ಕೇದಾರನಾಥದಲ್ಲಿ ಮೊದಲ ದಿನವೇ ಭಕ್ತ ಸಾಗರ: ಭಕ್ತರನ್ನು ಸ್ವಾಗತಿಸಿದ ಸಿಎಂ ಧಾಮಿ
ಡೆಹ್ರಾಡೂನ್, ಮೇ 6: ದೇಶದ ಪುರಾಣ ಪ್ರಸಿದ್ದ ದೇವಾಲಯಗಳಲ್ಲಿ ಒಂದಾದ ಉತ್ತರಾಖಂಡದಲ್ಲಿರುವ ಕೇದಾರನಾಥ ದೇವಾಲಯದ ಬಾಗಿಲನ್ನು ಆರು ತಿಂಗಳ ನಂತರ ಶುಕ್ರವಾರ (ಮೇ 6) ಮುಂಜಾನೆ 6.25ಕ್ಕೆ ತೆರೆಯಲಾಗಿದೆ. ಬಾಗಿಲು ತೆರೆಯುವ ಮುನ್ನ ಭಕ್ತರನ್ನು ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಸ್ವಾಗತಿಸಿದ್ದಾರೆ.
ದೇವಾಲಯದ ಬಾಗಿಲು ತೆರೆಯುವ ವೇಳೆ ಸಿಎಂ ಧಾಮಿ ಸೇರಿದಂತೆ ಸರಕಾರದ ಕ್ಯಾಬಿನೆಟ್ ಸಚಿವರು ಮತ್ತು ಹಿರಿಯ ಅಧಿಕಾರಿಗಳು ಅಲ್ಲಿ ಹಾಜರಿದ್ದರು. "ಚಾರ್ ಧಾಮ್ ಯಾತ್ರೆಗೆ ಬರುವ ಭಕ್ತರಿಗೆ ಸುರಕ್ಷಿತ ಪ್ರಯಾಣವನ್ನು ನಮ್ಮ ಸರಕಾರ ಖಾತ್ರಿ ಪಡಿಸುತ್ತದೆ"ಎಂದು ಸಿಎಂ ಈ ಸಂದರ್ಭದಲ್ಲಿ ಹೇಳಿದ್ದಾರೆ.
ದ್ವಾದಶ ಜ್ಯೋತಿರ್ಲಿಂಗ ದೇವಾಲಯಗಳಲ್ಲೊಂದಾದ ಕೇದಾರನಾಥ ದೇವಾಲಯದಲ್ಲಿ ಮೊದಲ ದಿನವೇ ಭಾರೀ ಸಂಖ್ಯೆಯಲ್ಲಿ ಭಕ್ತರು ಜಮಾಯಿಸಿದ್ದಾರೆ. ಕೋವಿಡ್ ಶಿಷ್ಟಾಚಾರದ ಕಾರಣಕ್ಕಾಗಿ ಬದರೀನಾಥ ಹೊರತು ಪಡಿಸಿ ಮೂರು ಕ್ಷೇತ್ರಗಳಲ್ಲಿ ಹನ್ನೆರಡು ಸಾವಿರ ಭಕ್ತರಿಗೆ ಮತ್ತು ಬದರೀನಾಥದಲ್ಲಿ ಹದಿನೈದು ಸಾವಿರ ಭಕ್ತರ ಭೇಟಿಗೆ ಅವಕಾಶ ನೀಡಲಾಗಿದೆ.
ಚಾರ್ ಧಾಮ್ ಯಾತ್ರೆಯ ಸಂಬಂಧ ಟ್ವಿಟ್ಟರ್ ಮೂಲಕ ವಿಡಿಯೋ ಬಿಡುಗಡೆ ಮಾಡಿರುವ ಸಿಎಂ ಧಾಮಿ, "ಭಗವಾನ್ ಶಿವನ ಅನುಗ್ರಹದಿಂದ ಕೇದಾರನಾಥ ದೇವಾಲಯದ ಕವಾಟು ತೆರೆಯುವ ಅವಕಾಶ ಸಿಕ್ಕಿದೆ. ಇದು ನನ್ನ ಸೌಭಾಗ್ಯ" ಎಂದು ಸಾಮಾಜಿಕ ತಾಣದಲ್ಲಿ ಬರೆದುಕೊಂಡಿದ್ದಾರೆ.
ವಿಡಿಯೋದಲ್ಲಿ ಕೇದಾರನಾಥ ಕ್ಷೇತ್ರದ ಬಗ್ಗೆ ಸಂಕ್ಷಿಪ್ತ ಮಾಹಿತಿಯನ್ನೂ ಸಿಎಂ ಧಾಮಿ ನೀಡಿದ್ದಾರೆ. ನರ ಮತ್ತು ನಾರಾಯಣರ ತಪಸ್ಸಿಗೆ ಮೆಚ್ಚಿ ಶಿವನು ಜ್ಯೋತಿರ್ಲಿಂಗದ ರೂಪದಲ್ಲಿ ಕ್ಷೇತ್ರದಲ್ಲಿ ಅವತಾರವೆತ್ತಿದ್ದಾನೆ. ಬರುವ ಭಕ್ತರನ್ನು ಎಂದೂ ಶಿವನು ನಿರಾಸೆಗೊಳಿಸುವುದಿಲ್ಲ ಎಂದು ವಿಡಿಯೋದಲ್ಲಿ ಕ್ಷೇತ್ರದ ಬಗ್ಗೆ ವಿಶ್ಲೇಷಣೆಯನ್ನು ಮಾಡಲಾಗಿದೆ.
भगवान शिव की कृपा से मुझे कल श्री केदारनाथ धाम के कपाट खुलने के शुभ अवसर पर जाने का सौभाग्य प्राप्त हो रहा है।
— Pushkar Singh Dhami (@pushkardhami) May 5, 2022
"प्रणाम आपको बारम्बार, जय हो बाबा श्री केदार"@narendramodi@JPNadda pic.twitter.com/VUNCTSHZXb
ಮೇ ಮೂರರ ಅಕ್ಷಯ ತೃತೀಯಾ ದಿನದಂದು ಚಾರ್ ಧಾಮ್ ಯಾತ್ರೆಗಳ ಪೈಕಿ ಗಂಗೋತ್ರಿ ಮತ್ತು ಯಮುನಾತ್ರಿ ಭಕ್ತರ ದರ್ಶನಕ್ಕೆ ಮುಕ್ತವಾಗಿತ್ತು. ಇನ್ನು ಕೇದಾರನಾಥ್ ಮೇ ಆರು ಮತ್ತು ಬದರೀನಾಥ್ ಮೇ ಎಂಟರಂದು ಮುಕ್ತವಾಗಲಿದೆ. ಚಾರ್ ಧಾಮ್ ಯಾತ್ರೆ ಅಕ್ಟೋಬರ್ 26ಕ್ಕೆ ಮುಕ್ತಾಯಗೊಳ್ಳಲಿದೆ.