ಮೇ 17ರಿಂದ ಕೇದಾರನಾಥ ದೇಗುಲಕ್ಕೆ ಭಕ್ತರಿಗೆ ಪ್ರವೇಶ ಮುಕ್ತ
ನವದೆಹಲಿ, ಮಾರ್ಚ್ 11: ಹಿಮಾಲಯದ ಪವಿತ್ರ ಕೇದಾರನಾಥ ದೇಗುಲವನ್ನು ಮೇ 17ರಿಂದ ಭಕ್ತರಿಗೆ ತೆರೆಯಲಾಗುತ್ತಿದೆ.
ಉತ್ತರಾಖಂಡದ ರುದ್ರ ಪ್ರಯಾಗ್ ಜಿಲ್ಲೆಯಲ್ಲಿರುವ ಕೇದಾರನಾಥ ದೇಗುಲವನ್ನು ಮೇ 17ರ ಬೆಳಿಗ್ಗೆ 5 ಗಂಟೆಗೆ ದೇಗುಲ ತೆರೆಯುತ್ತಿದ್ದು, ದೇವಸ್ಥಾನಕ್ಕೆ ಆಗಮಿಸುವ ಭಕ್ತರ ಸಂಖ್ಯೆ ಮೇಲೆ ಯಾವುದೇ ನಿರ್ಬಂಧ ಹೇರಲಾಗಿಲ್ಲ ಎಂದು ಚಾರ್ ಧಾಮ್ ದೇವಸ್ಥಾನ ನಿರ್ವಹಣಾ ಮಂಡಳಿಯ ಮುಖ್ಯಾಧಿಕಾರಿ ರವಿನಾಥ್ ರಾಮನ್ ತಿಳಿಸಿದ್ದಾರೆ.
ಮೇ.18ರಿಂದ ಬದರಿನಾಥ ದೇಗುಲ ಪುನರಾರಂಭ
ಚಳಿಗಾಲದಲ್ಲಿ ಉಖಿಮಠ್ ನಲ್ಲಿನ ದೇವರನ್ನು ಮೇ 14ರಂದು ಕೇದಾರನಾಥ ದೇಗುಲದಲ್ಲಿ ಸ್ಥಾಪಿಸಲಾಗುತ್ತಿದ್ದು, ಮೇ 17ರಿಂದ ದೇಗುಲ ಭಕ್ತರಿಗೆ ಮುಕ್ತವಾಗಿರಲಿದೆ ಎಂದು ದೇವಸ್ಥಾನ ಆಡಳಿತ ಮಂಡಳಿ ತಿಳಿಸಿದೆ.
ಉಖಿಮಠದ ಓಂಕಾರೇಶ್ವರ ದೇಗುಲದ ಜ್ಯೋತಿಷ್ಯದಂತೆ ದೇವಸ್ಥಾನ ತೆರೆಯಲು ನಿರ್ಧರಿಸಲಾಗಿದೆ. ಈ ವರ್ಷ ನಾವು ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರನ್ನು ನಿರೀಕ್ಷಿಸುತ್ತಿದ್ದೇವೆ. ಕಳೆದ ವರ್ಷ ಕೊರೊನಾದಿಂದಾಗಿ ಭಕ್ತರ ಸಂಖ್ಯೆ ಮೇಲೆ ನಿರ್ಬಂಧ ಹೇರಲಾಗಿತ್ತು. ಈ ಬಾರಿ ಅಂಥ ಯಾವ ನಿರ್ಬಂಧವೂ ಇಲ್ಲ. ಆದರೆ ಕೊರೊನಾ ಮಾರ್ಗಸೂಚಿ ಪಾಲನೆ ಬಗ್ಗೆ ನಿಗಾ ವಹಿಸಲಾಗುತ್ತದೆ ಎಂದು ರಾಮನ್ ಅವರು ತಿಳಿಸಿದ್ದಾರೆ.