ದೆಹಲಿಯಲ್ಲಿ 3 ಪ್ರಾದೇಶಿಕ ಪಕ್ಷಗಳ ಸಿಎಂ ಜೊತೆ ಕುಮಾರಸ್ವಾಮಿ ಮಾತುಕತೆ!
ದೆಹಲಿಯಲ್ಲಿ 3 ಪ್ರಾದೇಶಿಕ ಪಕ್ಷಗಳ ಸಿಎಂ ಜೊತೆ ಕುಮಾರಸ್ವಾಮಿ ಭೇಟಿ
ನವದೆಹಲಿ, ಜೂ 16: ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ರಾಜಧಾನಿಯ ಆಂಧ್ರಭವನದಲ್ಲಿ ಮೂರು ಪ್ರಮುಖ ಪ್ರಾದೇಶಿಕ ಪಕ್ಷಗಳ ಮುಖಂಡರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ.
ಆಂಧ್ರದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು, ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಕೇರಳ ಮುಖ್ಯಮಂತ್ರಿ ಪಿಣರಾಯ್ ವಿಜಯನ್ ಅವರನ್ನು ಭೇಟಿ ಮಾಡಿ, ಪ್ರಮಾಣವಚನ ಸಮಾರಂಭಕ್ಕೆ ಆಗಮಿಸಿದ್ದಕ್ಕೆ ಕೃತಜ್ಞತೆ ಸಲ್ಲಿಸಿದ್ದಾರೆ.
ಭಾನುವಾರ (ಜೂ17) ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದಲ್ಲಿ ನಿತಿ ಆಯೋಗದ ಮುಖ್ಯಮಂತ್ರಿಗಳ ಸಭೆಯಲ್ಲಿ ಭಾಗವಹಿಸಲು ಕುಮಾರಸ್ವಾಮಿ, ಶನಿವಾರ ಸಂಜೆ ರಾಜಧಾನಿಗೆ ಬಂದಿದ್ದಾರೆ. ಈ ಸಂದರ್ಭದಲ್ಲಿ ಎಚ್ಡಿಕೆ, ಮೂರು ರಾಜ್ಯಗಳ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿದ್ದಾರೆ.
ಮೇಲ್ನೋಟಕ್ಕೆ ಇದೊಂದು ಸೌಹಾರ್ದಯುತ ಭೇಟಿಯಾಗಿದ್ದರೂ, ಮುಂಬರುವ ಲೋಕಸಭಾ ಚುನಾವಣೆಯ ದೃಷ್ಟಿಯಲ್ಲಿ ಇದೊಂದು ಪ್ರಮುಖ ಬೆಳವಣಿಗೆ ಎಂದು ಹೇಳಲಾಗುತ್ತಿದೆ. ಇದಕ್ಕೂ ಮೊದಲು, ಮುಖ್ಯಮಂತ್ರಿ ಬಿಪ್ಯಾಕ್ ತಂಡದ ಸದಸ್ಯರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ.
ಬೆಂಗಳೂರನ್ನು ಪ್ಲಾಸ್ಟಿಕ್ ಹಾಗೂ ತ್ಯಾಜ್ಯಮುಕ್ತಗೊಳಿಸುವ ನಿಟ್ಟಿನಲ್ಲಿ ಹಾಗೂ ಬಿಪ್ಯಾಕ್ ತಂಡ ನೀಡಿರುವ ಅಭಿಪ್ರಾಯವನ್ನು ನಿಗದಿತ ಕಾಲಾವಧಿಯ ಒಳಗೆ ಪೂರ್ಣಗೊಳಿಸಲು ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಕುಮಾರಸ್ವಾಮಿ ತಿಳಿಸಿದರು.
ಬಿ ಪ್ಯಾಕ್ ಕಚೇರಿಗೆ ಭೇಟಿ ನೀಡಿದ ಮುಖ್ಯಮಂತ್ರಿಗಳು, ಬಿಪ್ಯಾಕ್ ಅಧ್ಯಕ್ಷೆ ಕಿರಣ್ ಮಜುಂದಾರ್, ಉಪಾಧ್ಯಕ್ಷ ಮೋಹನ್ ದಾಸ್ ಪೈ, ಸಿಇಓ ರೇವತಿ ಅಶೋಕ್, ಆರ್ ಕೆ ಮಿಶ್ರಾ, ಆನಂದ ಗುಂಡೂರಾವ್ ಅವರಿಂದ ಬೆಂಗಳೂರು ಅಭಿವೃದ್ದಿ ಕುರಿತು ಮಾಹಿತಿ ಪಡೆದರು.
ಬೆಂಗಳೂರು ಅಭಿವೃದ್ದಿಗೆ ಸಂಬಂಧಿಸಿದಂತೆ ಈಗಾಗಲೇ ಚಾಲ್ತಿಯಲ್ಲಿರುವ ಯೋಜನೆಗಳು, ಹೈ ಟ್ರಾಫಿಕ್ ಡೆನ್ಸಿಟಿ ಕಾರಿಡಾರ್, ವೈಟ್ ಟಾಪಿಂಗ್, ಕಸ ವಿಲೇವಾರಿ ಮತ್ತು ಮೆಟ್ರೋ ಯೋಜನೆ ಕುರಿತಂತೆ ಮುಖ್ಯಮಂತ್ರಿಗಳಿಗೆ ಬಿಪ್ಯಾಕ್ ತಂಡ ತನ್ನ ನೋಟವನ್ನು ಹಂಚಿಕೊಂಡಿತು.