ಮೋದಿ ಧ್ಯಾನ ಮಾಡಿದ ಗುಹೆಯಲ್ಲಿ ಶೌಚಾಲಯ, ಸಿಸಿ ಟಿವಿ ಕ್ಯಾಮೆರಾ, ಮಲಗುವ ಮಂಚ
Recommended Video
ಡೆಹ್ರಾಡೂನ್ (ಉತ್ತರಾಖಂಡ್), ಮೇ 19: ಪ್ರಧಾನಿ ನರೇಂದ್ರ ಮೋದಿ ಶನಿವಾರ ರಾತ್ರಿಯನ್ನು ಕಳೆದ ಗುಹೆಯು ಸಾಮಾನ್ಯವಾದದ್ದಲ್ಲ. ಸಮುದ್ರ ಮಟ್ಟದಿಂದ ಹನ್ನೆರಡು ಸಾವಿರ ಅಡಿ ಎತ್ತರದಲ್ಲಿ ಇರುವ ಕೇದಾರ್ ನಾಥ್ ಪುಣ್ಯ ಕ್ಷೇತ್ರದ ಗುಹೆಯಲ್ಲಿ ಧ್ಯಾನ ಮಾಡಿದ ಮೋದಿ ಅವರಿಗಾಗಿ ಅಲ್ಲಿ ವಿಶೇಷ ವ್ಯವಸ್ಥೆಗಳಿದ್ದವು ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.
ಬಂಡೆಗಳನ್ನು ಕತ್ತರಿಸಿ ನಿರ್ಮಿಸಿರುವ ಈ ಗುಹೆ, ಮುಖ್ಯ ದೇಗುಲದ ಮುಂಚೆಯೇ ಇದೆ. ಒಳ್ಳೆ ಬೆಳಕು, ಗುಹೆಗೆ ಹೊಂದಿಕೊಂಡಂತೆ ಶೌಚಾಲಯ, ಕಿಟಕಿ ಹಾಗೂ ಹತ್ತು ಅಡಿಗೂ ಎತ್ತರದಲ್ಲಿ ಸೀಲಿಂಗ್ ಇದೆ. ಈ ಗುಹೆಯಿಂದ ಪುರಾತನ ದೇಗುಲವು ಅದ್ಭುತವಾಗಿ ಕಾಣುತ್ತದೆ. ಶನಿವಾರದಂದು ದೇವಾಲಯದಲ್ಲಿ ಪ್ರಾರ್ಥನೆ ಸಲ್ಲಿಸಿದ ಮೋದಿ, ಅಭಿವೃದ್ಧಿ ಕಾರ್ಯಗಳ ಪರಿಶೀಲನೆ ನಡೆಸಿದ ನಂತರ ಅವರನ್ನು ಗುಹೆಗೆ ಕರೆದೊಯ್ಯಲಾಯಿತು. ಅಲ್ಲಿ ಧ್ಯಾನ ಮಾಡಲು, ರಾತ್ರಿ ಕಳೆಯಲು ನಿರ್ಧರಿಸಿದ್ದರು.
ಕೇದಾರನಾಥ ದೇಗುಲ ಅಚ್ಚಳಿಯದೆ ಉಳಿದಿದ್ದು ಹೇಗೆ?
ನೆಹರೂ ಇನ್ ಸ್ಟಿಟ್ಯೂಟ್ ಆಫ್ ಮೌಂಟನೀರಿಂಗ್ (ಎನ್ ಐಎಂ) ಅಧಿಕಾರಿಗಳ ಪ್ರಕಾರ, ಮೋದಿ ಭೇಟಿಗೂ ಮುನ್ನ ಎಲ್ಲ ವ್ಯವಸ್ಥೆ ಮಾಡಲಾಗಿತ್ತು. ವಿದ್ಯುತ್, ನೀರಿನ ವ್ಯವಸ್ಥೆ ಇತ್ತು. ಹಲವು ತಿಂಗಳ ಕಾಲ ಕಲ್ಲು ಹಾಗೂ ಬಂಡೆಗಳನ್ನು ಕತ್ತರಿಸಿ, ಕಳೆದ ವರ್ಷವೇ ಗುಹೆ ಸಿದ್ಧಪಡಿಸಲಾಗಿತ್ತು. ಆದರೆ ಅದಕ್ಕೆ ಬೀಗ ಹಾಕಲಾಗಿತ್ತು.
ಸುರಕ್ಷತಾ ಕ್ರಮದ ಉದ್ದೇಶದಿಂದ ಗುಹೆಯಲ್ಲಿ ಸಿಸಿಟಿವಿ ವ್ಯವಸ್ಥೆ ಮಾಡಲಾಗಿತ್ತು. ಗುಹೆಯ ಹೊರಗೆ ಕ್ಯಾಂಪ್ ಹಾಕಿದ್ದ ಭದ್ರತಾ ಪಡೆಗಳು ಸಿಸಿಟಿವಿ ನಿಗಾ ಮಾಡುತ್ತಿದ್ದವು. ಇನ್ನು ಜಿಲ್ಲೆಯ ಅಧಿಕಾರಿಯೊಬ್ಬರ ಪ್ರಕಾರ, ಗುಹೆಯೊಳಗೆ ಒಂದು ಬೆಡ್ ಹಾಕುವ ರೂಮ್ ಇತ್ತು. ಧ್ಯಾನಕ್ಕಾಗಿ ತೆರೆದ ಜಾಗವೊಂದಿತ್ತು.
ಕೇದಾರನಾಥದಲ್ಲಿ ಮೋದಿ ಧ್ಯಾನ, ಕಾಶಿಯಲ್ಲಿ 'ಮತಧ್ಯಾನ'
ಪ್ರಧಾನಿ ಗುಹೆ ಪ್ರವೇಶಿಸಿದ ಮೇಲೆ ಕಾವಿ ತೊಟ್ಟಿದ್ದು ಹಾಗೂ ಧ್ಯಾನ ಮಾಡುತ್ತಿದ್ದ ಅವರ ಫೋಟೋಗಳು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿದ್ದವು. ಇನ್ನೊಂದು ಫೋಟೋದಲ್ಲಿ ಮುಖ್ಯ ದೇವಾಲಯದ ಕಡೆಗೆ ಮುಖ ಮಾಡಿರುವ ನರೇಂದ್ರ ಮೋದಿ, ತಲೆ ಬಾಗಿ ನಮಸ್ಕರಿಸುತ್ತಿದ್ದದ್ದು ಕೂಡ ವೈರಲ್ ಆಗಿತ್ತು.
ಕೇದಾರನಾಥ ಗುಹೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಧ್ಯಾನ
ಕೇದಾರ್ ನಾಥ್ ದೇಗುಲದ ಮುಖ್ಯ ಅರ್ಚಕ ಭಗವತ್ ಭಗ್ವಾರಿ ಮಾತನಾಡಿ, ಕೇದಾರ್ ನಾಥ್ ದೇಗುಲದ ಸಮೀಪದ ಗುಹೆಯಲ್ಲಿ ಧ್ಯಾನ ಮಾಡುವ ಪ್ರಧಾನಿಗಳ ನಿರ್ಧಾರದಿಂದ ಲಕ್ಷಾಂತರ ಮಂದಿ ಸ್ಫೂರ್ತಿ ಪಡೆಯುತ್ತಾರೆ. ಇದು ಅದ್ಭುತ ಹಾಗೂ ಪ್ರಶಾಂತವಾದ ವಾತಾವರಣದಲ್ಲಿ ತಾವು ಕೂಡ ಧ್ಯಾನ ಮಾಡುತ್ತಾರೆ ಎಂದಿದ್ದಾರೆ.