ಕಾಶ್ಮೀರ, ಕಾಶ್ಮೀರಿಗಳದ್ದೇ ಹೊರತು ಭಾರತ ಅಥವಾ ಪಾಕಿಸ್ತಾನದ್ದಲ್ಲ: ಅಫ್ರಿದಿ
ನವದೆಹಲಿ, ಏಪ್ರಿಲ್ 30: ಕಾಶ್ಮೀರದ ವಿಚಾರಕ್ಕೆ ಸಂಬಂಧಿಸಿದಂತೆ ಹಲವು ಬಾರಿ ವಿವಾದಾತ್ಮಕ ಹೇಳಿಕೆ ನೀಡಿದ್ದ ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಶಾಹಿದ್ ಅಫ್ರಿದಿ, ಮತ್ತೆ ಸುದ್ದಿಯಲ್ಲಿದ್ದಾರೆ.
ಕಾಶ್ಮೀರ ಕಣಿವೆಯು ಭಾರತಕ್ಕೆ ಸೇರಿದ್ದಲ್ಲ. ಪಾಕಿಸ್ತಾನಕ್ಕೂ ಸೇರಿದ್ದಲ್ಲ. ಅದು ಆ ಕಣಿವೆ ಭಾಗದ ಜನರಿಗೆ ಸೇರಿದ್ದು ಎಂದು ಹೇಳಿದ್ದಾರೆ.
ನಾಲ್ಕು ಪ್ರಾಂತ್ಯವನ್ನೇ ನಿಭಾಯಿಸಲಾಗುತ್ತಿಲ್ಲ, ಕಾಶ್ಮೀರ ಬೇಕೇ?: ಅಫ್ರಿದಿ ಪ್ರಶ್ನೆ
'ಗೇಮ್ ಚೇಂಜರ್' ಎಂಬ ಶೀರ್ಷಿಕೆಯ ತಮ್ಮ ಜೀವನಚರಿತ್ರೆಯ ಪುಸ್ತಕದಲ್ಲಿ ಅಫ್ರಿದಿ, ಕಾಶ್ಮೀರ ವಿಚಾರದ ಕುರಿತು ಪ್ರಸ್ತಾಪಿಸಿದ್ದಾರೆ.
'ಕಾಶ್ಮೀರವು ಕಾಶ್ಮೀರಿಗಳಿಗೆ ಸೇರಿದ್ದು. ಅದು ಭಾರತೀಯರಿಗಲ್ಲ. ಪಾಕಿಸ್ತಾನಿಯರಿಗೂ ಅಲ್ಲ. ಆ ಚರ್ಚೆ ಬಳಿಕ ಬರುತ್ತದೆ. ಆದರೆ, ಮೊಟ್ಟಮೊದಲಿಗೆ ಕಾಶ್ಮೀರವು ಕಾಶ್ಮೀರದ ಜನರಿಗೇ ಸೇರಿರುವುದು' ಎಂದು ಅಫ್ರಿದಿ ಹೇಳಿದ್ದಾರೆ.
ಭಾರತ ಮತ್ತು ಪಾಕಿಸ್ತಾನ ನಡುವಿನ ಶಾಂತಿ ಮಾತುಕತೆಯು ಕಾಶ್ಮೀರ ವಿವಾದಕ್ಕಿಂತಲೂ ಸಂಪೂರ್ಣ ವಿಭಿನ್ನ ವಾದವಾಗಿದೆ ಎಂದಿದ್ದಾರೆ. ಪಾಕ್ ಪ್ರಧಾನಿ ಇಮ್ರಾನ್ ಖಾನ್ ಅವರನ್ನು ಹೊಗಳಿರುವ ಅಫ್ರಿದಿ, ಅವರ ನಯಾ ಪಾಕಿಸ್ತಾನ ಪರಿಕಲ್ಪನೆಯ ಬಹುದೊಡ್ಡ ಅಭಿಮಾನಿ ಎಂದಿದ್ದಾರೆ.
ಕಾಶ್ಮೀರವನ್ನು ಪಾಕ್ ಗೆ ನೋಡಿಕೊಳ್ಳಲು ಆಗಲ್ಲ ಎಂಬ ಮಾತು ಸರಿಯಿದೆ: ಸಿಂಗ್
'ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಅವರು ಕರ್ತಾರ್ಪುರ ಕಾರಿಡಾರ್ ತೆರೆಯುತ್ತಿರುವುದು, ಭಾರತೀಯ ವಾಯುಪಡೆಯ ಪೈಲಟ್ಅನ್ನು ಬಿಡುಗಡೆ ಮಾಡಿದ್ದು ಮುಂತಾದ ಶಾಂತಿ ನಡೆಗಳನ್ನು ಅನುಸರಿಸಿದ್ದಾರೆ. ಭಾರತದೊಂದಿಗೆ ಶಾಂತಿಯುತ ಸಂಬಂಧ ಅಗತ್ಯವಾಗಿದೆ. ಎರಡೂ ದೇಶಗಳು, ಉಪಖಂಡದ ಪ್ರದೇಶ ಕೂಡ ಇದರಿಂದ ಸಮೃದ್ಧಗೊಳ್ಳುತ್ತದೆ' ಎಂದು ಅಫ್ರಿದಿ ಬರೆದಿದ್ದಾರೆ.
'ಆದರೆ, ಕಾಶ್ಮೀರದ ವಿಚಾರದಲ್ಲಿ ಇಮ್ರಾನ್ ಖಾನ್ ಇನ್ನೂ ಹೆಚ್ಚಿನ ಕೆಲಸ ಮಾಡಬೇಕಿದೆ. ನಾವು ಆ ವಿವಾದವನ್ನು ಬಗೆಹರಿಸಲೇಬೇಕು. ನಾವು ಕಾಶ್ಮೀರದ ಜನತೆಯನ್ನು ಉಳಿಸಬೇಕು ಮತ್ತು ಶಾಂತಿ ಪ್ರಕ್ರಿಯೆಯಲ್ಲಿ ನಮ್ಮನ್ನು ತೊಡಗಿಸಿಕೊಳ್ಳಬೇಕು. ಕಾಶ್ಮೀರಿಗಳಿಗಿಂತ ಹೆಚ್ಚು ಸಂಕಷ್ಟಕ್ಕೆ ಒಳಗಾದವರು ಅಥವಾ ಪರದಾಡಿದವರು ಭಾರತ ಉಪಖಂಡದಲ್ಲಿ ಬೇರೆ ಯಾರೂ ಇಲ್ಲ' ಎಂದು ಹೇಳಿದ್ದಾರೆ.
'ಈ ಪ್ರದೇಶವನ್ನು ಕಾವಲು ಕಾಯಲು ಸಾಕಷ್ಟು ಸಂಪನ್ಮೂಲವನ್ನು ಬಳಸಲಾಗಿದೆ. ಗಡಿ ನಿಯಂತ್ರಣ ರೇಖೆಯಲ್ಲಿ ಸಾಕಷ್ಟು ನೀತಿ ರೂಪಿಸಲಾಗಿದೆ. ಕಾಶ್ಮೀರ ವಿವಾದವನ್ನು ಭಾರತ ಮತ್ತು ಪಾಕಿಸ್ತಾನವು ಕಾಶ್ಮೀರಿಗಳದ್ದೇ ನೇತೃತ್ವದ ಶಾಂತಿ ಪ್ರಕ್ರಿಯೆಯ ಮೂಲಕ ಬಗೆಹರಿಸಿದರೆ ಅನೇಕರ ಬಾಯಿಗೆ ಆಹಾರ ನೀಡಬಹುದು, ಅನೇಕ ಮನಸ್ಸುಗಳನ್ನು ಪೋಷಿಸಬಹುದು' ಎಂದು ಅಭಿಪ್ರಾಯಪಟ್ಟಿದ್ದಾರೆ.
ಇಮ್ರಾನ್ ಖಾನ್ ಅವರು ನರೇಂದ್ರ ಮೋದಿ ಅವರಿಗಿಂತಲೂ ಹೆಚ್ಚು ಹೊಂದಾಣಿಕೆ ಸ್ವಭಾವ ಹೊಂದಿದ್ದಾರೆ. ಅದನ್ನು ಅವರು ಈಗಾಗಲೇ ಸಾಬೀತುಪಡಿಸಿದ್ದಾರೆ ಎಂದು ಅಫ್ರಿದಿ ಬರೆದಿದ್ದಾರೆ.
ಪತ್ರಕರ್ತ ವಹಾತ್ ಎಸ್ ಖಾನ್ ಅವರ ಕತೆಗೂಡಿ ಅಫ್ರಿದಿ ತಮ್ಮ ಜೀವನ ಚರಿತ್ರೆ ಬರೆದಿದ್ದಾರೆ. ಇದನ್ನು ಹಾರ್ಪರ್ ಕೊಲಿನ್ಸ್ ಇಂಡಿಯಾ ಪ್ರಕಟಿಸಿದೆ.