ಸೆ.28ರಂದು ಕಾಂಗ್ರೆಸ್ ಸೇರ್ಪಡೆಗೊಳ್ಳಲಿರುವ ಕನ್ಹಯ್ಯ, ಜಿಗ್ನೇಶ್
ಅಹಮದಾಬಾದ್, ಸೆಪ್ಟೆಂಬರ್ 26: ಜೆಎನ್ಯು ವಿದ್ಯಾರ್ಥಿ ಸಂಘಟನೆಯ ಮಾಜಿ ಮುಖ್ಯಸ್ಥ, ಸಿಪಿಐ ಮುಖಂಡ ಕನ್ಹಯ್ಯ ಅವರು ಅಧಿಕೃತವಾಗಿ ಕಾಂಗ್ರೆಸ್ ಸೇರಲಿದ್ದಾರೆ ಎಂಬ ಸುದ್ದಿ ಇದೀಗ ದೃಢಪಟ್ಟಿದೆ. ಕನ್ಹಯ್ಯ ಕುಮಾರ್ ಹಾಗೂ ಗುಜರಾತ್ ಶಾಸಕ ಜಿಗ್ನೇಶ್ ಮೆವಾನಿ ಇಬ್ಬರು ಅಧಿಕೃತವಾಗಿ ಕಾಂಗ್ರೆಸ್ ಸೇರುತ್ತಿದ್ದಾರೆ. ಸ್ವಾತಂತ್ರ್ಯ ಹೋರಾಟಗಾರ ಭಗತ್ ಸಿಂಗ್ ಅವರ ಜನ್ಮದಿನೋತ್ಸವ(ಸೆಪ್ಟೆಂಬರ್ 28)ದಂದು ಈ ಇಬ್ಬರು ನಾಯಕರು ಕಾಂಗ್ರೆಸ್ ಪಕ್ಷ ಸೇರುತ್ತಿದ್ದಾರೆ.
ಆರೆಸ್ಸೆಸ್ ಮುಂತಾದ ಸಂಘಟನೆಗಳ ವಿರುದ್ಧವಾಗಿ ಜವಹರ ಬಾಲ್ ಮಂಚ್ ಎಂಬ ವೇದಿಕೆಯನ್ನು ಕಾಂಗ್ರೆಸ್ ಆರಂಭಿಸುತ್ತಿದ್ದು, 7 ರಿಂದ 17 ವರ್ಷ ವಯಸ್ಸಿವ ಯುವ ಜನತೆಗೆ ಸಾಂವಿಧಾನಿಕ ಮೌಲ್ಯಗಳನ್ನು ತಿಳಿಸಿಕೊಡಲು ಮುಂದಾಗಲಾಗಿದೆ ಎಂದು ಚೇರ್ಮನ್ ಜಿವಿ ಹರಿ ಹೇಳಿದ್ದಾರೆ. ಹೊಸ ಮುಖಂಡರ ಸೇರ್ಪಡೆಯಿಂದ ಪಕ್ಷದ ಸಂಘಟನೆಗೆ ಎಲ್ಲಾ ವಯೋಮಿತಿಯದವರನ್ನು ಆಕರ್ಷಿಸಲು ಕಾಂಗ್ರೆಸ್ ಯೋಜನೆ ಹಾಕಿಕೊಂಡಿದೆ.
ಹೀಗೊಂದು ಗಾಳಿಸುದ್ದಿ: ಕಾಂಗ್ರೆಸ್ ಪಕ್ಷದತ್ತ ಕನ್ಹಯ್ಯ ಕುಮಾರ್ ಚಿತ್ತ
ಗುಜರಾತ್ ರಾಜ್ಯದ ಮುಂದಿನ ವಿಧಾನಸಭೆ ಚುನಾವಣೆ ಮೇಲೆ ಕಣ್ಣಿರಿಸಿ ಮೇವಾನಿ ಅವರನ್ನು ಕಾಂಗ್ರೆಸ್ ಪಕ್ಷಕ್ಕೆ ಅಧಿಕೃತವಾಗಿ ಸೇರಿಸಿಕೊಳ್ಳಲಾಗುತ್ತಿದೆ. ಗುಜರಾತ್ ರಾಜ್ಯ ಪ್ರದೇಶ ಕಾಂಗ್ರೆಸ್ ಸಮಿತಿ ಕಾರ್ಯಕಾರಿ ಅಧ್ಯಕ್ಷ, ಪಾಟೀದಾರ್ ಸಮುದಾಯದ ಯುವ ಮುಖಂಡ ಹಾರ್ದಿಕ್ ಪಟೇಲ್ ಮೇಲೆ ಹೈಕಮಾಂಡ್ ಭಾರಿ ನಿರೀಕ್ಷೆ ಇಟ್ಟುಕೊಂಡಿದೆ.
ಬಿಹಾರದಲ್ಲಿ 70 ಸ್ಥಾನಗಳಲ್ಲಿ ಸ್ಪರ್ಧಿಸಿ, ಮಹಾಘಟಬಂಧನದ ನೇತೃತ್ವ ವಹಿಸಿದ್ದ ಕಾಂಗ್ರೆಸ್ 19 ಕ್ಷೇತ್ರದಲ್ಲಿ ಮಾತ್ರ ಜಯ ಗಳಿಸಿತ್ತು. ಮಿತ್ರಪಕ್ಷಗಳನ್ನು ಗೆಲುವಿನತ್ತ ಕೊಂಡೊಯ್ಯುವಲ್ಲೂ ವಿಫಲವಾಗಿತ್ತು.
ಚುನಾವಣೆ ಸೋಲಿನ ಬಳಿಕ ನೈತಿಕ ಹೊಣೆ ಹೊತ್ತು ಅಧ್ಯಕ್ಷ ಸ್ಥಾನಕ್ಕೆ ಮದನ್ ಮೋಹನ್ ಝಾ ರಾಜೀನಾಮೆ ನೀಡಿದ್ದಾರೆ. ಮೈತ್ರಿಕೂಟದಿಂದಲೂ ಕಾಂಗ್ರೆಸ್ ಮೇಲೆ ಸೋಲಿನ ಹೊಣೆ ಹೊತ್ತುಕೊಳ್ಳುವಂತೆ ಮಾಡಲಾಯಿತು. ಹೀಗಾಗಿ, ಬಿಹಾರದಲ್ಲಿ ಕಾಂಗ್ರೆಸ್ ಮತ್ತೆ ಪುಟಿದೇಳುವಂತೆ ಮಾಡಿ ಎಂದು ರಾಹುಲ್ ಕರೆ ನೀಡಿದ್ದಾರೆ. ಸಿಪಿಐ ಸೇರಿ ಸೋಲು ಕಂಡರೂ ಕನ್ಹಯ್ಯ ಸೇರ್ಪಡೆಯಿಂದ ಬಿಹಾರದಲ್ಲಿ ಹೆಚ್ಚಿನ ಬಲ ಬರಲಿದೆ ಎಂದು ಹೈಕಮಾಂಡ್ ನಂಬಿದೆ.
2015ರಲ್ಲಿ ಜೆಎನ್ ಯು ವಿದ್ಯಾರ್ಥಿ ಸಂಘಟನೆಯ ಅಧ್ಯಕ್ಷರಾಗಿದ್ದ ಕನ್ಹಯ್ಯಾ ಅವರು 2018ರಲ್ಲಿ ಅಧಿಕೃತವಾಗಿ ರಾಜಕೀಯ ಪ್ರವೇಶಿಸಿ, ಸಿಪಿ ಐ ಸದಸ್ಯರಾದರು, 2019ರಲ್ಲಿ ಬೇಗುಸರಾಯ್ ಕ್ಷೇತ್ರದಿಂದ ಲೋಕಸಭೆಗೆ ಆಯ್ಕೆ ಬಯಸಿ ಸ್ಪರ್ಧಿಸಿದರು. ಬಿಹಾರದ ಮಾಜಿ ಸಿಎಂ ಲಾಲೂ ಪ್ರಸಾದ್ ಯಾದವ್ ಅವರು ಕನ್ಹಯ್ಯಾ ಸ್ಪರ್ಧೆಗೆ ಬೆಂಬಲ ನೀಡಿದ್ದರು. ಆದರೆ, ಕನ್ಹಯ್ಯಾ ಸ್ಪರ್ಧೆ ಕುರಿತು ಸಹಮತವಿಲ್ಲದ ಆರ್ಜೆಡಿ ನಾಯಕ ತೇಜಸ್ವಿ ಯಾದವ್, ಅವರಿಗೆ ಟಿಕೆಟ್ ಸಿಗದಂತೆ ಆಯ್ಕೆಗಳಿಗೆ ಅಡ್ಡಿಪಡಿಸಿದ್ದರು. ಬಿಜೆಪಿಯ ಗಿರಿರಾಜ್ ಸಿಂಗ್ ಅವರ ಎದುರು ಸ್ಪರ್ಧಿಸುವಷ್ಟು ಕನ್ಹಯ್ಯಾ ಕುಮಾರ್ ಸಮರ್ಥರಾಗಿಲ್ಲ. ಗಿರಿರಾಜ್ ಸಿಂಗ್ ಅವರಿಗೆ ಇರುವ ಜಾತಿ ಬಲ ಕನ್ಹಯ್ಯಾಗೆ ಸಿಗಲಾರದು ಎಂದು ವಾದಿಸಿದ್ದರು.
2016ರಲ್ಲಿ ಜೆಎನ್ಯುನಲ್ಲಿ ಅಫ್ಜಲ್ ಗುರು ಸಾವಿನ ಸ್ಮರಣಾರ್ಥ ಫೆಬ್ರವರಿ 9, 2016ರಂದು ನಡೆದ ಕಾರ್ಯಕ್ರಮದ ವೇಳೆ ದೇಶ ವಿರೋಧಿ ಘೋಷಣೆ ಕೂಗಿದ ಆರೋಪದ ಮೇಲೆ ಜೆಎನ್ಯು ಮಾಜಿ ವಿದ್ಯಾರ್ಥಿಗಳಾದ ಕನ್ಹಯ್ಯ ಕುಮಾರ್, ಉಮರ್ ಖಾಲಿದ್, ಅಖಿಬ್ ಹುಸ್ಸೇನ್ , ಮುಜೀಬ್ ಹುಸ್ಸೇನ್, ಮುನೀಬ್ ಹುಸ್ಸೇನ್, ಉಮರ್ ಗುಲ್, ರಯೀಬ್, ಬಸೀರ್ ಭಟ್ ಮತ್ತು ಬಶರತ್ ವಿರುದ್ಧ ಇಂದು ಚಾರ್ಜ್ಶೀಟ್ ದಾಖಲಿಸಲಾಗಿತ್ತು.
ಈ ಪ್ರಕರಣದಲ್ಲಿ ಜಾಮೀನು ಪಡೆದ ತಕ್ಷಣವೇ ರಾಹುಲ್ ಗಾಂಧಿಯನ್ನು ಕನ್ಹಯ್ಯ ಭೇಟಿ ಮಾಡಿದ್ದರು. ವಿದ್ಯಾರ್ಥಿ ಮುಖಂಡರ ವಿರುದ್ಧ ಪ್ರಕರಣ ದಾಖಲಿಸಿದ್ದನ್ನು ರಾಹುಲ್ ಖಂಡಿಸಿದ್ದನ್ನು ಇಲ್ಲಿ ಸ್ಮರಿಸಬಹುದು. ಬೆಗು ಸರಾಯ್ ಕ್ಷೇತ್ರದಲ್ಲಿ ಬಿಜೆಪಿಯ ಗಿರಿರಾಜ್ ಸಿಂಗ್ ವಿರುದ್ಧ 4.2 ಲಕ್ಷಕ್ಕೂ ಅಧಿಕ ಮತಗಳ ಅಂತರದಿಂದ ಕನ್ಹಯ್ಯ ಸೋಲು ಕಂಡಿದ್ದರು. ಆದರೆ, ಈಗ ಪ್ರಶಾಂತ್ ಕಿಶೋರ್ ಸಲಹೆಯಂತೆ ಕನ್ಹಯ್ಯ, ಜಿಗ್ನೇಶ್ ಅವರ ಸೇರ್ಪಡೆ ಸಾಧ್ಯವಾಗುತ್ತಿದೆ.