ಬಿಹಾರ: ಲೋಕಸಭೆ ಚುನಾವಣೆಯಲ್ಲಿ ಕನ್ಹಯ್ಯಾ ಕುಮಾರ್ ಸ್ಪರ್ಧೆ
ಪಟ್ನಾ, ಜೂನ್ 18: ಉಗ್ರ ಅಫ್ಜಲ್ ಗುರುವನ್ನು ಗಲ್ಲುಶಿಕ್ಷೆಗೆ ಗುರಿಪಡಿಸುವುದನ್ನು ವಿರೋಧಿಸಿ ಪ್ರತಿಭಟನೆ ಆಯೋಜಿಸಿದ್ದಲ್ಲದೆ, ಭಾರತ ವಿರೋಧ ಘೋಷಣೆಗಳನ್ನು ಕೂಗಿದ ಆರೋಪ ಎದುರಿಸುತ್ತಿರುವ ದೆಹಲಿಯ ಜವಾಹರಲಾಲ್ ವಿಶ್ವವಿದ್ಯಾಲಯದ ವಿದ್ಯಾರ್ಥಿ ಘಟಕದ ಮಾಜಿ ಅಧ್ಯಕ್ಷ, ವಿವಾದಿತ ಕನ್ಹಯ್ಯಾ ಕುಮಾರ್, ರಾಜಕೀಯ ಪ್ರವೇಶಕ್ಕೆ ವೇದಿಕೆ ಸಿದ್ಧಪಡಿಸಿಕೊಳ್ಳುತ್ತಿದ್ದಾರೆ.
ಎಡಪಂಥೀಯ ಸಂಘಟನೆಗಳ ಜತೆ ಗುರುತಿಸಿಕೊಂಡಿರುವ ಕನ್ಹಯ್ಯಾ ಕುಮಾರ್, ತಮ್ಮ ತವರು ಬಿಹಾರದ ಬೇಗುಸರೈನಿಂದ ಲೋಕಸಭೆ ಚುನಾವಣೆಗೆ ಸ್ಪರ್ಧಿಸುವ ಸಾಧ್ಯತೆ ಇದೆ.
ಸಿಪಿಐನಲ್ಲಿ
ಹಿರಿಯರಿಗೆ
ಗೇಟ್ಪಾಸ್,
ಕನ್ಹಯ್ಯಾಗೆ
ಮಣೆ
ಮುಂಬರುವ ಚುನಾವಣೆಯಲ್ಲಿ ಕಾಂಗ್ರೆಸ್ ಹಾಗೂ ವಿವಿಧ ಪಕ್ಷಗಳನ್ನು ಒಳಗೊಂಡ ಮಹಾ ಮೈತ್ರಿ ಕೂಟದೊಂದಿಗೆ ಸೇರಿಕೊಳ್ಳಲು ತಯಾರಿ ನಡೆಸಿರುವ ಎಡಪಕ್ಷ ಸಿಪಿಐ, ಕನ್ಹಯ್ಯಾ ಅವರನ್ನು ಬೇಗುಸರೈನ ಅಭ್ಯರ್ಥಿಯನ್ನಾಗಿ ಕಣಕ್ಕಿಳಿಸಲು ತೀರ್ಮಾನಿಸಿದೆ.
ಬಿಹಾರ ವಿಧಾನಸಭೆ ಚುನಾವಣೆಯಲ್ಲಿ ಎಲ್ಲ ವಿರೋಧ ಪಕ್ಷಗಳೂ ಒಂದಾಗಿ ಮಹಾಮೈತ್ರಿಕೂಟವನ್ನು ರಚಿಸಿಕೊಂಡಿದ್ದವು. ಅದನ್ನು ಮತ್ತಷ್ಟು ಬಲಪಡಿಸಲು ಪ್ರಯತ್ನಗಳು ನಡೆದಿವೆ.
ಎಲ್ಲ ಪಕ್ಷಗಳೂ ವಿವಿಧ ಕ್ಷೇತ್ರಗಳನ್ನು ಹಂಚಿಕೊಳ್ಳಲಿದ್ದು ಬೇಗುಸರೈಅನ್ನು ಸಿಪಿಐಗೆ ಬಿಟ್ಟುಕೊಡಲು ಈಗಾಗಲೇ ಮೈತ್ರಿಕೂಟ ಒಪ್ಪಿಕೊಂಡಿದೆ. ಇಲ್ಲಿ ಸಿಪಿಐ ಕನ್ಹಯ್ಯಾ ಕುಮಾರ್ ಅವರನ್ನು ಸ್ಪರ್ಧೆಗೆ ಇಳಿಸಲಿದೆ ಎಂದು ಮೂಲಗಳು ತಿಳಿಸಿವೆ.
ಕನ್ಹಯ್ಯಾ ಅವರ ತಾಯಿ ಮೀನಾ ದೇವಿ ಬೇಗುಸರೈನಲ್ಲಿ ಅಂಗನವಾಡಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ತಂದೆ ಜಯಶಂಕರ್ ಸಿಂಗ್ ರೈತ. ಆದರೆ, ಪಾರ್ಶ್ವವಾಯುವಿಗೆ ತುತ್ತಾಗಿರುವ ಕನ್ಹಯ್ಯಾ ಅವರ ತಂದೆ ಈಗ ಹಾಸಿಗೆ ಹಿಡಿದಿದ್ದಾರೆ.
ಸಿಪಿಐನ ರಾಷ್ಟ್ರೀಯ ಸಮಿತಿ ಕಾರ್ಯದರ್ಶಿ ಕೆಆರ್ ನರೈನಾ ಅವರು ಇತ್ತೀಚಿನ ಪಟ್ನಾ ಭೇಟಿ ವೇಳೆ, ಕನ್ಹಯ್ಯಾ ಚುನಾವಣಾ ರಂಗಕ್ಕೆ ಧಮುಕುವ ಕುರಿತು ಸುಳಿವು ನೀಡಿದ್ದರು.
ಬಿಹಾರದಲ್ಲಿನ 40 ಲೋಕಸಭೆ ಕ್ಷೇತ್ರಗಳನ್ನು ಹಂಚಿಕೊಳ್ಳುವ ವಿಚಾರದಲ್ಲಿ ಬಹುತೇಕ ಮಾತುಕತೆ ಮುಗಿದಿದೆ. ಕತಿಹಾರ್ನ ಎನ್ಸಿಪಿ ಅಭ್ಯರ್ಥಿಯಾಗಿ ಹಿರಿಯ ಸಂಸದ ಮತ್ತು ಮಾಜಿ ಸಚಿವ ತಾರಿಖ್ ಅನ್ವರ್ ಅವರನ್ನು ಆಯ್ಕೆ ಮಾಡಲು ಮಹಾಮೈತ್ರಿ ಒಕ್ಕೂಟ ಉದ್ದೇಶಿಸಿದೆ.
ಶರದ್ ಯಾದವ್ ಅವರ ರಾಜ್ಯಸಭಾ ಸದಸ್ಯತ್ವ ಕುರಿತು ಕಾನೂನು ಸಮಸ್ಯೆ ವಿಚಾರಣೆ ಹಂತದಲ್ಲಿದೆ. ಮುಂದಿನ ತಿಂಗಳು ಅದು ಪರಿಹಾರವಾಗಲಿದ್ದು, ಬಳಿಕ ಅವರ ಸ್ಪರ್ಧೆಯ ಕುರಿತು ನಿರ್ಧಾರ ಹೊರಬೀಳಲಿದೆ.
ಮಹಾಮೈತ್ರಿ ಒಕ್ಕೂಟವು ಬಿಜೆಪಿಯ ಸಂಸದರಾದ ಶತ್ರುಘ್ನ ಸಿನ್ಹಾ ಮತ್ತು ಕೀರ್ತಿ ಆಜಾದ್ ಅವರನ್ನು ಪಟ್ನಾ ಸಾಹಿಬ್ ಹಾಗೂ ದರ್ಭಾಂಗ ಕ್ಷೇತ್ರಗಳಿಂದ ತಮ್ಮ ಒಕ್ಕೂಟ ಅಭ್ಯರ್ಥಿಗಳನ್ನಾಗಿ ಕಣಕ್ಕಿಳಿಸಲು ಈಗಾಗಲೇ ನಿರ್ಧರಿಸಿದೆ.