ಸಿಪಿಐನಲ್ಲಿ ಹಿರಿಯರಿಗೆ ಗೇಟ್ಪಾಸ್, ಕನ್ಹಯ್ಯಾಗೆ ಮಣೆ
ನವದೆಹಲಿ, ಏಪ್ರಿಲ್ 30: ಭಾರತೀಯ ಕಮ್ಯುನಿಸ್ಟ್ ಪಕ್ಷದ (ಸಿಪಿಐ) ರಾಷ್ಟ್ರೀಯ ಸಮಿತಿಯ ಚುನಾವಣೆಯಲ್ಲಿ ಹಿರಿಯ ಮುಖಂಡರ ಬದಲು ಯುವ ನಾಯಕರಿಗೆ ಮಣೆ ಹಾಕಲಾಗಿದೆ.
ಭಾನುವಾರ ಕೊಲ್ಲಂನಲ್ಲಿ ನಡೆದ ಸಿಪಿಐ 23ನೇ ಸಮಾವೇಶದಲ್ಲಿ ಪಕ್ಷದ ಪ್ರಧಾನ ಕಾರ್ಯದರ್ಶಿಯಾಗಿ ಎಸ್. ಸುಧಾಕರ್ ರೆಡ್ಡಿ ಅವರನ್ನು ಮೂರನೇ ಬಾರಿಗೆ ಪುನಾರಾಯ್ಕೆ ಮಾಡಲಾಯಿತು. ಜೆಎನ್ಯುದ ವಿದ್ಯಾರ್ಥಿ ಒಕ್ಕೂಟದ ಮಾಜಿ ಅಧ್ಯಕ್ಷ ಕನ್ಹಯ್ಯ ಕುಮಾರ್ ಅವರನ್ನು 125 ಸದಸ್ಯರ ರಾಷ್ಟ್ರೀಯ ಸಮಿತಿಗೆ ಆಯ್ಕೆ ಮಾಡಲಾಗಿದೆ.
ಕತುವಾ ಪ್ರಕರಣ ಸಿಬಿಐಗೆ ಒಪ್ಪಿಸಿ: ಕಾಶ್ಮೀರದಲ್ಲಿ ಭುಗಿಲೆದ್ದ ಪ್ರತಿಭಟನೆ
ಪಕ್ಷದ ಹಿರಿಯ ಮುಖಂಡರಾದ ಸಿ. ದಿವಾಕರನ್, ಸತ್ಯ ಮೋಕೇರಿ, ಸಿ.ಎನ್. ಚಂದ್ರನ್ ಮತ್ತು ಕಮಲಾ ಸದಾನಂದನ್ ಅವರನ್ನು ರಾಷ್ಟ್ರೀಯ ಸಮಿತಿಯಿಂದ ಕೈಬಿಡಲಾಗಿದೆ.
ತಮ್ಮನ್ನು ಸಮಿತಿಯಿಂದ ತೆಗೆದುಹಾಕಿರುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿರುವ ದಿವಾಕರನ್, 'ನನಗೆ ಪಕ್ಷದಲ್ಲಿ ಯಾವ ಗಾಡ್ಫಾದರ್ ಕೂಡ ಇಲ್ಲ. ಯಾರದ್ದೋ ಬೆಂಬಲದಿಂದ ಸಮಿತಿಯಲ್ಲಿ ಸ್ಥಾನಪಡೆದುಕೊಳ್ಳಲು ಬಯಸುವುದಿಲ್ಲ' ಎಂದು ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.
ದಿವಾಕರನ್ ಮತ್ತು ಇತರರನ್ನು ಕೈಬಿಟ್ಟಿರುವುದನ್ನು ಪಕ್ಷದ ರಾಜ್ಯ ಕಾರ್ಯದರ್ಶಿ ಕಣಂ ರಾಜೇಂದ್ರನ್ ಸಮರ್ಥಿಸಿಕೊಂಡಿದ್ದಾರೆ.
ಹೊಸ ಸಮಿತಿಯನ್ನು ಅವಿರೋಧವಾಗಿ ಆಯ್ಕೆ ಮಾಡಲಾಗಿದೆ. ಪಕ್ಷದ ಸಂವಿಧಾನದಂತೆ ಸಮಿತಿಯಲ್ಲಿ ಶೇ 20ರಷ್ಟು ಹೊಸ ಮುಖಗಳು ಇರಬೇಕು' ಎಂದು ಪಕ್ಷದ ಕೇಂದ್ರ ಕಾರ್ಯದರ್ಶಿಯಾಗಿ ಆಯ್ಕೆಯಾಗಿರುವ ರಾಜೇಂದ್ರನ್ ತಿಳಿಸಿದರು.