ಕರ್ತರ್ ಪುರ್ ಕಾರಿಡಾರ್: ಎರಡು ಷರತ್ತಿಗೆ ಒಪ್ಪದ ಪಾಕಿಸ್ತಾನ
ನವದೆಹಲಿ, ಸೆಪ್ಟೆಂಬರ್ 4: ಭಾರತ ಮತ್ತು ಪಾಕಿಸ್ತಾನ ಮಧ್ಯೆ ಬುಧವಾರ ಕರ್ತರ್ ಪುರ್ ಒಪ್ಪಂದದ ವಿಚಾರವಾಗಿ ಅಂತಿಮ ತೀರ್ಮಾನಕ್ಕೆ ಬರಲು ಸಾಧ್ಯವಾಗಿಲ್ಲ. ಪಾಕಿಸ್ತಾನವು ಮುಂದಿಟ್ಟ ಎರಡು ಬೇಡಿಕೆಗಳನ್ನು ಭಾರತವು ತಿರಸ್ಕರಿಸಿದೆ. ಕರ್ತರ್ ಪುರ್ ಸಾಹಿಬ್ ಗುರ್ ದ್ವಾರಕ್ಕೆ ಭೇಟಿ ನೀಡುವ ಯಾತ್ರಾರ್ಥಿಗಳಿಗೆ ಸೇವಾ ಶುಲ್ಕ ವಿಧಿಸುವ ಪಾಕಿಸ್ತಾನದ ಸೂಚನೆಗೆ ಒಪ್ಪಿಗೆ ನೀಡಿಲ್ಲ.
ಗುರ್ ದ್ವಾರದ ಆವರಣದಲ್ಲಿ ಭಾರತದ ದೂತಾವಾಸ ಅಥವಾ ಶಿಷ್ಟಾಚಾರ ಅಧಿಕಾರಿಗಳು ಇರಲು ಪಾಕಿಸ್ತಾನ ಒಪ್ಪಲಿಲ್ಲ. ಈ ಎರಡು ಷರತ್ತುಗಳು ಭಾರತದ ನಿಯೋಗಕ್ಕೆ ಒಪ್ಪಿಗೆಯಾಗಲಿಲ್ಲ.
ಸಿಖ್ಖರಿಗೆ ಇಮ್ರಾನ್ ಖಾನ್ ನೀಡಿದ ಭರವಸೆ ಏನು?
ಭಾರತ ಹಾಗೂ ಪಾಕಿಸ್ತಾನ ನಿಯೋಗದ ಮಧ್ಯೆ ಮೂರನೇ ಸುತ್ತಿನ ಮಾತುಕತೆ ನಡೆಯಬೇಕಿದ್ದು, ಸಿಖ್ ಯಾತ್ರಾರ್ಥಿಗಳ ಪ್ರವೇಶಕ್ಕಾಗಿ ಕರ್ತರ್ ಪುರ್ ಕಾರಿಡಾರ್ ಒಪ್ಪಂದ ಅಂತಿಮಗೊಳ್ಳಬೇಕಿದೆ ಎಂದು ಬುಧವಾರ ಅಧಿಕಾರಿಗಳು ತಿಳಿಸಿದ್ದಾರೆ. ಇಪ್ಪತ್ತು ಸದಸ್ಯರನ್ನು ಒಳಗೊಂಡ ಪಾಕಿಸ್ತಾನಿ ನಿಯೋಗವು ಭಾರತಕ್ಕೆ ಬಂದು ಅಮೃತ್ ಸರ್ ನ ಅಟ್ಟಾರಿಯಲ್ಲಿ ಜಂಟಿ ಕಾರ್ಯದರ್ಶಿಗಳ ಮಟ್ಟದಲ್ಲಿ ಸಭೆ ನಡೆಯಿತು.
ಈ ಕಾರಿಡಾರ್ ಕರ್ತರ್ ಪುರ್ ನಲ್ಲಿ ಇರುವ ದರ್ಬಾರ್ ಸಾಹಿಬ್ ಜತೆಗೆ ಪಂಜಾಬ್ ನ ಗುರ್ ದಾಸ್ ಪುರ್ ನಲ್ಲಿ ಇರುವ ಡೇರಾ ಬಾಬಾ ನಾನಕ್ ಅನ್ನು ಸಂಪರ್ಕಿಸುತ್ತದೆ. ಈ ಕಾರಿಡಾರ್ ಪೂರ್ಣಗೊಂಡರೆ ಭಾರತೀಯ ಯಾತ್ರಾರ್ಥಿಗಳಿಗೆ ವೀಸಾ ಇಲ್ಲದೆಯೇ, ಪರವಾನಗಿ ಮಾತ್ರ ಪಡೆದು, ಕರ್ತರ್ ಪುರ್ ಸಾಹಿಬ್ ಗೆ ಭೇಟಿ ನೀಡಬಹುದು. ಇದನ್ನು ಸಿಖ್ ಧರ್ಮ ಸ್ಥಾಪಕ ಗುರು ನಾನಕ್ ದೇವ್ 1522ರಲ್ಲಿ ಸ್ಥಾಪಿಸಿದ್ದಾರೆ.
Dr. Muhammad Faisal said that Pakistan has completed ninety percent work on the Kartarpur corridor and it is committed to open the corridor on the 550th birth anniversary of Baba Guru Nanak. pic.twitter.com/9ZPRktOqy8
— Govt of Pakistan (@pid_gov) September 4, 2019
ಕಳೆದ ಜುಲೈನಲ್ಲಿ ನಡೆದ ಸಭೆಯ ವೇಳೆ, ಪಾಕಿಸ್ತಾನದಲ್ಲಿನ ಕರ್ತರ್ ಪುರ್ ಸಾಹಿಬ್ ಗುರ್ ದ್ವಾರಕ್ಕೆ ದಿನಕ್ಕೆ ಐದು ಸಾವಿರ ಭಾರತೀಯರಿಗೆ ಪ್ರವೇಶ ನೀಡಲು ಒಪ್ಪಿಗೆ ಕೊಡಲಾಗಿತ್ತು. ಸ್ವಾತಂತ್ರ್ಯ ಪಡೆದ ನಂತರ ಭಾರತ ಹಾಗೂ ಪಾಕಿಸ್ತಾನ ಮಧ್ಯೆ ವೀಸಾ ಇಲ್ಲದೆ ಸಂಚರಿಸಬಹುದಾದ ಮೊದಲ ಕಾರಿಡಾರ್ ಇದಾಗಲಿದೆ.