ಕಾರ್ತಿ ಚಿದಂಬರಂ ಜಾಮೀನು ಅರ್ಜಿ ವಿಚಾರಣೆಯ ರೋಚಕ ಘಟ್ಟಗಳು
ದೆಹಲಿ, ಮಾರ್ಚ್ 1: ಇಂದು ಹಲವು ರೋಚಕ, ಕುತೂಹಲಕಾರಿ ಅಂಶಗಳಿಗೆ ಪಟಿಯಾಲಾ ಹೌಸ್ ಕೋರ್ಟ್ ಸಾಕ್ಷಿಯಾಯಿತು. ಇದಕ್ಕೆ ಕಾರಣವಾಗಿದ್ದು ಕಾರ್ತಿ ಚಿದಂಬರಂ ಅವರ ಜಾಮೀನು ಅರ್ಜಿಯ ವಿಚಾರಣೆ.
ಕಾರ್ತಿ ಚಿದಂಬರಂಗೆ ತನ್ನ ಪೋಷಕರನ್ನು ಭೇಟಿಯಾಗಲು ನ್ಯಾಯಾಲಯವು ಕೋರ್ಟ್ ಹಾಲ್ ನಲ್ಲಿ ಅವಕಾಶ ನೀಡಿತು. ಆದರೆ ತನಿಖಾಧಿಕಾರಿಯ ಸಮ್ಮುಖದಲ್ಲಿ ತಂದೆ ಪಿ. ಚಿದಂಬರಂ ಮತ್ತು ತಾಯಿ ನಳಿನಿ ಚಿದಂಬರಂ ಜತೆ ಮಾತುಕತೆ ನಡೆಸಬಹುದು ಎಂದು ನ್ಯಾಯಾಧೀಶರು ಸೂಚನೆ ನೀಡಿದರು.
'ನಿನಗಾಗಿ ನಾನಿದ್ದೇನೆ'
ಲಂಡನ್ ನಿಂದ ಬಂದ ಮಾಜಿ ಕೇಂದ್ರ ಸಚಿವ ಪಿ. ಚಿದಂಬರಂ ನೇರವಾಗಿ ನ್ಯಾಯಾಲಯಕ್ಕೆ ತೆರಳಿದರು. ತಮ್ಮ ಮಗನ ಜತೆ ಸಣ್ಣ ಮಾತುಕತೆ ನಡೆಸಿದ ಅವರು "ಏನೂ ಯೋಜನೆ ಮಾಡಬೇಡ. ನಿನಗಾಗಿ ನಾನಿದ್ದೇನೆ. ಗಟ್ಟಿಯಾಗಿರು," ಎಂದು ಹೇಳಿದರು.
ಆಹಾರ ಚೆನ್ನಾಗಿಲ್ಲ
ಕೋರ್ಟ್ ಹಾಲ್ ಪ್ರವೇಶಿಸುತ್ತಿದ್ದಂತೆ ಸಿಬಿಐ ವಕೀಲರಿಗೆ ಕಾರ್ತಿ ಚಿದಂಬರಂ ನನಗೆ ಆಹಾರ ಇಷ್ಟವಾಗುತ್ತಿಲ್ಲ. ನನಗೆ ನೀಡಿದ ಆಹಾರದ ಗುಣಮಟ್ಟ ಕೆಟ್ಟದಾಗಿತ್ತು ಎಂದು ದೂರಿತ್ತರು.
ನಮ್ಮ ವಶದಲ್ಲಿದ್ದೀರಿ
ಕೋರ್ಟ್ ಹಾಲ್ ನಲ್ಲಿ ತಮ್ಮ ಗೆಳೆಯರೊಬ್ಬರ ಜತೆ ಕಾರ್ತಿ ಚಿದಂಬರಂ ಮಾತನಾಡಲು ಮುಂದಾದರು. ಈ ಸಂದರ್ಭ ಅವರನ್ನು ಸಿಬಿಐ ಅಧಿಕಾರಿಗಳು ತಡೆದರು. ಮಾತ್ರವಲ್ಲ ಇಂಗ್ಲೀಷ್ ನಲ್ಲಿ ಮಾತನಾಡಿ, ತಮಿಳಿನಲ್ಲಿ ಅಲ್ಲ ಎಂದು ಅಧಿಕಾರಿ ಕಾರ್ತಿಗೆ ಎಚ್ಚರಿಕೆ ನೀಡಿದರು. ಇದಕ್ಕೆ ಪ್ರತ್ಯುತ್ತರ ನೀಡಿದ ಕಾರ್ತಿ, "ನೀವು ನನ್ನ ಸುತ್ತ ಮುತ್ತಲಿರುವಾಗಲೂ ಇಂಗ್ಲೀಷ್ ನಲ್ಲಿ ಮಾತನಾಡಬೇಕು," ಎಂದು ಹೇಳಿದರು. ಇದಕ್ಕೆ ಕೆರಳಿದ ಅಧಿಕಾರಿ, "ನೀವು ನಮ್ಮ ಕಸ್ಟಡಿಯಲ್ಲಿದ್ದೀರಿ, ನಾವು ನಿಮ್ಮ ಕಸ್ಟಡಿಯಲ್ಲಿರುವುದಲ್ಲ," ಎಂದರು.
ಲಾಯರ್ ಭೇಟಿಗೆ ಅವಕಾಶ
ಪ್ರತಿ ದಿನ ಬೆಳಗ್ಗೆ 1 ಗಂಟೆ ಮತ್ತು ಸಂಜೆ ಒಂದು ಗಂಟೆ ತನ್ನ ವಕೀಲರನ್ನು ಕಾರ್ತಿ ಚಿದಂಬರಂ ಕಸ್ಟಡಿಯಲ್ಲಿ ಭೇಟಿಯಾಗಬಹುದು ಎಂದು ನ್ಯಾಯಾಲಯ ಆದೇಶ ನೀಡಿದೆ. ಆದರೆ ಮನೆ ಊಟ ನೀಡಬಾರದು ಎಂದು ಖಡಕ್ ಸೂಚನೆ ನೀಡಿದೆ.