ಕಾನ್ಪುರ್ ರೈಲು ಅಪಘಾತ, ಪ್ರಮುಖ ಶಂಕಿತ- ಪಾಕ್ ನ ಏಜೆಂಟ್ ಬಂಧನ
ನವದೆಹಲಿ, ಫೆಬ್ರವರಿ 7: ಹಳಿಗಳ ಮೇಲೆ ಸ್ಫೋಟಕವಿಟ್ಟು, ಕಾನ್ಪುರ ರೈಲು ಅಪಘಾತವಾಗಿ ನೂರೈವತ್ತು ಮಂದಿ ಸಾವಿಗೆ ಕಾರಣವಾದ ಪ್ರಕರಣದಲ್ಲಿ ಶಂಸುಲ್ ಹೂಡ ಎಂಬ ಪಾಕಿಸ್ತಾನದ ಏಜೆಂಟ್, ಶಂಕಿತನನ್ನು ನೇಪಾಳದಲ್ಲಿ ಬಂಧಿಸಲಾಗಿದೆ. ಆತ ಪಾಕಿಸ್ತಾನ ಬೇಹುಗಾರಿಕೆ ಸಂಸ್ಥೆ ಐಎಸ್ ಐ ನ ಏಜೆಂಟ್ ಎಂಬ ಗುಮಾನಿಯಿದ್ದು, ದುಬೈನಿಂದ ಶನಿವಾರ ನೇಪಾಳಕ್ಕೆ ಬಂದಾಗ ವಶಕ್ಕೆ ಪಡೆಯಲಾಗಿದೆ.
ಭಯೋತ್ಪಾದನೆ ವಿರೋಧಿ ದಳದ ಅಧಿಕಾರಿಗಳ ಪ್ರಕಾರ, ಶಂಸುಲ್ ಹೂಡ ರೈಲು ಅಪಘಾತದ ಪ್ರಮುಖ ಸೂತ್ರಧಾರಿ. ನವೆಂಬರ್ ನಲ್ಲಿ ಇಂದೋರ್-ಪಾಟ್ನಾ ಎಕ್ಸ್ ಪ್ರೆಸ್ ರೈಲು ಕಾನ್ಪುರ ಬಳಿ ಅಪಘಾತವಾಗಿ ನೂರೈವತ್ತು ಮಂದಿ ಸಾವನ್ನಪ್ಪಿದ್ದರು. ಶಂಸುಲ್ ಹೂಡ ಆದೇಶದ ಮೇರೆಗೆ ಹಳಿಗಳ ಮೇಲೆ ಸ್ಫೋಟಕ ಇರಿಸಲಾಗಿತ್ತು. ಹಳಿಗೆ ಹಾನಿ ಮಾಡಲು ಗ್ಯಾಸ್ ಕಟರ್ ಕೂಡ ಬಳಸಲಾಗಿತ್ತು. ರೈಲು ಅಪಘಾತದ ಹಿಂದೆ ಐಎಸ್ ಐನ ಕೈವಾಡವಿದೆ ಎಂಬ ಆರೋಪ ಕೇಳಿಬಂದಿತ್ತು.[ಪಾಟ್ನಾ- ಇಂದೋರ್ ರೈಲು ದುರಂತ: ಪಾಕ್ ಕೈವಾಡ]
ಮೋತಿ ಪಾಸ್ವಾನ್, ಉಮಾಶಂಕರ್ ಪಟೇಲ್ ಮತ್ತು ಮುಕೇಶ್ ಯಾದವ್ ಎಂಬುವರನ್ನು ಇಬ್ಬರು ಯುವಕರ ಕೊಲೆ ಕೇಸಿನಲ್ಲಿ ಬಂಧಿಸಲಾಗಿತ್ತು. ಅವರ ಜತೆಗೆ ಹೂಡ ನಂಟಿತ್ತು ಎಂಬ ಬಗ್ಗೆ ಗುಮಾನಿಯಿದೆ. ಇನ್ನು ರೈಲು ಅಪಘಾತ ಕೃತ್ಯದಲ್ಲಿ ನೇಪಾಳದ ಬ್ರಿಜ್ ಕಿಶೋರ್ ಗಿರಿ ಎಂಬಾತ ಕೂಡ ಇದ್ದ ಎಂಬುದು ವಿಚಾರಣೆ ವೇಳೆ ಗೊತ್ತಾಗಿದೆ.
ರೈಲು ಹಳಿ ಮೇಲೆ ಬಾಂಬ್ ಇಡಲು ಬ್ರಿಜ್ ಕಿಶೋರ್ ಗಿರಿಗೆ ಬಿಹಾರದ ವ್ಯಕ್ತಿಯೊಬ್ಬನನ್ನು ಜೊತೆ ಮಾಡಿದ್ದ ಹೂಡ. ಆದರೆ ಅವರು ಸಿಕ್ಕಿಬಿದ್ದಾಗ, ಪ್ರಯತ್ನದಲ್ಲಿ ವಿಫಲರಾದಾಗ, ಅವರಿಬ್ಬರನ್ನೂ ಕೊಲ್ಲುವಂತೆ ಸೂಚಿಸಿದ್ದ.