ಕಾರ್ಗಿಲ್ ವಿಜಯ್ ದಿವಸ್: ಜೈ ಜವಾನ್ ...ಜೈ ಹಿಂದ್...
ಹದಿನೇಳು ವರ್ಷದ ಹಿಂದೆ ನಡೆದ ಕಾರ್ಗಿಲ್ ಯುದ್ದದ ಕುರಿತಾದ ಲೇಖನದ ಭಾಗ - 3. ಯುವ ಬ್ರಿಗೇಡ್ ಬೆಂಗಳೂರಿನ ರಾಷ್ಟ್ರೀಯ ಸೈನಿಕರ ಸ್ಮಾರಕ ಭವನದಲ್ಲಿ ಇಂದು (ಜುಲೈ 26) ಸಂಜೆ ಮಾಜಿ ಸೈನಿಕರ ಉಪಸ್ಥಿತಿಯಲ್ಲಿ ಕಾರ್ಗಿಲ್ ವಿಜಯ್ ದಿವಸ್ ಅನ್ನು ಆಚರಿಸಲಿ
ನಮ್ಮ ಸೈನಿಕರು ಈ ಕಾರ್ಯಾಚರಣೆಯಲ್ಲಿ ಯಶಸ್ವಿಯಾಗಿ, ಬೇರೆ ಯಾರು ಕೂಡ ಮುಂದೆಂದಿಗೂ ಇಂತಹಾ ದುಸ್ಸಾಹಸಕ್ಕೆ ಇಳಿಯದಂತೆ ಮಾಡುತ್ತಾರೆ" ಎಂದು 1999ರ ಜೂನ್ 7ರಂದು ರಾಷ್ಟ್ರವನ್ನುದ್ದೇಶಿಸಿ ಪ್ರಧಾನಿ ವಾಜಪೇಯಿ ಅವರು ಮಾಡಿದ ಐತಿಹಾಸಿಕ ಭಾಷಣ ಭಾರತೀಯ ಸೈನಿಕರ ಆತ್ಮಸ್ಥೈರ್ಯವನ್ನು ಇಮ್ಮಡಿಗೊಳಿಸಿತು.
ಇದರಿಂದ ಪ್ರೇರಿತರಾದ ಸೈನಿಕರು ಪಾಕಿಸ್ತಾನಿ ಸೇನೆಯನ್ನು ಬಗ್ಗುಬಡಿಯುತ್ತಾ ಹೋದರು. ಭೂಸೇನಾ ಪಡೆಯ 20,000 ಯೋಧರು, ವಾಯು ಸೇನೆಯ 10,000 ಯೋಧರು, ಪ್ಯಾರಾ ಮಿಲಿಟರಿ ಪಡೆಯವರು ಸಮುದ್ರ ಮಟ್ಟಕ್ಕಿಂತ 18 ಸಾವಿರ ಅಡಿ ಎತ್ತರದ ಯುದ್ಧ ಭೂಮಿಯಲ್ಲಿ,ಮೈನಸ್ 15 ಡಿಗ್ರಿ ಕೊರೆಯುವ ಚಳಿಯಲ್ಲಿ ಗಡಿಯಲ್ಲಿ ನಿಂತಿದ್ದ ಭಾರತೀಯ ಯೋಧರು ವೀರಾವೇಶದಿಂದ ವೈರಿ ಸೈನಿಕರ ರುಂಡ ಚೆಂಡಾಡಿದರು.
"ನಿಮಗೆ ಆಪತ್ತಾಗಬಹುದು, ಮಾತುಕತೆಯಲ್ಲಿ ನಿಮ್ಮ ಸಮಸ್ಯೆ ಬಗೆಹರಿಸಿಕೊಳ್ಳಿ ಎಂದು ಹೇಳಿದ್ದ ಅಮೆರಿಕಾಕ್ಕೆ ವಾಜಪೇಯಿ ಚೆನ್ನಾಗಿಯೇ ಟಾಂಗ್ ನೀಡಿದ್ದರು, "ಪಾಕಿಸ್ತಾನಕ್ಕೆ ಬುದ್ಧಿಯನ್ನು ನೀವು ಹೇಳುತ್ತೀರೋ ಅಥವಾ ನಾವೇ ತಕ್ಕ ಬುದ್ಧಿ ಕಲಿಸಬೇಕೋ" ಎಂದು ಕೇಳಿದರು. ಇತ್ತ ನವಾಜ್ ಶರೀಫ್ ಅವರು ಭಾರತದ ಒತ್ತಡ ತಾಳಲಾರದೆ 1999 ಜುಲೈ 4ರಂದು ದೊಡ್ಡಣನ ವಾಷಿಂಗ್ಟನ್ ನಗರಕ್ಕೆ ಓಡಿದರು.
ಬಿಲ್ ಕ್ಲಿಂಟನ್ ಬಳಿ "ಹೇಗಾದರೂ ಮಾಡಿ ಯುದ್ಧ ನಿಲ್ಲಿಸಿ ಎಂದು ಅಂಗಲಾಚಿದರು. ಈ ಬಾರಿ ಜಾಣ್ಮೆ ವಹಿಸಿದ ಕ್ಲಿಂಟನ್ ಭಾರತದ ಭೂಪ್ರದೇಶದಿಂದ ಪಾಕ್ ಸೈನ್ಯವನ್ನು ಹಿಂಪಡೆಯುವಂತೆ ನವಾಜ್ ಶರೀಫ್ ಅವರಿಗೆ ತಾಕೀತು ಮಾಡಿದಾಗ ಶರೀಫ್ ಅವರದ್ದು ಇಂಗು ತಿಂದ ಮಂಗನಾದ ಪರಿಸ್ಥಿತಿ.
ಅದಾಗಲೇ ಭಾರತದ ವೀರ ಯೋಧರು ಶೇ.80 ಭಾಗವನ್ನೂ ವಾಪಸ್ ವಶಕ್ಕೆ ಪಡೆದಾಗಿತ್ತು. ಕೊನೆಯಲ್ಲಿ ಡ್ರಾಸ್ ಉಪವಲಯವನ್ನು ಪಾಕಿಸ್ತಾನಿ ಪಡೆಗಳು ತೆರವು ಮಾಡಿದ ಕೂಡಲೇ ಜುಲೈ 26ರಂದು ಹೋರಾಟ ಸ್ಥಗಿತಗೊಳಿಸುವ ಮೂಲಕ ವಿಜಯ ಪತಾಕೆ ಹಾರಿಸಿ ಗೆಲುವನ್ನು ಘೋಷಿಸಿತು.
ಇದರಲ್ಲಿ ಸುಮಾರು 527ಜನರು ಹುತಾತ್ಮರಾಗಿದ್ದಾರೆ. ಸಾವಿರಾರು ಯೋಧರು ಗಾಯಗೊಂಡಿದ್ದಾರೆ. ನಮ್ಮ ಭಾರತ ಮಾತೆಯನ್ನು ರಕ್ಷಿಸಲು ತಮ್ಮನ್ನು ತಾವು ಸಮರ್ಪಿಸಿಕೊಂಡ ವೀರಯೋಧರ ಋಣವನ್ನಂತು ತೀರಿಸಲು ಸಾಧ್ಯವಿಲ್ಲ, ಕನಿಷ್ಟ ಇವರುಗಳ ತ್ಯಾಗ ಮತ್ತು ಸಮರ್ಪಣಾ ಭಾಗ್ಯವನ್ನು ನೆನೆಯುವುದು ಮತ್ತೆ ಸಮಾಜಕ್ಕೆ ನೆನೆಪಿಸುವುದು ನಮ್ಮ ಕರ್ತವ್ಯ.
ಹೀಗಾಗಿಯೇ ಈ ದಿನವನ್ನು ಮತ್ತು ಐತಿಹಾಸಿಕ ಗೆಲುವನ್ನು, ಸೈನಿಕರ ತ್ಯಾಗ ಬಲಿದಾನಗಳನ್ನು ನೆನೆದು ಗೌರವಿಸಲು 'ಕಾರ್ಗಿಲ್ ವಿಜಯ ದಿವಸ್' ಎಂಬ ಶಿರ್ಷಿಕೆಯಲ್ಲಿ ದೇಶದ ವಿವಿದಡೆಯಲ್ಲಿ ಆಚರಿಸಲಾಗುತ್ತದೆ. ದೇಶದ ಮುಖ್ಯಮಂತ್ರಿಗಳು ಹಾಗೂ ರಾಜ್ಯದ ಪ್ರಧಾನಮಂತ್ರಿಗಳು ಸಹ ಕಾರ್ಗಿಲ್ ಹೀರೋಗಳಿಗೆ ಗೌರವ ಸಮರ್ಪಿಸುತ್ತಾರೆ.
ವಿವಿಧ ಸಂಘಟನೆಗಳು ಕೂಡ ಸ್ಥಳೀಯವಾಗಿ ಆಚರಿಸುತ್ತಾರೆ. ಹಾಗೆಯೇ ಯೋಧರಿಗಾಗಿಯೇ 'ಮಹಾ ರಕ್ಷಕ್" ಎಂಬ ವಿಭಾಗವನ್ನು ಹೊಂದಿರುವ ಯುವ ಬ್ರಿಗೇಡ್ ಬೆಂಗಳೂರಿನ ರಾಷ್ಟ್ರೀಯ ಸೈನಿಕರ ಸ್ಮಾರಕ ಭವನದಲ್ಲಿ ಇಂದು (ಜುಲೈ 26) ಸಂಜೆ ಮಾಜಿ ಸೈನಿಕರ ಉಪಸ್ಥಿತಿಯಲ್ಲಿ ಕಾರ್ಗಿಲ್ ವಿಜಯ್ ದಿವಸ್ ಅನ್ನು ಆಚರಿಸಲಿದೆ.