ವಂದೇ ಮಾತರಂಗೆ ಅವಮಾನ : ರಾಹುಲ್ ಮೇಲೆ ಮುಗಿಬಿದ್ದ ಟ್ವಿಟ್ಟಿಗರು
ಬೆಂಗಳೂರು, ಏಪ್ರಿಲ್ 27 : ಕರ್ನಾಟಕದಲ್ಲಿ ಕಾಂಗ್ರೆಸ್ ಅಧಿಕಾರವನ್ನು ಉಳಿಸಿಕೊಳ್ಳಲೇಬೇಕೆಂಬ ಹಠದಲ್ಲಿ ಬಿಡುವಿಲ್ಲದೆ ಊರೂರಿನಲ್ಲಿ ಪ್ರಚಾರದಲ್ಲಿ ತೊಡಗಿರುವ ರಾಹುಲ್ ಗಾಂಧಿ ಅವರು 'ಸಮಯದ ಅಭಾವ'ದಿಂದಾಗಿ ಒಲ್ಲದ ವಿವಾದದಲ್ಲಿ ಅನಗತ್ಯವಾಗಿ ಸಿಲುಕಿದ್ದಾರೆ.
ಬಂಟ್ವಾಳದ ಸಮಾವೇಶದಲ್ಲಿ ಭಾಷಣ ಬಿಗಿಯಲು ಸಿದ್ಧರಾಗಿ ಕುಳಿತಿದ್ದ ರಾಹುಲ್ ಗಾಂಧಿಯವರು, ವಂದೇ ಮಾತರಂ ಹಾಡು ಇನ್ನೇನು ಶುರುವಾಗಲಿರುವಾಗ, ತಮ್ಮ ಕೈಗಡಿಯಾರ ತೋರಿಸಿ ಆಯೋಜಕರಿಗೆ ಏನೋ ಸೂಚನೆ ನೀಡುತ್ತಾರೆ.
ಕಾಂಗ್ರೆಸ್ ಸಮಾವೇಶದಲ್ಲಿ ವಂದೇ ಮಾತರಂ ಗೀತೆ ಅರ್ಧಕ್ಕೆ ಮೊಟಕು
ರಾಹುಲ್ ಗಾಂಧಿಯವರ ಅವರ ಆಜ್ಞೆಯನ್ನು ಶಿರಸಾವಹಿಸಿ ಪಾಲಿಸಿದ ಕರ್ನಾಟಕ ಇನ್-ಚಾರ್ಜ್ ಕೆಸಿ ವೇಣುಗೋಪಾಲ್ ಅವರು, ರಾಷ್ಟ್ರಗೀತೆಯಷ್ಟೇ ಸಮಾನವಾಗಿರುವ ವಂದೇ ಮಾತರಂ ಹಾಡನ್ನು ಮೊಟಕುಗೊಳಿಸುವಂತೆ ಆಜ್ಞಾಪಿಸುತ್ತಾರೆ.
In Pics: ಧರ್ಮಸ್ಥಳ ಮಂಜುನಾಥ ಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸಿದ ರಾಹುಲ್ ಗಾಂಧಿ
ಇಷ್ಟು ಸಾಲದೆಂಬಂತೆ, ವಂದೇ ಮಾತರಂ ಹಾಡು ಶುರುವಾಗಿದ್ದರೂ ಕುಳಿತೇ ಇದ್ದ ರಾಹುಲ್ ಗಾಂಧಿಯವರನ್ನು ಕೆಸಿ ವೇಣುಗೋಪಾಲ್ ಅವರು ತಟ್ಟಿ ಎಬ್ಬಿಸುತ್ತಾರೆ. ಅಷ್ಟೇ, ಕೇವಲ 38 ಸೆಂಕೆಂಡುಗಳಲ್ಲಿ ವಂದೇ ಮಾತರಂ ಹಾಡು ಮುಗಿಯುತ್ತದೆ, ಚಪ್ಪಾಳೆಗಳ ಸುರಿಮಳೆಯಾಗುತ್ತದೆ. ವಂದೇ ಮಾತರಂ ಕೇಳುವಷ್ಟು ವ್ಯವಧಾನವೂ ಇರಲಿಲ್ಲವೆ ರಾಹುಲ್ಗೆ?
ಧರ್ಮಸ್ಥಳ ಮಂಜುನಾಥ ಸ್ವಾಮಿಯ ದರ್ಶನ ಪಡೆದ ರಾಹುಲ್ ಗಾಂಧಿ
ಈ ಘಟನೆ ಸಹಜವಾಗಿ ಭಾರತೀಯ ಜನತಾ ಪಕ್ಷವನ್ನು ಕೆರಳಿಸಿದ್ದಲ್ಲದೆ, ಸಾಮಾಜಿಕ ಜಾಲತಾಣದಲ್ಲಿ 'ವಂದೇ ಮಾತರಂ' ಹಾಡಿಗೆ ರಾಹುಲ್ ಗಾಂಧಿ ಮತ್ತು ಕಾಂಗ್ರೆಸ್ ಅವಮಾನ ಮಾಡಿದೆ ಎಂದು ಟ್ವೀಟ್ ಪ್ರವಾಹವನ್ನೇ ಹರಿಸುತ್ತಿದ್ದಾರೆ. ಕರ್ನಾಟಕ ವಿಧಾನಸಭೆ ಚುನಾವಣೆ ಇನ್ನು ಕೆಲವೇ ದಿನ ಉಳಿದಿರುವಾಗ ಈ ವಿವಾದವನ್ನು ರಾಹುಲ್ ಮೈಮೇಲೆಳೆದುಕೊಂಡಿದ್ದಾರೆ.
|
ಅಂದು ಹಿಂದೂ ವಿರೋಧಿ ಜಿನ್ನಾ, ಇಂದು ರಾಹುಲ್
ಅಂದು ಮುಸ್ಲಿಂರಿಗೆ ಕಿರಿಕಿರಿ ಮಾಡುತ್ತದೆಂಬ ಕಾರಣ ನೀಡಿ, ಭಾರತವನ್ನು ಇಬ್ಭಾಗ ಮಾಡಿದ ಜಿನ್ನಾರನ್ನು ಸಂತೃಪ್ತಿಪಡಿಸಲೆಂದು ನೆಹರೂ ಅವರು ವಂದೇ ಮಾತರಂನ ಕಡೆಯ ಮೂರು ಪ್ಯಾರಾಗಳನ್ನು ಎಗರಿಸಿದ್ದರು. ಇಂದು ರಾಹುಲ್ ಗಾಂಧಿಯವರು ವಂದೇ ಮಾತರಂ ಹಾಡನ್ನು ಕೇವಲ ಒಂದೇ ಪ್ಯಾರಾಗೆ ಇಳಿಸಿದ್ದಾರೆ. ಇದು ಕಾಂಗ್ರೆಸ್ ವಂದೇ ಮಾತರಂಗೆ ಮಾಡಿದ ಅವಮಾನ. ಕಾಂಗ್ರೆಸ್ ಮುಕ್ತ ದೇಶ ಮಾಡಲು ನಮಗೆ ಇನ್ನೂ ಕಾರಣ ಬೇಕೆ? ಶೇಮ್ ಆನ್ ಯೂ ರಾಹುಲ್ ಗಾಂಧಿ ಎಂದು ಬಿಜೆಪಿ ಕರ್ನಾಟಕ ಕಾಂಗ್ರೆಸ್ ನ ಬೆವರಿಳಿಸಿದೆ.
|
ದೇಶವೇನು ರಾಹುಲ್ ಕುಟುಂಬದ ಸ್ವತ್ತೆ?
ಕರ್ನಾಟಕದ ಸಾರ್ವಜನಿಕ ಸಭೆಯಲ್ಲಿ ವಂದೇ ಮಾತರಂ ಹಾಡನ್ನು ಒಂದೇ ಲೈನಿಗೆ ಮೊಟಕುಗೊಳಿಸುವಂತೆ ರಾಹುಲ್ ಗಾಂಧಿಯವರು ನಿರ್ದೇಶನ ನೀಡುತ್ತಾರೆ. ನಾವು ಇದೇ ಕಾರಣಕ್ಕೆ ಅವರನ್ನು 'ಶಹಜಾದಾ' ಎಂದು ಕರೆಯುತ್ತೇವೆ. ಅವರು ಇದೇ ದೇಶವನ್ನು ತಮ್ಮ ಕುಟುಂಬದ ಸ್ವತ್ತು ಎಂದು ಭಾವಿಸುತ್ತಾರೆ. ಅವರು ತಮ್ಮ ಇಚ್ಛೆಯಂತೆ ರಾಷ್ಟ್ರೀಯ ಹಾಡನ್ನು ಹೀಗೆ ಮೊಟಕುಗೊಳಿಸುವುದೇ ಹೇಗೆ ಸಾಧ್ಯ? ಎಂದು ಸಂಬಿತ್ ಪಾತ್ರ ರಾಹುಲ್ ರನ್ನು ಹುರಿದು ಮುಕ್ಕಿದ್ದಾರೆ.
|
ಜಸ್ಟಿನ್ ಬೀಬರ್ ರನ್ನು ಕರೆಸಬೇಕಿತ್ತು
ಕಾರ್ಯಕ್ರಮದ ಆಯೋಜಕರು ವಂದೇ ಮಾತರಂ ಬದಲಾಗಿ ಜಸ್ಟಿನ್ ಬೀಬರ್ (ಖ್ಯಾತ ಪಾಪ್ ಸಿಂಗರ್) ನನ್ನ ಕರೆಸಬೇಕಾಗಿತ್ತು. ರಾಹುಲ್ ಗಾಂಧಿ ಸಭೆಗಾಗಿ ತಪ್ಪು ಹಾಡನ್ನು ಆಯ್ದುಕೊಳ್ಳಲಾಗಿದೆ. ಹಿಂದೆ, ಕಾಂಗ್ರೆಸ್ ಅಧ್ಯಕ್ಷರಾಗಿದ್ದ ಮೊಹಮ್ಮದ್ ಅಲಿ ಕೂಡ ವಂದೇ ಮಾತರಂಗೆ ವಿರೋಧ ವ್ಯಕ್ತಪಡಿಸಿದ್ದರು. ಎಂದು ಹಿರಿಯ ಪತ್ರಕರ್ತ ಕಂಚನ್ ಗುಪ್ತಾ ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
|
ಪಾರ್ಟ್ ಟೈಂ ದೇಶಭಕ್ತರಾಗಿರುವ ರಾಹುಲ್
ಪಾರ್ಟ್ ಟೈಂ ದೇಶಭಕ್ತರಾಗಿರುವ ರಾಹುಲ್ ಗಾಂಧಿಯವರು ತಮ್ಮ ಕೈಗಡಿಯಾರ ತೋರಿಸಿ ವಂದೇ ಮಾತರಂ ಹಾಡನ್ನು ಒಂದೇ ಸಾಲಿಗೆ ಇಳಿಸಿದ್ದಾರೆ. ರಾಹುಲ್ ಗಾಂಧಿಯವರೆ, ಅದನ್ನಾದರೂ ಏಕೆ ಹಾಡಬೇಕಿತ್ತು? ಅಲ್ಲದೆ, ಕೆಸಿ ವೇಣುಗೋಪಾಲ್ ಅವರೇ ಸೋಲಾರ್ ಹಗರಣದ ಖ್ಯಾತಿಯ ಸರಿತಾ ನಾಯರ್ ಮೇಲೆ ಅತ್ಯಾಚಾರ ಎಸಗಿರುವ ಆರೋಪ ಹೊತ್ತಿಲ್ಲವೆ? ಎಂದು ಎತಿರಾಜನ್ ಎಂಬುವವರು ಪ್ರಶ್ನೆಗಳ ಸುರಿಮಳೆ ಸುರಿಸಿದ್ದಾರೆ.
Array |
ಲೋಕಸಭೆಯಲ್ಲಿ 5 ಸೀಟು ಕೂಡ ನೀಡಲ್ಲ
ರಾಹುಲ್ ಗಾಂಧಿಯವರಿಗೆ ವಂದೇ ಮಾತರಂಗಾಗಿ ಕೇವಲ 5 ನಿಮಿಷ ಕೂಡ ಸಮಯ ವ್ಯಯಿಸಲು ಇಷ್ಟವಿಲ್ಲವೆಂದ ಮೇಲೆ, ನಾವು ಭಾರತೀಯರಿಗೆ ಕೂಡ 2019ರ ಲೋಕಸಭೆ ಚುನಾವಣೆಯಲ್ಲಿ 5 ಸೀಟುಗಳನ್ನು ಕೂಡ ನೀಡುವುದಿಲ್ಲ. ವಂದೇ ಮಾತರಂ, ಜೈಹಿಂದ್ ಎಂದು ಅಚಿಂತೈಯ್ಯ ಎಂಬುವವರು #RaGaInsultsVandeMataram ಹ್ಯಾಶ್ ಟ್ಯಾಗ್ ಹಾಕಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ವಂದೇ ಮಾತರಂ ಹಾಡು ಆರಂಭವಾದಾಗ ಎದ್ದು ನಿಲ್ಲಬೇಕೆಂದೂ ಗೊತ್ತಿಲ್ಲ ಎಂದು ಶಕುಂತಲಾ ಅಯ್ಯರ್ ಅವರು ಕಿಡಿ ಕಾರಿದ್ದಾರೆ.
|
ಸಂಸದ ಪ್ರಹ್ಲಾದ್ ಜೋಶಿಯಿಂದ ದೇಶಭಕ್ತಿಯ ಪಾಠ
ಇಂಥ ನಾಯಕರನ್ನು ಪ್ರಮೋಟ್ ಮಾಡುತ್ತಿದ್ದಕ್ಕಾಗಿ ಕಾಂಗ್ರೆಸ್ ಗೆ ನಾಚಿಕೆಯಾಗಬೇಕು. ಕರ್ನಾಟಕದಲ್ಲಿ (ಬಂಟ್ವಾಳ) ನಡೆದ ಸಾರ್ವಜನಿಕ ಸಭೆಯಲ್ಲಿ ರಾಹುಲ್ ಗಾಂಧಿಯವರು ವಂದೇ ಮಾತರಂ ಹಾಡನ್ನು ಒಂದೇ ಪ್ಯಾರಾಕ್ಕೆ ಇಳಿಸುವಂತೆ ಸೂಚಿಸಿದ್ದಾರೆ. ಅವರಿಗೆ ರಾಷ್ಟ್ರೀಯ ಹಾಡಿನ ಮಹತ್ವವೇನೆಂದು ಯಾರಾದರೂ ತಿಳಿಸಿರಿ ಎಂದು ಸಂಸದ ಪ್ರಲ್ಹಾದ್ ಜೋಶಿಯವರು ಕಾಂಗ್ರೆಸ್ ಮತ್ತು ರಾಹುಲ್ ಗಾಂಧಿಯನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ.
ರಾಹುಲ್ ರಿಂದ ಏನು ನಿರೀಕ್ಷಿಸಲು ಸಾಧ್ಯ?
ರಾಹುಲ್ ಗಾಂಧಿಯವರು ವಂದೇ ಮಾತರಂಗೆ ಅವಮಾನ ಮಾಡಿದ್ದಾರೆ. ಅವರಿಗೆ ಬಸವಣ್ಣನ ಹೆಸರು ಹೇಳಲು ಬರುವುದಿಲ್ಲ. ಅವರಿಗೆ ವಿಶ್ವೇಶ್ವರಯ್ಯ ಅವರಿಗೂ ಅವಮಾನ ಮಾಡಿದರು. ಭಾರತದ ಹೆಮ್ಮೆಯಾದ ವಂದೇ ಮಾತರಂ ಹಾಡಿಗೆ ಗೌರವ ನೀಡಲು ಬರದವರಿಂದ ಕರ್ನಾಟಕದ ಹೆಮ್ಮೆಯ ಸಂಗತಿಗಳ ಬಗ್ಗೆ ಏನು ನಿರೀಕ್ಷೆ ಇಟ್ಟುಕೊಳ್ಳಲು ಸಾಧ್ಯ? ಎಂದು ಮತ್ತೊಬ್ಬರು ಕೇಳಿದ್ದಾರೆ.