ಗುಜರಾತ್ ಮುಖ್ಯಮಂತ್ರಿ ರೇಸಿಗೆ ತೇಲಿಬಂದ ಅಚ್ಚರಿಯ ಹೆಸರು!
Recommended Video
ಜಿದ್ದಾಜಿದ್ದಿನ ಪೈಪೋಟಿಯ ನಂತರ ಗುಜರಾತ್ ನಲ್ಲಿ ಸತತ ಆರನೇ ಬಾರಿಗೆ ಅಧಿಕಾರ ಉಳಿಸಿಕೊಳ್ಳುವಲ್ಲಿ ಯಶಸ್ವಿಯಾದ ಬಿಜೆಪಿ, ಮುಖ್ಯಮಂತ್ರಿಯಾಗಿ ಯಾರನ್ನು ಆಯ್ಕೆಮಾಡಲಿದೆ ಎನ್ನುವ ಕುತೂಹಲ ಗರಿಗೆದರಿದೆ.
ಮುಖ್ಯಮಂತ್ರಿ ಹುದ್ದೆಯ ರೇಸಿನಲ್ಲಿ ನಾನಿಲ್ಲ ಎಂದು ಕೇಂದ್ರ ಸಚಿವೆ ಸ್ಮೃತಿ ಇರಾನಿ ಹೇಳಿಕೆ ನೀಡಿದ್ದರೂ, ಅವರ ಹೆಸರು ಇನ್ನೂ ಕೇಳಿಬರುತ್ತಿದೆ. ಹಾಲೀ ಸಿಎಂ ವಿಜಯ್ ರೂಪಾಣಿಯವರನ್ನೇ ಮುಂದುವರಿಸಬೇಕೋ ಅಥವಾ ಬೇರೊಬ್ಬರನ್ನು ಆಯ್ಕೆ ಮಾಡಬೇಕೋ ಎನ್ನುವ ಚರ್ಚೆಯ ನಡುವೆ, ಈ ಪಟ್ಟಿಗೆ ಅಚ್ಚರಿಯ ಹೆಸರೊಂದು ಸೇರ್ಪಡೆಗೊಂಡಿದೆ. (ಮೋದಿ ವಿಶ್ವಾಸಾರ್ಹತೆ ಪ್ರಶ್ನಿಸಿದ ರಾಹುಲ್)
ಬಿಜೆಪಿ ಮೂಲಗಳ ಪ್ರಕಾರ, ಗುಜರಾತ್ ಮೂಲದ ಮತ್ತು ಪ್ರಧಾನಿ ನರೇಂದ್ರ ಮೋದಿಯವರಿಗೆ ಆಪ್ತರಾಗಿರುವ, ಹಾಲೀ ಕರ್ನಾಟಕದ ರಾಜ್ಯಪಾಲ ವಜುಭಾಯಿ ವಾಲಾ ಅವರ ಹೆಸರೂ, ಗುಜರಾತ್ ಮುಖ್ಯಮಂತ್ರಿ ಹುದ್ದೆಗೆ ಕೇಳಿಬರುತ್ತಿದೆ.
ಈಗ ಮುಕ್ತಾಯಗೊಂಡ ಅಸೆಂಬ್ಲಿ ಚುನಾವಣೆಯಲ್ಲಿ ಗುಜರಾತ್ ಗ್ರಾಮೀಣ ಮತ್ತು ಸೌರಾಷ್ಟ್ರ ಭಾಗದಲ್ಲಿ ಬಿಜೆಪಿ ಉತ್ತಮ ಸಾಧನೆ ತೋರದೇ ಇರುವುದರಿಂದ, ಗುಜರಾತ್ ರಾಜಕೀಯವನ್ನು ಸರಿಯಾಗಿ ಬಲ್ಲವರಿಗೆ ಆದ್ಯತೆ ನೀಡಲು ಮೋದಿ ಮತ್ತು ಅಮಿತ್ ಶಾ ನಿರ್ಧರಿಸಿದ್ದಾರೆ ಎನ್ನುವ ಮಾಹಿತಿಯಿದೆ.
ನರೇಂದ್ರ ಮೋದಿ ಕೇಂದ್ರಕ್ಕೆ ತೆರಳಿದ ನಂತರ ಗುಜರಾತ್ ಸಿಎಂ ಆಗಿ ಆಯ್ಕೆಯಾದ ಆನಂದಿ ಬೆನ್ ಪಟೇಲ್, ನಂತರ ಸಿಎಂ ಆಗಿ ಅಧಿಕಾರ ಸ್ವೀಕರಿಸಿಕೊಂಡ ವಿಜಯ್ ರೂಪಾಣಿ ಕಾರ್ಯವೈಖರಿಯ ಬಗ್ಗೆ, ಸಾರ್ವಜನಿಕರಿಗೆ ಮತ್ತು ವರಿಷ್ಠರಿಗೆ ಅಸಮಾಧಾನ ಇರುವ ಹಿನ್ನಲೆಯಲ್ಲಿ, ಅಳೆದುತೂಗಿ ಸಿಎಂ ಹುದ್ದೆಗೆ ಸೂಕ್ತ ಮುಖಂಡನನ್ನು ಆಯ್ಕೆಮಾಡಲು ಬಿಜೆಪಿ ನಿರ್ಧರಿಸಿದೆ.
ಗ್ರಾಮೀಣ ಭಾಗದ ಜನರಿಗೆ ತೀವ್ರ ಅಸಮಾಧಾನ
ಗುಜರಾತ್ ನಲ್ಲಿ ಕಳೆದ ಒಂದೆರಡು ವರ್ಷದ ಅವಧಿಯಲ್ಲಿನ ಆಡಳಿತದ ಬಗ್ಗೆ, ಅದರಲ್ಲೂ ಪ್ರಮುಖವಾಗಿ ಗ್ರಾಮೀಣ ಭಾಗದ ಜನರಿಗೆ ತೀವ್ರ ಅಸಮಾಧಾನವಿದೆ. ಈ ಭಾಗದ ಜನರ ವಿಶ್ವಾಸವನ್ನು ಮತ್ತೆಗಿಟ್ಟಿಸಿಕೊಳ್ಳುವಲ್ಲಿ ಸರಕಾರ ತುರ್ತಾಗಿ ಗಮನ ಕೊಡಬೇಕಾದ ಹಿನ್ನಲೆಯಲ್ಲಿ ಕರ್ನಾಟಕದ ರಾಜ್ಯಪಾಲರೂ ಸೇರಿದಂತೆ ಐವರ ಹೆಸರು ಸಿಎಂ ರೇಸಿಗೆ ಕೇಳಿಬರುತ್ತಿದೆ.
ಮೋದಿಗಾಗಿ ತಾನು ಸ್ಪರ್ಧಿಸುತ್ತಿದ್ದ ಕ್ಷೇತ್ರವನ್ನು ಬಿಟ್ಟುಕೊಟ್ಟಿದ್ದ ವಾಲಾ
ಹದಿನೈದು ವರ್ಷಗಳ ಕೆಳಗೆ ನರೇಂದ್ರ ಮೋದಿಗಾಗಿ ತಾನು ಸ್ಪರ್ಧಿಸುತ್ತಿದ್ದ ಕ್ಷೇತ್ರವನ್ನು (ರಾಜಕೋಟ್ - 2) ಬಿಟ್ಟುಕೊಟ್ಟಿದ್ದ, ಹಾಲೀ ಕರ್ನಾಟಕದ ರಾಜ್ಯಪಾಲರಾದ ವಜುಭಾಯಿ ವಾಲಾ ಅವರ ಹೆಸರು ಸಿಎಂ ಹುದ್ದೆಗೆ ಕೇಳಿ ಬರುತ್ತಿದೆ. 2002ರಲ್ಲಿ ವಾಲಾ, ಮೋದಿಗಾಗಿ ತನ್ನ ಕ್ಷೇತ್ರವನ್ನು ಬಿಟ್ಟುಕೊಟ್ಟಿದ್ದರು. ನಂತರ ನಡೆದ ಉಪಚುನಾವಣೆಯಲ್ಲಿ ಮೋದಿ ಗೆದ್ದು, ಗುಜರಾತ್ ಸಿಎಂ ಆಗಿ ಆಯ್ಕೆಯಾಗಿದ್ದರು.
ಗುಜರಾತ್ ರಾಜಕೀಯವನ್ನು ಉತ್ತಮವಾಗಿ ಬಲ್ಲ ವಾಲಾ
ಮೋದಿ ಪ್ರಧಾನಿಯಾಗಿ ಆಯ್ಕೆಯಾದ ನಂತರ ವಾಲಾ ಅವರ ಹೆಸರೂ ಗುಜರಾತ್ ಸಿಎಂ ರೇಸಿಗೆ ಕೇಳಿಬರುತ್ತಿತ್ತು. ಆದರೆ, ಬಿಜೆಪಿ ವರಿಷ್ಠರು ಆನಂದಿ ಬೆನ್ ಪಟೇಲ್ ಅವರನ್ನು ಆಯ್ಕೆಮಾಡಿದ್ದರು. ಗುಜರಾತ್ ಅಸೆಂಬ್ಲಿ ಸ್ಪೀಕರ್, ಹಣಕಾಸು, ಕಾರ್ವಿುಕ ಮತ್ತು ಉದ್ಯೋಗ ಸಚಿವರಾಗಿ ಕಾರ್ಯ ನಿರ್ವಹಿಸಿರುವ ಅನುಭವವನ್ನು ಹೊಂದಿರುವ ವಜುಭಾಯಿ ವಾಲಾ, ಗುಜರಾತ್ ರಾಜಕೀಯವನ್ನು ಉತ್ತಮವಾಗಿ ಬಲ್ಲರು.
ವಾಲಾ, ರೂಪಾಣಿ, ಮನ್ಸುಖ್ ಮಾಂಡವಿಯಾ
ನಿಸ್ತೇಜ ಆಡಳಿತದಿಂದ ಕಳೆಗುಂದಿದ್ದ ಗುಜರಾತ್ ನಲ್ಲಿ ಪಕ್ಷದ ಇಮೇಜ್ ಅನ್ನು ಮತ್ತೆ ಮೇಲೆಕೆತ್ತುವ ಗುರುತರ ಜವಾಬ್ದಾರಿ ಇರುವುದರಿಂದ, ಗುಜರಾತ್ ರಾಜಕೀಯದಲ್ಲಿ ಪಳಗಿದ ರಾಜಕಾರಣಿಯನ್ನೇ ಆಯ್ಕೆಮಾಡಲು ವರಿಷ್ಠರು ನಿರ್ಧರಿಸಿದ್ದು, ವಾಲಾ (78), ರೂಪಾಣಿ (61), ಇರಾನಿ (40), ಹಾಲೀ ಡಿಸಿಎಂ ನಿತಿನ್ ಪಟೇಲ್ (61) ಅಥವಾ ಕೇಂದ್ರ ಸಾರಿಗೆ, ಹೆದ್ದಾರಿ ರಾಜ್ಯ ಖಾತೆ ಸಚಿವ ಮನ್ಸುಖ್ ಮಾಂಡವಿಯಾ (45) ಇವರಲ್ಲಿ ಒಬ್ಬರನ್ನು ಆಯ್ಕೆ ಮಾಡುವ ಸಾಧ್ಯತೆಯಿದೆ.
ರಾಜ್ಯಪಾಲರಾಗಿ ಕಾರ್ಯ ನಿರ್ವಹಿಸುತ್ತಿರುವ ವ್ಯಕ್ತಿ
ವಜುಭಾಯಿ ವಾಲಾ ಉತ್ತಮ ಆಯ್ಕೆಯಾದರೂ, ರಾಜ್ಯಪಾಲರಾಗಿ ಕಾರ್ಯ ನಿರ್ವಹಿಸುತ್ತಿರುವ ವ್ಯಕ್ತಿಯೊಬ್ಬರನ್ನು ಕರೆದು ತಂದು ಮುಖ್ಯಮಂತ್ರಿ ಮಾಡಿದರೆ, ಗುಜರಾತ್ ರಾಜ್ಯ ಘಟಕದಲ್ಲಿ ಬೇರೆ ಯಾರೂ ಸೂಕ್ತ ವ್ಯಕ್ತಿ ಬಿಜೆಪಿಗೆ ಸಿಗಲಿಲ್ಲವೇ ಎನ್ನುವ ತಪ್ಪು ಸಂದೇಶ ರವಾನೆಯಾಗುವ ಸಾಧ್ಯತೆಯ ಬಗ್ಗೆಯೂ ಬಿಜೆಪಿ ವರಿಷ್ಠರು ಚಿಂತನೆ ನಡೆಸಿದ್ದಾರೆ.