ಕರ್ನಾಟಕದಿಂದ ಹರಿದ ಕಾವೇರಿ, ಧರ್ಮಪುರಿಯಲ್ಲಿ ಪ್ರವಾಹ ಎಚ್ಚರಿಕೆ
ಧರ್ಮಪುರಿ, ಆ.4: ಸುಪ್ರೀಂಕೋರ್ಟ್ ನಿರ್ದೇಶನದಂತೆ ತಮಿಳನಾಡಿಗೆ ಕಾವೇರಿ ನದಿ ನೀರನ್ನು ಕರ್ನಾಟಕ ಹರಿಸುತ್ತಿದೆ. ಮುಂಗಾರು ಮಳೆ ತೀವ್ರಗೊಂಡು ಭಾರಿ ಮಳೆಯಿಂದ ಅಗತ್ಯಕ್ಕಿಂತ ಹೆಚ್ಚು ನೀರು ತಮಿಳುನಾಡಿಗೆ ಹರಿಯುತ್ತಿದೆ. ಈ ನಡುವೆ ತಮಿಳುನಾಡಿಗೆ 40, 000 ಕ್ಯೂಸೆಕ್ಸ್ ಗೂ ಅಧಿಕ ಕಾವೇರಿ ನೀರು ಹರಿಸಿರುವುದರಿಂದ ಧರ್ಮಪುರಿ ಜಿಲ್ಲೆಯಲ್ಲಿ ಆತಂಕ ಶುರುವಾಗಿದೆ.
ಧರ್ಮಪುರಿ ಜಿಲ್ಲಾಡಳಿತವು ಕಾವೇರಿ ನದಿಪಾತ್ರದ ಹಳ್ಳಿಗರಿಗೆ ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಸೂಚಿಸಿದೆ. ಭಾರಿ ಪ್ರಮಾಣದಲ್ಲಿ ಕಾವೇರಿ ನೀರು ಹರಿದು ಬರುತ್ತಿರುವುದರಿಂದ ಪ್ರವಾಹದ ಮುನ್ನೆಚ್ಚರಿಕೆ ನೀಡಲಾಗಿದೆ. ಹೋಗೇನೆಕಲ್ ಮುಂತಾದ ನದಿ ಪಾತ್ರದ ಪ್ರವಾಸಿ ತಾಣಗಳಲ್ಲಿ ಸಾರ್ವಜನಿಕರ ಪ್ರವೇಶ ಸದ್ಯಕ್ಕೆ ನಿರ್ಬಂಧಿಸಲಾಗಿದೆ. ನದಿ ಪಾತ್ರದಿಂದ ಆದಷ್ಟು ದೂರ ಇರುವಂತೆ ಸೂಚಿಸಲಾಗಿದೆ.
ಸತತ ಸುರಿಯುತ್ತಿರುವ ಮಳೆ, ತುಂಬಿ ತುಳುಕುತ್ತಿರುವ ಜಲಾಶಯಗಳು
ಕರ್ನಾಟಕದಲ್ಲಿ ಭಾರಿ ಮಳೆಯಾಗುತ್ತಿದ್ದು, ಕಾವೇರಿ ನದಿ ಹಾಗೂ ಉಪ ನದಿಗಳ ಜಲಾಶಯಗಳಾದ ಹಾರಂಗಿ, ಕಬಿನಿ, ಕೃಷ್ಣರಾಜಸಾಗರ ತುಂಬಿ ತುಳುಕುತ್ತಿವೆ. ಮಂಗಳವಾರ ರಾತ್ರಿಯಿಂದಲೇ ಕಬಿನಿ ಹಾಗೂ ಕೆಆರ್ ಎಸ್ ನಿಂದ ನೀರು ಬಿಡಲಾಗುತ್ತಿದೆ ಎಂಬ ಮಾಹಿತಿ ಸಿಕ್ಕಿದೆ, ಗುರುವಾರದ ವೇಳೆಗೆ ಮೆಟ್ಟೂರು ಅಣೆಕಟ್ಟಿನಲ್ಲಿ ಹೆಚ್ಚಿನ ಪ್ರಮಾಣದಲ್ಲಿ ನೀರು ಸಂಗ್ರಹವಾಗಲಿದೆ ಎಂದು ತಮಿಳುನಾಡಿನ ಜಲ ಸಂಪನ್ಮೂಲ ಇಲಾಖೆ ಅಧಿಕಾರಿಗಳು ಹೇಳಿದ್ದಾರೆ.
KRSನಿಂದ ತಮಿಳುನಾಡಿಗೆ ಹರಿದ ಕಾವೇರಿ, ರೈತರ ಆಕ್ರೋಶ
ಕಬಿನಿ ಅಣೆಕಟ್ಟಿನಿಂದ 17,500 ಕ್ಯೂಸೆಕ್ಸ್, ಕೆಆರ್ ಎಸ್ ನಿಂದ 4700 ಕ್ಯೂಸೆಕ್ಸ್ ಮಂಗಳವಾರದಂದು ಬಿಡುಗಡೆ ಮಾಡಲಾಗಿದ್ದು, ಬುಧವಾರ ರಾತ್ರಿ ಪ್ರಮಾಣ 40,000 ಕ್ಯೂಸೆಕ್ಸ್ ದಾಟಿದೆ. ಅಲ್ಲಿಂದ ಮುಂದೆ ಕೃಷ್ಣಗಿರಿ ಜಿಲ್ಲೆಯಲ್ಲಿರುವ ಬಿಳಿ ಗುಂಡ್ಲು ಮಾರ್ಗವಾಗಿ ತಮಿಳುನಾಡು ತಲುಪಲಿದೆ. ಮೆಟ್ಟೂರು ಅಣೆಕಟ್ಟು 120 ಅಡಿಯಿದ್ದು, ಸದ್ಯ 65.10 ಅಡಿ ಮಾತ್ರ ನೀರಿದ್ದು, 4000 ಕ್ಯೂಸೆಕ್ಸ್ ಒಳ ಹರಿವು, 3000 ಕ್ಯೂಸೆಕ್ಸ್ ಹೊರ ಹರಿವು ಹೊಂದಿದೆ.