ಕೊರೊನಾವೈರಸ್ ಕೃಪೆ: ಭಕ್ತಾದಿಗಳ ಮನೆ ಬಾಗಿಲಿಗೆ ಪವಿತ್ರ ಗಂಗಾ ಜಲ!
ನವದೆಹಲಿ, ಜುಲೈ 15: ಭಾರತವು ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗಿನ ಮೂರನೇ ಅಲೆ ಭೀತಿ ಎದುರಿಸುತ್ತಿದೆ. ಎರಡನೇ ಅಲೆಗೆ ಡೆಲ್ಟಾ ರೂಪಾಂತರ ವೈರಸ್ ಕಾರಣವಾದರೆ ಮೂರನೇ ಅಲೆಗೆ ಡೆಲ್ಟಾ ಪ್ಲಸ್ ರೂಪಾಂತರದ ಭಯ ಜನರನ್ನು ಕಾಡುತ್ತಿದೆ.
ದೇಶದಲ್ಲಿ ಕೊವಿಡ್-19 ಸೋಂಕಿತ ಪ್ರಕರಣಗಳ ಸಂಖ್ಯೆಯಲ್ಲಿ ಸ್ವಲ್ಪ ಮಟ್ಟಿನ ಸ್ಥಿರತೆ ಕಂಡು ಬಂದಿದೆ. ಕೊರೊನಾವೈರಸ್ ಸಕ್ರಿಯ ಪ್ರಕರಣಗಳ ಸಂಖ್ಯೆ 4 ಲಕ್ಷದ ಆಸುಪಾಸಿನಲ್ಲಿದೆ. ಈ ಹಂತದಲ್ಲಿ ಕನ್ವರಿಯರ ಪವಿತ್ರ ಕನ್ವರ್ ಯಾತ್ರೆ ನಡೆಸುವುದಕ್ಕೆ ಉತ್ತರಾಖಂಡ್ ಸರ್ಕಾರ ನಿರ್ಬಂಧ ವಿಧಿಸಿದೆ.
ಕನ್ವರ್ ಯಾತ್ರೆ: ಹರಿದ್ವಾರಕ್ಕೆ ಹೋದರೆ 14 ದಿನ ಸಾಂಸ್ಥಿಕ ದಿಗ್ಬಂಧನ
ಶ್ರಾವಣ ಮಾಸದಲ್ಲಿ ಪವಿತ್ರ ಗಂಗಾ ಜಲವನ್ನು ಶಿವನ ಪಾದಗಳಿಗೆ ಅರ್ಪಿಸುವುದು ಮೊದಲಿನಿಂದ ನಡೆದುಕೊಂಡು ಬಂದಿರುವ ಸಂಪ್ರದಾಯವಾಗಿದೆ. ಗಂಗಾ ಜಲ ಸಂಗ್ರಹಿಸಿ ಅದನ್ನು ಶಿವನ ಪಾದಕ್ಕೆ ಅರ್ಪಿಸುವುದಕ್ಕಾಗಿ ನಡೆಸುವ ಕನ್ವರ್ ಯಾತ್ರೆಯನ್ನು ನಿರ್ಬಂಧಿಸಿರುವ ಸರ್ಕಾರ ಪರ್ಯಾಯ ಮಾರ್ಗ ಕಂಡುಕೊಂಡಿದೆ. ಪೋಸ್ಟ್ ಮೂಲಕ ಗಂಗಾ ಜಲವನ್ನು ಭಕ್ತಾದಿಗಳ ಮನೆ ಬಾಗಿಲಿಗೆ ತಲುಪಿಸುವ ಬಗ್ಗೆ ನಿರ್ಧರಿಸಿದೆ.
ಮನೆ ಬಾಗಿಲಿಗೆ ಗಂಗಾ ಜಲ ತಲುಪಿಸುವ ಯೋಜನೆಗೆ ರೂಪುರೇಷೆ ಹೇಗಿರುತ್ತದೆ. ಉತ್ತರಾಖಂಡ್ ಸರ್ಕಾರದ ನಿರ್ಧಾರದ ಹಿಂದಿನ ಕಾರಣವೇನು?. ಕನ್ವರ್ ಯಾತ್ರೆ ಬಗ್ಗೆ ಉತ್ತರಾಖಂಡ್ ಸಿಎಂ ಪುಷ್ಕರ್ ಸಿಂಗ್ ಧಾಮಿ ಹೇಳುವುದೇನು?. ಕನ್ವರ್ ಯಾತ್ರೆ ಮಹತ್ವವೇನು? ಕನ್ವರ್ ಯಾತ್ರೆ ನಡೆಸಲು ಮುಂದಾದ ಸರ್ಕಾರಕ್ಕೆ ಸುಪ್ರೀಂಕೋರ್ಟ್ ನೀಡಿರುವ ಸೂಚನೆ ಏನು ಎಂಬುದರ ಕುರಿತು ಒಂದು ವಿಸ್ತೃತ ವರದಿಗಾಗಿ ಮುಂದೆ ಓದಿ.
'ಕೋವಿಡ್ ನಡುವೆ ಕನ್ವರ್ ಯಾತ್ರೆ ಯಾಕೆ?': ಯುಪಿ ಸರ್ಕಾರಕ್ಕೆ ಸುಪ್ರೀಂ ನೋಟಿಸ್
ಉತ್ತರದ ಹಲವು ರಾಜ್ಯಗಳಿಗೆ ಗಂಗಾ ಜಲ
ಕೊರೊನಾವೈರಸ್ ಸೋಂಕಿನ ಮೂರನೇ ಅಲೆಯ ಭೀತಿ ಹಿನ್ನೆಲೆ ಕನ್ವರ್ ಯಾತ್ರೆಯನ್ನು ರದ್ದುಗೊಳಿಸಿರುವ ಉತ್ತರಾಖಂಡ್ ಸರ್ಕಾರವು ಪೋಸ್ಟ್ ಮೂಲಕ ಭಕ್ತಾದಿಗಳ ಮನೆ ಬಾಗಿಲಿಗೆ ಪವಿತ್ರ ಗಂಗಾ ಜಲವನ್ನು ತಲುಪಿಸುವುದಕ್ಕೆ ಚಿಂತನೆ ನಡೆಸಿದೆ. ವರದಿಗಳ ಪ್ರಕಾರ, ಗಂಗಾ ನದಿಯ ಪವಿತ್ರ ನೀರನ್ನು ಟ್ಯಾಂಕರ್ಗಳಲ್ಲಿ ಉತ್ತರ ಭಾರತದ ವಿವಿಧ ರಾಜ್ಯಗಳಿಗೆ ಸಾಗಿಸಲು ಸರ್ಕಾರ ಯೋಜಿಸುತ್ತಿದೆ. ಕನ್ವರ್ ಯಾತ್ರೆ ನಿಷೇಧದಿಂದಾಗಿ ತಮ್ಮದೇ ರಾಜ್ಯದ ಕನ್ವರಿಯರು ಪವಿತ್ರ ಗಂಗಾ ಜಲದಿಂದ ಶಿವನ ಪಾದ ತೊಳೆಯುವುದರಿಂದ ವಂಚಿತರಾಗಬಾರದು ಎನ್ನುವ ಉದ್ದೇಶದಿಂದಾಗಿ ಸರ್ಕಾರವು ಈ ನಿರ್ಧಾರ ತೆಗೆದುಕೊಳ್ಳಲು ಮುಂದಾಗಿದೆ.
ಭಕ್ತಾದಿಗಳ ಸಂಖ್ಯೆಯನ್ನು ತಗ್ಗಿಸುವ ನಿಟ್ಟಿನಲ್ಲಿ ಕ್ರಮ
"ಭಕ್ತಾದಿಗಳಿಗೆ ನೇರವಾಗಿ ಗಂಗಾ ಜಲವನ್ನು ಪೋಸ್ಟ್ ಮೂಲಕ ಕಳುಹಿಸಿ ಕೊಡುವ ಯೋಜನೆಯ ಪ್ರಕ್ರಿಯೆಯನ್ನು ಆರಂಭಿಸಲಿದ್ದೇವೆ. ನರೆಯ ರಾಜ್ಯಗಳಿಗೆ ಟ್ಯಾಂಕರ್ಗಳಲ್ಲಿ ಗಂಗಾ ಜಲವನ್ನು ಕಳುಹಿಸಿ ಕೊಡುವ ಬಗ್ಗೆ ಚರ್ಚಿಸಲಾಗುತ್ತಿದೆ. ಹರಿದ್ವಾರದಲ್ಲಿ ಜನಸಂಖ್ಯೆಯನ್ನು ತಗ್ಗಿಸುವ ಹಾಗೂ ನಿಯಂತ್ರಿಸುವ ಉದ್ದೇಶದಿಂದ ಈ ಕ್ರಮವನ್ನು ತೆಗೆದುಕೊಳ್ಳಲಾಗಿದೆ," ಎಂದು ಹರಿದ್ವಾರದ ಜಿಲ್ಲಾಧಿಕಾರಿ ಸಿ ರವಿಶಂಕರ್ ಸ್ಪಷ್ಟಪಡಿಸಿದ್ದಾರೆ.
ಕನ್ವರ್ ಯಾತ್ರೆ ನಿಷೇಧದ ಮರುದಿನ ಯೋಜನೆ ಘೋಷಣೆ
ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗಿನ ಎರಡನೇ ಅಲೆಯ ಹಿನ್ನೆಲೆ ಕನ್ವರ್ ಯಾತ್ರೆಯನ್ನು ನಿಷೇಧಿಸಿದ ಮರುದಿನವೇ ಸರ್ಕಾರವು ಈ ಯೋಜನೆ ಪ್ರಕಟಿಸಿದೆ. "ಕೊವಿಡ್-19 ಮೂರನೇ ಅಲೆಯಲ್ಲಿ ಡೆಲ್ಟಾ ಪ್ಲಸ್ ರೂಪಾಂತರ ವೈರಸ್ ದೇಶ ಮತ್ತು ವಿದೇಶಗಳಲ್ಲಿ ಹರಡುತ್ತಿರುವ ಅಪಾಯ ಹೆಚ್ಚಾಗಿದೆ. ಈ ಹಿನ್ನೆಲೆ ಅಂತಿಮವಾಗಿ ಮನುಷ್ಯರ ಜೀವ ರಕ್ಷಣೆಗೆ ಆದ್ಯತೆ ನೀಡುವ ಉದ್ದೇಶದಿಂದಾಗಿ ನಾವು ಕನ್ವರ್ ಯಾತ್ರೆಯನ್ನು ನಿಷೇಧಿಸಿದ್ದೇವೆ," ಎಂದು ಉತ್ತರಾಖಂಡ್ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ತಿಳಿಸಿದ್ದಾರೆ. ಸರ್ಕಾರದ ಹಿರಿಯ ಅಧಿಕಾರಿಗಳು ಆರೋಗ್ಯ ತಜ್ಞರೊಂದಿಗೆ ನಡೆಸಿದ ಮಹತ್ವದ ಸಭೆಯ ನಂತರದಲ್ಲಿ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ.
ಪ್ರತಿವರ್ಷ ಸಾವಿರಾರು ಭಕ್ತರಿಂದ ಕನ್ವರ್ ಯಾತ್ರೆ
ಕನ್ವರ್ ಯಾತ್ರೆ ಅಂಗವಾಗಿ ಸಾವಿರಾರು ಕನ್ವರಿಯರು ಗಂಗಾ ನದಿ ಹರಿಯುವ ಪವಿತ್ರ ಸ್ಥಳಗಳಿಗೆ ಭೇಟಿ ನೀಡುತ್ತಾರೆ. ಪ್ರತಿವರ್ಷದ ಶ್ರಾವಣ ಮಾಸದಲ್ಲಿ ಕನ್ವರಿಯರು ಬ್ರಹ್ಮಕುಂಡ, ಹರ್-ಕಿ-ಪೌರಿ, ರಿಶಿಕೇಷ್, ದೇವಪ್ರಯಾಗ್ ಮತ್ತು ಗೌಮುಖ್-ಗಂಗೋತ್ರಿಗೆ ತೆರಳಿ ಗಂಗಾ ಜಲವನ್ನು ಸಂಗ್ರಹಿಸುತ್ತಾರೆ. ಇದನ್ನು ತಡೆಯುವುದಕ್ಕೆ ಸರ್ಕಾರವು ಕ್ರಮ ತೆಗೆದುಕೊಂಡಿದೆ.
ಅಕ್ಕಪಕ್ಕದ ರಾಜ್ಯಗಳಿಗೂ ಉತ್ತರಾಖಂಡ್ ಸಿಎಂ ಸಲಹೆ
ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗಿನ ಮೂರನೇ ಅಲೆಯ ಹರಡುವಿಕೆ ಹೆಚ್ಚದಂತೆ ಮುನ್ನೆಚ್ಚರಿಕೆ ವಹಿಸಬೇಕಿದೆ. ಕನ್ವರ್ ಯಾತ್ರೆಯನ್ನು ನಿಷೇಧಿಸಿರುವ ಉತ್ತರಾಖಂಡ್ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ತಮ್ಮ ನೆರೆಹೊರೆಯ ರಾಜ್ಯಗಳಿಗೂ ಸಲಹೆ ನೀಡಿದ್ದಾರೆ. ಕೊವಿಡ್-19 ಸೋಂಕು ನಿಯಂತ್ರಣಕ್ಕೆ ಅಗತ್ಯವಿರುವ ಕ್ರಮಗಳನ್ನು ಜಾರಿಗೊಳಿಸುವಂತೆ ರಾಜ್ಯದ ಹಿರಿಯ ಪೊಲೀಸ್ ಮಹಾನಿರ್ದೇಶಕರಿಗೆ ಸಲಹೆ ನೀಡಿದ್ದಾರೆ.
ಕೊವಿಡ್-19 ನಿಯಮ ಉಲ್ಲಂಘಿಸಿದರೆ ಸಾಂಸ್ಥಿಕ ದಿಗ್ಬಂಧನ
ಉತ್ತರಾಖಂಡದಲ್ಲಿ ಕನ್ವರ್ ಯಾತ್ರೆ ನಡೆಯುವ ಜಿಲ್ಲೆಗೆ ಬೇರೆ ಜಿಲ್ಲೆ ಮತ್ತು ರಾಜ್ಯಗಳಿಂದ ಆಗಮಿಸುವ ಭಕ್ತಾದಿಗಳಿಗೆ ನಿರ್ಬಂಧ ವಿಧಿಸಲಾಗಿದೆ. ಈ ಕುರಿತು ಹರಿದ್ವಾರದ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ಆದೇಶ ಹೊರಡಿಸಿದ್ದಾರೆ. "ಕನ್ವರ್ ಯಾತ್ರೆ ನಡೆಯುವ ಜಿಲ್ಲೆಗೆ ಬೇರೆ ಜಿಲ್ಲೆ ಮತ್ತು ರಾಜ್ಯಗಳಿಂದ ಜನರು ಆಗಮಿಸುವಂತಿಲ್ಲ. ಒಂದು ವೇಳೆ ನಿಯಮ ಉಲ್ಲಂಘಿಸಿದರೆ 14 ದಿನಗಳವರೆಗೂ ಕಡ್ಡಾಯ ಸಾಂಸ್ಥಿಕ ದಿಗ್ಬಂಧನಕ್ಕೆ ಒಳಗಾಗಬೇಕಾಗುತ್ತದೆ," ಎಂದು ಎಚ್ಚರಿಸಿದ್ದಾರೆ. ಇದರ ಜೊತೆಗೆ ಅಕ್ರಮವಾಗಿ ಜಿಲ್ಲೆಯನ್ನು ಪ್ರವೇಶಿಸುವುದಕ್ಕೆ ಯತ್ನಿಸುವ ವಾಹನಗಳನ್ನು ಜಪ್ತಿ ಮಾಡಿಕೊಳ್ಳಲಾಗುವುದು. ನಿಯಮ ಉಲ್ಲಂಘಿಸಿದವರ ವಿರುದ್ಧ ಡಿಸಾಸ್ಟರ್ ಎಂಜಿಎಂಟಿ ಆಕ್ಟ್ ಅಡಿ ಶಿಸ್ತು ಕ್ರಮ ತೆಗೆದುಕೊಳ್ಳಲಾಗುವುದು ಎಂದು ಆದೇಶದಲ್ಲಿ ಉಲ್ಲೇಘಿಸಲಾಗಿದೆ.
ಉತ್ತರ ಪ್ರದೇಶ ಸರ್ಕಾರಕ್ಕೆ ಚಾಟಿ ಬೀಸಿದ ಸುಪ್ರೀಂಕೋರ್ಟ್
ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗಿನ ಆತಂಕದ ನಡುವೆ ಕನ್ವರ್ ಯಾತ್ರೆ ನಡೆಸುವುದಕ್ಕೆ ಅವಕಾಶ ನೀಡಿರುವ ಉತ್ತರ ಪ್ರದೇಶ ಸರ್ಕಾರದ ವಿರುದ್ಧ ಸುಪ್ರೀಂಕೋರ್ಟ್ ಚಾಟಿ ಬೀಸಿದೆ. ಸರ್ಕಾರದ ಕ್ರಮದ ಬಗ್ಗೆ ಸ್ಪಷ್ಟನೆ ನೀಡುವಂತೆ ನೋಟಿಸ್ ಜಾರಿಗೊಳಿಸಿದೆ. ಕಳೆದ ಮಂಗಳವಾರವಷ್ಟೇ ರಾಜ್ಯ ಸರ್ಕಾರವು 'ಕನಿಷ್ಠ ಸಂಖ್ಯೆಯ ಜನರೊಂದಿಗೆ ಕನ್ವರ್ ಯಾತ್ರೆ' ನಡೆಸಬಹುದು. ಅಗತ್ಯವಿದ್ದರೆ ನೆಗೆಟಿವ್ ಆರ್ಟಿ-ಪಿಸಿಆರ್ ಪರೀಕ್ಷೆಯನ್ನು ಕಡ್ಡಾಯಗೊಳಿಸಬಹುದು,'' ಎಂದು ಹೇಳಿತ್ತು.
ಕನ್ವರ್ ಯಾತ್ರೆಯ ಇತಿಹಾಸ?
ಸಾಮಾನ್ಯವಾಗಿ ಜುಲೈ ಕೊನೆಯ ವಾರದ ಶ್ರಾವಣ ಮಾಸದ ಪ್ರಾರಂಭದಲ್ಲಿ 15 ದಿನಗಳವರೆಗೂ ಈ ಯಾತ್ರೆ ನಡೆಸಲಾಗುತ್ತದೆ. ಕನ್ವರ್ ಯಾತ್ರೆ ವೇಳೆಯಲ್ಲಿ ಗಂಗಾ ನದಿ ನೀರನ್ನು ಶಿವನ ದೇವಾಲಯಗಳಲ್ಲಿ ಅರ್ಪಿಸಲು ನೆರೆಯ ರಾಜ್ಯಗಳಾದ ಉತ್ತರ ಪ್ರದೇಶ, ಹರಿಯಾಣ, ಪಂಜಾಬ್, ದೆಹಲಿ ಮತ್ತು ಹಿಮಾಚಲ ಪ್ರದೇಶದ ಕೋಟ್ಯಾಂತರ ಭಕ್ತರು ಅಥವಾ ಕನ್ವರಿಯರು ಪವಿತ್ರ ನಗರವಾದ ಹರಿದ್ವಾರದಲ್ಲಿ ಒಟ್ಟುಗೂಡುತ್ತಾರೆ. ಕೋವಿಡ್ನ ಮೊದಲ ಅಲೆಯ ಕಾರಣದಿಂದಾಗಿ ಕಳೆದ ವರ್ಷವೂ ಯಾತ್ರೆ ರದ್ದುಗೊಳಿಸಲಾಗಿತ್ತು. ಈ ವರ್ಷ, ಜುಲೈ 2 ರಂದು ಉತ್ತರಾಖಂಡ ಸರ್ಕಾರವು ಕನ್ವರ್ ಯಾತ್ರೆಯನ್ನು ರದ್ದುಗೊಳಿಸಿದೆ.