ಬಿಜೆಪಿ ಕಾರ್ಯಕರ್ತನ ಹತ್ಯೆಗೆ ಸುಪಾರಿ ಕೊಟ್ಟಿದ್ದು ಸಿಎಂ'
ಕಣ್ಣೂರು, ಅಕ್ಟೋಬರ್ 12: ಬಿಜೆಪಿ ಹಾಗೂ ಸಿಪಿಎಂ ನಡುವಿನ ಕಿತ್ತಾಟದಲ್ಲಿ ನೆತ್ತರು ಹರಿಯುತ್ತಿದೆ. ಸಿಪಿಎಂ ಕಾರ್ಯಕರ್ತನ ಹತ್ಯೆ ನಡೆದ ಎರಡು ದಿನಗಳಲ್ಲೇ ಬಿಜೆಪಿ ಕಾರ್ಯಕರ್ತನೊಬ್ಬನನ್ನು ಹಾಡಹಗಲೇ ಕೊಲ್ಲಲಾಗಿದೆ. ಬಿಜೆಪಿ ಕಾರ್ಯಕರ್ತನ ಹತ್ಯೆಗೆ ಸುಪಾರಿ ಕೊಟ್ಟಿದ್ದು ಸಿಎಂ ಪಿ ವಿಜಯನ್, ಈ ಬಗ್ಗೆ ತೀವ್ರ ತನಿಖೆಯಾಗಬೇಕು ಎಂದು ಬಿಜೆಪಿ ಆಗ್ರಹಿಸಿದೆ.
ಕಣ್ಣೂರು ಜಿಲ್ಲೆಯ ಪಿಣರಾಯಿಯಲ್ಲಿ ನಡೆದ ಈ ಎರಡು ಕೊಲೆಗಳ ನಂತರ ಕಣ್ಣೂರು ಪ್ರಕ್ಷುಬ್ದಗೊಂಡಿದೆ. ಬಿಜೆಪಿ ಕಾರ್ಯಕರ್ತರು ಆಕ್ರೋಶಗೊಂಡು ಪ್ರತಿಭಟನೆಗೆ ಮುಂದಾಗಿದ್ದಾರೆ. ಸಿಪಿಎಮ್ ಕಾರ್ಯಕರ್ತ40 ವರ್ಷದ ಮೋಹನನ್ ಅವರನ್ನು ಪಥಿರ್ಯಾಡ್ ನಲ್ಲಿ ಸುಮಾರು 6 ಮಂದಿ ಆಗುಂತಕರು ಮೋಹನನ್ ರನ್ನು ಮಾರಾಕಾಸ್ತ್ರಗಳಿಂದ ಕೊಚ್ಚಿ ಕೊಂದಿದ್ದರು.[ಕಣ್ಣೂರಿನಲ್ಲಿ ಆರೆಸ್ಸೆಸ್-ಬಿಜೆಪಿ ಕಾರ್ಯಕರ್ತನ ಕಗ್ಗೊಲೆ]
ಇದಾದ ಬಳಿಕ ಬಿಜೆಪಿ ಕಾರ್ಯಕರ್ತ ರೆಮಿತ್ ಎಂಬುವವರನ್ನು ಪಿಣರಾಯಿಯ ಪೆಟ್ರೋಲ್ ಬಂಕ್ ವೊಂದರ ಬಳಿ ಬುಧವಾರದಂದು ಕತ್ತು ಸೀಳಿ ಹತ್ಯೆ ಮಾಡಲಾಗಿದೆ. ತಕ್ಷಣವೇ ರೆಮಿತ್ ರನ್ನು ತಲಚ್ಚೇರಿಯ ಸರ್ಕಾರಿ ಆಸ್ಪತ್ರೆಗೆ ಸೇರಿಸಲು ಯತ್ನಿಸಲಾದರೂ ಫಲಕಾರಿಯಾಗಲಿಲ್ಲ. ರೆಮಿತ್ ಅವರ ತಂದೆ ಕೂಡಾ ರಾಜಕೀಯ ದ್ವೇಷಕ್ಕೆ 2002ರಲ್ಲಿ ಬಲಿಯಾಗಿದ್ದರು.[ಆರೆಸ್ಸೆಸ್ ಕಾರ್ಯಕರ್ತ ರಾಮಚಂದ್ರನ್ ಕೊಲೆ]
ಸಿಎಂ ಮೇಲೆ ಕಿಡಿ: ವಿಜಯನ್ ಅವರು ತಮ್ಮ ಕ್ಷೇತ್ರದಲ್ಲಿ ನಡೆದಿರುವ ಹತ್ಯಾಕಾಂಡವನ್ನು ತಡೆಗಟ್ಟಲು ಸಾಧ್ಯವಾಗುತ್ತಿಲ್ಲ. ಇನ್ನು ರಾಜ್ಯವನ್ನು ಹೇಗೆ ನಿಭಾಯಿಸಬಲ್ಲರು. ನಡು ರಸ್ತೆಯಲ್ಲಿ ಹತ್ಯೆಗಳನ್ನು ನಡೆಸಲು ಸಿಎಂ ಅವರೇ ಸುಪಾರಿ ನೀಡಿದ್ದಾರೆ ಎಂಬ ಗಂಭೀರ ಆರೋಪವನ್ನು ಬಿಜೆಪಿ ನಾಯಕ ವಿವಿ ರಾಜೇಶ್ ಮಾಡಿದ್ದಾರೆ.