ಕನ್ವರ್ ಯಾತ್ರೆ: ಹರಿದ್ವಾರ ತಲುಪಲಿಲ್ಲ 3,473 ಕನ್ವರಿಯಾಗಳು
ಲಕ್ನೋ, ಜುಲೈ 29: ಉತ್ತರ ಪ್ರದೇಶದಿಂದ ತೆರಳಿದ 300ಕ್ಕೂ ಹೆಚ್ಚು ಕನ್ವರಿಯರನ್ನು ಹರಿದ್ವಾರ ಜಿಲ್ಲೆಯ ಗಡಿ ಭಾಗದಿಂದ ಹಾಗೆ ವಾಪಸ್ ಕಳುಹಿಸಲಾಗಿದೆ. ಪವಿತ್ರ ಗಂಗಾ ನದಿಯ ನೀರು ಸಂಗ್ರಹಿಸಲು ತೆರಳಿದ ಭಕ್ತರು ಹರಿದ್ವಾರದಲ್ಲೇ ರೈಲು ಏರಿ ವಾಪಸ್ಸಾಗಿದ್ದಾರೆ.
ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗಿನ ಹರಡುವಿಕೆ ಭೀತಿ ಹಿನ್ನೆಲೆ ಈ ಬಾರಿ 3,000ಕ್ಕೂ ಹೆಚ್ಚು ಪ್ರವಾಸಿಗರು, ಭಕ್ತರನ್ನು ಹರಿದ್ವಾರದಿಂದ ವಾಪಸ್ ಕಳುಹಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಕನ್ವರ್ ಯಾತ್ರೆ: ಹರಿದ್ವಾರಕ್ಕೆ ಹೋದರೆ 14 ದಿನ ಸಾಂಸ್ಥಿಕ ದಿಗ್ಬಂಧನ
"ಹರಿದ್ವಾರ ಜಿಲ್ಲೆಯ ಗಡಿಯಲ್ಲಿನ ಚೆಕ್ ಪೋಸ್ಟ್ ನಿಂದ ಜುಲೈ 27ರವರೆಗೆ ಒಟ್ಟು 3,635 ಕನ್ವರಿಯರನ್ನು ಹರಿದ್ವಾರದ ಪೊಲೀಸರು ವಾಪಸ್ ಕಳುಹಿಸಿದ್ದಾರೆ. ಈ ಪೈಕಿ 1,174 ಭಕ್ತರು ದ್ವಿಚಕ್ರ ವಾಹನಗಳಲ್ಲಿ ಆಗಮಿಸಿದ್ದು, 3,473 ಜನರು ಸಣ್ಣ ಮತ್ತು ದೊಡ್ಡ ವಾಹನಗಳಲ್ಲಿ ಆಗಮಿಸಿದ್ದರು," ಎಂದು ಡೆಪ್ಯುಟಿ ಇನ್ಸ್ ಪೆಕ್ಟರ್ ಜನರಲ್ ನಿಲೇಶ್ ಆನಂದ್ ಭರನೆ ತಿಳಿಸಿದ್ದಾರೆ. ಈ ಪೈಕಿ ಹರಿದ್ವಾರಕ್ಕೆ ರೈಲಿನಲ್ಲಿ ಆಗಮಿಸಿದ್ದ 316 ಕನ್ವರಿಯಾಸ್ ಅನ್ನು ವಾಪಸ್ ಕಳುಹಿಸಲಾಗಿದೆ ಎಂದು ಹೇಳಿದ್ದಾರೆ.
ಪವಿತ್ರ ಗಂಗಾ ಜಲಕ್ಕಾಗಿ ಹರಿದ್ವಾರಕ್ಕೆ ಬರಬೇಕಾಗಿಲ್ಲ:
ಹರಿದ್ವಾರದ ಗಡಿ ಪ್ರದೇಶಗಳಲ್ಲಿ ಟ್ಯಾಂಕರ್ ಮೂಲಕ ಪವಿತ್ರ ಗಂಗಾ ನದಿ ನೀರನ್ನು ಒದಗಿಸುವುದಕ್ಕೆ ಎಲ್ಲ ರೀತಿಯ ವ್ಯವಸ್ಥೆಯನ್ನು ಮಾಡಿದ್ದೇವೆ. ಕನ್ವರಿಯಾಸ್ ಅಥವಾ ಭಕ್ತಾಧಿಗಳು ಅದಕ್ಕಾಗಿ ಹರಿದ್ವಾರ ಪ್ರವೇಶಿಸುವ ಅಗತ್ಯವಿಲ್ಲ. ಒಂದು ವೇಳೆ ನಿಯಮ ಉಲ್ಲಂಘಿಸಿದರೆ 14 ದಿನಗಳವರೆಗೂ ಕಡ್ಡಾಯ ಸಾಂಸ್ಥಿಕ ದಿಗ್ಬಂಧನಕ್ಕೆ ಒಳಗಾಗಬೇಕಾಗುತ್ತದೆ. ಆನಂತರದಲ್ಲಿ ಅವರದೇ ಸ್ವಂತ ವಾಹನ ಅಥವಾ ಪೊಲೀಸರು ವ್ಯವಸ್ಥೆಗೊಳಿಸಿರುವ ಶೆಟಲ್ ಬಸ್ಸುಗಳಲ್ಲಿ ಅವರನ್ನು ವಾಪಸ್ ಕಳುಹಿಸಲಾಗುವುದು," ಎಂದು ಡೆಪ್ಯುಟಿ ಇನ್ಸ್ ಪೆಕ್ಟರ್ ಜನರಲ್ ನಿಲೇಶ್ ಆನಂದ್ ಭರನೆ ಸ್ಪಷ್ಟಪಡಿಸಿದ್ದಾರೆ.
ಏನಿದು ಕನ್ವರ್ ಯಾತ್ರೆ?:
ಸಾಮಾನ್ಯವಾಗಿ ಜುಲೈ ಕೊನೆಯ ವಾರದ ಶ್ರಾವಣ ಮಾಸದ ಪ್ರಾರಂಭದಲ್ಲಿ 15 ದಿನಗಳವರೆಗೂ ಈ ಯಾತ್ರೆ ನಡೆಸಲಾಗುತ್ತದೆ. ಕನ್ವರ್ ಯಾತ್ರೆ ವೇಳೆಯಲ್ಲಿ ಗಂಗಾ ನದಿ ನೀರನ್ನು ಶಿವನ ದೇವಾಲಯಗಳಲ್ಲಿ ಅರ್ಪಿಸಲು ನೆರೆಯ ರಾಜ್ಯಗಳಾದ ಉತ್ತರ ಪ್ರದೇಶ, ಹರಿಯಾಣ, ಪಂಜಾಬ್, ದೆಹಲಿ ಮತ್ತು ಹಿಮಾಚಲ ಪ್ರದೇಶದ ಕೋಟ್ಯಾಂತರ ಭಕ್ತರು ಅಥವಾ ಕನ್ವರಿಯರು ಪವಿತ್ರ ನಗರವಾದ ಹರಿದ್ವಾರದಲ್ಲಿ ಒಟ್ಟುಗೂಡುತ್ತಾರೆ.