ್ದಾರೆ. ಬಿಜೆಪಿ ಸೋಲಿಸಲು ಇದು ಅವಶ್ಯಕ ಎಂದು ಅವರು ಹೇಳಿದ್ದಾರೆ.
ದೆಹಲಿಯಲ್ಲಿ ದುರಂಹಕಾರಿ ಕಾಂಗ್ರೆಸ್ಸಿಗರು ಠೇವಣಿ ಕಳೆದುಕೊಳ್ಳಲಿದ್ದಾರೆ: ಕೇಜ್ರಿವಾಲ್
ಇಂದು ಮಾಧ್ಯಮಗಳ ಜೊತೆ ಮಾತನಾಡಿರುವ ಅವರು, ಜೆಪಿಪಿ-ಎಎಪಿ ಜೊತೆ ಹರಿಯಾಣದಲ್ಲಿ ಮೈತ್ರಿ ಮಾಡಿಕೊಳ್ಳಿ ಎಂದು ನಾನು ರಾಹುಲ್ ಅವರಿಗೆ ಆಹ್ವಾನ ನೀಡುತ್ತಿದ್ದೇನೆ ಎಂದು ಕೇಜ್ರಿವಾಲ್ ಹೇಳಿದ್ದಾರೆ.
ಬಿಜೆಪಿಯನ್ನು ಸೋಲಿಸಲು ಇದು ಅವಶ್ಯಕವಾಗಿದ್ದು, ಇದರಿಂದ ನಾವು ಅವರನ್ನು ರಾಷ್ಟ್ರಮಟ್ಟದಲ್ಲಿ ಸೋಲಿಸಬಹುದಾಗಿದೆ ಎಂದಿದ್ದಾರೆ. ಆದರೆ ದೆಹಲಿಯಲ್ಲಿ ನಾವು (ಎಎಪಿ) ಕಾಂಗ್ರೆಸ್ ಇಲ್ಲದೆಯೂ ಗೆಲ್ಲಬಲ್ಲೆವು ಎಂದು ಕೇಜ್ರಿವಾಲ್ ಹೇಳಿದ್ದಾರೆ.
ದೆಹಲಿಯಲ್ಲಿ ಎಎಪಿ-ಕಾಂಗ್ರೆಸ್ ಮೈತ್ರಿಯನ್ನು ಕಾಂಗ್ರೆಸ್ ಪಕ್ಷವೇ ನಿರಾಕರಿಸಿ ಏಕಾಂಗಿಯಾಗಿ ಸ್ಪರ್ಧಿಸುತ್ತಿದೆ. ಆದರೆ ಹರಿಯಾಣದಲ್ಲಿ ಎಎಪಿಯೇ ಮೈತ್ರಿಯ ಹಸ್ತ ಚಾಚಿದೆ. ಆದರೆ ಕಾಂಗ್ರೆಸ್ ಇದನ್ನು ಒಪ್ಪಿಕೊಳ್ಳುತ್ತದೆಯೋ ಇಲ್ಲವೋ ಕಾದು ನೋಡಬೇಕಿದೆ.
ಪುಲ್ವಾಮಾ: ಮೋದಿ ಸರಕಾರದ ವಿರುದ್ದ ಕೇಜ್ರಿವಾಲ್ ಬೆಚ್ಚಿಬೀಳಿಸುವ ಹೇಳಿಕೆ
ಹರಿಯಾಣದಲ್ಲಿ 10 ಲೋಕಸಭಾ ಕ್ಷೇತ್ರಗಳಿದ್ದು, ಪ್ರಸ್ತುತ ಅಲ್ಲಿ ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದು, ಬಿಜೆಪಿ ಶಕ್ತವಾಗಿದೆ. ಕಳೆದ ಲೋಕಸಭೆ ಚುನಾವಣೆಯಲ್ಲಿ 10 ರಲ್ಲಿ ಏಳು ಸೀಟು ಬಿಜೆಪಿ ಜಯಿಸಿದ್ದರೆ, ಲೋಕದಳ ಪಕ್ಷ ಎರಡು ಹಾಗೂ ಕಾಂಗ್ರೆಸ್ ಒಂದು ಸ್ಥಾನ ಜಯಿಸಿತ್ತು.