ದೆಹಲಿ ಮದ್ಯ ನೀತಿ ಹಗರಣದಲ್ಲಿ ಕೆಸಿಆರ್ ಪುತ್ರಿ ಕವಿತಾಗೆ ಸಿಬಿಐ ಸಮನ್ಸ್: ತೆಲಂಗಾಣದಲ್ಲಿ ಭುಗಿಲೆದ್ದ ರಾಜಕೀಯ ಸಂಘರ್ಷ
ಹೈದರಾಬಾದ್, ಡಿಸೆಂಬರ್ 02: ತೆಲಂಗಾಣ ಮುಖ್ಯಮಂತ್ರಿ ಕೆ.ಚಂದ್ರಶೇಖರ್ ರಾವ್ ಅವರ ಪುತ್ರಿ ಕೆ.ಕವಿತಾ ಅವರಿಗೆ ಕೇಂದ್ರ ತನಿಖಾ ದಳ (ಸಿಬಿಐ) ಮಂಗಳವಾರ ಸಮನ್ಸ್ ಜಾರಿ ಮಾಡಿದೆ.
ದೆಹಲಿ ಮದ್ಯ ನೀತಿ ಪ್ರಕರಣದಲ್ಲಿ ಸಾಕ್ಷಿಯಾಗಿ ಹಾಜರಾಗುವಂತೆ ಸಿಬಿಐ ಸೂಚಿಸಿದೆ.
ಭಾರತ್ ಜೋಡೋ ಯಾತ್ರೆ: ರಾಹುಲ್ ಗಾಂಧಿ ಜೊತೆಗೆ ಹೆಜ್ಜೆ ಹಾಕಿದ ಇಂದಿರಾ, ಕವಿತಾ ಲಂಕೇಶ್
ವಿಧಾನ ಪರಿಷತ್ ಸದಸ್ಯೆಯಾಗಿರುವ ಕವಿತಾ ಅವರಿಗೆ ದೆಹಲಿಯ ಸಿಬಿಐ ಪ್ರಧಾನ ಕಚೇರಿ ಅಥವಾ ಹೈದರಾಬಾದ್ನ ಸಿಬಿಐ ಕಚೇರಿಯಲ್ಲಿ ವಿಚಾರಣೆಗೆ ಹಾಜರಾಗುವ ಆಯ್ಕೆಯನ್ನು ನೀಡಲಾಗಿದೆ.
ಯಾರಿಗೂ ಹೆದರುವುದಿಲ್ಲ ಎಂದ ಕವಿತಾ
ದೆಹಲಿ ಮದ್ಯ ನೀತಿ ಹಗರಣಕ್ಕೆ ಸಂಬಂಧಿಸಿದಂತೆ ಯಾವುದೇ ವಿಚಾರಣೆಗೆ ನಾನು ಹೆದರುವುದಿಲ್ಲ ಎಂದು ತಿಳಿಸಿದ್ದಾರೆ.
ಕೇಂದ್ರ ತನಿಖಾ ಸಂಸ್ಥೆಗಳು ನಡೆಸುವ ವಿಚಾರಣೆಗೆ ಸಂಪೂರ್ಣ ಸಹಕಾರ ನೀಡುವುದಾಗಿಯೂ ಅವರು ಹೇಳಿದ್ದಾರೆ.
ಈ ವಿಚಾರವಾಗಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು,'ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ರಾಜಕೀಯ ವಿರೋಧಿಗಳನ್ನು ಗುರಿಯಾಗಿಸಿಕೊಂಡು ಅಧಿಕಾರಕ್ಕೆ ಬರಲು ಇಡಿ, ಸಿಬಿಐ ಮತ್ತು ಐಟಿಯಂತಹ ಕೇಂದ್ರ ಸಂಸ್ಥೆಗಳನ್ನು ಬಳಸುವುದನ್ನು ನಿಲ್ಲಿಸಬೇಕು' ಎಂದು ತಿಳಿಸಿದ್ದಾರೆ.
'ನೀವು(ಮೋದಿ) ನನ್ನನ್ನು ಜೈಲಿಗೆ ಹಾಕಲು ಬಯಸಿದರೆ, ಅದನ್ನು ಮಾಡಿ. ನನಗೆ ಯಾವುದೇ ತೊಂದರೆ ಇಲ್ಲ. ಆದರೆ ನಾವು ಜನರಿಗಾಗಿ ಕೆಲಸ ಮಾಡುವುದನ್ನು ನಿಲ್ಲಿಸುವುದಿಲ್ಲ. ಬಿಜೆಪಿಯ ವೈಫಲ್ಯಗಳನ್ನು ಬಹಿರಂಗಪಡಿಸುತ್ತೇವೆ' ಎಂದು ಕವಿತಾ ವಾಗ್ದಾಳಿ ನಡೆಸಿದ್ದಾರೆ.
'ನೀವು ಸರ್ಕಾರವನ್ನು ಬೀಳಿಸಲು ಪಿತೂರಿ ನಡೆಸಿದ್ದೀರಿ. ನಾವು ಇದನ್ನು ಜನರ ಮುಂದೆ ಬಹಿರಂಗಪಡಿಸಿದ್ದೇವೆ. ಇದಕ್ಕೆ ಪ್ರತಿಕ್ರಿಯೆಯಾಗಿ ಇಡಿ, ಸಿಬಿಐ, ಐಟಿ ಕೇಸ್ಗಳನ್ನು ಸಚಿವರು, ಶಾಸಕರು ಮತ್ತು ಎಂಎಲ್ಸಿಗಳ ವಿರುದ್ಧ ದಾಖಲಿಸಲಾಗಿದೆ' ಎಂದು ಅವರು ಹರಿಹಾಯ್ದಿದ್ದಾರೆ.
'ನಮಗೆ ಯಾವುದೇ ಭಯವಿಲ್ಲ. ಹೆಚ್ಚೆಂದರೆ ನೀವು ಏನು ಮಾಡುತ್ತೀರಿ. ನಮ್ಮನ್ನು ಗಲ್ಲಿಗೇರಿಸುತ್ತೀರಾ? ಹೆಚ್ಚೆಂದರೆ ಜೈಲಿಗೆ ಹಾಕಬಹುದು. ಅದನ್ನು ಮಾಡಿ. ಜನರು ನಮ್ಮೊಂದಿಗೆ ಇರುವವರೆಗೆ ಮತ್ತು ನಾವು ಜನರಿಗಾಗಿ ಪ್ರಾಮಾಣಿಕವಾಗಿ ಕೆಲಸ ಮಾಡುವವರೆಗೆ ನಾವು ಭಯ ಪಡುವುದಿಲ್ಲ. ನಮಗೆ ಏನೂ ಆಗುವುದೂ ಇಲ್ಲ' ಎಂದು ಕವಿತಾ ತಿಳಿಸಿದ್ದಾರೆ.