2024ರ ಚುನಾವಣೆ; ತೆಲಂಗಾಣ ರಾಷ್ಟ್ರ ಸಮಿತಿ ಇನ್ಮುಂದೆ ಭಾರತ್ ರಾಷ್ಟ್ರ ಸಮಿತಿ!
ಹೈದರಾಬಾದ್, ಅ.05: ತೆಲಂಗಾಣ ಮುಖ್ಯಮಂತ್ರಿ ಕೆ ಚಂದ್ರಶೇಖರ್ ರಾವ್ (ಕೆಸಿಆರ್) ಬುಧವಾರ ತಮ್ಮ ತೆಲಂಗಾಣ ರಾಷ್ಟ್ರ ಸಮಿತಿಯನ್ನು "ಭಾರತ್ ರಾಷ್ಟ್ರ ಸಮಿತಿ" ಎಂದು ಮರುನಾಮಕರಣ ಮಾಡುವ ಮೂಲಕ ತಮ್ಮ ಹೊಸ ಪಕ್ಷವನ್ನು ಘೋಷಿಸಿದ್ದಾರೆ.
ಕಳೆದ ಹಲವು ತಿಂಗಳುಗಳಿಂದ ಕೆಸಿಆರ್ ತಾನು ರಾಷ್ಟ್ರೀಯ ನಾಯಕ ಎಂದು ಬಿಜೆಪಿಯೇತರ ಆಡಳಿತವಿರುವ ಮತ್ತು ಬಿಜೆಪಿ ವಿರೋಧಿ ನಾಯಕರನ್ನು ಭೇಟಿ ಮಾಡಲು ರಾಜ್ಯ ಪ್ರವಾಸ ಮಾಡುತ್ತಿದ್ದಾರೆ.
ಹೈದರಾಬಾದ್: ರಾಷ್ಟ್ರೀಯ ಪಕ್ಷ ಘೋಷಿಸಲಿರುವ ಕೆಸಿಆರ್ಗೆ ಕುಮಾರಸ್ವಾಮಿ, ರೇವಣ್ಣ ಸಾಥ್
ಮುಂಬರುವ ರಾಷ್ಟೀಯ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು 'ಮಿಷನ್ 2024' ಕ್ಕೆ ಸಿದ್ಧರಾಗಿರುವ ಕೆ ಚಂದ್ರಶೇಖರ್ ರಾವ್ ತಮ್ಮ ಪಕ್ಷ ತೆಲಂಗಾಣ ರಾಷ್ಟ್ರ ಸಮಿತಿಯನ್ನು "ಭಾರತ್ ರಾಷ್ಟ್ರ ಸಮಿತಿ" ಎಂದು ಮರುನಾಮಕರಣ ಮಾಡಿದ್ದಾರೆ.
ಟಿಆರ್ಎಸ್ ಸಾಮಾನ್ಯ ಸಭೆಯಲ್ಲಿ ಮರುನಾಮಕರಣಕ್ಕೆ ನಿರ್ಧಾರ
ಬುಧವಾರ ಹೈದರಾಬಾದ್ನಲ್ಲಿ ನಡೆದ ಪಕ್ಷದ ಸಾಮಾನ್ಯ ಸಭೆಯಲ್ಲಿ ತೆಲಂಗಾಣ ರಾಷ್ಟ್ರ ಸಮಿತಿಯನ್ನು ಭಾರತೀಯ ರಾಷ್ಟ್ರ ಸಮಿತಿ ಎಂದು ಮರುನಾಮಕರಣ ಮಾಡಲು ನಿರ್ಣಯವನ್ನು ಅಂಗೀಕರಿಸಲಾಗಿದೆ. ನಿರ್ಣಯ ಅಂಗೀಕಾರದ ನಂತರ ಮುಖ್ಯಮಂತ್ರಿ ಕೆಸಿಆರ್ ಅಧಿಕೃತ ಘೋಷಣೆ ಮಾಡಿದ್ದಾರೆ.
ಪಕ್ಷದ ಸಂವಿಧಾನವನ್ನು ತಿದ್ದುಪಡಿ ಮಾಡಲಾಗಿದ್ದು, ಟಿಆರ್ಎಸ್ನಿಂದ ಬಿಆರ್ಎಸ್ ಹೆಸರನ್ನು ಬದಲಾಯಿಸಿರುವುದನ್ನು ಅಂಗೀಕರಿಸುವಂತೆ ಭಾರತೀಯ ಚುನಾವಣಾ ಆಯೋಗಕ್ಕೆ ಪತ್ರವನ್ನು ಕಳುಹಿಸಲಾಗಿದೆ.
ವಿಜಯದಶಮಿ ದಿನದಂದು ರಾಷ್ಟ್ರೀಯ ಪಕ್ಷ ಘೋಷಿಸಿದ ಕೆಸಿಆರ್
2024 ರ ಲೋಕಸಭಾ ಚುನಾವಣೆಗೆ ಮುಂಚಿತವಾಗಿ, ಮುಖ್ಯಮಂತ್ರಿ ಕೆ. ಚಂದ್ರಶೇಖರ ರಾವ್ ಅವರು ಬುಧವಾರ ರಾಷ್ಟ್ರೀಯ ರಾಜಕಾರಣಕ್ಕೆ ತಮ್ಮ ಪ್ರವೇಶವನ್ನು ಘೋಷಿಸಿದರು. ವಿಜಯದಶಮಿ ಆಚರಣೆಯ ನಡುವೆ ತೆಲಂಗಾಣ ಭವನದಲ್ಲಿ ನಡೆದ ಟಿಆರ್ಎಸ್ ಪಕ್ಷದ ಸಾಮಾನ್ಯ ಸಭೆಯಲ್ಲಿ ಸರ್ವಾನುಮತದ ನಿರ್ಣಯವನ್ನು ಅಂಗೀಕರಿಸಲಾಯಿತು.
ಇದಕ್ಕೂ ಮುನ್ನ ವಿಜಯದಶಮಿ ನಿಮಿತ್ತ ಪ್ರಗತಿ ಭವನದಲ್ಲಿ ಕುಟುಂಬ ಸದಸ್ಯರೊಂದಿಗೆ ಸಿಎಂ ಕೆಸಿಆರ್ ಪೂಜೆ ಸಲ್ಲಿಸಿದರು. ಬಿಜೆಪಿ ವಿರುದ್ಧ ಒಗ್ಗಟ್ಟಿನ ಹೋರಾಟ ನಡೆಸಲು ಪ್ರತಿಪಕ್ಷಗಳು ಪ್ರಯತ್ನಿಸುತ್ತಿರುವ ಹಿನ್ನೆಲೆಯಲ್ಲಿ ರಾವ್ ಬುಧವಾರ ಈ ಘೋಷಣೆ ಮಾಡಿದ್ದಾರೆ.
20 ಶಾಸಕರೊಂದಿಗೆ ಕಾರ್ಯಕ್ರಮಕ್ಕೆ ಹಾಜರಾದ ಎಚ್.ಡಿ ಕುಮಾರಸ್ವಾಮಿ
ತೆಲಂಗಾಣ ರಾಷ್ಟ್ರ ಸಮಿತಿ ಅಧ್ಯಕ್ಷ ಮತ್ತು ಸಿಎಂ ಕೆಸಿಆರ್ ಅವರ ಆಹ್ವಾನದ ಮೇರೆಗೆ ಮುಖ್ಯ ಅತಿಥಿಗಳಾಗಿ ಜನತಾ ದಳ (ಎಸ್) ಮುಖ್ಯಸ್ಥ ಎಚ್.ಡಿ. ಕುಮಾರಸ್ವಾಮಿ, ಶಾಸಕ ಎಚ್.ಡಿ ರೇವಣ್ಣ, ಸಾ .ರಾ ಮಹೇಶ್ ಸೇರಿದಂತೆ 20 ಶಾಸಕರು ಹೈದರಾಬಾದ್ಗೆ ಮಂಗಳವಾರವೇ ತೆರಳಿದ್ದಾರೆ.
ಎಚ್.ಡಿ. ಕುಮಾರಸ್ವಾಮಿ ಜೊತೆಗೆ ಅವರ ಪುತ್ರ ನಿಖಿಲ್ ಕುಮಾರಸ್ವಾಮಿ ಕೂಡ ಹೈದರಾಬಾದ್ಗೆ ತೆರಳಿದ್ದಾರೆ. ಬೆಳಗಿನ ಉಪಹಾರದ ವೇಳೆ ಹಲವು ರೈತ ಸಂಘಗಳ ಮುಖಂಡರುಗಳು ಸಹ ಮುಖ್ಯಮಂತ್ರಿಗಳ ಜೊತೆಗಿದ್ದರು.
ಪಕ್ಷದ ನಿರ್ಧಾರಕ್ಕೆ ಕೆಸಿಆರ್ ಬೆಂಬಲಿಗರ ಸಂಭ್ರಮಾಚರಣೆ
ಇನ್ನು, ಜೆಡಿಎಸ್ ನಾಯಕರ ಜೊತೆ ಜೊತೆಗೆ ವಿದುತಲೈ ಚಿರುತೈಗಲ್ ಕಚ್ಚಿ ಸಂಸ್ಥಾಪಕ ತೊಲ್ಕಪ್ಪಿಯನ್ ತಿರುಮಾವಳವನ್ ಅವರು ತಮಿಳುನಾಡಿನ ತಮ್ಮ ಬೆಂಬಲಿಗರೊಂದಿಗೆ ಕಾರ್ಯಕ್ರಮಕ್ಕೆ ಹಾಜರಾಗಿದ್ದಾರೆ.
ಟಿಆರ್ಎಸ್ನ ಉದ್ದೇಶವು "ಪ್ರತ್ಯೇಕ ತೆಲಂಗಾಣ ರಾಜ್ಯ ರಚನೆ ಮತ್ತು ವಿವಿಧ ಅಭಿವೃದ್ಧಿ ಮತ್ತು ಕಲ್ಯಾಣ ಕಾರ್ಯಕ್ರಮಗಳಲ್ಲಿ ದೇಶದ ನಂಬರ್-1 ರಾಜ್ಯವನ್ನಾಗಿ ಮಾಡುವುದರೊಂದಿಗೆ ಸಾಧಿಸಿದೆ" ಎಂದು ಸಿಎಂ ಹೇಳಿದ್ದಾರೆ.
ಬಹು ನಿರೀಕ್ಷಿತ ಘೋಷಣೆಯ ನಂತರ, ಪಕ್ಷದ ಕಾರ್ಯಕರ್ತರು ಪಟಾಕಿಗಳನ್ನು ಸಿಡಿಸಿ ಸಂಭ್ರಮಾಚರಣೆ ಮಾಡಿದ್ದಾರೆ. "ದೇಶ ಕಾ ನೇತಾ ಕೆಸಿಆರ್" ಘೋಷಣೆಗಳನ್ನು ಕೂಗಿ, ಟಿಆರ್ಎಸ್ ಮುಖ್ಯಸ್ಥರನ್ನು ರಾಷ್ಟ್ರೀಯ ನಾಯಕ ಎಂದು ಶ್ಲಾಘಿಸಿದ್ದಾರೆ.
ಇನ್ನು ಪಕ್ಷ ಘೋಷಣೆ ಬೆನ್ನಲ್ಲೇ "ಕೆಸಿಆರ್ ಗುರಿ ಕಲ್ಯಾಣ ಭಾರತ" ಎಂಬ ವಿಡಿಯೋಗಳನ್ನು ಬಿಡುಗಡೆ ಮಾಡಲಾಗಿದೆ. ಇದರಲ್ಲಿ ಉತ್ತರ ಭಾರತದ ರೈತರು ತಮ್ಮ ಕಷ್ಟಗಳನ್ನು ಹೇಳಿಕೊಂಡು ಚಂದ್ರಶೇಖರ್ ರಾವ್ ಅವರ ಜನಪರ ಯೋಜನೆಗಳನ್ನು ಹೊಗಳುವ ಮಾತುಗಳಿವೆ.