ಕನ್ನಡ ಮಾಧ್ಯಮದಲ್ಲಿ ಓದಿದ ಕೆಆರ್ ನಂದಿನಿ ಐಎಎಸ್ ಮುಕುಟ ಮಣಿ
ನಿನ್ನೆ ಯುಪಿಎಸ್ ಸಿ ಫಲಿತಾಂಶ ಹೊರಬೀಳುತ್ತಿದ್ದಂತೆಯೇ ಇಡೀ ಕರ್ನಾಟಕವೂ ಹೆಮ್ಮೆ ಪಡುವುದಕ್ಕೆ ಕಾರಣ ನಂದಿನಿ ಕನ್ನಡತಿ ಎಂಬುದು. ಚಿನ್ನದ ನಾಡು ಕೋಲಾರದ ನಂದಿನಿ ನಿನ್ನೆ ಚಿನ್ನದಂಥ ಸುದ್ದಿ ನೀಡಿದರು.
'ನಾನ್ಯಾವತ್ತೂ ಇಡೀ ದಿನ ಓದುತ್ತಿರಲಿಲ್ಲ, ವಾಲಿಬಾಲ್ ಆಡುತ್ತಿದ್ದೆ, ಸಾಹಿತ್ಯ ಓದುತ್ತಿದ್ದೆ. ಯುಪಿಎಸ್ ಸಿ ಪರೀಕ್ಷೆಗೆ ಓದುವ ಸಮಯದಲ್ಲಿ ತುಂಬಾ ಏಕಾಗ್ರತೆಯಿಂದ ಓದುತ್ತಿದ್ದೆ...' ಇದು ನಿನ್ನೆ (ಮೇ 31) ಹೊರಬಿದ್ದ ಕೇಂದ್ರ ಲೋಕಸೇವಾ ಆಯೋಗ (ಯುಪಿಎಸ್ ಸಿ)ದ ನಾಗರಿಕ ಸೇವಾ ಪರೀಕ್ಷೆ- 2016ರಲ್ಲಿ ಮೊದಲ ಸ್ಥಾನ ಪಡೆದ ಕರ್ನಾಟಕದ ನಂದಿನಿ ಕೆ.ಆರ್. ಮಾತು.
ನಿನ್ನೆ ಫಲಿತಾಂಶ ಹೊರಬೀಳುತ್ತಿದ್ದಂತೆಯೇ ಇಡೀ ಕರ್ನಾಟಕವೂ ಹೆಮ್ಮೆ ಪಡುವುದಕ್ಕೆ ಕಾರಣ ನಂದಿನಿ ಕನ್ನಡತಿ ಎಂಬುದು. ಚಿನ್ನದ ನಾಡು ಕೋಲಾರದ ನಂದಿನಿ ನಿನ್ನೆ ಚಿನ್ನದಂಥ ಸುದ್ದಿ ನೀಡಿದರು. ಪರೀಕ್ಷೆಗಳಲ್ಲಿ ಬಾಲಕಿರು ಮೇಲುಗೈ ಸಾಧಿಸುವುದು ಅಥವಾ ಬಾಲಕಿಯರೇ ಮೊದಲ ಸ್ಥಾನ ಪಡೆಯುವುದು ಹೆಚ್ಚು ಅಚ್ಚರಿ ಎನ್ನಿಸುವ ವಿಷಯವಲ್ಲ.
ಆದರೆ ಕರ್ನಾಟಕದ ಮಟ್ಟಿಗೆ ಇದು ಅಸಾಮಾನ್ಯ ಸಂಗತಿ. ಯಾಕಂದ್ರೆ 16 ವರ್ಷದ ಹಿಂದೆ ವಿಜಯಲಕ್ಷ್ಮಿ ಬಿದರಿ ಎಂಬುವವರು ಮೊದ ಸ್ಥಾನ ಪಡೆದಿದ್ದು ಬಿಟ್ಟರೆ ಅದರ ನಂತರ ರಾಜ್ಯದ ಯಾರೊಬ್ಬರಿಗೂ ಮೊದಲ ಸ್ಥಾನ ದಕ್ಕಿರಲಿಲ್ಲ.
ಇದೀಗ ನಂದಿನಿ, ಮೊದಲ ಸ್ಥಾನ ಪಡೆದು 16 ವರ್ಷದ ಹಿಂದಿನ ವೈಭವ ಮರುಕಳಿಸುವಂತೆ ಮಾಡಿದ್ದಾರೆ. ಕರ್ನಾಟಕದ ಯುವತಿ ಇಂಥ ಸಾಧನೆ ಮಾಡಿದ್ದು ಮತ್ತಷ್ಟು ಕನ್ನಡಿಗರಿಗೆ ಸ್ಫೂರ್ತಿ ನೀಡಿದೆ.[2016ನೇ ಸಾಲಿನ UPSC ಟಾಪರ್ ಕೋಲಾರದ ನಂದಿನಿ ಕೆ ಆರ್]
ಇನ್ನೂ ಅಚ್ಚರಿಯ ವಿಷಯ ಅಂದ್ರೆ, ನಂದಿನಿ ಓದಿದ್ದು ಕನ್ನಡ ಮಾಧ್ಯಮದಲ್ಲಿ! ಕನ್ನಡ ಮಾಧ್ಯಮದಲ್ಲಿ ತಮ್ಮ ಮಕ್ಕಳನ್ನು ಓದಿಸುವುದು ಅಂದ್ರೆ ಅವಮಾನದ ವಿಷಯ ಎಂಬಂತೆ ನೋಡುವ ಇಂದಿನ ತಂದೆ-ತಾಯಿಯರಿಗೆ ನಂದಿಯ ಸಾಧನೆ ಅಚ್ಚರಿ ತರದೇ ಇದ್ದೀತೆ? ಮಾಧ್ಯಮ ಮುಖ್ಯವಲ್ಲ, ಸಾಧಿಸುವ ಛಚಲ ಮುಖ್ಯ ಎಂಬುದಕ್ಕೆ ನಂದಿನಿಗಿಂತ ಬೇರೆ ಉದಾಹರಣೆ ಬೇಕೆ?
ಸಾಹಿತ್ಯ- ವಾಲಿಬಾಲ್ ಅಂದ್ರೆ ಅಚ್ಚುಮೆಚ್ಚು
ಕೋಲಾರದ ಚಿನ್ಮಯ ವಿದ್ಯಾಲಯದಲ್ಲಿ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಮುಗಿಸಿದ್ದ ನಂದಿನಿ, ಮೂಡಬಿದರೆಯ ಆಳ್ವಾಸ್ ವಿದ್ಯಾ ಸಂಸ್ಥೆಯಲ್ಲಿ ಪಿಯುಸಿ ಹಾಗೂ ಬೆಂಗಳೂರಿನ ಎಂ.ಎಸ್.ರಾಮಯ್ಯ ಇಂಜಿನಿಯರಿಂಗ್ ಕಾಲೇಜಿನಲ್ಲಿ ಬಿಇ ಸಿವಿಲ್ ಇಂಜಿನಿಯರಿಂಗ್ ಪೂರ್ಣಗೊಳಿಸಿದ್ದರು. ಕನ್ನಡ ಸಾಹಿತ್ಯವನ್ನು ಅತೀವ ಆಸಕ್ತಿಯಿಂದ ಓದುವ ಇವರಿಗೆ ವಾಲಿಬಾಲ್ ಕ್ರೀಡೆ ಅಂದ್ರೂ ಅಚ್ಚುಮೆಚ್ಚು.
24x7 ಓದುತ್ತಿರಲಿಲ್ಲ
ತಮ್ಮ ಸಾಧನೆಯ ಬಗ್ಗೆ ಚಾನೆಲ್ ವೊಂದಕ್ಕೆ ಸಂದರ್ಶನ ನೀಡುತ್ತಿದ್ದ ಸಮಯದಲ್ಲಿ ನಂದಿನಿ ತಮ್ಮ ಪರೀಕ್ಷಾ ಸಿದ್ಧತೆಯ ಬಗ್ಗೆ ಮಾತನಾಡುತ್ತಿದ್ದರು. ತಾನು ಯಾವತ್ತೂ 24x7 ಓದಲೇ ಇಲ್ಲ. ತೀರಾ ಒತ್ತಡ ತೆಗೆದುಕೊಂಡು, ತಲೆಕೆಡಿಸಿಕೊಂಡು ಓದುತ್ತಿರಲಿಲ್ಲ. ಐಎಎಸ್ ಆಫೀಸರ್ ಆಗಬೇಕೆಂಬ ಆಸೆ ನಂಗೆ ಎಂದಿನಿಂದಲೂ ಇತ್ತು. ಹಾಗಂತ ನನ್ನಿಷ್ಟದ ಹವ್ಯಾಸಗಳನ್ನು ಎಂದು ಮರೆಯುತ್ತಿರಲಿಲ್ಲ ಎಂದು ಸಂದರ್ಶನದ ಸಮಯದಲ್ಲಿ ನಂದಿನಿ ಹೇಳಿದರು.[ಶಕ್ತಿ ಮೀರಿ ಪ್ರಯತ್ನಿಸಿದ್ದರಿಂದ ಯಶಸ್ಸು: ಐಎಎಸ್ ಟಾಪರ್ ನಂದಿನಿ]
ಒತ್ತಡದಲ್ಲಿ ಬುದ್ಧಿ ಕೆಲಸ ಮಾಡೋಲ್ಲ
ಯುಪಿಎಸ್ ಸಿ ಪರೀಕ್ಷೆ ಎಂದರೆ ಇರುವ ಒತ್ತಡವನ್ನೆಲ್ಲ ತಲೆಮೇಲೆ ಹಾಕಿಕೊಂಡೇ ಓದಬೇಕು ಎನ್ನುವವರಿಗೆ ನಂದಿನಿ ಮಾತು ಅಚ್ಚರಿ ಎನ್ನಿಸಲಿಕ್ಕೆ ಸಾಕು! ಒತ್ತಡದಲ್ಲಿ ಬುದ್ಧಿ ಕೆಲಸ ಮಾಡುವುದಿಲ್ಲ ಎಂಬುದು ಗೊತ್ತಿದ್ದರಿಂದಲೇ ನಂದಿನಿಯವರು ಎಂದಿಗೂ ಒತ್ತಡ ತೆಗೆದುಕೊಂಡು ಪರೀಕ್ಷಾ ಸಿದ್ಧತೆ ನಡೆಸುತ್ತಿರಲಿಲ್ಲ.
ನಿರೀಕ್ಷೆ ಸಾಕಾರವಾಯ್ತು
ಕೋಲಾರ ಜಿಲ್ಲೆಯ ಕೆಂಬೋಡಿ ಗ್ರಾಮದ ನಂದಿನಿ 2014 ರ ನಾಗರಿಕ ಸೇವಾ ಪರೀಕ್ಷೆಯಲ್ಲಿ 849 ನೇ ಸ್ಥಾನ ಗಳಿಸಿ, ಭಾರತೀಯ ಆದಾಯ ಸೇವೆ ಹುದ್ದೆ ಆಯ್ಕೆ ಮಾಡಿಕೊಂಡು ಹರ್ಯಾಣದ ಫರಿದಾಬಾದ್ ನಲ್ಲಿ ಸೇವೆ ಸಲ್ಲಿಸುತ್ತಿದ್ದರು. ನಂತರ 2016 ರ ಪರೀಕ್ಷೆಯನ್ನೂ ತೆಗೆದುಕೊಂಡ ನಂದಿನಿ ಕಣ್ಣಿಟ್ಟಿದ್ದು ಮೊದಲ ಸ್ಥಾನದ ಮೇಲೆ. ಕೊನೆಗೂ ಆಕೆಯ ನಿರೀಕ್ಷೆ ಸಾಕಾರವಾಗಿದೆ.
ಸತತ ಮೂರನೇ ಬಾರಿ ಮಹಿಳೆ ಟಾಪರ್!
ಸತತ ಮೂರನೇ ಬಾರಿ ಮಹಿಳೆಯರೇ ಮೊದಲ ಸ್ಥಾನ ಪಡೆಯುತ್ತಿರುವುದು ಮತ್ತೊಂದು ಸಂತಸದ ವಿಷಯ. 2014 ರಲ್ಲಿ ಆಂಧ್ರದ ಇರಾ ಸಿಂಘಲ್, 2015 ರಲ್ಲಿ ದೆಹಲಿಯ ಟಿನಾ ದಾಬಿ ಮೊದಲ ಸ್ಥಾನ ಗಳಿಸಿದ್ದರು. ಯುಪಿಎಸ್ ಸಿ ಪರೀಕ್ಷೆಗಳಲ್ಲಿ ಮಹಿಳೆಯರ ಆಧಿಪತ್ಯ ದೇಶ ಹೆಮ್ಮೆಪಡುವಂತೆ ಮಾಡಿರುವುದಂತೂ ಸುಳ್ಳಲ್ಲ. ಒತ್ತಡ ತೆಗೆದುಕೊಂಡು ಓದುವುದರಿಂದ ಪ್ರಯೋಜನವಿಲ್ಲ. ನಮ್ಮ ಹವ್ಯಾಸಗಳನ್ನೆಲ್ಲ ಮರೆಯದೆ, ಓದನ್ನೂ ಸಂಭ್ರಮಿಸಿದರೆ ಯಶಸ್ಸು ಕಟ್ಟಿಟ್ಟ ಬುತ್ತಿ ಎನ್ನುವ ನಂದಿನಿ ಮಾತು ಸತ್ಯವಲ್ಲವೇ?[ಟೀನಾ ದಬಿ, ಅಮೀರ್ ನಿಶ್ಚಿತಾರ್ಥ ಲವ್ ಜಿಹಾದ್ ಎಂದ ಹಿಂದೂ ಮಹಾಸಭಾ]