2015ರ ಪ್ರವಾಹ ಸ್ಥಿತಿಯನ್ನು ನೆನಪಿಸಿದ ಚೆನ್ನೈ ಮಳೆ: ರಾಜ್ಯದಲ್ಲೂ ಐದು ದಿನ ಮಳೆ ಸಂಭವ
ಚೆನ್ನೈ, ಅಕ್ಟೋಬರ್ 30: ತಮಿಳುನಾಡಿನ ರಾಜಧಾನಿ ಚೆನ್ನೈ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಗುರುವಾರ ಸುರಿದ ಭಾರಿ ಮಳೆ 2015ರಲ್ಲಿ ಉಂಟಾಗಿದ್ದ ಪ್ರವಾಹ ಪರಿಸ್ಥಿತಿಯನ್ನು ನೆನಪಿಸುವಂತಿದೆ. ನಗರದ ಕೆಲವು ಪ್ರದೇಶಗಳಲ್ಲಿ ಕೇವಲ ಐದು ಗಂಟೆಗಳಲ್ಲಿ 20 ಸೆಂ.ಮೀ ಮಳೆ ಸುರಿದಿದ್ದರೆ, ಇನ್ನು ಹಲವೆಡೆ 14 ಸೆಂ.ಮೀಯಷ್ಟು ಮಳೆ ಬಂದಿದೆ.
ಕೆಳಮಟ್ಟದಲ್ಲಿರುವ ಪ್ರದೇಶಗಳಾದ ಕೊಲಥುರ್, ಎಲ್ಬಿ ರೋಡ್, ತಾರಾಮಣಿ ಮತ್ತು ವೆಲಾಚೆರಿಗಳಲ್ಲಿ ಅನೇಕ ಮನೆಗಳು, ಕಟ್ಟಡಗಳು ಜಲಾವೃತಗೊಂಡಿವೆ. ಜನರಲ್ ಪ್ಯಾಟರ್ಸ್ ರೋಡ್, ಆರ್ಕೆ ಸಲಾಯ್, ಎಲ್ಬಿ ರೋಡ್, ಎದಿರಾಜ್ ಕಾಲೇಜ್ ರಸ್ತೆ, ಓಲ್ಡ್ ಮಹಾಬಲಿಪುರಂ ರಸ್ತೆ ಮುಂತಾದ ಪ್ರಮುಖ ರಸ್ತೆಗಳಲ್ಲಿ ಮಳೆನೀರು ತುಂಬಿಕೊಂಡಿದ್ದರಿಂದ ವಾಹನ ಸವಾರರು ಹಾಗೂ ಪಾದಚಾರಿಗಳು ತೀವ್ರ ಪರದಾಟ ಅನುಭವಿಸಿದರು.
ಚೆನ್ನೈನಲ್ಲಿ ಮಳೆ ಆರ್ಭಟ: ದಕ್ಷಿಣ ಭಾರತದಲ್ಲಿ ಭಾರಿ ಮಳೆಯ ಮುನ್ಸೂಚನೆ
ಕೆಲವು ಭಾಗಗಳಲ್ಲಿ 14 ಸೆಂಮೀಯಷ್ಟು ಮಳೆಯಾಗಿದ್ದರೆ, ಇನ್ನು ಹಲವೆಡೆ 20 ಸೆಂಮೀ ಮಳೆ ಸುರಿದಿರುವುದು ದಾಖಲಾಗಿದೆ. ಕೇವಲ 5 ಗಂಟೆಗಳಲ್ಲಿ ಈ ಪರಿಯ ಮಳೆ ಸುರಿದಿರುವುದು 2015ರಲ್ಲಿ ಪ್ರವಾಹದಿಂದ ನಗರ ಮುಳುಗಿದ್ದ ಸನ್ನಿವೇಶವನ್ನು ನೆನಪಿಸಿದೆ. ಮುಂದೆ ಓದಿ.
ಮಳೆ ನೀರು ಹೋಗಲು ಜಾಗವಿಲ್ಲ
ಎಲ್ಲ ಚರಂಡಿಗಳೂ ಬ್ಲಾಕ್ ಆಗಿದ್ದು, ಚರಂಡಿಯಲ್ಲಿ ಕೊಳಚೆ ನೀರು ಸಮಪರ್ಕವಾಗಿ ಹರಿಯುತ್ತಿರಲಿಲ್ಲ. ನಗರ ಪಾಲಿಕೆಯು ಕೊರೊನಾ ವೈರಸ್ ಸೋಂಕಿನ ನಿರ್ವಹಣೆಯಲ್ಲಿಯೇ ತೊಡಗಿಕೊಂಡಿತ್ತು. ಮುಂಗಾರು ಅವಧಿಯಲ್ಲಿ ನಡೆಸಬೇಕಾದ ಮೂಲಸೌಕರ್ಯ ಚಟುವಟಿಕೆಗಳ ಕಾರ್ಯವನ್ನು ಮರೆತಿತ್ತು. ಈಗ ಮಳೆ ನೀರು ಹರಿದುಹೋಗಲು ಜಾಗವಿಲ್ಲದೆ ಮನೆಗಳಿಗೆ ನುಗ್ಗುವಂತಾಗಿದೆ. ಇದಕ್ಕೆ ಪಾಲಿಕೆಯೇ ಹೊಣೆ ಎಂದು ಅನೇಕರು ಆರೋಪಿಸಿದ್ದಾರೆ.
ಆತಂಕ ಪಡುವಂತದ್ದೇನೂ ಇಲ್ಲ
'ಜನರು ಆತಂಕಪಡುವ ಅಗತ್ಯವಿಲ್ಲ. ಮೂರೂವರೆ ಗಂಟೆಗಳಲ್ಲಿಯೇ 20 ಸೆಂಮೀ ಮಳೆ ಬಂದಿದ್ದರೂ ಹೆಚ್ಚಿನ ಪ್ರದೇಶಗಳಿಗೆ ಹಾನಿಯಾಗಿಲ್ಲ. ಸಮುದ್ರ ಮಟ್ಟಕ್ಕಿಂತ ಕೆಳಗಿರುವ ಅನೇಕ ಪ್ರದೇಶಗಳಲ್ಲಿ ನೀರನ್ನು ಪಂಪ್ ಮಾಡಿ ಹೊರ ಹಾಕುವ ಕೆಲಸ ಮಾಡಬೇಕಿದೆ. ಅದೀಗ ನಡೆಯುತ್ತಿದೆ' ಎಂದು ಗ್ರೇಟರ್ ಚೆನ್ನೈ ಆಯುಕ್ತ ಜಿ. ಪ್ರಕಾಶ್ ತಿಳಿಸಿದ್ದಾರೆ.
ಮೋಡಕವಿದ ವಾತಾವರಣ
ಹಿಂಗಾರು ಮಾರುತಗಳು ದಕ್ಷಿಣ ಭಾರತದಲ್ಲಿ ಮುಂದಿನ ಐದು ದಿನಗಳಲ್ಲಿ ಮಳೆ ಸುರಿಸುವುದನ್ನು ಮುಂದುವರಿಸಲಿದೆ. ಕರ್ನಾಟಕ, ತಮಿಳುನಾಡು ಮತ್ತು ಕೇರಳಗಳಲ್ಲಿ ಚಂಡಮಾರುತದ ಸನ್ನಿವೇಶ ನಿರ್ಮಾಣವಾಗಿದ್ದು, ಅನೇಕ ಕಡೆ ಗುಡುಗು ಸಹಿತ ಮಳೆ ಸುರಿಯುವ ಸಾಧ್ಯತೆ ಇದೆ. ಮುಖ್ಯವಾಗಿ ತಮಿಳುನಾಡಿನಲ್ಲಿ ಶುಕ್ರವಾರ ಹಾಗೂ ಕರ್ನಾಟದ ದಕ್ಷಿಣ ಒಳನಾಡು ಮತ್ತು ಕೇರಳದಲ್ಲಿ ಸೋಮವಾರ ಭಾರಿ ಮಳೆ ಸುರಿಯುವ ಸಂಭವ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಕರ್ನಾಟಕದಲ್ಲಿ ಮಳೆ
ಕರ್ನಾಟಕ ಮತ್ತು ಆಂಧ್ರಪ್ರದೇಶದ ವಿವಿಧೆಡೆ ಶುಕ್ರವಾರ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ. ಶನಿವಾರ ರಾಜ್ಯದ ಕರಾವಳಿಯ ಅಲ್ಲಲ್ಲಿ ಚೆದುರಿದಂತೆ ಮಳೆಯಾಗಬಹುದು. ಹಾಗೆಯೇ ರಾಜ್ಯದ ಒಳನಾಡು, ಕೇರಳ ಮತ್ತು ಅಂಡಮಾನ್, ನಿಕೋಬಾರ್ ದ್ವೀಪಗಳಲ್ಲಿ ಗುಡುಗು ಸಹಿತ ಮಳೆ ಸುರಿಯಲಿದೆ ಎಂದು ವರದಿ ಹೇಳಿದೆ.