ಕಾಶ್ಮೀರದ ಕೇಸರಿ, ಕಾಫಿ, ಶಾಲನ್ನು ನೆನೆದ ಪ್ರಧಾನಿ ನರೇಂದ್ರ ಮೋದಿ
ನವದೆಹಲಿ, ಆಗಸ್ಟ್ 8: ಕಾಶ್ಮೀರದ ಕೇಸರಿ ಅಥವಾ ಕಾಫಿಯ ರುಚಿ, ಸೇಬಿನ ಸಿಹಿ ಅಥವಾ ಅಪ್ರಿಕಾಟ್ ನ ಸ್ವಾದ, ಕಾಶ್ಮೀರದ ಶಾಲು ಅಥವಾ ಕಲೆ, ಲಡಾಖ್ ನ ಸಾವಯವ ಉತ್ಪನ್ನಗಳು ಅಥವಾ ಆಯುರ್ವೇದ ಔಷಧಗಳು ಇವೆಲ್ಲವೂ ಜಗತ್ತಿನಾದ್ಯಂತ ಪಸರಿಸಬೇಕಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಗುರುವಾರ ದೇಶವನ್ನು ಉದ್ದೇಶಿಸಿ ಮಾತನಾಡುವ ವೇಳೆ ಹೇಳಿದರು.
ಇದು ದೇಶವಾಸಿಗಳಿಗಿಂತ ಕಣಿವೆ ಮಂದಿಯನ್ನೇ ಟಾರ್ಗೆಟ್ ಮಾಡಿದ ಭಾಷಣ
ಲಡಾಖ್ ಅನ್ನು ಕೇಂದ್ರಾಡಳಿತ ಪ್ರದೇಶ ಎಂದು ಘೋಷಣೆ ಮಾಡಿದ ಮೇಲೆ ಅಲ್ಲಿನ ಜನರ ಅಭಿವೃದ್ಧಿ ಮಾಡುವುದು ಭಾರತ ಸರಕಾರದ ವಿಶೇಷ ಜವಾಬ್ದಾರಿ ಎಂದು ಅವರು ಹೇಳಿದರು. "ಸ್ಥಳೀಯ ಪ್ರತಿನಿಧಿಗಳು, ಲಡಾಖ್ ಮತ್ತು ಕಾರ್ಗಿಲ್ ನ ಅಭಿವೃದ್ಧಿ ಸಮಿತಿಗಳು ಕೇಂದ್ರ ಸರಕಾರದ ಎಲ್ಲ ಅಭಿವೃದ್ಧಿ ಯೋಜನೆಗಳನ್ನು ಶೀಘ್ರವಾಗಿ ಪಡೆಯಬಹುದು" ಎಂದು ಪ್ರಧಾನಿ ಹೇಳಿದರು.
ಲಡಾಖ್ ಗೆ ಅತಿ ದೊಡ್ಡದಾದ ಆಧ್ಯಾತ್ಮಿಕ ಪ್ರವಾಸಿ ಕೇಂದ್ರ ಆಗುವ, ಸಾಹಸ ಹಾಗೂ ಪರಿಸರ ಪ್ರವಾಸಿ ಕೇಂದ್ರ ಆಗುವ ಸಾಮರ್ಥ್ಯ ಇದೆ. ಇದೀಗ ಯಾವುದೇ ತಾರತಮ್ಯ ಇಲ್ಲದೆ ಆ ಸಾಮರ್ಥ್ಯ ಬಳಸಿಕೊಳ್ಳುವ ಅವಕಾಶ ಇದೆ. ರಾಷ್ಟ್ರೀಯ ಹಿತಾಸಕ್ತಿಯನ್ನು ಗಣನೆಗೆ ತೆಗೆದುಕೊಂಡು, ಜಮ್ಮು- ಕಾಶ್ಮೀರ, ಲಡಾಖ್ ಗೆ ಹೊಸ ದಿಕ್ಕು ತೋರಿಸುವುದಕ್ಕೆ ನೆರವಾಗಿ ಎಂದು ಮನವಿ ಮಾಡಿದರು.